ಗಡುವು ಮುಗಿಯುವುದರೊಳಿಗೆ ಅಂಗಡಿ ಬೋರ್ಡ್​ ಬದಲಾಗದಿದ್ದರೆ ಕರ್ನಾಟಕ ಬಂದ್​: ವಾಟಾಳ್ ಎಚ್ಚರಿಕೆ

ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ ಎಂದು ಕನ್ನಡ ಪರ ಸಂಘಟನೆಗಳು ಪರಭಾಷಾ ಬೋರ್ಡ್ಗಳ ಮೇಲೆ ಸಮರ ಸಾರಿದ್ದವು. ಈ ಮೂಲಕ ವರ್ತಕರು ಹಾಗೂ ಕನ್ನಡ ಪರ ಹೋರಾಟಗಾರರ ನಡುವೆ ಸಂಘರ್ಷ ಏರ್ಪಟ್ಟಿತ್ತು. ಸದ್ಯ ಈ ವಿಚಾರವಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಹೋರಾಟಗಾರ ವಾಟಾಳ್ ನಾಗರಾಜ್​​ ಗಡುವು ಮುಗಿಯೋದರೊಳಗೆ ಬೋರ್ಡ್ ಬದಲಾಗದಿದ್ದರೆ ಕರ್ನಾಟಕ ಬಂದ್​ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಗಡುವು ಮುಗಿಯುವುದರೊಳಿಗೆ ಅಂಗಡಿ ಬೋರ್ಡ್​ ಬದಲಾಗದಿದ್ದರೆ ಕರ್ನಾಟಕ ಬಂದ್​: ವಾಟಾಳ್ ಎಚ್ಚರಿಕೆ
ಹೋರಾಟಗಾರ ವಾಟಾಳ್ ನಾಗರಾಜ್

Updated on: Feb 25, 2024 | 3:15 PM

ಬೆಂಗಳೂರು, ಫೆಬ್ರವರಿ 25: ನಾಮಫಲಕಕ್ಕಾಗಿ ಮತ್ತೆ ಕನ್ನಡದ ರಣಕಹಳೆ ಮೊಳಗಲಿದೆ. ಕನ್ನಡ ನಾಮಫಲಕ ಕಡ್ಡಾಯಕ್ಕೆ 3 ದಿನಗಳಷ್ಟೇ ಬಾಕಿ ಉಳಿದಿದೆ. ಗಡುವು ಮುಗಿಯೋದರೊಳಗೆ ಬೋರ್ಡ್ ಬದಲಾಗದಿದ್ದರೆ ಕರ್ನಾಟಕ ಬಂದ್​ ಮಾಡುತ್ತೇವೆ ಎಂದು ಹೋರಾಟಗಾರ ವಾಟಾಳ್ ನಾಗರಾಜ್ (Vatal Nagaraj) ಎಚ್ಚರಿಕೆ ನೀಡಿದ್ದಾರೆ. ನಗರದಲ್ಲಿ ಟಿವಿ9 ಜೊತೆ ಮಾತನಾಡಿದ ಅವರು, ಕನ್ನಡ ನಾಮಫಲಕಕ್ಕೆ ಇನ್ನೂ ಕೆಲವರು ಆಸಕ್ತಿ ತೋರಿಲ್ಲ. ನಾಮಫಲಕದ ಜೊತೆಗೆ ಕನ್ನಡಿಗರಿಗೆ ಉದ್ಯೋಗ ಬೇಕು. ಐಟಿ-ಬಿಟಿ ಕಂಪನಿಗಳಲ್ಲಿ ಉದ್ಯೋಗವನ್ನ ಕೊಡಬೇಕು ಎಂದು ಆಗ್ರಹ ಮಾಡಿದ್ದಾರೆ. ಮುಂದಿನ ತಿಂಗಳು ಎಲ್ಲಾ ಸಂಘಟನೆ ಒಗ್ಗೂಡಿಸುತ್ತೇವೆ. ಕನ್ನಡ ಬೋರ್ಡ್ ಕಡ್ಡಾಯ ಆಗದಿದ್ದರೆ ಕರ್ನಾಟಕ ಬಂದ್​ ಮಾಡುತ್ತೇವೆ ಎಂದು ಹೇಳಿದ್ದಾರೆ.

ಕನ್ನಡ ಮರೆತ ಅಂಗಡಿ-ಮುಂಗಟ್ಟು ಮಾಲೀಕರ ವಿರುದ್ಧ ಕನ್ನಡ ಪರ ಸಂಘಟನೆಗಳು ಇತ್ತೀಚೆಗೆ ಪ್ರತಿಭಟಿಸಿದ್ದರು. ಬಳಿಕ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಕಡ್ಡಾಯ ಸೂಚನೆಯನ್ನ ಸರ್ಕಾರ ನೀಡಿತ್ತು. ಫೆಬ್ರವರಿ 28ರ ಡೆಡ್​ಲೈನ್ ನೀಡಿದೆ. ಈ ಗಡುವು ಮುಗಿಯಲು ಸದ್ಯ ಮೂರು ದಿನವಷ್ಟೇ ಬಾಕಿ ಇದೆ.

ಕನ್ನಡ ನಿರ್ಲಕ್ಷಿಸಿದರೆ ದೂರು 

ಕನ್ನಡ ನಾಮಫಲಕ ಅಳವಡಿಕೆ ವಿಚಾರ ವಿಧಾನಸಭೆ, ಪರಿಷತ್​ನಲ್ಲೂ ಚರ್ಚೆಯಾಗಿ, ಅಂಗೀಕಾರ ಪಡೆದಿದೆ. ಕನ್ನಡ ನಾಮಫಲಕ ಕುರಿತು ಸಮಿತಿ ರಚಿಸಲಾಗಿದ್ದು, ಕೈಗಾರಿಕೆಗಳು ಕೂಡ ಕನ್ನಡ ಬಳಕೆ ಮಾಡಬೇಕು ಅಂತ ಸಚಿವ ಶಿವರಾಜ್ ತಂಗಡಗಿ ಎಚ್ಚರಿಸಿದ್ದರು. ಕನ್ನಡ ಕಣ್ಗಾವಲು ಆ್ಯಪ್​ ಅಭಿವೃದ್ಧಿಪಡಿಸಲಾಗಿದ್ದು, ಕನ್ನಡ ನಿರ್ಲಕ್ಷಿಸಿದರೆ ದೂರು ನೀಡಬಹುದು ಎಂದು ಮಾಹಿತಿ ನೀಡಿದ್ದರು.

ಇದನ್ನೂ ಓದಿ: ಕನ್ನಡ ನಾಮಫಲಕ: ರಾಜ್ಯ ಸರ್ಕಾರ ಮಾತು ತಪ್ಪಿದರೆ ಎಲ್ಲಾ ಜಿಲ್ಲೆ ಗುಡುಗುತ್ತದೆ: ಕರವೇ ಅಧ್ಯಕ್ಷ ನಾರಾಯಣಗೌಡ

ಬೆಂಗಳೂರಿನ ಬ್ರಿಗೇಡ್ ರೋಡ್, ಎಂ.ಜಿ. ರಸ್ತೆಯಲ್ಲಿ ಕನ್ನಡ ಫಲಕ ಕಾಣುತ್ತಿಲ್ಲ. ಕೆಲ ಅಂಗಡಿಗಳು ಕಾಟಾಚಾರಕ್ಕೆ ಚಿಕ್ಕದಾಗಿ ಕನ್ನಡ ಬೋರ್ಡ್ ಹಾಕಿವೆ. ಬೇರೆ ಭಾಷೆಯ ಬೋರ್ಡ್​​​​ಗಳಿಗೆ ಬಟ್ಟೆ ಮುಚ್ಚಿದ ಮಾಲೀಕರು ಕಣ್ಣಾಮುಚ್ಚಾಲೆ ಆಡುತ್ತಿರುವುದು ಇತ್ತೀಚೆಗೆ ಟಿವಿ9 ನಡೆಸಿದ ರಿಯಾಲಿಟಿ ಚೆಕ್​​ನಲ್ಲಿ ಬಯಲಾಗಿತ್ತು. ಶಾಪ್ ಮುಂದೆ ಕಾಟಾಚಾರಕ್ಕೆ ಕನ್ನಡ ಬಾವುಟ ಹಾರಿಸುವ ಕೆಲಸ ಮಾಡುತ್ತಿದ್ದಾರೆ. ಈ ನಿರ್ಲಕ್ಷ್ಯಕ್ಕೆ ಹೋರಾಟಗಾರರು ಕಿಡಿಕಾರಿದ್ದರು.

ಇದನ್ನೂ ಓದಿ: ಕನ್ನಡಿಗರಿಗೆ ಕಂಪನಿಗಳಲ್ಲಿ ಉದ್ಯೋಗ ಮೀಸಲಾತಿಗಾಗಿ ಮುಂದಿನ ಹೋರಾಟ: ಕರವೇ ನಾರಾಯಣಗೌಡ

ನಿನ್ನೆ ಬೆಳಗಾವಿಯಲ್ಲಿ ಕರವೇ ಅಧ್ಯಕ್ಷ ನಾರಾಯಣಗೌಡ ಮಾತನಾಡಿದ್ದು, ಫೇ.28 ರ ಒಳಗೆ ಕನ್ನಡಮಯವಾಗುತ್ತದೆ ಎಂದು ಸರಕಾರ ಹೇಳಿ ಸಮಯ ತೆಗೆದುಕೊಂಡಿದೆ. ಸರಕಾರ ಮಾತು ತಪ್ಪಿದರೆ 32 ಜಿಲ್ಲೆಯವರು ಗುಡುಗಬೇಕಾಗುತ್ತದೆ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು. ಅಲ್ಲದೇ ಇನ್ನೊಂದು ಹೋರಾಟದಲ್ಲಿ ನಮ್ಮನ್ನ ಬಂಧಿಸಿ, ಆಗ ಗೊತ್ತಾಗುತ್ತದೆ. ಇಡೀ ರಾಜ್ಯವೇ ಹೊತ್ತಿ ಉರಿಯುತ್ತದೆ ಎಂದು ಹೇಳಿದ್ದರು.

ವರದಿ: ಶಾಂತಾಮೂರ್ತಿ ಎಂ ಟಿವಿ9 

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:08 pm, Sun, 25 February 24

Gangadhar Saboji

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More
Follow Us