ಕಾಂಗ್ರೆಸ್ ಅಧಿಕಾರ ಹಂಚಿಕೆ ಬಿಕ್ಕಟ್ಟು: ಒಟ್ಟೊಟ್ಟಿಗೇ ಹಲವು ಮಹತ್ವದ ಬೆಳವಣಿಗೆ! ಮಂಗಳವಾರ ಏನೇನಾಯ್ತು ಗೊತ್ತೇ?

ಕರ್ನಾಟಕ ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆ ಬಿಕ್ಕಟ್ಟು ತೀವ್ರಗೊಂಡಿರುವ ಬೆನ್ನಲ್ಲೇ ಹಲವು ಪ್ರಮುಖ ಬೆಳವಣಿಗೆಗಳು ನಡೆದಿವೆ. ಸಚಿವ ಸತೀಶ್ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಪಟ್ಟು ಹಿಡಿದರೆ, ದಲಿತ ಸಿಎಂ ಕೂಗು ಜೋರಾಗಿದೆ. ಹೊಸ ಶಾಸಕರು ಸಚಿವ ಸ್ಥಾನಕ್ಕಾಗಿ ಹೈಕಮಾಂಡ್‌ಗೆ ಪತ್ರ ಬರೆದಿದ್ದು, ಹಲವು ರಾಜಕೀಯ ಬೆಳವಣಿಗೆಗಳು ಕುತೂಹಲ ಮೂಡಿಸಿವೆ.

ಕಾಂಗ್ರೆಸ್ ಅಧಿಕಾರ ಹಂಚಿಕೆ ಬಿಕ್ಕಟ್ಟು: ಒಟ್ಟೊಟ್ಟಿಗೇ ಹಲವು ಮಹತ್ವದ ಬೆಳವಣಿಗೆ! ಮಂಗಳವಾರ ಏನೇನಾಯ್ತು ಗೊತ್ತೇ?
ಮಲ್ಲಿಕಾರ್ಜುನ ಖರ್ಗೆ ಹಾಗೂ ಡಿಕೆ ಶಿವಕುಮಾರ್ (ಸಾಂದರ್ಭಿಕ ಚಿತ್ರ)
Image Credit source: tv9

Updated on: Feb 25, 2026 | 7:08 AM

ಬೆಂಗಳೂರು, ಫೆಬ್ರವರಿ 25: ಕರ್ನಾಟಕ ಕಾಂಗ್ರೆಸ್​ನಲ್ಲಿ (Congress) ಅಧಿಕಾರ ಹಂಚಿಕೆ ಜಟಾಪಟಿ ದಿನದಿಂದ ದಿನಕ್ಕೆ ಒಂದೊಂದು ಆಯಾಮ ಪಡೆದುಕೊಳ್ಳುತ್ತಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಬೆಂಬಲಿಗರ ಬಣಗಳ ನಡುವಣ ವಾಕ್ಸಮರ ಒಂದು ಕಡೆಯಾದರೆ, ಮತ್ತೊಂದೆಡೆ ಸಚಿವ ಸತೀಶ್ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್​ದಾರೆ. ಏತನ್ಮಧ್ಯೆ, ಹೊಸದಾಗಿ ಶಾಸಕರಾದವರು ಸಚಿವ ಸ್ಥಾನಕ್ಕಾಗಿ ಹೈಕಮಾಂಡ್​​ಗೆ ಪತ್ರ ಬರೆದಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಜತೆ ಮಂಗಳವಾರ ನಡೆದ ಪ್ರಮುಖ ರಾಜಕೀಯ ವಿದ್ಯಮಾನಗಳ ಲಿಸ್ಟ್ ಇಲ್ಲಿದೆ.

ಕೆಪಿಸಿಸಿ ಅಧ್ಯಕ್ಷ ಪಟ್ಟದ ಮೇಲೆ ಸತೀಶ್‌ ಜಾರಕಿಹೊಳಿ ಕಣ್ಣು

ಹೈಕಮಾಂಡ್ ಮುಂದೆ ಕೆಪಿಸಿಸಿ ಪಟ್ಟಕ್ಕಾಗಿ ಸಚಿವ ಸತೀಶ್ ಜಾರಕಿಹೊಳಿ ಒತ್ತಡ ಹಾಕಿದ್ದಾರೆ. ಸೋಮವಾರ ಬೆಂಬಲಿಗ ಶಾಸಕರು, 12 ಜಿಲ್ಲಾಧ್ಯಕ್ಷರನ್ನು ದೆಹಲಿಗೆ ಕರೆದೊಯ್ದಿದ್ದ ಸತೀಶ್, ಸಿದ್ದರಾಮಯ್ಯ ನಂತರ 2ನೇ ಹಂತದ ಅಹಿಂದ ನಾಯಕರು ಬೆಳೆಯಬೇಕಿದೆ. ಸಿಎಂ ಬದಲಾವಣೆ ವಿಚಾರ ಹೈಕಮಾಂಡ್ ತೀರ್ಮಾನಿಸಲಿ ಎಂದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಜಣ್ಣ, ಸತೀಶ್‌ಗೆ ನಮ್ಮ ಬೆಂಬಲ ಇದೆ ಎಂದಿದ್ದಾರೆ. ಸತೀಶ್ ನಮ್ಮ ಲೀಡರ್ ಅವರಿಗೂ ಪಕ್ಷದ ಬಗ್ಗೆ ಅಪಾರ ಚಿಂತನೆ ಇದೆ ಅಂತಾ ಡಿಕೆಶಿ ಪ್ರತಿಕ್ರಿಯಿಸಿದ್ದಾರೆ.

ಕಾಂಗ್ರೆಸ್​ನಲ್ಲಿ ದಲಿತ ಸಿಎಂ ಕೂಗು

ಅತ್ತ ಸತೀಶ್ ಅಹಿಂದ ಉತ್ತರಾಧಿಕಾರಿಗೆ ಹಕ್ಕು ಮಂಡಿಸಿದರೆ, ಇತ್ತ ರಾಜ್ಯದಲ್ಲಿ ದಲಿತ ಸಿಎಂ ಕೂಗು ಜೋರಾಗಿದೆ. ದಲಿತ ಸಿಎಂ ಬಗ್ಗೆ ಚರ್ಚೆಯಾಗಲಿ ಎಂದು ಪರಮೇಶ್ವರ್ ಹೇಳಿದರೆ, ಡಿಕೆಶಿಗಿಂತ ಸಾಮರ್ಥ್ಯ ಇರುವವರು ಆಗಲಿ ಎಂದು ಉದಯ್ ಕದಲೂರು ಹೇಳಿದ್ದಾರೆ.

ದಲಿತರನ್ನು ಸಿಎಂ ಮಾಡಿ ಎಂದ ಆರ್‌ ಅಶೋಕ್‌

ನಾಯಕತ್ವ ಬದಲಾವಣೆ, ಮಂತ್ರಿ ಸ್ಥಾನಕ್ಕಾಗಿ ಶಾಸಕರ ಪತ್ರ, ದಲಿತ ಸಿಎಂ ಕೂಗಿನ ನಡುವೆ ಕೆಪಿಸಿಸಿ ಅಧ್ಯಕ್ಷ ಪಟ್ಟದ ಕಿತ್ತಾಟವೂ ಮುನ್ನಲೆಗೆ ಬರುತ್ತಿದೆ. ಕಾಂಗ್ರೆಸ್‌ ಮನೆಯೊಳಗಿನ ಬೆಂಕಿಗೆ ವಿಪಕ್ಷ ನಾಯಕ ಆರ್‌.ಅಶೋಕ್ ತುಪ್ಪ ಸುರಿದಿದ್ದಾರೆ. ದಲಿತರ ಪರ ಎನ್ನುತ್ತೀರಿ, ದಲಿತರನ್ನೇ ಸಿಎಂ ಮಾಡಿ ಎಂದಿದ್ದಾರೆ.

ಹೆಚ್ಚಿದ ಡಿಸಿಎಂ ಡಿಕೆಶಿ ಬೆಂಬಲಿಗರ ಒತ್ತಡ

ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಯ ಜ್ವಾಲೆ ನಿಗಿನಿಗಿ ಎನ್ನುತ್ತಿರುವುದು ದೂರದಿಂದಲೇ ಸ್ಪಷ್ಟವಾಗಿ ಕಾಣಿಸುತ್ತಿದೆ. ಒಂದೆಡೆ ಬಜೆಟ್‌ಗೂ ಮುಂಚೆಯೇ ನಾಯಕತ್ವ ವಿಚಾರ ಇತ್ಯರ್ಥ ಆಗ್ಬೇಕು ಎಂದು ಡಿಕೆಶಿ ಪಟ್ಟು ಹಿಡಿದು ಕುಳಿತಿದ್ದಾರೆ. ಮತ್ತೊಂದೆಡೆ ಮಾರ್ಚ್ 6ಕ್ಕೆ ಬಜೆಟ್ ಮಂಡಿಸಲು ಸಿಎಂ ಸಿದ್ದರಾಮಯ್ಯ ಸಕಲ ಸಿದ್ಧತೆಗಳನ್ನೂ ಮಾಡಿಕೊಳ್ಳುತ್ತಿದ್ದಾರೆ. ಇದೆಲ್ಲದರ ನಡುವೆ ದಲಿತಾಸ್ತ್ರ, ಅಹಿಂದಸ್ತ್ರಗಳೂ ಪ್ರಯೋಗವಾಗುತ್ತಿವೆ. ಹೀಗಾಗಿ ಡಿಕೆಶಿ ಬೆಂಬಲಿತ ಶಾಸಕರು ನೇರಾನೇರವಾಗಿ ಹೈಕಮಾಂಡ್‌ಗೆ ಡೆಡ್​ಲೈನ್ ಕೊಡುವ ಕೆಲಸ ಮಾಡುತ್ತಿದ್ದಾರೆ.

ಹೈಕಮಾಂಡ್ ಏನು ತೀರ್ಮಾನ ಮಾಡುತ್ತೋ ನೋಡೋಣ: ಪರಮೇಶ್ವರ್‌

ಒಂದೆಡೆ ಡಿಸಿಎಂ ಡಿಕೆ ಶಿವಕುಮಾರ್ ಬೆಂಬಲಿಗರು ತಮ್ಮ ನಾಯಕನ ವಿರುದ್ಧ ನಿತ್ಯವೂ ಒಂದಿಲ್ಲ ಒಂದು ರೀತಿ ಬ್ಯಾಟ್‌ ಬೀಸುತ್ತಿದ್ದಾರೆ. ಇದರ ಮಧ್ಯೆಯೇ ಗೃಹ ಸಚಿವ ಡಾ. ಜಿ ಪರಮೇಶ್ವರ್‌, ನಾಯಕತ್ವ ಬದಲಾವಣೆ ವಿಚಾರದಲ್ಲಿ ಹೈಕಮಾಂಡ್‌ ಏನು ತೀರ್ಮಾನ ಮಾಡುತ್ತೋ ಗೊತ್ತಿಲ್ಲ ಎಂದು ಹೇಳಿದ್ದಾರೆ.

ಹೊಟ್ಟೆ ತುಂಬಿದವರಿಗೆ ಅಗತ್ಯವಿಲ್ಲ: ಕದಲೂರು

ನಾಯಕತ್ವ ಬದಲಾವಣೆ ಗೊಂದಲದಿಂದಾಗಿ ಸಂಪುಟ ಪುನಾರಚನೆಗೂ ಗ್ರಹಣ ಹಿಡಿದಿದೆ. ಡಜನ್‌ಗೂ ಹೆಚ್ಚು ಸಚಿವಾಕಾಂಕ್ಷಿಗಳು ಮಂತ್ರಿ ಆಗಬೇಕು ಎಂದು ಆಸೆಗಣ್ಣಿನಿಂದ ಎದುರು ನೋಡುತ್ತಿದ್ದಾರೆ. ಈ ನಡುವೆ ಮೊದಲ ಬಾರಿ ಗೆದ್ದ 31 ಶಾಸಕರು ನಮ್ಮಲ್ಲಿ ಐವರಿಗೆ ಸಚಿವ ಸ್ಥಾನ ಕೊಡಿ ಎಂದು ಹೈಕಮಾಂಡ್‌ಗೆ ಪತ್ರ ಬರೆದಿದ್ದಾರೆ. ಶಾಸಕ ಕದಲೂರು ಉದಯ್, ಕೆಲ ಸಚಿವರಿಗೆ ಕೆಲಸ ಮಾಡಲು ಆಸಕ್ತಿ ಇಲ್ಲ. ಹೊಟ್ಟೆ ತುಂಬಿದವರಿಗೆ ಅಗತ್ಯವಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಹೊಸಬರನ್ನು ನಿರ್ಲಕ್ಷಿಸಬೇಡಿ: ರವಿ ಗಣಿಗ

ಇತ್ತ ಶಾಸಕ ರವಿ ಗಣಿಗ ನಾನೂ ಪತ್ರಕ್ಕೆ ಸಹಿ ಹಾಕಿದ್ದೇನೆ. ಹೊಸದಾಗಿ ಗೆದ್ದಿದ್ದೇವೆ ಎಂಬ ಕಾರಣಕ್ಕೆ ನಿರ್ಲಕ್ಷ್ಯ ಮಾಡಬೇಡಿ. ಪ್ರತಿಭಾವಂತರಿಗೆ ಅವಕಾಶ ನೀಡಬೇಕು ಎಂದು ಹೇಳಿದ್ದಾರೆ.

‘ಮೊದಲ ಬಾರಿಗ ಗೆದ್ದವರೆಲ್ಲರೂ ಅರ್ಹರೇ’

ಮೊದಲ ಬಾರಿಗೆ ಗೆದ್ದಿರುವ ಶಾಸಕರಿಗೆ ಸಚಿವ ನೀಡಬೇಕು ಎಂಬ ಕೂಗಿಗೆ ಮಧುಗಿರಿ ಕಾಂಗ್ರೆಸ್ ಶಾಸಕ ಕೆಎನ್‌ ರಾಜಣ್ಣ ಕೂಡ ಸಹಮತ ವ್ಯಕ್ತಪಡಿಸಿದ್ದಾರೆ. ಅತ್ತ ಗೃಹ ಸಚಿವ ಪರಮೇಶ್ವರ್ ಸಹ ಗೆದ್ದವರೆಲ್ಲರೂ ಅರ್ಹರೇ ಎಂದು ಹೇಳಿದ್ದಾರೆ.

ನಾನು ಮಂತ್ರಿ ಮಂಡಲ ಮಾಡುತ್ತೇನೆ ಎಂದಿಲ್ಲ: ಡಿಕೆಶಿ

ಹೊಸ ಪೀಳಿಗೆ ಬೆಳೆಯಬೇಕು ಎಂದಿರುವ ಡಿಕೆ ಶಿವಕುಮಾರ್, ನಾನು ಮಂತ್ರಿಮಂಡಲ ಮಾಡುತ್ತೇನೆ ಎಂದು ಹೇಳಿಲ್ಲ. ಸಿಎಂ ರಚನೆ ಮಾಡುತ್ತಾರೆ. ಲಾಬಿ ಮಾಡುವವರು ಮಾಡುತ್ತಾರೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us