ಕಾವೇರಿ ವಿಚಾರದಲ್ಲಿ ನಿಲುವು ಪ್ರಕಟಿಸದಿದ್ದರೆ ಕರ್ನಾಟಕಕ್ಕೆ ಬಾರದಂತೆ ತಡೆಯುತ್ತೇವೆ; ರಜನಿಕಾಂತ್​ಗೆ ವಾಟಾಳ್ ನಾಗರಾಜ್ ಎಚ್ಚರಿಕೆ

Vatal Nagaraj warns Rajinikanth; ರಜನಿಕಾಂತ್ ಅವರು ಕರ್ನಾಟಕದಲ್ಲಿ ಹುಟ್ಟಿದ್ದು, ಉಭಯ ರಾಜ್ಯಗಳ ನಡುವಿನ ದಶಕಗಳ ನೀರು ಹಂಚಿಕೆ ವಿವಾದವನ್ನು ಬಗೆಹರಿಸಲು ಅವರು ಧ್ವನಿ ಎತ್ತಬೇಕು. ಇಲ್ಲವಾದಲ್ಲಿ ರಜನಿಕಾಂತ್ ಕರ್ನಾಟಕಕ್ಕೆ ಬರಬಾರದು ಎಂದು ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ.

ಕಾವೇರಿ ವಿಚಾರದಲ್ಲಿ ನಿಲುವು ಪ್ರಕಟಿಸದಿದ್ದರೆ ಕರ್ನಾಟಕಕ್ಕೆ ಬಾರದಂತೆ ತಡೆಯುತ್ತೇವೆ; ರಜನಿಕಾಂತ್​ಗೆ ವಾಟಾಳ್ ನಾಗರಾಜ್ ಎಚ್ಚರಿಕೆ
ರಜನಿಕಾಂತ್ & ವಾಟಾಳ್ ನಾಗರಾಜ್
Updated By: Ganapathi Sharma

Updated on: Sep 27, 2023 | 7:46 PM

ಬೆಂಗಳೂರು, ಸೆಪ್ಟೆಂಬರ್ 27: ಕರ್ನಾಟಕ ಮತ್ತು ತಮಿಳುನಾಡು ನಡುವೆ ನಡೆಯುತ್ತಿರುವ ಕಾವೇರಿ ವಿವಾದದ (Cauvery Dispute) ಬಗ್ಗೆ ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಮಾತನಾಡಬೇಕು ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ (Vatal Nagaraj) ಒತ್ತಾಯಿಸಿದ್ದಾರೆ. ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ನಾಗರಾಜ್ ನೇತೃತ್ವದಲ್ಲಿ ಕನ್ನಡ ಪರ ಸಂಘಟನೆಗಳು ಶುಕ್ರವಾರ ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ಈ ಹಿನ್ನೆಲೆಯಲ್ಲಿ ರಜನಿಕಾಂತ್ ನಿಲುವು ಪ್ರಕಟಿಸುವಂತೆ ವಾಟಾಳ್ ಆಗ್ರಹಿಸಿದ್ದಾರೆ.

ನಾಗರಾಜ್ ಮಾತನಾಡಿ, ರಜನಿಕಾಂತ್ ಅವರು ಕರ್ನಾಟಕದಲ್ಲಿ ಹುಟ್ಟಿದ್ದು, ಉಭಯ ರಾಜ್ಯಗಳ ನಡುವಿನ ದಶಕಗಳ ನೀರು ಹಂಚಿಕೆ ವಿವಾದವನ್ನು ಬಗೆಹರಿಸಲು ಅವರು ಧ್ವನಿ ಎತ್ತಬೇಕು. ಇಲ್ಲವಾದಲ್ಲಿ ರಜನಿಕಾಂತ್ ಕರ್ನಾಟಕಕ್ಕೆ ಬರಬಾರದು. ಕರ್ನಾಟಕ ಪ್ರವೇಶಿಸದಂತೆ ನಿರ್ಬಂಧ ಹೇರಬೇಕು. ರಾಜ್ಯದಲ್ಲಿ ರಜನಿಕಾಂತ್ ಚಿತ್ರಗಳನ್ನು ನಿಷೇಧಿಸಬೇಕು. ಇದು ಒಂದು ಎಚ್ಚರಿಕೆ ಎಂದು ಹೇಳಿದ್ದಾರೆ.

ಕರ್ನಾಟಕದಲ್ಲಿ ಹುಟ್ಟಿ ಕಾವೇರಿ ನೀರು ಕುಡಿದು ಬೆಳೆದಿರುವ ಕಾರಣ ಅವರು ಈ ಬಗ್ಗೆ ಮಾತನಾಡಬೇಕು ಎಂದು ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ.

ವಾಟಾಳ್ ನಾಗರಾಜ್ ಅವರು ಬುಧವಾರ ಬೆಂಗಳೂರಿನ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಚೇರಿಗೆ ತಮ್ಮ ಬೆಂಬಲಿಗರೊಂದಿಗೆ ಭೇಟಿ ನೀಡಿ ಶುಕ್ರವಾರ ಕರೆದಿರುವ ಕರ್ನಾಟಕ ಬಂದ್​ನಲ್ಲಿ ಪಾಲ್ಗೊಳ್ಳುವಂತೆ ಕನ್ನಡ ನಟರನ್ನು ಒತ್ತಾಯಿಸಿದರು. ಕರ್ನಾಟಕ ಬಂದ್‌ಗೆ ಕರ್ನಾಟಕ ಫಿಲಂ ಚೇಂಬರ್ ಬೆಂಬಲ ನೀಡಬೇಕು. ಶುಕ್ರವಾರ ಕಾವೇರಿ ವಿಚಾರವಾಗಿ ಕನ್ನಡ ಚಿತ್ರರಂಗದ ನಟರು ಬೆಂಬಲಕ್ಕೆ ಬರಬೇಕು ಎಂದು ನಾಗರಾಜ್ ಒತ್ತಾಯಿಸಿದರು.

ಇದನ್ನೂ ಓದಿ: Karnataka Bandh: ಕರ್ನಾಟಕ ಬಂದ್​​ ದಿನ ಏನೇನಿರುತ್ತೆ, ಏನೇನಿರಲ್ಲ? ಇಲ್ಲಿದೆ ವಿವರ

ಕಾವೇರಿ ವಿಚಾರವಾಗಿ ಮಾತನಾಡದ ಬಗ್ಗೆ ಕನ್ನಡ ನಟರ ಬಗ್ಗೆ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಆ ನಂತರ ನಟರಾದ ದರ್ಶನ್, ಕಿಚ್ಚ ಸುದೀಪ್, ಶಿವರಾಜಕುಮಾರ್ ಮತ್ತು ಇತರರು ಕಾವೇರಿ ಸಮಸ್ಯೆಯ ಬಗ್ಗೆ ಧ್ವನಿ ಎತ್ತಲು ಪ್ರಾರಂಭಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ