ಮದ್ಯ ಪ್ರಿಯರಿಗೆ ಗುಡ್ ನ್ಯೂಸ್: ಜುಲೈ 1ರಿಂದ ರಾಜ್ಯದಲ್ಲಿ ಪ್ರೀಮಿಯಂ ಬ್ರ್ಯಾಂಡ್ ಮದ್ಯ ಬೆಲೆ ಇಳಿಕೆ

|

Updated on: Jun 20, 2024 | 11:59 AM

ರಾಜ್ಯದಲ್ಲಿ ದುಬಾರಿ ಮದ್ಯದ ಮೇಲಿನ ಹೆಚ್ಚುವರಿ ಅಬಕಾರಿ ತೆರಿಗೆಯನ್ನು (ಎಇಡಿ) ಸರಕಾರ ಇಳಿಕೆ ಮಾಡುವ ಸಂಬಂಧ ಸರಕಾರ ಕರಡು ಅಧಿಸೂಚನೆ ಹೊರಡಿಸಿದ್ದು, ಜುಲೈ 1ರಿಂದ ಅನ್ವಯವಾಗುವಂತೆ ದುಬಾರಿ ಬೆಲೆಯ ಬ್ರಾಂಡ್‌ಗಳ ಮದ್ಯದ ದರ ಅಗ್ಗವಾಗಲಿದೆ.

ಮದ್ಯ ಪ್ರಿಯರಿಗೆ ಗುಡ್ ನ್ಯೂಸ್: ಜುಲೈ 1ರಿಂದ ರಾಜ್ಯದಲ್ಲಿ ಪ್ರೀಮಿಯಂ ಬ್ರ್ಯಾಂಡ್ ಮದ್ಯ ಬೆಲೆ ಇಳಿಕೆ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಜೂನ್.20: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ, ದಿನಸಿ ವಸ್ತುಗಳು, ತರಕಾರಿಗಳ ದರ ಏರಿಕೆ ನಡುವೆ ಸರ್ಕಾರ ಮದ್ಯ ಪ್ರಿಯರಿಗೆ ಗುಡ್ ನ್ಯೂಸ್ ಕೊಟ್ಟಿದೆ. ರಾಜ್ಯದಲ್ಲಿ ದುಬಾರಿ ಮದ್ಯದ (Liquor) ಮೇಲಿನ ಹೆಚ್ಚುವರಿ ಅಬಕಾರಿ ತೆರಿಗೆಯನ್ನು ಇಳಿಸಲು ಸರ್ಕಾರ (Karnataka Government) ಮುಂದಾಗಿದ್ದು ಜುಲೈ 1ರಿಂದ ಭಾರಿ ಬೆಲೆಯ ಬ್ರ್ಯಾಂಡ್‌ಗಳ ಮದ್ಯದ ದರ ಅಗ್ಗವಾಗಲಿದೆ. ನೆರೆಹೊರೆಯ ರಾಜ್ಯಗಳಲ್ಲಿನ ಮದ್ಯದ ಬೆಲೆಗೆ ಅನುಗುಣವಾಗಿ ರಾಜ್ಯದಲ್ಲೂ ಸೆಮಿ ಪ್ರೀಮಿಯಂ ಮತ್ತು ಪ್ರೀಮಿಯಂ ಬ್ರಾಂಡ್‌ಗಳ ಮದ್ಯದ ಬೆಲೆಯನ್ನು ಪರಿಷ್ಕರಿಸುವುದಾಗಿ ಸರಕಾರ ಕಳೆದ ಫೆಬ್ರುವರಿಯಲ್ಲಿ ಮಂಡಿಸಿದ್ದ ಬಜೆಟ್‌ನಲ್ಲೇ ಘೋಷಿಸಿತ್ತು. ಅದು ಇದೀಗ ಜಾರಿಯಾಗುತ್ತಿದೆ.

ಹೊರ ರಾಜ್ಯಗಳಲ್ಲಿನ ಮದ್ಯದ ದರಪಟ್ಟಿ ಆಧರಿಸಿ ಹೊಸದಾಗಿ ಬೆಲೆ ನಿಗದಿಪಡಿಸಲಾಗಿದೆ. ಅಬಕಾರಿ ಆದಾಯ ಸಂಗ್ರಹ ಹೆಚ್ಚಳಕ್ಕಾಗಿ ರಾಜ್ಯ ಸರಕಾರ ಸತತವಾಗಿ ಮದ್ಯದ ಮೇಲಿನ ಹೆಚ್ಚುವರಿ ಅಬಕಾರಿ ತೆರಿಗೆ (ಎಇಡಿ) ಹೆಚ್ಚಿಸುತ್ತಲೇ ಬಂದಿತ್ತು. 2023ರ ಜುಲೈನಲ್ಲಿ ಭಾರತೀಯ ಉತ್ಪಾದಿತ ಮದ್ಯದ (ಐಎಂಎಲ್‌) ಮೇಲಿನ ಎಇಡಿ ಹೆಚ್ಚಿಸಿದ್ದರೆ, 2024ರ ಜನವರಿಯಲ್ಲಿ ಬಿಯರ್‌ ಮೇಲಿನ ಎಇಡಿ ಹೆಚ್ಚಿಸಲಾಗಿತ್ತು. ಇದೇ ಮೊದಲ ಬಾರಿಗೆ ಎಇಡಿ ಕಡಿಮೆ ಮಾಡುವ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿದೆ. ಅಬಕಾರಿ ತೆರಿಗೆ ಇಳಿಕೆ ಸಂಬಂಧ ಕರಡು ಅಧಿಸೂಚನೆ ಪ್ರಕಟಿಸಿದೆ. ಅಲ್ಲದೆ, ಈ ಅಧಿಸೂಚನೆ ಸಂಬಂಧ ಆಕ್ಷೇಪಣೆ ಸಲ್ಲಿಕೆಗೆ ಏಳು ದಿನಗಳ ಕಾಲಾವಕಾಶ ನೀಡಿದೆ.

ಇದನ್ನೂ ಓದಿ: ಇನ್ಮುಂದೆ ಪಬ್​, ಬಾರ್​ಗಳಲ್ಲಿ ಮದ್ಯ ಸೇವಿಸಲು ಸರ್ಕಾರಿ ಗುರುತಿನ ಚೀಟಿ ಕಡ್ಡಾಯ

ಹೆಚ್ಚುವರಿ ಅಬಕಾರಿ ತೆರಿಗೆ ಪ್ರಮಾಣ ರಾಜ್ಯದಲ್ಲಿ ಹೆಚ್ಚು ಇರುವ ಕಾರಣದಿಂದ ನೆರೆಹೊರೆಯ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಸೆಮಿ ಪ್ರೀಮಿಯಂ ಮತ್ತು ಪ್ರೀಮಿಯಂ ಸ್ಲ್ಯಾಬ್‌ಗಳ ಮದ್ಯದ ದರ ದುಬಾರಿಯಾಗಿದೆ. ಈ ಕಾರಣಕ್ಕೆ ದೊಡ್ಡ ಪ್ರಮಾಣದಲ್ಲಿ ನೆರೆಯ ರಾಜ್ಯಗಳಿಂದ ರಾಜ್ಯಕ್ಕೆ ಅಕ್ರಮವಾಗಿ ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಪೂರೈಕೆಯಾಗುತ್ತಿದೆ. ಗಡಿ ಭಾಗದ ಜಿಲ್ಲೆಗಳ ಜನರು ನೆರೆಯ ರಾಜ್ಯಗಳಿಗೆ ಹೋಗಿ ಮದ್ಯ ಖರೀದಿಸುತ್ತಿದ್ದಾರೆ. ಇದರಿಂದ ರಾಜ್ಯ ಸರ್ಕಾರಕ್ಕೆ ನಷ್ಟವಾಗುತ್ತಿದೆ. ಮದ್ಯ ಮಾರಾಟ ಹೆಚ್ಚಿಸಿ, ಅಬಕಾರಿ ತೆರಿಗೆ ಮೂಲದ ವರಮಾನವನ್ನು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಸರ್ಕಾರ ಎಇಡಿ ದರ ಪರಿಷ್ಕರಣೆ ನಿರ್ಧಾರ ಮಾಡಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ