ಆಸ್ತಿ ನೋಂದಣಿಗೆ ಅಪ್ಪ 3 ಲಕ್ಷ ರೂ. ಲಂಚ ಕೊಟ್ಟಿದ್ದಾರೆ, ಆದ್ರೂ ಕೆಲಸ ಆಗಿಲ್ಲ: ಬೆಂಗಳೂರು ವ್ಯಕ್ತಿಯ ಪೋಸ್ಟ್ ವೈರಲ್

ಬಸವರಾಜ ರಾಯರೆಡ್ಡಿ ಅವರ ಹೇಳಿಕೆಯಿಂದ ಕರ್ನಾಟಕದಲ್ಲಿ ಭ್ರಷ್ಟಾಚಾರದ ಬಗ್ಗೆ ಚರ್ಚೆಗಳು ತೀವ್ರಗೊಂಡಿವೆ. ಸಾಮಾಜಿಕ ಮಾಧ್ಯಮದಲ್ಲಿ ನೆಟ್ಟಿಗರು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದು, ಸರ್ಕಾರಿ ಕಚೇರಿಗಳಲ್ಲಿ ಲಂಚ ಪಡೆಯುವುದು ಸಾಮಾನ್ಯವಾಗಿದೆ ಎಂದು ಬಹಿರಂಗಪಡಿಸಿದ್ದಾರೆ. ಭೂಮಿ ನೋಂದಣಿ, ಆರ್‌ಟಿಸಿ ದಾಖಲೆಗಳು, ಇ-ಖಾತಾ ಮುಂತಾದ ಸೇವೆಗಳಿಗೆ ಸಾವಿರಾರು ರೂಪಾಯಿಗಳ ಲಂಚ ನೀಡಬೇಕಾಗುತ್ತದೆ ಎಂದು ಅವರು ದೂರಿದ್ದಾರೆ. ಇದರಿಂದಾಗಿ ಸಾರ್ವಜನಿಕರಲ್ಲಿ ಆಕ್ರೋಶ ಹೆಚ್ಚಾಗಿದೆ.

ಆಸ್ತಿ ನೋಂದಣಿಗೆ ಅಪ್ಪ 3 ಲಕ್ಷ ರೂ. ಲಂಚ ಕೊಟ್ಟಿದ್ದಾರೆ, ಆದ್ರೂ ಕೆಲಸ ಆಗಿಲ್ಲ: ಬೆಂಗಳೂರು ವ್ಯಕ್ತಿಯ ಪೋಸ್ಟ್ ವೈರಲ್
ಸಾಂದರ್ಭಿಕ ಚಿತ್ರ

Updated on: Apr 12, 2025 | 4:06 PM

ಬೆಂಗಳೂರು, ಏಪ್ರಿಲ್​ 12: ಭ್ರಷ್ಟಾಚಾರದಲ್ಲಿ ಕರ್ನಾಟಕವೇ ನಂಬರ್ ಒನ್​ (Karnataka No.1 in Corruption) ಆಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರ (Siddaramaiah) ಆರ್ಥಿಕ ಸಲಹೆಗಾರರೂ ಆಗಿರುವ ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ (Basavaraj Rayareddy) ಹೇಳಿಕೆ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದೆ. ಈ ವಿಚಾರವನ್ನು ಮುಂದಿಟ್ಟುಕೊಂಡು ವಿಪಕ್ಷಗಳು ಸರ್ಕಾರದ ವಿರುದ್ಧ ಮುಗಿಬೀಳುತ್ತಿವೆ. ಇನ್ನು, ಸಾಮಾಜಿಕ ಮಾಧ್ಯಮವಾದ ಎಕ್ಸ್​ನಲ್ಲಿ ನೆಟ್ಟಿಗರು ಬಸವರಾಜ ರಾಯರೆಡ್ಡಿ ಅವರ ಹೇಳಿಕೆ ಅಕ್ಷರಶಃ ಸ್ಯತ್ಯ ಎನ್ನುತ್ತಿದ್ದಾರೆ.

ಹೌದು, ನೆಟ್ಟಿಗರು ತಮ್ಮ ಆಸ್ತಿ ದಾಖಲೆಗಳನ್ನು ಮತ್ತೊಂಬರ ಹೆಸರಿಗೆ ವರ್ಗಾಯಿಸಲು ಅಥವಾ ದಾಖಲೆಗಳಲ್ಲಿನ ಹೆಸರು ಬದಲಾಯಿಸಲು ಸರ್ಕಾರಿ ಕಚೇರಿಗಳಿಗೆ ತೆರಳಿದರೆ ಅಲ್ಲಿನ ಅಧಿಕಾರಿಗಳು 15 ಸಾವಿರ, 30 ಸಾವಿರ ರೂ. ಲಂಚ ಪಡೆದಿರುವುದನ್ನು ಟ್ವೀಟ್​ ಮೂಲಕ ತಿಳಿಸಿದ್ದು, ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.

ಇದನ್ನೂ ಓದಿ
ರಾಯರೆಡ್ಡಿ ಇಂಗ್ಲಿಷಲ್ಲಿ ಮಾತು; ಯತ್ನಾಳ್ ಸಹ ಇಂಗ್ಲಿಷ್ ಭಾಷೆಯಲ್ಲೇ ಉತ್ತರ!
ಬಾಬ್ರಿ ಮಸೀದಿ ಒಡೆದು ರಾಮ ಮಂದಿರ ನಿರ್ಮಾಣ ಮಾಡಿದ್ರು ಮುಸ್ಲಿಂ ವಿರೋಧಿಸಿಲ್ಲ
ಜುಲೈನಲ್ಲಿ ಸಚಿವ ಸಂಪುಟ ಪುನರ್ ರಚನೆ: ಸುಳಿವು ನೀಡಿದ ಬಸವರಾಜ್ ರಾಯರೆಡ್ಡಿ
ಕಳೆದವಾರ ಸಿಎಂಗೆ ಶಾಸಕ ಬಸವರಾಜ ರಾಯರೆಡ್ಡಿ ಪತ್ರ ಬರೆದಿದ್ದರು.

ನೆಟ್ಟಿಗ ಮಾಧವ ಎಂಬುವರು ಎಕ್ಸ್​ನಲ್ಲಿ ಟ್ಚೀಟ್​ ಮಾಡಿದ್ದು, ನನ್ನ ತಂದೆ 14 ಸೆಂಟ್ಸ್​ ಆಸ್ತಿ ನೋಂದಣಿಗಾಗಿ ತಹಶೀಲ್ದಾರ್​ಗೆ 3 ಲಕ್ಷ ರೂ. ಮತ್ತು ಕಂಪ್ಯೂಟರ್ ಆಪರೇಟರ್​ಗೆ 10 ಸಾವಿರ ರೂ. ಲಂಚ ನೀಡಿದ್ದಾರೆ. ಆದರೂ ಕೂಡ ನೋಂದಣಿಯಾದ ದಾಖಲೆ ಪತ್ರ ಇನ್ನೂ ಕೂಡ, 3 ತಿಂಗಳು ಕಳೆದರೂ ನಮ್ಮ ಕೈ ಸೇರಿಲ್ಲ ಎಂದು ಪೋಸ್ಟ್​ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೆಟ್ಟಿಗನ ಆಕ್ರೋಶ

ಇವರ ಪೋಸ್ಟ್​ಗೆ asdf ಎಂಬ ಹೆಸರಿನ ಖಾತೆದಾರರು, ಉತ್ತರ ಬೆಂಗಳೂರಿನಲ್ಲಿ 1500 ಚದರ ಅಡಿ ಭೂಮಿ ನೋಂದಣಿಗೆ ಸಬ್ ರಿಜಿಸ್ಟ್ರಾರ್‌ಗೆ 35000 ರೂ., ಆರ್‌ಟಿಸಿ ದಾಖಲೆಗಳಲ್ಲಿ ಹೆಸರು ಬದಲಾವಣೆ ಮಾಡಲು ತಹಶೀಲ್ದಾರ್‌ಗೆ 25000 ರೂ. ಮತ್ತು ಸರ್ವೇ ಅಧಿಕಾರಿಗಳಿಗೆ ಸರ್ವೆ ಮತ್ತು ಗಡಿ ಗುರುತಿಸಲು 8000 ರೂ. (ಅಧಿಕೃತ ಶುಲ್ಕಗಳು ಸೇರಿದಂತೆ) ನೀಡಿದ್ದೇನೆ ಎಂದು ಕಾಮೆಂಟ್​ ಮಾಡಿದ್ದಾರೆ.

ದಿ ವಾರಿಯರ್553 ಎಂಬ ಖಾತೆದಾರರು ಎರಡನೇ ಮಹಡಿಯಲ್ಲಿರುವ ನನ್ನ ಮನೆಗೆ ಇಖಾತಾ ಪಡೆಯಲು ಅಧಿಕಾರಿಗಳು ನನ್ನಿಂದ 15000 ಕೇಳುತ್ತಿದ್ದಾರೆ. ಅನುಮೋದನೆ ಪಡೆಯಲು – 8 ಸಾವಿರ ರೂ, ವಿದ್ಯುತ್ ಸಂಪರ್ಕಕ್ಕೆ – 5 ಸಾವಿರ ರೂ., ನೀರಿನ ಸಂಪರ್ಕಕ್ಕೆ – 5 ಸಾವಿರ ರೂ. ಕೇಳುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಭ್ರಷ್ಟಾಚಾರ ತುಂಬಾ ಹೆಚ್ಚಾಗಿದೆ. ಇಲಾಖೆಯಲ್ಲಿರುವ ಹೆಚ್ಚಿನ ಜನರು ಮೀಸಲು ಜಾತಿಗೆ ಅಥವಾ ರಾಜಕೀಯ ಪ್ರಭಾವಕ್ಕೆ ಒಳಗಾದವರು ಎಂದು ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: ಭ್ರಷ್ಟಾಚಾರದಲ್ಲಿ ಕರ್ನಾಟಕ ನಂಬರ್ 1: ಸ್ಪಷ್ಟನೆ ನೀಡುವ ಬರದಲ್ಲಿ ರಾಯರೆಡ್ಡಿ ಮತ್ತೊಂದು ಎಡವಟ್ಟು

ಒಟ್ಟಿನಲ್ಲಿ, ರಾಜ್ಯ ಸರ್ಕಾರಿ ಕಚೇರಿಗಳಲ್ಲಿನ ಅಧಿಕಾರಿಗಳು ಲಂಚಕೋರರು ಆಗಿದ್ದಾರೆ. ಸಾವಿರಾರು ರೂಪಾಯಿ ಲಂಚ ಪಡೆದು, ಜನರ ಜೀವ ಹಿಂಡುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:00 pm, Sat, 12 April 25