Karnataka Dam Water Level: ಕೆಆರ್ಎಸ್, ಕಬಿನಿ, ಆಲಮಟ್ಟಿ ಡ್ಯಾಂ ಒಳಹರಿವು ಹೆಚ್ಚಳ, ಕರ್ನಾಟಕದ ಜಲಾಶಯಗಳ ಮಟ್ಟದ ವಿವರ ಇಲ್ಲಿದೆ
ಕರ್ನಾಟಕದಲ್ಲಿ ಅವಧಿಪೂರ್ವ ಮುಂಗಾರು ಮಳೆಯಿಂದಾಗಿ ಕೆಆರ್ಎಸ್, ಕಬಿನಿ, ಆಲಮಟ್ಟಿ, ತುಂಗಭದ್ರಾ ಜಲಾಶಯಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಹೆಚ್ಚಾಗಿದೆ. ಮೇ ತಿಂಗಳಲ್ಲೇ ಜಲಾಶಯಗಳು ತುಂಬುತ್ತಿರುವುದು ರೈತರಿಗೆ ಸಂತಸ ತಂದಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಹೆಚ್ಚಿನ ಮಳೆಯಾಗಿದೆ. ರಾಜ್ಯದ ಜಲಾಶಯಗಳ ನೀರಿನ ಮಟ್ಟ, ಒಳಹರಿವಿನ ವಿವರ ಇಲ್ಲಿದೆ.

ಬೆಂಗಳೂರು, ಮೇ 27: ಅವಧಿಗೂ ಮುನ್ನವೇ ಮುಂಗಾರು ಮಳೆ (Monsoon) ಕರ್ನಾಟಕಕ್ಕೆ ಕಾಲಿಟ್ಟಿದ್ದು, ರಾಜ್ಯದಾದ್ಯಂತ ಹೆಚ್ಚಿನ ಕಡೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಪರಿಣಾಮವಾಗಿ ಕೆಆರ್ಎಸ್ (KRS Dam), ಕಬಿನಿ, ಆಲಮಟ್ಟಿ (Lal Bahadur Shastri Dam), ತುಂಗಭದ್ರಾ ಜಲಾಶಯಗಳ ಒಳಹರಿವು ಹೆಚ್ಚಾಗಿದೆ. ಮಾಮೂಲಿಯಾಗಿ ಜೂನ್ ತಿಂಗಳಲ್ಲಿ ಏರಿಕೆಯಾಗುತ್ತಿದ್ದ ಜಲಾಶಯಗಳ ಮಟ್ಟ ಮೇ ಕೊನೆಯ ವಾರದಲ್ಲೇ ಹೆಚ್ಚಾಗುತ್ತಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದ್ದು, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ ಡ್ಯಾಂಗೆ 19 ಸಾವಿರ ಕ್ಯೂಸೆಕ್ ನೀರು ಒಳಹರಿದಿದೆ. ಸೋಮವಾರ ಬೆಳಗ್ಗೆ ಕೆಆರ್ಎಸ್ ಡ್ಯಾಂನ ನೀರಿನ ಮಟ್ಟ 89 ಅಡಿ ಇತ್ತು. ಮಂಗಳವಾರ ಬೆಳಗ್ಗೆ 92 ಅಡಿಗೆ ತಲುಪಿದೆ.
ಕೆಆರ್ಎಸ್ ಜಲಾಶಯ 124.80 ಅಡಿ ಗರಿಷ್ಠ ಮಟ್ಟ ಹೊಂದಿದೆ.ಕೇವಲ 24 ಗಂಟೆಯಲ್ಲೇ ಡ್ಯಾಂನಲ್ಲಿ 2 ಟಿಎಂಸಿ ನೀರು ಸಂಗ್ರಹವಾಗಿದೆ.

ಕೆಆರ್ಎಸ್ ಜಲಾಶಯ
ಕೇರಳದ ವಯನಾಡಿನಲ್ಲಿ ಧಾರಾಕಾರ ಮಳೆಯಾಗುತ್ತಿರುವ ಕಾರಣ ಮೈಸೂರು ಜಿಲ್ಲೆ ಹೆಚ್ಡಿ ಕೋಟೆ ತಾಲೂಕಿನ ಬೀಚನಹಳ್ಳಿ ಬಳಿಯ ಕಬಿನಿ ಜಲಾಶಯದ ಒಳಹರಿವಿನ ಪ್ರಮಾಣದಲ್ಲಿ ದಿಢೀರ್ ಹೆಚ್ಚಳವಾಗಿದೆ. ಕಬಿನಿ ಜಲಾಶಯಕ್ಕೆ 21,946 ಕ್ಯೂಸೆಕ್ ನೀರು ಒಳಹರಿವು ಉಂಟಾಗಿದೆ. ಕಬಿನಿ ಜಲಾಶಯದ ಗರಿಷ್ಠ ನೀರಿನ ಮಟ್ಟ 84 ಅಡಿ ಆಗಿದ್ದು, ಈಗ 67.75 ಅಡಿ ನೀರು ಸಂಗ್ರಹವಾಗಿದೆ.
ಆಲಮಟ್ಟಿ ಡ್ಯಾಂಗೆ 48,807 ಕ್ಯೂಸೆಕ್ ಒಳ ಹರಿವು
ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಆಲಮಟ್ಟಿ ಬಳಿಯ ಲಾಲ್ ಬಹಾದ್ದೂರ್ ಶಾಸ್ತ್ರೀ ಸಾಗರ ಡ್ಯಾಂಗೆ ಒಳ ಹರಿವು ಮುಂದುವರೆದಿದ್ದು, ಒಂದೇ ದಿನ 48,807 ಕ್ಯೂಸೆಕ್ ಒಳ ಹರಿವು ದಾಖಲಾಗಿದೆ. ಡ್ಯಾಂನಿಂದ 555 ಕ್ಯೂಸೆಕ್ ಹೊರ ಹರಿವು ಇದೆ. 519.60 ಮೀಟರ್ ಎತ್ತರದ ಡ್ಯಾಂನಲ್ಲಿ 511.160 ಮೀಟರ್ ನೀರು ಸಂಗ್ರಹವಾಗಿದೆ. ಇದು 1230 ಟಿಎಂಸಿ ನೀರು ಸಂಗ್ರಹಣ ಸಾಮರ್ಥ್ಯದ ಡ್ಯಾಂ ಆಗಿದ್ದು, ಸದ್ಯ 35.954 ಟಿಎಂಸಿ ನೀರು ಸಂಗ್ರಹವಾಗಿದೆ.
ಮೇ ತಿಂಗಳಲ್ಲಿಯೇ ತುಂಗಭದ್ರಾ ಜಲಾಶಯಕ್ಕೆ ಜೀವಕಳೆ
ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾದ ಕಾರಣ ಮೇ ತಿಂಗಳಲ್ಲಿಯೇ ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿ ಇರುವ ತುಂಗಭದ್ರಾ ಜಲಾಶಯಕ್ಕೆ ಜೀವಕಳೆ ಬಂದಿದೆ.ಜಲಾಶಯದಲ್ಲಿ ಸದ್ಯ 12 ಟಿಎಂಸಿ ನೀರು ಸಂಗ್ರಹವಾಗಿದೆ. ದಿನಕ್ಕೆ ಸುಮಾರು 20 ಸಾವಿರ ಕ್ಯೂಸೆಕ್ ನೀರು ಒಳಹರಿವು ಇದೆ. ಕಳೆದ ವರ್ಷ ಮೇ ತಿಂಗಳಲ್ಲಿ ಜಲಾಶಯ ಖಾಲಿ ಖಾಲಿ ಇದ್ದುದು ಈ ವರ್ಷ ನೀರಿನಿಂದ ಕಂಗೊಳಿಸುತ್ತಿದೆ. 12 ಟಿಎಂ ಸಿ ನೀರು ಸಂಗ್ರಹದಿಂದ ಕೊಪ್ಪಳ ,ಬಳ್ಳಾರಿ,ವಿಜಯನಗರ, ರಾಯಚೂರು ಜಿಲ್ಲೆಯ ರೈತರು ಖುಷಿಯಾಗಿದ್ದಾರೆ.
ಇದನ್ನೂ ಓದಿ: ಭಾರಿ ಮಳೆ ಕಾರಣ ಮೇ ತಿಂಗಳಲ್ಲೇ ಆಲಮಟ್ಟಿ ಡ್ಯಾಂಗೆ 52,650 ಕ್ಯೂಸೆಕ್ ಒಳ ಹರಿವು: ಸಂಭ್ರಮದಲ್ಲಿ ರೈತರು
ಮಹಾರಾಷ್ಟ್ರದಲ್ಲಿ ಭಾರಿ ಮಳೆ ಸುರಿಯುತ್ತಿರುವ ಹಿನ್ನಲೆ ಬಾಗಲಕೋಟೆಯ ಚಿಕ್ಕಪಡಸಲಗಿ ಗ್ರಾಮದ ಬಳಿ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಚಿಕ್ಕಪಡಸಲಗಿ ಶ್ರಮಬಿಂದು ಸಾಗರ ಬ್ಯಾರೇಜ್ನಲ್ಲಿಯೂ ಒಳಹರಿವು ಹೆಚ್ಚಾಗಿದೆ. ಮೇ ತಿಂಗಳ ಆರಂಭದಲ್ಲಿ ಬತ್ತಿ ಬರಿದಾಗಿದ್ದ ಬ್ಯಾರೇಜ್, ತಿಂಗಳ ಅಂತ್ಯಕ್ಕೆ ಭರ್ತಿ ಆಗುತ್ತಿದೆ. 4 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಬ್ಯಾರೇಜ್ ಇದಾಗಿದೆ.







