ಬೆಂಗಳೂರಿಗೆ ಹೊಸ ರೋಡ್​: ಏನಿದು ಬ್ಯುಸಿನೆಸ್ ಕಾರಿಡಾರ್?; ಮಾಹಿತಿ ಇಲ್ಲಿದೆ

ಬೆಂಗಳೂರಿನ ಟ್ರಾಫಿಕ್​ ಸಮಸ್ಯೆ ಮನಗಂಡು ಹೊಸ ರಸ್ತೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಹೆಸರಿನಲ್ಲಿ ನೂತನ ರೋಡ್​ ನಿರ್ಮಾಣವಾಗಲಿದ್ದು, ರಸ್ತೆಯ ಶೇಕಡಾ 65ರಷ್ಟು ಜಾಗವನ್ನು ಸಂಚಾರಕ್ಕೆ ಮತ್ತು ಉಳಿದ ಶೇ.35ರಷ್ಟು ಜಾಗವನ್ನು ಕಮರ್ಷಿಯಲ್​​ ಚಟುವಟಿಕೆಗಳಿಗೆ ಉಪಯೋಗಿಸಕೊಳ್ಳಲು ನಿರ್ಧರಿಸಲಾಗಿದೆ.

ಬೆಂಗಳೂರಿಗೆ ಹೊಸ ರೋಡ್​: ಏನಿದು ಬ್ಯುಸಿನೆಸ್ ಕಾರಿಡಾರ್?; ಮಾಹಿತಿ ಇಲ್ಲಿದೆ
ಬೆಂಗಳೂರಿಗೆ ಹೊಸ ರಸ್ತೆ. (ಸಾಂದರ್ಭಿಕ ಚಿತ್ರ)
Edited By:

Updated on: Oct 16, 2025 | 5:48 PM

ಬೆಂಗಳೂರು, ಅಕ್ಟೋಬರ್​ 16: ರಾಜಧಾನಿ ಬೆಂಗಳೂರಿನ ಟ್ರಾಫಿಕ್​ ಸಮಸ್ಯೆಗೆ ಮುಕ್ತಿ ಹಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಸಿಎಂ ಸಿದ್ದರಾಮಯ್ಯ (Siddaramaiah) ನೇತೃತ್ವದಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಣಯ ಕೈಗೊಳ್ಳಲಾಗಿದ್ದು, ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಹೆಸರಿನಲ್ಲಿ ಹೊಸ ರಸ್ತೆ ನಿರ್ಮಾಣಕ್ಕೆ ನಿರ್ಧಾರ ಮಾಡಲಾಗಿದೆ. ರಸ್ತೆಯ ಶೇಕಡಾ 65ರಷ್ಟು ಜಾಗವನ್ನು ಸಂಚಾರಕ್ಕೆ ಮತ್ತು ಉಳಿದ ಶೇ.35ರಷ್ಟು ಜಾಗವನ್ನು ಕಮರ್ಷಿಯಲ್​​ ಚಟುವಟಿಕೆಗಳಿಗೆ ಉಪಯೋಗಿಸಕೊಳ್ಳಲು ನಿರ್ಧರಿಸಲಾಗಿದ್ದು, ಈ ರಸ್ತೆಯಲ್ಲಿ ಸಂಚರಿಸಲು ವಾಹನ ಸವಾರರು ಟೋಲ್​ ಕಟ್ಟಬೇಕಾಗುತ್ತೆ.

ಸಚಿವ ಸಂಪುಟ ಸಭೆ ಬಳಿಕ ಈ ಬಗ್ಗೆ ಮಾತನಾಡಿರುವ ಡಿಸಿಎಂ ಡಿ.ಕೆ. ಶಿವಕುಮಾರ್, ಬೆಂಗಳೂರು ಕಾರಿಡಾರ್ ವಿಚಾರವಾಗಿ ಮಹತ್ವದ ನಿರ್ಣಯ ಮಾಡಿದ್ದೇವೆ. ರಸ್ತೆಗಾಗಿ ಈ ಹಿಂದೆ 100 ಕಿಲೋ ಮೀಟರ್​ ನೋಟಿಫಿಕೇಷನ್​ ಆಗಿತ್ತು. ಬೆಂಗಳೂರಿನ ತುಮಕೂರು ರಸ್ತೆಯಿಂದ ಎಲೆಕ್ಟ್ರಾನಿಕ್ ಸಿಟಿವರೆಗೆ, ಅಲ್ಲಿಂದ ಮೈಸೂರು ರಸ್ತೆವರೆಗೆ ಪೆರಿಫೆರಲ್ ರಿಂಗ್ ರೋಡ್ ಎಂದಿದ್ದರು. ಆದರೆ ಆ ಬಗ್ಗೆ ಯಾವುದೇ ನಿರ್ಧಾರ ಆಗಿಲ್ಲ. ಈಗ ಪರ್ಯಾಯ ರಸ್ತೆಯ ಅಗತ್ಯವಿದೆ. ಹೀಗಾಗಿ ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಅಂತಾ ಮಾಡುತ್ತಿದ್ದೇವೆ. ಭೂಸ್ವಾಧೀನ ಪರಿಹಾರ ವಿಚಾರವಾಗಿ ಕಾಯ್ದೆಯಲ್ಲಿ ಅವಕಾಶ ಇರದ ಕಾರಣ ಭೂಮಾಲೀಕರಿಗೆ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ಕೊಡಬೇಕೆಂದು ನಿರ್ಧಾರ ಮಾಡಿದ್ದೇವೆ. ಪರಿಹಾರ ರೂಪದಲ್ಲಿ ಇದನ್ನು ನೀಡುತ್ತೇವೆ. ಎರಡು ವರ್ಷಗಳಲ್ಲಿ ಈ ಯೋಜನೆಯು ಪೂರ್ಣವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಡಿಸಿಎಂ ಡಿಕೆಶಿ ಹೇಳಿದ್ದೇನು?

Business Corridor Road in Bengaluru: ಎರಡು ವರ್ಷಗಳ ಬಳಿಕ ಬೆಂಗಳೂರಿಗೆ ಹೊಸ ರೋಡ್

ಯೋಜನೆಯ ಉದ್ದೇಶ

ಬೆಂಗಳೂರಿನ ಕೇಂದ್ರ ಭಾಗದಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವುದು ಮತ್ತು ನಗರದ ಹೊರವಲಯದಲ್ಲಿ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವುದು ಈ ಯೋಜನೆಯ ಉದ್ದೇಶವಾಗಿದೆ. ತುಮಕೂರು ರಸ್ತೆ, ಬಳ್ಳಾರಿ ರಸ್ತೆ, ಹಳೆ ಮದ್ರಾಸ್ ರಸ್ತೆ, ಸರ್ಜಾಪುರ ರಸ್ತೆ, ಹೊಸೂರು ರಸ್ತೆ, ನೈಸ್ ರಸ್ತೆ ಮತ್ತು ಇತರ ನಗರ ಮೂಲ ಸೌಕರ್ಯಗಳಾದ ಮೆಟ್ರೋ, ಉಪನಗರ ರೈಲು ಮತ್ತು ಉಪಗ್ರಹ ಟೌನ್ ರಿಂಗ್ ರೋಡ್‌ಗೆ ಈ ರಸ್ತೆ ಸಂಪರ್ಕ ಕಲ್ಪಿಸಲಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us