ನಾನೇ ಸಿಎಂ ಎನ್ನುವ ಮೂಲಕ ಸಿಂಪಥಿ ಅಸ್ತ್ರ ಪ್ರಯೋಗಿಸಿದ ಸಿದ್ದರಾಮಯ್ಯ: ಕ್ಲೈಮ್ಯಾಕ್ಸ್​ ತಂತ್ರವೇನು ನೋಡಿ

ಅಹಿಂದ ಸಮುದಾಯ, ಕುರುಬ ಮತ, ಮಾಸ್​ ಲೀಡರ್ ಎಂಬ ಬಿರುದಿನ ಮೂಲಕ ರಾಜ್ಯಾದ್ಯಂತ ತಮ್ಮದೇ ಆದ ಅಭಿಮಾನಿ ಬಳಗವನ್ನೇ ಹೊಂದಿದ್ದಾರೆ ಸಿಎಂ ಸಿದ್ದರಾಮಯ್ಯ. ಅವರು 2ನೇ ಬಾರಿಗೆ ಸಿಎಂ ಪಟ್ಟಕ್ಕೇರಲು ಇದೇ ಅಹಿಂದ ಸಮುದಾಯದ ಬಲವೇ ಕಾರಣ ಆಗಿದೆ. ಇದೀಗ ಮುಡಾ ಸಂಕಷ್ಟದ ನಡುವೆಯೇ ಉಪಚುನಾವಣೆ​ ಅಖಾಡದಲ್ಲಿ ಮೂರುವರೆ ವರ್ಷ ನಾನೇ ಸಿಎಂ ಎಂಬ ಅಸ್ತ್ರವನ್ನು ಸಿದ್ದರಾಮಯ್ಯ ಹೂಡಿದ್ದಾರೆ. ಇದೇ ಒಂದು ಅಸ್ತ್ರ ರಾಜ್ಯ ರಾಜಕೀಯದಲ್ಲಿ ಹತ್ತಾರು ಚರ್ಚೆಗೆ ಗ್ರಾಸವಾಗಿದೆ.

ನಾನೇ ಸಿಎಂ ಎನ್ನುವ ಮೂಲಕ ಸಿಂಪಥಿ ಅಸ್ತ್ರ ಪ್ರಯೋಗಿಸಿದ ಸಿದ್ದರಾಮಯ್ಯ: ಕ್ಲೈಮ್ಯಾಕ್ಸ್​ ತಂತ್ರವೇನು ನೋಡಿ
ಸಿದ್ದರಾಮಯ್ಯ
Edited By:

Updated on: Nov 08, 2024 | 2:40 PM

ಬೆಂಗಳೂರು, ನವೆಂಬರ್ 8: ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಸಂಕಷ್ಟಕ್ಕೆ ಸಿಲುಕಿದ್ದಾರೆ. 40 ವರ್ಷದ ರಾಜಕೀಯದಲ್ಲಿ ಇದೇ ಮೊದಲ ಬಾರಿಗೆ ದೊಡ್ಡ ಮಟ್ಟಿನ ಭ್ರಷ್ಟಾಚಾರ ಆರೋಪ ಬಂದಿದೆ. ಕಳಂಕರಹಿತ ರಾಜಕಾರಣಿ ಎಂದೇ ಪ್ರಸಿದ್ಧಿ ಪಡೆದಿದ್ದ ಸಿದ್ದರಾಮಯ್ಯ ತನಿಖೆ ಎದುರಿಸಬೇಕಾಗಿ ಬಂದಿದೆ. ಪ್ರಕರಣದ ತನಿಖೆಯೇನೋ ನಡೆಯುತ್ತಿದೆ. ಆದರೆ ಇದೀಗ ಎಲ್ಲೋ ಒಂದು ಕಡೆ, ಉಪಚುನಾವಣೆಗೆ ಮುಡಾ ಪ್ರಕರಣವೇ ಸಿಎಂಗೆ ಪ್ಲಸ್​ ಆಯ್ತಾ ಎಂಬ ಲೆಕ್ಕಾಚಾರವೂ ಕೇಳಿ ಬರ್ತಿದೆ.

ಲೋಕಾಯುಕ್ತ ವಿಚಾರಣೆಗೆ ಸಿದ್ದರಾಮಯ್ಯ ಒಳಪಟ್ಟಿದ್ದರಿಂದ ಅನುಕಂಪವೂ ಸೃಷ್ಟಿಯಾಗಿದೆಯಂತೆ. ಇದೇ ಅನುಕಂಪವನ್ನೇ ಚುನಾವಣೆಗೆ ಬಳಸಿಕೊಳ್ಳುವ ಲೆಕ್ಕಾಚಾರದಲ್ಲಿ ಸಿಎಂ ಇದ್ದಾರೆ ಎನ್ನಲಾಗುತ್ತಿದೆ. ಇದೇ ಲೆಕ್ಕಾಚಾರದಲ್ಲಿ ‘ನಾನೇ ಸಿಎಂ’ ಎಂಬುದಾಗಿ ಹೇಳಿದ್ದಾರೆ ಎನ್ನಲಾಗುತ್ತಿದೆ.

ಸಿದ್ದರಾಮಯ್ಯ ಮಾತಿಂದ ಸಂಡೂರು, ಶಿಗ್ಗಾಂವಿಯಲ್ಲಿ ಪ್ರಭಾವ

ಸಂಡೂರಿನಲ್ಲಿ ಸಿಎಂ ಸಿದ್ದರಾಮಯ್ಯ ಕೇವಲ ಹೇಳಿಕೆಯನ್ನಷ್ಟೇ ನೀಡಿದ್ದಲ್ಲ. ಹತ್ತಾರು ಸಂದೇಶಗಳನ್ನು ರವಾನೆ ಮಾಡುವ ಕೆಲಸ ಮಾಡ್ತಿದ್ದಾರೆ. ಸಂಡೂರಿನಲ್ಲೇ ನಿಂತು 2 ಕ್ಷೇತ್ರಗಳಿಗೂ ಪ್ರಭಾವ ಬೀರುವ ರೀತಿಯಲ್ಲಿ ಹೇಳಿಕೆ ಕೊಟ್ಟಿದ್ದಾರೆ. ಇದರ ಜೊತೆಗೆ ತಪ್ಪು ಮಾಡಿಲ್ಲ ಎಂಬ ದಾಳವನ್ನು ಚುನಾವಣಾ ಪ್ರಚಾರದಲ್ಲಿ ಉರುಳಿಸಿದ್ದಾರೆ. ಈ ಮೂಲಕ ತಮ್ಮ ಸಮುದಾಯದ ಮತಗಳನ್ನ ಹಿಡಿದಿಟ್ಟುಕೊಳ್ಳಲು ಮುಂದಾಗಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ಆದರೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ಕುರುಬ ಸಂಘದ ಜಿಲ್ಲಾಧ್ಯಕ್ಷ ವಿವೇಕ್, ನಾವು ಹಲವಾರು ವರ್ಷಗಳಿಂದ ಕಾಂಗ್ರೆಸ್ ಜತೆಗೆ ಇದ್ದೇವೆ. ಈಗಲೂ ಕಾಂಗ್ರೆಸ್ ಜೊತೆಯಲ್ಲೇ ಇರುತ್ತೇವೆ. ಸಿದ್ದರಾಮಯ್ಯ, ಡಿಕೆ ನಡುವೆ ನಾವು ಭಿನ್ನಾಭಿಪ್ರಾಯ ಮಾಡಲ್ಲ ಎಂದಿದ್ದಾರೆ.

ಏತನ್ಮಧ್ಯೆ, ಸಿಎಂ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ. ಜಿ ಪರಮೇಶ್ವರ್, ಸಿಎಂ ಅವರು ತಮ್ಮ ಅಭಿಪ್ರಾಯ ಹೇಳಿದ್ದಾರೆ. ಅದಕ್ಕೆ ನಮ್ಮ ಅಭಿಪ್ರಾಯ ಹೇಳುವುದು ಸರಿಯಲ್ಲ ಎಂದಿದ್ದಾರೆ.

ಬಿಜೆಪಿ ನಾಯಕರಿಂದ ಲೇವಡಿ

ಈ ಮಧ್ಯೆ, ನಾನೇ ಸಿಎಂ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಮಾಜಿ ಸಂಸದ ಪ್ರತಾಪ್ ಸಿಂಹ ಲೇವಡಿ ಮಾಡಿದ್ದಾರೆ. 5 ವರ್ಷ ಅವರೇ ಇರಲಿ. ಸಿದ್ದರಾಮಯ್ಯ ಇದ್ದರೆ ದುರಾಡಳಿತ, ಸಾಬರ ಓಲೈಕೆ ನಡೆಯುತ್ತದೆ. ಜನರಿಗೆ ಮನವರಿಕೆಯಾಗಿ ಸರ್ಕಾರ ಕಿತ್ತೊಗೆಯುತ್ತಾರೆ ಎಂದಿದ್ದಾರೆ. ಇನ್ನೂ ಸಿಎಂ ಆಗಿ ಉಳಿಯುವ ಅನುಮಾನ ಇರೋದರಿಂದಲೇ ಪದೇ ಪದೇ ಹೇಳಿಕೊಳ್ಳುತ್ತಿದ್ದಾರೆ ಎಂದು ಅಶ್ವತ್ಥ್ ನಾರಾಯಣ ಕಾಲೆಳೆದಿದ್ದಾರೆ.

ಇದನ್ನೂ ಓದಿ: ಮೂರೂವರೆ ವರ್ಷ ನಾನೇ ಸಿಎಂ: ಸಿದ್ದರಾಮಯ್ಯ ಹೇಳಿಕೆಯಿಂದ ಶುರುವಾಯ್ತು ಹೊಸ ಚರ್ಚೆ

ಚನ್ನಪಟ್ಟಣದಲ್ಲಿ ‘ಕೈ’ಗೆ ಸಂಕಷ್ಟ ತಂದಿಟ್ಟ ಸಿಎಂ ಕುರ್ಚಿ ಕಾಳಗ

ಶಿಗ್ಗಾಂವಿ ಸಂಡೂರಿನಲ್ಲಿ ನಾನೇ ಸಿಎಂ ಎಂಬ ಹೇಳಿಕೆಯಿಂದ ಕುರುಬ ಮತಗಳು ಕ್ರೂಡೀಕರಣವಾಗಲಿದೆ ಎಂಬ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಇದೆ. ಆದರೆ, ಚನ್ನಪಟ್ಟಣದಲ್ಲಿ ಡಿಕೆ ಸಿಎಂ ಆಗುತ್ತಾರೆ ಎಂಬ ನಾಯಯಕರ ಹೇಳಿಕೆಗಳು ಕಾಂಗ್ರೆಸ್‌ಗೆ ಪೆಟ್ಟು ಕೊಡುತ್ತಿದೆ. ಚನ್ನಪಟ್ಟಣದಲ್ಲಿ ಯೋಗೇಶ್ವರ್ ಗೆದ್ದರೆ ಡಿಕೆ ಶಿವಕುಮಾರ್ ಸಿಎಂ ಎಂಬ ಹೇಳಿಕೆಯಿಂದ ಕುರುಬ ಸಮುದಾಯದ ಮತಗಳು ಕೈ ತಪ್ಪುವ ಆತಂಕ ಕಾಂಗ್ರೆಸ್‌ಗೆ ಎದುರಾಗಿದೆ. ಹೀಗಾಗಿ ಡ್ಯಾಮೇಜ್‌ ಕಂಟ್ರೋಲ್‌ಗೆ ಮುಂದಾಗಿರುವ ಅಹಿಂದ ಮುಖಂಡರು, ಕುರುಬ ಮತ್ತು ಹಿಂದುಳಿದ ನಾಯಕರ ಜತೆ ಸಭೆ ನಡೆಸಿದ್ದಾರೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 2:26 pm, Fri, 8 November 24

Prasanna Gaonkar

ಹುಟ್ಟೂರು ಯಲ್ಲಾಪುರ, ಬೆಳೆದೂರು ದಾಂಡೇಲಿಯ ದಟ್ಟ ಕಾಡುಗಳ ನಡುವೆ. ರವಿ ಬೆಳಗೆರೆ ಎಂಬ ಅಕ್ಷರ ರಾಕ್ಷಸನ ಕಟ್ಟಾಭಿಮಾನದಿಂದ ಹಾಳಾಗಿ, ಸೈನ್ಸ್ ನಲ್ಲಿ ಡಿಗ್ರಿ ಪಡೆದು ಜರ್ನಲಿಸಂಗೆ ಹಿಂಬದಿ ಕಿಟಕಿಯಿಂದ ನುಸುಳಿದ್ದು 2010 ರ ಅಕ್ಟೋಬರ್ ನಲ್ಲಿ. ಉಡುಪಿಯಲ್ಲಿ ಮೊದಲ ಪತ್ರಿಕೋದ್ಯಮ ಕರ್ತವ್ಯ ಪ್ರಾರಂಭಿಸಿದ್ದು 2010 ರಲ್ಲಿಯೇ. ಜನಶ್ರೀ ನ್ಯೂಸ್ ಮೊದಲು ಅನ್ನ ನೀಡಿದ ಸಂಸ್ಥೆ. ಉಡುಪಿ ಜಿಲ್ಲಾ ವರದಿಗಾರನಾಗಿ ಮೂರು ವರ್ಷ ಕೆಲಸ ಮಾಡಿ 2013 ರ ಅಂತ್ಯಕ್ಕೆ ಸಮಯ ನ್ಯೂಸ್ ಮೂಲಕ ಬೆಂಗಳೂರಿಗೆ ಎಂಟ್ರಿ. ಬಿಗ್ ೩, ಬೆಂಗಳೂರ್ ಲೈವ್, ಸಮಯ ಸಕಾಲ ಕಾರ್ಯಕ್ರಮದಲ್ಲಿ ವರದಿಗಾರಿಕೆ ಮಾಡಿದ ಖುಷಿ. 2014 ರ ಡಿಸೆಂಬರ್ ನಿಂದ ಟಿವಿ9 ನಲ್ಲಿ ಕೆಲಸ ಪ್ರಾರಂಭ. ಟಿವಿ9 ನಲ್ಲಿ ಮೊದಲು ಮೆಟ್ರೋ ರಿಪೋರ್ಟಿಂಗ್ ಮೂಲಕ ಬೆಂಗಳೂರು ಸುತ್ತುವ ಅರಿಯುವ ರಾಜಧಾನಿಯ ನಾಡಿಮಿಡಿತ ಹುಡುಕುವ ಅವಕಾಶ. ಮೆಟ್ರೋ ಬ್ಯೂರೋ ದಲ್ಲಿ ಶೈಕ್ಷಣಿಕ ಹಾಗೂ ಬಿಬಿಎಂಪಿ ವರದಿಗಾರಿಕೆ. ಚಪ್ಪಲಿಯಿಂದ ಹಿಡಿದು ಚಾದರ್ ತನಕ ಸ್ಟೋರಿ ಮಾಡಿದ ಅನುಭವ. ಮೆಟ್ರೋ ಟೀಂ ನಿಂದ ರಾಜಕೀಯ ವರದಿಗಾರಿಕೆಗೆ ಶಿಫ್ಟ್ ಆದ ತಕ್ಷಣ- ಮುಂದುವರಿದಿದೆ ನಿರಂತರ ಪಯಣ. ಕಥೆ, ಕಾದಂಬರಿ, ಕವನ, ಸಿನಿಮಾ, ಸುತ್ತಾಟ, ಆಗಾಗ ಕಿತ್ತಾಟ, ಸ್ನೇಹಿತರೊಂದಿಗೆ ಒಡನಾಟ ಇವೆಲ್ಲ ಮಾಮೂಲಿ ದಿನಚರಿ. ಇವತ್ತಿಗೂ ಬರವಣಿಗೆಯೊಂದೇ ಖುಷಿ ಕೊಡುವ ಖರ್ಜೂರ. ಸ್ಟಾಕ್ ಮಾರ್ಕೆಟ್ ನಲ್ಲಿ 2019 ರಿಂದ ಆ್ಯಕ್ಟಿವ್.

Read More
Follow Us