ಬಿಸಿಲ ಝಳದಿಂದ ತತ್ತರಿಸಿದ ಜನತೆ: ಇನ್ನೂ 3 ದಿನ ಉಷ್ಣ ಅಲೆ, ಬೆಂಗಳೂರಿಗೂ ತಟ್ಟಲಿದೆ ತಾಪಮಾನ ಏರಿಕೆ ಬಿಸಿ

Karnataka Weather Forecast: ಕರ್ನಾಟಕದಲ್ಲಿ ಬಿಸಿಲಿನ ಬೇಗೆ ಹೆಚ್ಚಾಗಿದ್ದು, ಕಲಬುರಗಿಯಲ್ಲಿ 44 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಹವಾಮಾನ ಇಲಾಖೆಯು ಮುಂದಿನ 3 ದಿನಗಳ ಕಾಲ ಉಷ್ಣ ಅಲೆಯ ಎಚ್ಚರಿಕೆ ನೀಡಿದ್ದು, ಸಾರ್ವಜನಿಕರು ಹಾಗೂ ಮಕ್ಕಳು ಆರೋಗ್ಯದ ಬಗ್ಗೆ ತೀವ್ರ ಜಾಗ್ರತೆ ವಹಿಸುವಂತೆ ಸಲಹೆ ನೀಡಿದೆ.

ಬಿಸಿಲ ಝಳದಿಂದ ತತ್ತರಿಸಿದ ಜನತೆ: ಇನ್ನೂ 3 ದಿನ ಉಷ್ಣ ಅಲೆ, ಬೆಂಗಳೂರಿಗೂ ತಟ್ಟಲಿದೆ ತಾಪಮಾನ ಏರಿಕೆ ಬಿಸಿ
ಸಾಂದರ್ಭಿಕ ಚಿತ್ರ
Image Credit source: shutterstock.com

Updated on: Apr 17, 2026 | 7:11 AM

ಬೆಂಗಳೂರು, ಏಪ್ರಿಲ್ 17: ಕರ್ನಾಟಕದಲ್ಲಿ (Karnataka Weather) ಬಿಸಿಲಿನ ಪ್ರತಾಪ ಮಿತಿಮೀರಿದ್ದು, ಜನಸಾಮಾನ್ಯರು ಅಕ್ಷರಶಃ ಕಾದ ಕಾವಲಿಯ ಮೇಲೆ ಕುಳಿತಂತಾಗಿದ್ದಾರೆ. ಹವಾಮಾನ ಇಲಾಖೆಯ (IMD) ಇತ್ತೀಚಿನ ವರದಿಯಂತೆ, ಬಿಸಿಲಿನ ತಾಪಮಾನ ಇಷ್ಟು ದಿನ ಒಂದು ಲೆಕ್ಕವಾದರೆ, ಇನ್ಮುಂದೆ ಇನ್ನೊಂದು ಲೆಕ್ಕ ಎಂಬಂತೆ ತೀವ್ರಗೊಳ್ಳಲಿದೆ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಂತೂ ಸೂರ್ಯನ ಶಾಖಕ್ಕೆ ಜನ ಒದ್ದಾಡುವಂತಾಗಿದೆ. ಉತ್ತರ ಕರ್ನಾಟಕದ ಕೆಲವು ದೇಗುಲಗಳಲ್ಲಿ ದರ್ಶನದ ಸಮಯವನ್ನೇ ಬದಲು ಮಾಡಲಾಗಿದ್ದು, ಕೆಲವು ಜಿಲ್ಲೆಗಳ ಆಸ್ಪತ್ರೆಗಳಲ್ಲಿ ವಿಶೇಷ ‘ಹೀಟ್ ವೇವ್’ ವಾರ್ಡ್‌ಗಳನ್ನು ಆರಂಭಿಸಲಾಗಿದೆ.

ಯಾದಗಿರಿ, ಕಲಬುರಗಿ ಕಾದ ಕೆಂಡ

ಯಾದಗಿರಿಯಲ್ಲಿ ತಾಪಮಾನ 42 ಡಿಗ್ರಿ ಸೆಲ್ಸಿಯಸ್‌ ತಲುಪಿದ್ದು, ಬಿಸಿಲಿನಿಂದಾಗಿ ಮಕ್ಕಳಲ್ಲಿ ನಿರ್ಜಲೀಕರಣ (Dehydration), ವಾಂತಿ-ಭೇದಿ ಕಾಣಿಸಿಕೊಳ್ಳುತ್ತಿದೆ. ಇದಕ್ಕಾಗಿ ಜಿಲ್ಲಾಸ್ಪತ್ರೆಯಲ್ಲಿ ವಿಶೇಷ ‘ಹೀಟ್ ವೇವ್’ ವಾರ್ಡ್‌ಗಳನ್ನು ತೆರೆಯಲಾಗಿದೆ. ಇನ್ನು ಕಲಬುರಗಿಯಲ್ಲಿ ಬರೋಬ್ಬರಿ 44 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗುವ ಮೂಲಕ ರಾಜ್ಯದಲ್ಲೇ ಅತಿ ಹೆಚ್ಚು ಬಿಸಿಲು ಇರುವ ಜಿಲ್ಲೆಯಾಗಿ ಹೊರಹೊಮ್ಮಿದೆ. ಕೊಪ್ಪಳದ ಪ್ರಸಿದ್ಧ ಅಂಜನಾದ್ರಿ ಬೆಟ್ಟದಲ್ಲಿ ಪ್ರವಾಸಿಗರ ಹಿತದೃಷ್ಟಿಯಿಂದ ದರ್ಶನದ ಸಮಯವನ್ನು ಬದಲಿಸಲಾಗಿದ್ದು, ಬೆಳಿಗ್ಗೆ 11ರಿಂದ ಸಂಜೆ 4ರವರೆಗೆ ದರ್ಶನಕ್ಕೆ ಬ್ರೇಕ್ ಹಾಕಲಾಗಿದೆ.

ಮುಂದಿನ 3 ದಿನ ಹೀಟ್ ವೇವ್ ಅಲರ್ಟ್

ಹವಾಮಾನ ಇಲಾಖೆಯ ಮುನ್ಸೂಚನೆಯಂತೆ, ಮುಂದಿನ 48 ರಿಂದ 72 ಗಂಟೆಗಳ ಕಾಲ ಉತ್ತರ ಒಳನಾಡಿನ ಜಿಲ್ಲೆಗಳಾದ ಬಾಗಲಕೋಟೆ, ವಿಜಯಪುರ, ಕಲಬುರಗಿ ಮತ್ತು ರಾಯಚೂರಿನಲ್ಲಿ ಹೀಟ್ ವೇವ್ (ಉಷ್ಣ ಅಲೆ) ಮುಂದುವರಿಯಲಿದೆ. ಬೆಂಗಳೂರಿನಲ್ಲಿ ತಾಪಮಾನ 36-38 ಡಿಗ್ರಿ ಸೆಲ್ಸಿಯಸ್‌ ಆಸುಪಾಸಿನಲ್ಲಿರಲಿದ್ದು, ಸಂಜೆಯ ವೇಳೆಗೆ ಕೆಲವು ಜಿಲ್ಲೆಗಳಲ್ಲಿ ಅಲ್ಪ ಪ್ರಮಾಣದ ಮೋಡ ಕವಿದ ವಾತಾವರಣವಿರಲಿದೆ. ಆದರೆ, ಕರಾವಳಿ ಭಾಗದಲ್ಲಿ ಉಷ್ಣಾಂಶದ ಜೊತೆಗೆ ತೇವಾಂಶ ಹೆಚ್ಚಾಗಿರುವುದರಿಂದ ಸೆಖೆ ಅತಿ ಹೆಚ್ಚಾಗಿ ಕಾಡಲಿದೆ.

  • ಉಷ್ಣ ಅಲೆಯಲ್ಲಿ ಕಲಬುರಗಿ ಫಸ್ಟ್: 44 ಡಿಗ್ರಿ ಸೆಲ್ಸಿಯಸ್ ತಾಪಮಾನದೊಂದಿಗೆ ರಾಜ್ಯದ ಅತಿ ಬಿಸಿಲ ಜಿಲ್ಲೆ.
  • ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ಬಿಸಿಲು ತಗುಲಿದ ಮಕ್ಕಳ ಚಿಕಿತ್ಸೆಗಾಗಿ ವಿಶೇಷ ವಾರ್ಡ್ ಸಿದ್ಧ.
  • ಅಂಜನಾದ್ರಿ ದರ್ಶನ ಬದಲು: ಮಧ್ಯಾಹ್ನದ ಉರಿ ಬಿಸಿಲಿನಿಂದಾಗಿ ಭಕ್ತರಿಗೆ ಅಂಜನಾದ್ರಿ ಬೆಟ್ಟ ಹತ್ತಲು ನಿರ್ಬಂಧ.
  • ರಾಜಸ್ಥಾನದಲ್ಲಿ 50 ಡಿಗ್ರಿ ಹಾಗೂ ಉತ್ತರ ಪ್ರದೇಶದಲ್ಲಿ 49.8 ಡಿಗ್ರಿಯಷ್ಟು ದಾಖಲೆ ಮಟ್ಟದ ತಾಪಮಾನ.
  • ವೈದ್ಯರ ಸಲಹೆ: ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಅನಗತ್ಯವಾಗಿ ಹೊರಗೆ ಬರಬೇಡಿ, ಹೆಚ್ಚು ನೀರು ಸೇವಿಸಿ.

ಇದನ್ನೂ ಓದಿ: ಬಿಸಿಲ ಬೇಗೆಯ ನಡುವೆ ಮಳೆಯ ಮುನ್ಸೂಚನೆ: ರಾಜ್ಯದ 10 ಜಿಲ್ಲೆಗಳಲ್ಲಿ ‘ಹೀಟ್ ವೇವ್’ ಎಚ್ಚರಿಕೆ; ಎಲ್ಲೆಲ್ಲಿ ಮಳೆಯಾಗಲಿದೆ?

ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳ ಕೆಲವು ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು ಸಹಿತ ಅಲ್ಪ ಪ್ರಮಾಣದ ಮಳೆಯಾಗುವ ಸಾಧ್ಯತೆಯಿದೆ. ಆದರೆ ಕಲಬುರಗಿ, ಯಾದಗಿರಿ ಮತ್ತು ಬಳ್ಳಾರಿಯಂತಹ ಅತೀ ಹೆಚ್ಚು ತಾಪಮಾನವಿರುವ ಜಿಲ್ಲೆಗಳಲ್ಲಿ ಮಳೆಯಾಗುವ ಲಕ್ಷಣಗಳಿಲ್ಲ. ಹವಾಮಾನದ ಏರುಪೇರಿನಿಂದಾಗಿ ಸಂಜೆಯ ವೇಳೆ ಮೋಡ ಕವಿದ ವಾತಾವರಣ ಕಂಡುಬಂದರೂ, ಅದು ಬಿಸಿಲಿನ ತಾಪವನ್ನು ಕಡಿಮೆ ಮಾಡಲು ಪೂರಕವಾಗಿರುವುದಿಲ್ಲ ಎಂದು ಹವಾಮಾನ ಇಲಾಖೆಯ ಮುನ್ಸೂಚನೆ ತಿಳಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us