ಭೋವಿ ನಿಗಮದಲ್ಲಿ ಅಕ್ರಮ: ಮಾಜಿ ವ್ಯಾವಸ್ಥಾಪಕ ನಿರ್ದೇಶಕಿ ಬಂಧನ
ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದಲ್ಲಿ 90 ಕೋಟಿ ರೂಪಾಯಿಗಳ ಅವ್ಯವಹಾರ ನಡೆದಿರುವ ಆರೋಪದ ಮೇಲೆ ಇಡಿ ತನಿಖೆ ನಡೆಸುತ್ತಿದೆ. ಇದರ ಭಾಗವಾಗಿ ಮಾಜಿ ವ್ಯವಸ್ಥಾಪಕ ನಿರ್ದೇಶಕಿ ಲೀಲಾವತಿ ಅವರನ್ನು ಬಂಧಿಸಲಾಗಿದೆ. ಸಿಐಡಿ ತನಿಖೆಯಲ್ಲೂ ಹಲವು ಅಕ್ರಮಗಳು ಬೆಳಕಿಗೆ ಬಂದಿವೆ. ನಕಲಿ ಸಂಸ್ಥೆಗಳ ಮೂಲಕ ಹಣ ವರ್ಗಾವಣೆ ಮಾಡಲಾಗಿದೆ ಎಂದು ಇಡಿ ಆರೋಪಿಸಿದೆ.

ಬೆಂಗಳೂರು, ಏಪ್ರಿಲ್ 16: ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದಲ್ಲಿ (Karnataka Bhovi Development Corporation) ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕಿ ಲೀಲಾವತಿಯವರನ್ನು ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಬಂಧಿಸಿದ್ದಾರೆ. ಅಕ್ರಮ ಹಣ ವರ್ಗಾವಣೆ ಆರೋಪದಡಿ ಏಪ್ರಿಲ್ 12ರಂದು ಲೀಲಾವತಿ ಬಂಧಿಸಿರುವ ಇಡಿ ಅಧಿಕಾರಿಗಳು ವಿಶೇಷ ಕೋರ್ಟ್ಗೆ ಹಾಜರುಪಡಿಸಿ ಏಳು ದಿನ ಕಸ್ಟಡಿಗೆ ಪಡೆದಿದ್ದಾರೆ.
90 ಕೋಟಿ ರೂಪಾಯಿಗೂ ಅಧಿಕ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ ಆರೋಪ ಕೇಳಿಬಂದಿತ್ತು. ಈ ಪ್ರಕರಣದ ತನಿಖೆಯನ್ನು ಸಿಐಡಿ ನಡೆಸುತ್ತಿದ್ದು, ಇಡಿ ಸಹ ತನಿಖೆ ಆರಂಭಿಸಿದೆ. ಭೋವಿ ನಿಗಮದ ಕಚೇರಿ ಸೇರಿದಂತೆ ಹಲವಡೆ ಶೋಧ ನಡೆಸಿದ್ದ ಇಡಿ, ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಬಿಕೆ ನಾಗರಾಜಪ್ಪ ಅವರನ್ನು ಬಂಧಿಸಿತ್ತು. ನಾಗರಾಜಪ್ಪ ಸದ್ಯ ತನಿಖಾ ಸಂಸ್ಥೆಯ ವಶದಲ್ಲಿದ್ದಾರೆ. ಸದ್ಯ, ಜಾರಿ ನಿರ್ದೇಶನಾಲಯ ಅಧಿಕಾರಿಗಳು ನಿಗಮದ ಮಾಜಿ ನಿರ್ದೇಶಕಿ ಲೀಲಾವತಿಯವರನ್ನು ಬಂಧಿಸಿದ್ದಾರೆ.
ಲೀಲಾವತಿಯವರು ಶಂಕಿತರು/ಆರೋಪಿಗಳ ಜೊತೆ ಸೇರಿ ನಕಲಿ ಸಂಸ್ಥೆಗಳ ಹೆಸರಿನಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆದು, ಅವುಗಳಿಗೆ ಹಣ ವರ್ಗಾವಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಅಂತ ಇಡಿ ಹೇಳಿದೆ ಎಂದು ವರದಿಯಾಗಿದೆ.
ಟ್ವಿಟರ್ ಪೋಸ್ಟ್
ED, Bengaluru has arrested Ms. R. Leelavathy, former Managing Director of Karnataka Bhovi Development Corporation (KBDC), under the provisions of the PMLA, 2002 on 12.04.2025 for being found involved in the offense of money laundering. She was produced before the Hon’ble Special…
— ED (@dir_ed) April 16, 2025
ಸಿಐಡಿ ತನಿಖೆ ಎದುರಿಸಿದ್ದ ಉದ್ಯಮಿ ಆತ್ಮಹತ್ಯೆ
ಇದೇ ಹಗರಣ ಸಂಬಂಧ ಸಿಐಡಿ ತನಿಖೆ ಎದುರಿಸಿದ್ದ ಉದ್ಯಮಿ ಜೀವಾ ಅವರು, ಬೆಂಗಳೂರಿನ ಪದ್ಮನಾಭನಗರದ ರಾಘವೇಂದ್ರ ಲೇಔಟ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಭೋವಿ ಅಕ್ರಮ ಹಣ ವರ್ಗಾವಣೆ ಶೋಧಿಸಿರುವ ಸಿಐಡಿ, ಐದು ಕಂಪನಿಗಳಿಗೆ 34.18 ಕೋಟಿ ರೂ. ಅಕ್ರಮವಾಗಿ ವರ್ಗಾವಣೆಯಾಗಿದೆ.
ಇದನ್ನೂ ಓದಿ: ಭೋವಿ ನಿಗಮ ಅವ್ಯವಹಾರ: ನಕಲಿ ಕಂಪನಿಗಳ ಖಾತೆಗೆ ಜಮೆ ಆಯ್ತು ಕೋಟಿ ಕೋಟಿ ಹಣ
ಬರೊಬ್ಬರಿ 90 ಕೋಟಿಗೂ ಅಧಿಕ ಅವ್ಯವಹಾರ
ಸರ್ಕಾರವು ಭೋವಿ ಸಮುದಾಯದ ಅಭ್ಯುದಯಕ್ಕೆ ರೂಪಿಸಿದ್ದ ಆರ್ಥಿಕ ಯೋಜನೆಗಳಲ್ಲಿ ನಿಗಮದ ಕೆಲ ಅಧಿಕಾರಿಗಳು ಭಾರಿ ಭ್ರಷ್ಟಾಚಾರ ನಡೆಸಿದ್ದಾರೆ. 2018-2023ರವರೆಗೆ ಐದು ವರ್ಷಗಳಲ್ಲಿ ಸುಮಾರು 90 ಕೋಟಿಗೂ ಅಧಿಕ ಮೊತ್ತದ ಅಕ್ರಮ ನಡೆದಿರುವುದು ಗೊತ್ತಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:15 pm, Wed, 16 April 25