
ಬೆಂಗಳೂರು, (ಸೆಪ್ಟೆಂಬರ್ 17): ರಾಜ್ಯ ಸರ್ಕಾರ ಪಡಿತರ ಕಾರ್ಡ್ದಾರರಿಗೆ ಬಿಗ್ ಗುಡ್ ನ್ಯೂಸ್ ನೀಡಿದೆ. ನ್ಯಾಯಬೆಲೆ ಅಂಗಡಿಗಳಲ್ಲಿ ಎದುರಾಗುತ್ತಿರುವ ತೀವ್ರ ಸರ್ವರ್ ಸಮಸ್ಯೆಯಿಂದಾಗಿ ಇ-ಕೆವೈಸಿಗೆ ಅಡಚಣೆ ಉಂಟಾದ ಹಿನ್ನೆಲೆ ಪಡಿತರ ಇ-ಕೆವೈಸಿ ಅವಧಿ ವಿಸ್ತರಣೆ ಮಾಡಿ ಸರ್ಕಾರ ಅದೇಶ ಹೊರಡಿಸಿದೆ. ಸೆಪ್ಟೆಂಬರ್ 30ರವರೆಗೆ ಇದ್ದ ಕೊನೆ ದಿನಾಂಕವನ್ನು ಇದೀಗ ಅಕ್ಟೋಬರ್ 20ರವರೆಗೆ ಅವಧಿ ವಿಸ್ತರಿಸಿ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಆದೇಶ ಹೊರಡಿಸಿದೆ. ಅಲ್ಲದೇ ಇದರ ಜೊತೆಗೆ ನ್ಯಾಯಬೆಲೆ ಅಂಗಡಿಗಳ ಸಮಯದಲ್ಲೂ ಬದಲಾವಣೆ ಮಾಡಿದೆ.
ಸೆಪ್ಟೆಂಬರ್ 30ರೊಳಗೆ ಪಡಿತರ ಚೀಟಿ ಇ-ಕೆವೈಸಿ ಪೂರ್ಣಗೊಳಿಸಲು ಗಡುವು ನೀಡಲಾಗಿತ್ತು. ಆದ್ರೆ, ಸರ್ವರ್ ಸಮಸ್ಯೆಯಿಂದಾಗಿ ಜನರು ಆತಂಕಗೊಂಡಿದ್ದು, ದಿನವಿಡೀ ನ್ಯಾಯಬೆಲೆ ಅಂಗಡಿ ಮುಂದೆಯೇ ಕ್ಯೂ ನಿಂತುಕೊಳ್ಳುತ್ತಿದ್ದರು. ಈ ಸಂಬಂಧ ನ್ಯಾಯಬೆಲೆ ಅಂಗಡಿಯವರು ಈ ಸಮಸ್ಯೆಯನ್ನು ಸರ್ಕಾರಕ್ಕೆ ಗಮನ ತಂದಿದ್ದರು. ಈ ಹಿನೆಲೆಯಲ್ಲಿ ಇದನ್ನು ಗಂಭೀರವಾಗಿ ಪರಿಗಣಿಸಿದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕರ್ನಾಟಕದಲ್ಲಿ ಎಪಿಎಲ್ ಮತ್ತು ಬಿಪಿಎಲ್ ಪಡಿತರ ಚೀಟಿದಾರರಿಗೆ ಇ-ಕೆವೈಸಿ ಪೂರ್ಣಗೊಳಿಸಲು ಅಕ್ಟೋಬರ್ 20ರವರೆಗೆ ಕಾಲಾವಕಾಶ ನೀಡಿ ಡೆಡ್ಲೈನ್ ವಿಸ್ತರಣೆ ಮಾಡಿದೆ.
ಈ ಸಂಬಂಧ ಸಚಿವ ರಿಜ್ವಾನ್ ಅರ್ಷದ್ ಅವರು ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ನ್ಯಾಯಬೆಲೆ ಅಂಗಡಿಗಳಲ್ಲಿ ಉಂಟಾಗಿರೋ ಸರ್ವರ್ ಸಮಸ್ಯೆಗೆ ಜನಸಾಮಾನ್ಯರು ಕಂಗಾಲಾಗಬೇಕಿಲ್ಲ, ಇ-ಕೆವೈಸಿ ಗಡುವನ್ನ ಅಕ್ಟೋಬರ್ 20 ರವರೆಗೆ ವಿಸ್ತರಣೆ ಮಾಡಲಾಗಿದೆ. ಹೀಗಾಗಿ ಸರ್ವರ್ ಸಮಸ್ಯೆಯಿಂದ ಜನಸಾಮಾನ್ಯರು ಕಂಗಾಲಾಗುವ ಅಗತ್ಯವಿಲ್ಲ. ಇ-ಕೆವೈಸಿ ಮಾಡಿಸಲು ಅಕ್ಟೋಬರ್ 20 ರವರೆಗೆ ಗಡುವು ವಿಸ್ತರಿಸಿದ್ದು, ಯಾರೊಬ್ಬರೂ ಆತಂಕಕ್ಕೆ ಒಳಗಾಗುವುದು ಬೇಡ, ಇ-ಕೆವೈಸಿ ಪೂರ್ಣಗೊಳಿಸಿ ಸೌಲಭ್ಯ ಪಡೆಯಿರಿ ಎಂದು ತಿಳಿಸಿದ್ದಾರೆ. ಇದರೊಂದಿಗೆ ಆತಂಕದಲ್ಲಿದ್ದ ಪಡಿತರ ಕಾರ್ಡುದಾರರು ಕೊಂಚ ನಿಟ್ಟುಸಿರು ಬಿಡುವಂತಾಗಿದೆ.
ಇನ್ನು ಬಡವರು, ದಿನಗೂಲಿ ಕಾರ್ಮಿಕರ ಹಿತದೃಷ್ಟಿಯಿಂದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಎರಡು ಮಹತ್ವದ ನಿರ್ಧಾರ ಕೈಗೊಂಡಿದೆ. ಅಕ್ಟೋಬರ್ 1ರಿಂದ ಜಾರಿಯಾಗುವಂತೆ ನ್ಯಾಯಬೆಲೆ ಅಂಗಡಿಗಳ ವೇಳಾಪಟ್ಟಿ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಿದೆ. ಬೆಳಿಗ್ಗೆ 07:00 ರಿಂದ ಮಧ್ಯಾಹ್ನ 12:00 ರವರೆಗೆ ಹಾಗೂ ಸಂಜೆ 04:00 ರಿಂದ ರಾತ್ರಿ 08:00 ರವರೆಗೆ ನ್ಯಾಯಬೆಲೆ ಅಂಗಡಿಗಳು ಓಪನ್ ಇರಬೇಕೆಂದು ಆದೇಶದಲ್ಲಿ ತಿಳಿಸಿದೆ. ದಿನಗೂಲಿ ಕಾರ್ಮಿಕರ ಆದಾಯಕ್ಕೆ ಧಕ್ಕೆಯಾಗದಂತೆ ಈ ಮಹತ್ವದ ಕ್ರಮ ಕೈಗೊಳ್ಳಲಾಗಿದೆ.