ಒಂದು ಭೇಟಿ, ಹತ್ತಾರು ಬೇಡಿಕೆ: ಪ್ರಧಾನಿ ಮೋದಿ ಮುಂದೆ ಡಿಕೆಶಿ ಇಟ್ಟ ಬೇಡಿಕೆಗಳಾವುವು? ಇಲ್ಲಿದೆ ಪಟ್ಟಿ

ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಡಿ.ಕೆ. ಶಿವಕುಮಾರ್ ಅವರು ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ. ನೀತಿ ಆಯೋಗದ ಸಭೆ ಬಳಿಕ ಡಿಕೆ ಶಿವಕುಮಾರ್ ಅವರು ಪ್ರತ್ಯೇಕವಾಗಿ ಮೋದಿಯವರನ್ನು ಭೇಟಿ ಮಾಡಿದ್ದು,ಈ ವೇಳೆ ಕರ್ನಾಟಕದ ಯೋಜನೆಗಳು, ಅನುದಾನದ ಬಗ್ಗೆ ಸುದೀರ್ಘವಾಗಿ ಚರ್ಚಿಸಿದ್ದಾರೆ. ಇನ್ನು ಡಿಕೆ ಶಿವಕುಮಾರ್ ಪ್ರಧಾನಿ ಮೋದಿ ಮುಂದಿಟ್ಟ ಬೇಡಿಕೆಗಳೇನು ಎನ್ನುವ ವಿವರ ಇಲ್ಲಿದೆ.

ಒಂದು ಭೇಟಿ, ಹತ್ತಾರು ಬೇಡಿಕೆ: ಪ್ರಧಾನಿ ಮೋದಿ ಮುಂದೆ ಡಿಕೆಶಿ ಇಟ್ಟ  ಬೇಡಿಕೆಗಳಾವುವು? ಇಲ್ಲಿದೆ ಪಟ್ಟಿ
Dk Shivakumar And Pm Modi

Updated on: Jun 11, 2026 | 9:24 PM

ನವದೆಹಲಿ, (ಜೂನ್ 11): ದೆಹಲಿ (New Delhi)ಪ್ರವಾಸದಲ್ಲಿರುವ ಸಿಎಂ ಡಿಕೆ ಶಿವಕುಮಾರ್ (DK Shivakumar) ಅವರು ಇಂದು (ಜೂನ್ 11) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಭೇಟಿ ಮಾಡಿದ್ದಾರೆ. ಮೊದಲ ನೀತಿ ಆಯೋಗದ ಸಭೆಯ ನಂತರ ರಾಷ್ಟ್ರಪತಿ ಭವನದಲ್ಲಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಕರ್ನಾಟಕದ (Karnataka) ಸಾಂಸ್ಕೃತಿಕ ರಾಯಭಾರಿ ಬಸವಣ್ಣ ಅವರ ಪ್ರತಿಮೆಯನ್ನು ಉಡುಗೊರೆಯಾಗಿ ನೀಡಿದರು. ಈ ಸಂದರ್ಭದಲ್ಲಿ ಕರ್ನಾಟಕದ ಅಭಿವೃದ್ಧಿಯ ಆದ್ಯತೆಗಳಾದ ಮೂಲಸೌಕರ್ಯ, ಹೂಡಿಕೆ, ನಗರ ಸಾರಿಗೆ, ನೀರಾವರಿ, ನಾವೀನ್ಯತೆ ಹಾಗೂ ಜನರ ಜೀವನದ ಮೇಲೆ ನೇರ ಪರಿಣಾಮ ಬೀರುವ ಕಲ್ಯಾಣ ಯೋಜನೆಗಳ ಕುರಿತು ಚರ್ಚಿಸಿದ್ದಾರೆ.

ಮುಖ್ಯಾಂಶಗಳು

  • ಪ್ರಧಾನಿ ನರೇಂದ್ರ ಮೋದಿ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
  • ಕರ್ನಾಟಕದ ಅಭಿವೃದ್ಧಿ ಕಾರ್ಯ, ಅನುದಾನ, ಯೋಜನೆಗಳ ಬಗ್ಗೆ ಚರ್ಚೆ
  • ಪ್ರಮುಖ ಯೋಜನೆಗಳಾದ ಮೇಕೆದಾಟು, ಕಳಸಬಂಡೂರಿ, ಭದ್ರಾ ಮೇಲ್ದಂಡೆ, ಕೃಷ್ಣ ಪ್ರಾಜೆಕ್ಟ್​​ಗಳ ಬಗ್ಗೆ ಮಾತುಕತೆ
  • ಇದೇ ವೇಳೆ ವಿವಿಧ ಕಾರ್ಯಗಳಿಗೆ ವಿಶೇಷ ಅನುದಾನ ನೀಡುವಂತೆ ಮನವಿ ಮಾಡಿದ ಡಿಕಶಿ

ಮೇಕೆದಾಟು ವಿಚಾರ ಪ್ರಸ್ತಾಪಿಸಿದ ಡಿಕೆಶಿ

ಇನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿ ವೇಳೆ ಡಿಕೆ ಶಿವಕುಮಾರ್ ಅವರು ಪ್ರಮುಖವಾಗಿ ಮೇಕೆದಾಟು ವಿಚಾರ ಪ್ರಸ್ತಾಪ ಮಾಡಿದ್ದು, CWMA ಮತ್ತು CWC ಯೋಜನೆಯ ಬಗ್ಗೆ ನಿರ್ಧಾರ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈಗಾಗಲೇ ಯೋಜನೆ ಮೌಲ್ಯಮಾಪನ ಮಾಡಲು CWC ಗೆ CWMA ಕೇಳಿದೆ. CWC ಮೂಲಕ ಬೇಗ ಅನುಮತಿ ಕೊಡಿಸಿ ಎಂದು ಮನವಿ ಮಾಡಿದ್ದಾರೆ.

ಇದನ್ನೂ ನೋಡಿ: ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್, ಸರ್ಕಾರಕ್ಕೆ ಎಷ್ಟು ಉಳಿತಾಯ ಗೊತ್ತಾ?

ರಾಜ್ಯದ ಪ್ರಮುಖ ಯೋಜನೆಗಳ ಬಗ್ಗೆ ಚರ್ಚೆ

ಕೃಷ್ಣಾ ನ್ಯಾಯಾಧೀಕರಣದ ತೀರ್ಪು ಬಂದು ಒಂದು ದಶಕ ಕಳೆದಿದೆ. ಆದ್ರೆ ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಷನ್ ಹೊರಡಿಸಿಲ್ಲ. ಕೃಷ್ಣಾ ಯೋಜನೆಯ ಮೇಲೆ ರಾಜ್ಯ ಸರ್ಕಾರ ಬಹಳಷ್ಟು ಹಣ ಖರ್ಚು ಮಾಡಿದೆ. ನಮ್ಮ ಪಾಲಿನ ನೀರು ಬಳಸಿಕೊಳ್ಳಲು ಕೇಂದ್ರ ಸರ್ಕಾರ ಸಹಕಾರ ಕೊಡಬೇಕು. ಇನ್ನು ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್ ನಲ್ಲಿ ಘೋಷಣೆ ಮಾಡಿದ ಹಣ ಬಿಡುಗಡೆ, ಕಳಸಾ ಬಂಡೂರಿ ಯೋಜನೆಗೆ ಬೇಗ ಅನುಮತಿ ಕೊಡಿ ಎಂದು ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿದುಬಂದಿದೆ.

ವಿವಿಧ ಅನುದಾನ ಬಿಡುಗಡೆಗೆ ಮನವಿ

ಗ್ರಾಮಪಂಚಾಯತಿಗಳಿಗೆ 15 ನೇ ಹಣಕಾಸು ಆಯೋಗದ ಅನುದಾನ 2860 ಕೋಟಿ ರೂಪಾಯಿ ಬಿಡುಗಡೆ,
ಬೆಂಗಳೂರು ನಗರ ಅಭಿವೃದ್ಧಿಗೆ 26 ಸಾವಿರ ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ ಎಂದು ಮನವಿ ಮಾಡಿದ್ದಾರೆ. ಇನ್ನು ಸರ್ಬಬನ್ ರೈಲ್ವೆ ಮತ್ತು ಬೆಂಗಳೂರು- ಮುಂಬೈ ಹೈಸ್ಪೀಡ್ ರೈಲು ಕಾರಿಡಾರ್ ಗೆ ಅನುದಾನ, ಶರಾವತಿ ಪಂಪ್ ಸ್ಟೋರೇಜ್ ಯೋಜನೆಗೆ ಅರಣ್ಯ ಇಲಾಖೆ ಅನುಮತಿ, ಕಲ್ಯಾಣ ಕರ್ನಾಟಕ ದ ಅಭಿವೃದ್ಧಿಗೆ 25 ಸಾವಿರ ಕೋಟಿ ಅನುದಾನ ಹಾಗೂ ರಾಯಚೂರಿಗೆ ಏಮ್ಸ್ ನೀಡಿಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

ನಿರ್ಮಲಾ ಸೀತರಾಮನ್ ಮುಂದಿಟ್ಟ ಬೇಡಿಕೆಗಳೇನು?

ಇನ್ನು ಡಿಕೆ ಶಿವಕುಮಾರ್ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತರಾಮನ್ ಅವರನ್ನೂ ಸಹ ಭೇಟಿ ಮಾಡಿದ್ದು, 2023 ರಿಂದ ರಾಜ್ಯವೂ ಕೈಗೊಂಡ ಪ್ರಮುಖ ಆರ್ಥಿಕ ಸುಧಾರಣೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ರಾಜ್ಯ ಸರ್ಕಾರವೂ 4250 ಕೋಟಿ ನಕಲಿ ವಹಿವಾಟು ಪತ್ತೆ ಹಚ್ಚಿದೆ. ಗುಣಮಟ್ಟದ ಮೂಲಸೌಕರ್ಯ ನಿರ್ಮಿಸಲು ದೀರ್ಘಾವಧಿಯ ಆರ್ಥಿಕ ಬೆಳವಣಿಗೆಗೆ ಬಂಡವಾಳ ಹೆಚ್ಚಿಸಿದೆ. 2025-26 ರಲ್ಲಿ ಹಿಂದಿನ ಹಣಕಾಸು ವರ್ಷಕ್ಕಿಂತ ಶೇಕಡಾ 14% ಬೆಳವಣಿಗೆ ಸಾಧಿಸಿದೆ. ಹೀಗಾಗಿ ಹೆಚ್ಚಿನ ಆರ್ಥಿಕ ಪೂರೈಸಲು ಕೇಂದ್ರ ಬೆಂಬಲಿಸಬೇಕು ಎಂದು ಮನವಿ ಮಾಡಿದ್ದಾರೆ.

ನಗರಗಳ ಮೂಲಸೌಕರ್ಯ ಅಭಿವೃದ್ಧಿ ,ನೀರಾವರಿ, ರಸ್ತೆಗಳ ಅಭಿವೃದ್ಧಿಗೆ ಐದು ಸಾವಿರ ಕೋಟಿ ರೂ. ನೀಡಬೇಕು. ಬ್ರಾಂಡ್ ಬೆಂಗಳೂರು ಮಾಸ್ಟರ್ ಪ್ಲಾನ್ ನನ್ನು ರಾಜ್ಯ ಸರ್ಕಾರ ಆರಂಭಿಸಿದೆ. ಇದಕ್ಕೆ ಯುಐಡಿಎಫ್ ಅಡಿಯಲ್ಲಿ ಐದು ಸಾವಿರ ಕೋಟಿ ಅನುದಾನ, ಗ್ರಾಮೀಣ ರಸ್ತೆಗಳು ಸೇತುವೆಗಳು ನೀರಾವರಿ ಯೋಜನೆ ಗಳಿಗೆ ಆರ್ ಐಡಿಎಫ್ ಅಡಿಯಲ್ಲಿ 2 ಸಾವಿರ ಕೋಟಿ ರೂ., ಗ್ರಾಮೀಣ ಮೂಲಸೌಕರ್ಯಕ್ಕೆ 2026-27 ಹಣಕಾಸು ವರ್ಷಕ್ಕೆ 3500 ಕೋಟಿ ರೂ. ಹಂಚಿಕೆ ಸೇರಿದಂತೆ ಮೋದಿ ಮುಂದಿಟ್ಟ ರಾಜ್ಯದ ಯೋಜನೆಗಳು, ಅನುದಾನಕ್ಕೆ ಬೇಡಿಕೆ ಇಟ್ಟಿದ್ದಾರೆ.

ಒಟ್ಟಿನಲ್ಲಿ ಸಿಎಂ  ಆಗುತ್ತಿದ್ದಂತೆಯೇ ಡಿಕೆ ಶಿವಕುಮಾರ್ ಫುಲ್ ಆ್ಯಕ್ಟಿವ್ ಆಗಿದ್ದು, ದೆಹಲಿ ಪ್ರವಾಸದ ವೇಳೆ ಪ್ರಧಾನಿ ಮೋದಿ ಸೇರಿದಂತೆ  ವಿವಿಧ ಖಾತೆಯ ಕೇಂದ್ರ  ಸಚಿವರನ್ನ ಭೇಟಿ ಮಾಡುತ್ತಿದ್ದು, ರಾಜ್ಯದ ಅಭಿವೃದ್ಧಿ, ಯೋಜನೆ, ಅನುದಾನದ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:18 pm, Thu, 11 June 26

ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More
Follow Us