ಕರ್ನಾಟಕ ಬಿಜೆಪಿ ಕದನ ದಿಲ್ಲಿಗೆ ಶಿಫ್ಟ್​: ಹೈಕಮಾಂಡ್​​ ಮುಂದೆ ಮೂರು ಬೇಡಿಕೆ ಇಟ್ಟ ಯತ್ನಾಳ್

ಜಿಲ್ಲಾಧ್ಯಕ್ಷರ ಆಯ್ಕೆಗೆ ವಿರೋಧ, ರಾಜ್ಯಾಧ್ಯಕ್ಷರ ಚುನಾವಣೆ ನಡೆಸಬೇಕೆಂಬ ಒತ್ತಡ.. ವಿಜಯೇಂದ್ರರನ್ನ ಪಟ್ಟದಿಂದ ಇಳಿಸಬೇಕೆಂಬ ಹಠ. ಈ ಎಲ್ಲಾ ಅಂಶಗಳನ್ನು ಇಟ್ಟುಕೊಂಡು ವಿಜಯೇಂದ್ರ ವಿರುದ್ಧ ರಣಕಹಳೆ ಮೊಳಗಿಸಿರುವ ಬಸನಗೌಡ ಪಾಟೀಲ್ ಯತ್ನಾಳ್ ಕದನ ದೆಹಲಿಗೆ ಶಿಫ್ಟ್ ಆಗಿದ್ದು,ಹೈಕಮಾಂಡ್​ ಮುಂದೆ ಮೂರು ಬೇಡಿಕೆಗಳನ್ನು ಇಟ್ಟಿದೆ. ಯತ್ನಾಳ್ ವರ್ಸಸ್ ವಿಜಯೇಂದ್ರ ನಡುವಿನ ಅಂತಿಮ ಹಂತದ ಕದನ ಇದಾಗಿದ್ದು, ದೆಹಲಿಯಲ್ಲಿ ಏನೇನು ಆಗಲಿದೆ ಎನ್ನುವ ಕುತೂಹಲ ಮೂಡಿಸಿದೆ. ಇನ್ನು ಯತ್ನಾಳ್ ಬಣ ಹೈಕಮಾಂಡ್​ ಮುಂದಿಟ್ಟ ಮೂರು ಬೇಡಿಕೆಗಳೇನು ಎನ್ನುವ ವಿವರ ಇಲ್ಲಿದೆ.

ಕರ್ನಾಟಕ ಬಿಜೆಪಿ ಕದನ ದಿಲ್ಲಿಗೆ ಶಿಫ್ಟ್​: ಹೈಕಮಾಂಡ್​​ ಮುಂದೆ ಮೂರು ಬೇಡಿಕೆ ಇಟ್ಟ ಯತ್ನಾಳ್
ವಿಜಯೇಂದ್ರ-ಯತ್ನಾಳ್
Edited By:

Updated on: Feb 03, 2025 | 4:18 PM

ಬೆಂಗಳೂರು, (ಫೆಬ್ರವರಿ 03): ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವರ್ಸಸ್ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನಡುವಿನ ಅಂತಿಮ ಹಂತದ ಕದನ ದಿಲ್ಲಿಗೆ ಶಿಫ್ಟ್ ಆಗಿದೆ. ಈಗಾಗಲೇ ಬೆಂಗಳೂರಿನಿಂದ ಶಾಸಕ ರಮೇಶ್ ಜಾರಕಿಹೊಳಿ, ಮಾಜಿ ಸಚಿವ ಕುಮಾರ್ ಬಂಗಾರಪ್ಪ ಮತ್ತು ಎನ್‌.ಆರ್ ಸಂತೋಷ್ ದೆಹಲಿಗೆ ತೆರಳಿದ್ದು, ಇನ್ನು ನಾಳೆ(ಫೆಬ್ರವರಿ 04) ಬಸನಗೌಡ ಪಾಟೀಲ್ ಯತ್ನಾಳ್, ಬಿ.ಪಿ ಹರೀಶ್ ಮಾಜಿ ಸಂಸದ ಜಿ.ಎಂ ಸಿದ್ದೇಶ್ವರ್ ದೆಹಲಿಗೆ ತೆರಳಲಿದ್ದಾರೆ. ಇದಲ್ಲದೇ ಯತ್ನಾಳ್​ ಟೀಮ್ ಜೊತೆ ಇನ್ನೂ ಕೆಲವರು ವಿಮಾನ ಏರಲಿದ್ದಾರೆ. ಇದರೊಂದಿಗೆ ಯತ್ನಾಳ್​ ಬಣ ಮತ್ತಷ್ಟು ದೊಡ್ಡದಾಗಿದೆ.

ಯತ್ನಾಳ್​ ಬಣದ ಬೇಡಿಕೆಗಳೇನು..?

ಎರಡ್ಮೂರು ದಿನ ದೆಹಲಿಯಲ್ಲೇ ಠಿಕಾಣಿ ಹೂಡಲಿರುವ ಯತ್ನಾಳ್ ಬಣ, ರಾಜ್ಯಾದ್ಯಕ್ಷ ಚುನಾವಣೆ ನಡೆಯಬೇಕು ಎಂದು ಒತ್ತಡ ಹಾಕುವ ಸಾಧ್ಯತೆ ಇದೆ. ಇದೇ ವಿಚಾರ ಇಟ್ಕೊಂಡು ಯತ್ನಾಳ್ ಟೀಮ್ ದೆಹಲಿಗೆ ತೆರಳಿರುವುದಕ್ಕೆ ಕಾರಣವೂ ಇದೆ. ಅದೇನಂದ್ರೆ, ರಾಜ್ಯಾಧ್ಯಕ್ಷ ಸ್ಥಾನದ ವಿಚಾರದಲ್ಲಿ ಚುನಾವಣೆ ನಡೆಯುವ ಬಗ್ಗೆ ಸ್ಪಷ್ಟತೆ ಇಲ್ಲ. ಈ ಬಗ್ಗೆ ರಾಜ್ಯ ಬಿಜೆಪಿ ನಾಯಕರಲ್ಲಿ ಈಗಲೂ ಗೊಂದಲವಿದೆ. ಚುನಾವಣಾ ಮೇಲುಸ್ತುವಾರಿಯಾಗಿರುವ ಕೇಂದ್ರ ಸಚಿವ ಶಿವರಾಜ್‌ ಸಿಂಗ್ ಚೌಹಾಣ್, ಬಜೆಟ್ ಅಧಿವೇಶನದಲ್ಲಿ ಬ್ಯುಸಿಯಾಗಿದ್ದಾರೆ. ಚೌಹಾಣ್ ಯಾವಾಗ ರಾಜ್ಯಕ್ಕೆ ಬರುತ್ತಾರೆ ಎಂಬ ಬಗ್ಗೆ ನಿಖರ ಮಾಹಿತಿ ಇಲ್ಲ. ಇದೇ ವೇಳೆಯಲ್ಲಿ ದೆಹಲಿಗೆ ಹೋಗಿ ಒತ್ತಡ ಹಾಕಲು ಯತ್ನಾಳ್ ಬಣ ಮುಂದಾಗಿದೆ. ಇದರ ಜೊತೆಗೆ 23 ಜಿಲ್ಲಾಧ್ಯಕ್ಷರ ಆಯ್ಕೆ ಘೋಷಣೆಯನ್ನ ರದ್ದು ಮಾಡಬೇಕೆಂಬ ಒತ್ತಡವನ್ನೂ ಮಾಡುವ ಸಾಧ್ಯತೆ ಇದೆ. ವರಿಷ್ಠರನ್ನಷ್ಟೇ ಅಲ್ಲ, ಸಂಸದರನ್ನ ಭೇಟಿ ಮಾಡಿ ತಮ್ಮ ತಂಡದ ಬಲವನ್ನ ವೃದ್ಧಿ ಮಾಡಿಕೊಳ್ಳವ ಪ್ರಯತ್ನವನ್ನೂ ಮಾಡಲಿದ್ದಾರೆ.

ಇದನ್ನೂ ಓದಿ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬದಲಾಯಿಸಿ: ಜೆಪಿ ನಡ್ಡಾಗೆ ಅರವಿಂದ ಲಿಂಬಾವಳಿ ಮನವಿ

ದೆಹಲಿಗೆ ಹೋಗುವ ಬಗ್ಗೆ ಯತ್ನಾಳ್ ಹೇಳಿದ್ದೇನು?

ಇನ್ನು ಈ ಬಗ್ಗೆ ವಿಜಯಪುರದಲ್ಲಿಂದು ಮಾಧ್ಯಮಗಳೀಗೆ ಪ್ರತಿಕ್ರಿಯಿಸಿದ ಯತ್ನಾಳ್, ನಾಳೆ ನಾನು ಮತ್ತು ನಮ್ಮ ತಂಡ ದೆಹಲಿಗೆ ಹೋಗುತ್ತೇವೆ. ಬಿಎಸ್​ವೈ ಹಾಗೂ ಆತನ ಮಗನ ಕರ್ಮಕಾಂಡಗಳ ಬಗ್ಗೆ ವಿವರಣೆ ನೀಡುತ್ತೇವೆ. ಹೈಕಮಾಂಡ್​​ಗೆ ಎಲ್ಲಾ ವಿಚಾರಗಳ ಬಗ್ಗೆ ಮಾಹಿತಿ ನೀಡುತ್ತೇವೆ. ಮಹಾಭ್ರಷ್ಟ ಕುಟುಂಬ ಬೇಕಾ, ಪಕ್ಷದ ಕಾರ್ಯಕರ್ತರು ಬೇಕಾ? ಬಿಜೆಪಿಯಲ್ಲಿ ಕುಟುಂಬಶಾಹಿ ಕೊನೆಗೊಳ್ಳಬೇಕು . ಭ್ರಷ್ಟಾಚಾರಿ ಕುಟುಂಬವನ್ನು ರಾಜ್ಯದಿಂದ ಕಿತ್ತೊಗೆಯಬೇಕು. ಹಿಂದುತ್ವ ಇರುವಂತಹ ವ್ಯಕ್ತಿಗಳ ಕೈಯಲ್ಲಿ ನಾಯಕತ್ವ ಇರಬೇಕು ಎಂದಿದ್ದಾರೆ.

ವಿಜಯೇಂದ್ರ ಅವರು ಮತ್ತೆ ರಾಜ್ಯಾಧ್ಯಕ್ಷನಾಗುವ ವಿಶ್ವಾಸ ವ್ಯಕ್ತಪಡಿಸಿರುವ ಬಗ್ಗೆ ಯತ್ನಾಳ್ ಮಾತನಾಡಿ, ಠೇವಣಿ ಕಳೆದುಕೊಳ್ಳುವವನು ಕೂಡ ನಾನೇ ಗೆಲ್ಲುತ್ತೇನೆ ಅಂತಾನೆ/ ಹೊಳೆನರಸೀಪುರದಲ್ಲಿ ಒಬ್ಬ 500 ಮತಗಳಲ್ಲಿ ಸೋತೆ ಎಂದಿದ್ದ. ನಂತರ ನೋಡಿದಾಗ ಅವನು ಪಡೆದಿದ್ದು ಕೇವಲ 500 ಮತಗಳು. ಈಗ ಹೈಕಮಾಂಡ್​ನಲ್ಲಿ ಮೂರು ವಿಷಯಗಳು ಸ್ಪಷ್ಟವಾಗಬೇಕು. ಕುಟುಂಬ ರಾಜಕಾರಣದಿಂದ ಬಿಜೆಪಿ ಮುಕ್ತವಾಗಬೇಕು. ನಾಳೆ ದೆಹಲಿಗೆ ತೆರಳುವ ನಿಯೋಗ ದೊಡ್ಡದಿದೆ. ವಿಜಯೇಂದ್ರ ಮುಂದುವರಿಸಿದರೆ ಹೀನಾಯ ಸ್ಥಿತಿ ಎಂದು ಗೊತ್ತಾಗಿದೆ ಎಂದು ವಾಗ್ದಾಳಿ ನಡೆಸಿದರು.

ನನ್ನ ಭಿಕ್ಷೆಯಿಂದ ಶಾಸಕನಾಗಿದ್ದು ಎಂದು ವಿಜಯೇಂದ್ರಗೆ ಡಿಕೆ ಶಿವಕುಮಾರ್ ಡಿಕೆ ಹೇಳಿದ್ದರು. ಅದಕ್ಕೆ ವಿಜಯೇಂದ್ರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಮೊನ್ನೆ ಬಿವೈವಿ ಬಗ್ಗೆ ಹೀನಾಯವಾಗಿ ಬೈಯ್ದರೂ ಉತ್ತರ ಕೊಡಲಿಲ್ಲ. ಕಾಂಗ್ರೆಸ್ಸಿಗರು ಬಿಎಸ್​ವೈ ಮತ್ತು ಅವರ ಮಗನನ್ನು ಹೆದರಿಸಿದ್ದಾರೆ. ನಮ್ಮ ಹಗರಣ ತೆಗೆದರೆ ನಿಮ್ಮದು ಪೋಕ್ಸೋ ಪ್ರಕರಣ ಇದೆ. ನಕಲಿ ಸಹಿ ಮಾಡಿದ್ದು ಇದೆ, ಇದೆಲ್ಲ ತೆಗೆಯುತ್ತೇವೆಂದು ಹೆದರಿಸಿದ್ದಾರೆ. ಇಂತಹ ವ್ಯಕ್ತಿಗಳು ಬೇಕಾ ಎಂದು ನಾವು ಹೈಕಮಾಂಡ್​ಗೆ ಕೇಳುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಇನ್ನು ಅತ್ತ ದೆಹಲಿಗೆ ತೆರಳಿ ಯತ್ನಾಳ್ ಟೀಮ್ ರಣತಂತ್ರ ಮಾಡುತ್ತಿದ್ದರೆ. ಇತ್ತ ಶಿವಮೊಗ್ಗದಲ್ಲಿರೋ ವಿಜಯೇಂದ್ರ, ಒಂದು ವಾರದಲ್ಲಿ ಎಲ್ಲವೂ ಸರಿಯಾಗುತ್ತೆ ಎಂದಿದ್ದಾರೆ. ಈಗಾಗಲೇ ಪಕ್ಷಕ್ಕೆ ಏನೇನು ಡ್ಯಾಮೇಜ್ ಆಗ್ಬೇಕೋ ಆಗೋಗಿದೆ. ಒಂದು ವಾರದಲ್ಲಿ ಯಾರು ಅಧ್ಯಕ್ಷರಾಗುತ್ತಾರೆ ಎಂಬ ಉತ್ತರ ಸಿಗುತ್ತೆ. ಅದಾದ ನಂತರ ಎಲ್ಲವೂ ಸರಿಯಾಗುತ್ತೆ ಎಂದಿದ್ದಾರೆ.

ರಾಜ್ಯದಲ್ಲಿ ನಡೆಯುತ್ತಿರುವ ಕಮಲ ದಂಗೆ ದೆಹಲಿಗೆ ಶಿಫ್ಟ್ ಆಗಿದ್ದು, ಇನ್ನೊಂದು ವಾರದಲ್ಲಿ ಕ್ಲೈಮ್ಯಾಕ್ಸ್ ಕದನ ನಡೆಯೋ ಸಾದ್ಯತೆ ಇದೆ. ರಾಜ್ಯಾಧ್ಯಕ್ಷ ಚುನಾವಣೆ ನಡೆಯುತ್ತಾ? ನಡೆಯಲ್ವಾ ಎನ್ನುವುದಕ್ಕೆ ಉತ್ತರ ಸಿಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us