ಶಿಕ್ಷಣ ಸಚಿವರಿಲ್ಲದೆ ಇಲಾಖೆಯ ಚಟುವಟಿಕೆಗಳಿಗೆ ಅಡ್ಡಿ: ಸರ್ಕಾರಿ ಶಾಲೆಯ 30 ಸಾವಿರ ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳ ಭವಿಷ್ಯ ಅತಂತ್ರ

ರಾಜ್ಯದಲ್ಲಿ ಹೊಸ ಶೈಕ್ಷಣಿಕ ವರ್ಷ ಆರಂಭವಾಗಿ ಎರಡು ವಾರಗಳು ಕಳೆದರೂ ಶಿಕ್ಷಣ ಸಚಿವರ ನೇಮಕವಾಗದ ಕಾರಣ ನೀತಿ ನಿರ್ಧಾರಗಳಿಲ್ಲದೆ ಇಲಾಖೆ ಅಸ್ತವ್ಯಸ್ತಗೊಂಡಿದೆ. ಇದರ ನಡುವೆ, ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮದಲ್ಲಿ 7ನೇ ತರಗತಿ ಮುಗಿಸಿದ ಸುಮಾರು 30 ಸಾವಿರ ಬಡ ವಿದ್ಯಾರ್ಥಿಗಳಿಗೆ ಮುಂದಿನ 8ನೇ ತರಗತಿಗೆ ಪ್ರೌಢಶಾಲಾ ಹಂತದಲ್ಲಿ ಆಂಗ್ಲ ಮಾಧ್ಯಮವಿಲ್ಲದೆ ಭವಿಷ್ಯ ಅತಂತ್ರಗೊಂಡಿದೆ.

ಶಿಕ್ಷಣ ಸಚಿವರಿಲ್ಲದೆ ಇಲಾಖೆಯ ಚಟುವಟಿಕೆಗಳಿಗೆ ಅಡ್ಡಿ: ಸರ್ಕಾರಿ ಶಾಲೆಯ 30 ಸಾವಿರ ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳ ಭವಿಷ್ಯ ಅತಂತ್ರ
ಸಾಂದರ್ಭಿಕ ಚಿತ್ರ
Image Credit source: Karnataka Education Department
Edited By:

Updated on: Jun 16, 2026 | 9:02 AM

ಬೆಂಗಳೂರು, ಜೂನ್ 16: ರಾಜ್ಯದಲ್ಲಿ 2026ನೇ ಸಾಲಿನ ಹೊಸ ಶೈಕ್ಷಣಿಕ ವರ್ಷ ಆರಂಭವಾಗಿ ಎರಡು ವಾರಗಳು ಕಳೆದಿದ್ದರೂ ಇಲಾಖೆಗೆ ಶಿಕ್ಷಣ ಸಚಿವರೇ (Education Minister) ಇಲ್ಲದಿರುವುದು ಪೋಷಕರು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ತೀವ್ರ ನಿರಾಸೆ ಮೂಡಿಸಿದೆ. ಸಚಿವರ ಅನುಪಸ್ಥಿತಿಯಿಂದಾಗಿ ಹೊಸ ಶಿಕ್ಷಣ ನೀತಿಗಳ ಅನುಷ್ಠಾನ, ಶಿಕ್ಷಕರ ನೇಮಕಾತಿ ಮತ್ತು ಶಾಲಾ ಅಭಿವೃದ್ಧಿ ಯೋಜನೆಗಳಿಗೆ ಸಂಬಂಧಿಸಿದಂತೆ ಪ್ರಮುಖ ನೀತಿ ನಿರ್ಧಾರಗಳನ್ನು ಕೈಗೊಳ್ಳಲು ಅಧಿಕಾರಿಗಳು ತಡಕಾಡುತ್ತಿದ್ದಾರೆ. ಇದರ ನೇರ ಪರಿಣಾಮವಾಗಿ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಲಕ್ಷಾಂತರ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಮೇಲೆ ಭಾರಿ ಹೊಡೆತ ಬಿದ್ದಿದೆ.

ಮುಖ್ಯಾಂಶಗಳು

  • ಶಿಕ್ಷಣ ಸಚಿವರಿಲ್ಲದೆ ಸ್ಥಗಿತಗೊಂಡ ನೇಮಕಾತಿ.
  • 30 ಸಾವಿರ ವಿದ್ಯಾರ್ಥಿಗಳಿಗೆ ಇಲ್ಲ 8ನೇ ತರಗತಿ.
  • ಪಠ್ಯಪುಸ್ತಕ, ಸಮವಸ್ತ್ರ ವಿತರಣೆಯಲ್ಲಿ ತೀವ್ರ ವಿಳಂಬ.

ಏನಿದು 30 ಸಾವಿರ ವಿದ್ಯಾರ್ಥಿಗಳ ಆಂಗ್ಲ ಮಾಧ್ಯಮ ಗೊಂದಲ?

ಬಡ ಮತ್ತು ಮಧ್ಯಮ ವರ್ಗದ ಪೋಷಕರ ಮಕ್ಕಳೂ ಇಂಗ್ಲಿಷ್ ಕಲಿಯಬೇಕೆಂಬ ಮಹತ್ವಾಕಾಂಕ್ಷೆಯಿಂದ ರಾಜ್ಯ ಸರ್ಕಾರವು 2018-19ನೇ ಸಾಲಿನಲ್ಲಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಒಟ್ಟು 1,001 ಕನ್ನಡ ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ ಮಾಧ್ಯಮವನ್ನು ಆರಂಭಿಸಿತ್ತು. ಅಂದು ಒಂದನೇ ತರಗತಿಗೆ ಸೇರಿದ ಸುಮಾರು 30 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದೀಗ ಯಶಸ್ವಿಯಾಗಿ 7ನೇ ತರಗತಿ ಪಾಸಾಗಿದ್ದಾರೆ. ಆದರೆ, ಪ್ರಸಕ್ತ ಸಾಲಿನಲ್ಲಿ ಅವರು 8ನೇ ತರಗತಿಯ ಪ್ರೌಢಶಿಕ್ಷಣಕ್ಕೆ ಹೆಜ್ಜೆ ಇಡಬೇಕಾಗಿದ್ದು, ಸರ್ಕಾರದ ಯಾವುದೇ ಪ್ರೌಢಶಾಲೆಗಳಲ್ಲಿ ಆಂಗ್ಲ ಮಾಧ್ಯಮದ ಮುಂದುವರಿಕೆಗೆ ಮಂಜೂರಾತಿ ಸಿಕ್ಕಿಲ್ಲ! ಇದರಿಂದಾಗಿ ಈ ಮಕ್ಕಳು ಮುಂದಿನ ದಾರಿ ಕಾಣದೆ ಅತಂತ್ರರಾಗಿದ್ದಾರೆ. ಖಾಸಗಿ ಶಾಲೆಗಳಿಗೆ ಸೇರಿಸಲು ಆರ್ಥಿಕ ಶಕ್ತಿಯಿಲ್ಲದೆ ಪೋಷಕರು ಕಂಗಾಲಾಗಿದ್ದಾರೆ. ಬೆಂಗಳೂರಿನ 144, ಬೆಳಗಾವಿಯ 74 ಹಾಗೂ ತುಮಕೂರಿನ 49 ಶಾಲೆಗಳು ಸೇರಿದಂತೆ ರಾಜ್ಯದ ಒಟ್ಟು 1,001 ಶಾಲೆಗಳ ಮಕ್ಕಳು ಈ ಗೊಂದಲದಲ್ಲಿದ್ದಾರೆ.

ಶಿಕ್ಷಕರ ಕೊರತೆ, ಪಠ್ಯಪುಸ್ತಕಗಳ ವಿತರಣೆ ವಿಳಂಬ

ಇಲಾಖೆಗೆ ಮುಖ್ಯಸ್ಥರಿಲ್ಲದ ಕಾರಣ ಅತಿಥಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗಳು ನನೆಗುದಿಗೆ ಬಿದ್ದಿದ್ದು, ಗ್ರಾಮೀಣ ಭಾಗದ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಎದ್ದು ಕಾಣುತ್ತಿದೆ. ಜೂನ್ ಅರ್ಧ ತಿಂಗಳು ಕಳೆದರೂ ಮಕ್ಕಳಿಗೆ ಸಮವಸ್ತ್ರ, ಬಿಸಿಯೂಟದ ಸರಿಯಾದ ನಿರ್ವಹಣೆ ಹಾಗೂ ಆಂಗ್ಲ ಮಾಧ್ಯಮದ ಪಠ್ಯಪುಸ್ತಕಗಳು ಸಮರ್ಪಕವಾಗಿ ತಲುಪುತ್ತಿಲ್ಲ ಎಂದು ‘ಪೋಷಕರ ಸಮನ್ವಯ ಸಮಿತಿ’ ಅಧ್ಯಕ್ಷ ಯೋಗಾನಂದ್ ಹಾಗೂ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ಶಾಲಾ ಮಕ್ಕಳಿಗಿನ್ನು ಚಪ್ಪಲಿ ಭಾಗ್ಯ!: ಮಕ್ಕಳ ಆರೋಗ್ಯ ಗಮನದಲ್ಲಿರಿಸಿ ಶಿಕ್ಷಣ ಇಲಾಖೆಯಿಂದ ಹೊಸ ಚಿಂತನೆ

ಈ ಕುರಿತು ಪ್ರತಿಕ್ರಿಯಿಸಿರುವ ಶಾಲಾ ಶಿಕ್ಷಣ ಇಲಾಖೆ ಆಯುಕ್ತ ವಿಕಾಸ್ ಕಿಶೋರ್ ಸುರಳ್ಕರ್, ‘ಎರಡು ಕಿಲೋಮೀಟರ್ ವ್ಯಾಪ್ತಿಯಲ್ಲಿ ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳಿದ್ದರೆ ಅಲ್ಲಿ ದಾಖಲಿಸಲು ಸೂಚಿಸಲಾಗಿದೆ. ಒಂದು ವೇಳೆ ಇಲ್ಲದಿದ್ದರೆ, ಅದೇ ಸರ್ಕಾರಿ ಶಾಲೆಗಳಲ್ಲೇ 8ನೇ ತರಗತಿಗೆ ಆಂಗ್ಲ ಮಾಧ್ಯಮವನ್ನು ಅಪ್‌ಗ್ರೇಡ್ ಮಾಡಲು ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದ್ದಾರೆ. ಬಡ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸರ್ಕಾರ ತಕ್ಷಣವೇ ಈ ಗೊಂದಲ ನಿವಾರಿಸಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:01 am, Tue, 16 June 26

Vinay Kashappanavar

ವಿನಯಕುಮಾರ್ ಕಾಶಪ್ಪನವರ್ ಅವರು ಸಮೂಹ ಸಂವಹನ ಹಾಗೂ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮತ್ತು ಪತ್ರಿಕೋದ್ಯಮದಲ್ಲಿ ವಿದ್ಯಾಭ್ಯಾಸ ಪಡೆದಿದ್ದಾರೆ. ಕಳೆದ 8 ವರ್ಷಗಳಿಂದ ಟಿವಿ9 ಕನ್ನಡದಲ್ಲಿ ಹಿರಿಯ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು ನಗರ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ 10 ವರ್ಷಗಳ ವರದಿಗಾರಿಕೆ ಅನುಭವ ಹೊಂದಿದ್ದು, ಸಮಾಜಮುಖಿ ಹಾಗೂ ತನಿಖಾ ವರದಿಗಳ ಮೂಲಕ ಜನಪರ ವಿಷಯಗಳನ್ನು ಬೆಳಕಿಗೆ ತರುತ್ತಿದ್ದಾರೆ.

Read More
Follow Us