
ಬೆಂಗಳೂರು, ಮೇ 08: ಪಾಕ್ ಬೆಂಗಲಿತ ಉಗ್ರರು ಜಮ್ಮು ಕಾಶ್ಮೀರದ ಪೆಹೆಲ್ಗಾಮ್ನಲ್ಲಿ 26 ಪ್ರವಾಸಿಗರನ್ನು ಹತ್ಯೆ ಮಾಡಿದ್ದಕ್ಕೆ ದೇಶದ ಸೇನೆ ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ವೈಮಾನಿಕ ದಾಳಿ ಮಾಡಿ ಪ್ರತೀಕಾರ ತೀರಿಸಿಕೊಂಡಿದೆ. ಸದ್ಯ ಪಾಕಿಸ್ತಾನ ಯುದ್ದದ ಭೀತಿ ಎದುರಿಸುತ್ತಿದೆ. ಆಪರೇಷನ್ ಸಿಂಧೂರ್ (Operation Sindoor) ಯಶಸ್ವಿ ಹಿನ್ನಲೆ ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗುತ್ತಿದೆ. ಹಾಗಾಗಿ ದೇಶದ ಡ್ಯಾಂಗಳಲ್ಲಿ ಭದ್ರತೆಗೆ ಸೂಚನೆ ಬೆನ್ನಲ್ಲೇ ಇತ್ತ ಕರ್ನಾಟದ ಡ್ಯಾಂಗಳಲ್ಲಿ (Dam) ಬಿಗಿ ಭದ್ರತೆ ಸೂಚಿಸಲಾಗಿದೆ.
ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಡ್ಯಾಂನಲ್ಲಿ ಭದ್ರತೆ ಬಿರುಸುಗೊಂಡಿದೆ. ಈಗಾಗಲೇ ಭದ್ರತೆಯ ನೇತೃತ್ವ ವಹಿಸಿಕೊಂಡಿರುವ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ ಮತ್ತಷ್ಟು ಭದ್ರತೆಯನ್ನು ಹೆಚ್ಚಿಸಿಕೊಂಡಿದೆ.
ಇದನ್ನೂ ಓದಿ: ಭಾರತೀಯ ಸೇನೆಗೆ ವರವಾಯ್ತೇ ಲಕ್ಷ್ಮೀ ಜನಾರ್ದನ ಪ್ರಸಾದ! ಪೂಜೆ ವೇಳೆ ಬಲಭಾಗದಿಂದ ಹೂ ನೀಡಿದ ದೇವರು
ಆಲಮಟ್ಟಿ ಡ್ಯಾಂ ಪ್ರವೇಶ ದ್ವಾರದಿಂದಲೇ ಎಲ್ಲಾ ವಾಹನಗಳ ತಪಾಸಣೆ ಮಾಡಲಾಗುವುದು. ಬಾರೀ ಹಾಗೂ ಗೂಡ್ಸ್ ವಾಹನಗಳಿಗೆ ನಿಷೇಧಿಸಲಾಗಿದೆ, ಓರ್ವ ಡಿವೈಎಸ್ಪಿ ನೇತೃತ್ವದಲ್ಲಿ ಒಟ್ಟು 86 ಕೆಎಸ್ಐಎಸ್ಎಫ್ ಅಧಿಕಾರಿಗಳಿಂದ ಆಧುನಿಕ ಶಸ್ತ್ರಾಸ್ತ್ರಗಳ ಸಹಿತ ಭದ್ರತೆ ಒದಗಿಸಲಾಗಿದೆ. ಡ್ಯಾಂ ಆವರಣದಲ್ಲಿ ಸಿಸಿ ಕ್ಯಾಮೆರಾ ಕಣ್ಗಾವಲು ಇರಲಿದೆ. ನಿತ್ಯ 24 ಗಂಟೆಗಳ ಕಾಲ ಮೂರು ಪಾಳಯದಲ್ಲಿ ಭದ್ರತೆ ಇರಲಿದೆ. ಬೋಟ್ ಮೂಲಕ ಡ್ಯಾಂ ಹಿನ್ನೀರಿನಲ್ಲೂ ತಪಾಸಣೆ ಕಟ್ಟೆಚ್ಚರ ವಹಿಸಲಾಗಿದೆ.
ಅದೇ ರೀತಿಯಾಗಿ ಹಾಸನ ತಾಲ್ಲೂಕಿನ, ಗೊರೂರಿನಲ್ಲಿರುವ ಹೇಮಾವತಿ ಜಲಾಶಯದ ಮೇಲೆ ತೀವ್ರ ನಿಗಾ ಇಡಲು ಭದ್ರತಾ ಪಡೆಗೆ ಭದ್ರತಾ ಇಲಾಖೆ ವಿಶೇಷ ಸೂಚನೆ ನೀಡಿದೆ. ಹೇಮಾವತಿ ಜಲಾಯಶದಲ್ಲಿ ಕೈಗಾರಿಕಾ ಭದ್ರತಾ ಪಡೆಯಿಂದ ಹೈ ಅಲರ್ಟ್ ಘೋಷಿಸಲಾಗಿದೆ. ಓರ್ವ ಪಿಐ, ಓರ್ವ ಪಿಎಸ್ಐ, ನಾಲ್ವರು ಎಎಸ್ಐ ಸೇರಿ 22 ಪೊಲೀಸರಿಂದ ಭ ದ್ರತೆ ಒದಗಿಸಲಾಗಿದೆ.
ಇದನ್ನೂ ಓದಿ: ರಾಯಚೂರಿನಲ್ಲಿ ರೈಲ್ವೆ ಇಲಾಖೆಯಿಂದ ಮಾಕ್ ಡ್ರಿಲ್: ತಾಲೀಮು ಪ್ರದರ್ಶನ ಹೇಗಿತ್ತು ನೋಡಿ
ಏರ್ಸ್ಟ್ರೈಕ್, ದ್ರೋಣ್ ಅಟ್ಯಾಕ್ ಆಗವ ಸಾಧ್ಯತೆ ಹಿನ್ನೆಲೆಯಲ್ಲಿ ತೀವ್ರ ನಿಗಾವಹಿಸಲು ಸೂಚಿಸಿದ್ದು, ದಾಳಿಯಾದ ವೇಳೆ ತೆಗೆದುಕೊಳ್ಳುವ ಕ್ರಮಗಳ ಬಗ್ಗೆ ಈಗಾಗಲೇ ಅಧಿಕಾರಿಗಳಿಂದ (ಡೆಮೋ) ಐಎಸ್ಡಿ ಡಿಜಿ ಮಾಹಿತಿ ಪಡೆದುಕೊಂಡಿದ್ದಾರೆ.
ಈ ಬಗ್ಗೆ ಮಂಡ್ಯದಲ್ಲಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ಆಣೆಕಟ್ಟೆ ಭದ್ರತೆಗೆ ಎಲ್ಲಾ ಕಡೆ ಅಲರ್ಟ್ ಮಾಡಲಾಗಿದೆ. ಯಾವ ಟೈಮ್ನಲ್ಲಿ ಏನಾದರೂ ಆಗಬಹುದು ಎಂಬ ಕಾರಣಕ್ಕೆ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.