
ಬೆಂಗಳೂರು, (ಜುಲೈ 16): ಬೆಂಗಳೂರಿನ (Bengaluru) ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ವರೆ ನಿರ್ಮಿಸಲು ಉದ್ದೇಶಿಸಿರುವ ಸುರಂಗ ರಸ್ತೆ ಯೋಜನೆಗೆ ಸಂಬಂಧಿಸಿದಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ (Karnataka High Court) ಆಗಸ್ಟ್ 20ಕ್ಕೆ ನಿಗದಿಪಡಿಸಿದೆ. ಸುರಂಗ ರಸ್ತೆ ಯೋಜನೆಗೆ ಮಧ್ಯಂತರ ತಡೆಯಾಜ್ಞೆ ನೀಡುವಂತೆ ಪ್ರಕಾಶ್ ಬೆಳವಾಡಿ, ಡಾ. ಎ.ರವೀಂದ್ರ, ಸಿಟಿಜನ್ ಆಕ್ಷನ್ ಫೋರಂ ಸಲ್ಲಿಸಿದ್ದ ಪಿಐಎಲ್ ಅರ್ಜಿಯನ್ನು ಇಂದು (ಜುಲೈ 16) ವಿಚಾರಣೆ ನಡೆಸಿದ ಕೋರ್ಟ್, ಕಾಮಗಾರಿ ಹೈಕೋರ್ಟ್ನ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ. ಪಿಐಎಲ್ ಬಾಕಿಯಿರುವ ಬಗ್ಗೆ ಗುತ್ತಿಗೆದಾರರಿಗೆ ಮಾಹಿತಿ ನೀಡಲು ಸೂಚನೆ ನೀಡಿ ವಿಚಾರಣೆಯನ್ನು ಮುಂದೂಡಿದೆ. ಅರ್ಜಿದಾರರ ಪರ ತೇಜಸ್ವಿ ಸೂರ್ಯ, ಹಿರಿಯ ವಕೀಲ ಡಿ.ಆರ್.ರವಿಶಂಕರ್ ವಾದ ಮಂಡಿಸಿದರು.
ಕಳೆದ ವಿಚಾರಣೆಯ ವೇಳೆ ನ್ಯಾಯಾಲಯವು ಸರ್ಕಾರ, ಗ್ರೇಟರ್ ಬೆಂಗಳೂರು ಪ್ರಾಧಿಕಾರ, ರಾಜ್ಯ ಪರಿಸರ ಅಧ್ಯಯನ ಮೌಲ್ಯಮಾಪನ ಪ್ರಾಧಿಕಾರ, ನಗರ ಭೂಸಾರಿಗೆ ನಿರ್ದೇಶನಾಲಯ, ಬೆಂಗಳೂರು ಸ್ಮಾರ್ಟ್ ಮೂಲಸೌಕರ್ಯ ನಿಯಮಿತ(ಸ್ಮೈಲ್) ರಾಡಿಕ್ ಕನ್ಸಲ್ಟೆಂಟ್ಸ್ ಮತ್ತು ಆಲ್ಟಿನೋಕ್ ಕನ್ಸಲ್ಟೆಂಟ್ಸ್ ಸೇರಿ ಎಲ್ಲಾ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿತ್ತು. ಅಲ್ಲದೆ, ಲಾಲ್ಬಾಗ್ ಬೊಟಾನಿಕಲ್ ಗಾರ್ಡನ್ನಂತಹ ಸೂಕ್ಷ್ಮ ಪ್ರದೇಶಗಳ ಅಡಿಯಲ್ಲಿ ಸುರಂಗ ನಿರ್ಮಾಣ ಮಾಡುವುದರಿಂದ ಆಗುವ ಅಪಾಯಗಳ ಬಗ್ಗೆ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ(ಎಖಐ)ದಿಂದ ಅಭಿಪ್ರಾಯ ಪಡೆಯುವಂತೆ ಸೂಚಿಸಿತ್ತು.
Appeared before the Hon’ble HC of Karnataka in the batch of PILs challenging the Tunnel Project & the challenge to Rule 24 of BMLTA Rules.
The Hon’ble Chief Justice directed the State government to inform pendency of the petition to the probable/possible contractor and that no…
— Tejasvi Surya (@Tejasvi_Surya) July 16, 2026
ಹಿನ್ನೆಲೆ: ಬೆಂಗಳೂರು ಮಹಾನಗರದ ಸಂಚಾರ ದಟ್ಟಣೆ ಸಮಸ್ಯೆ ಪರಿಹರಿಸುವ ಸಲುವಾಗಿ ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ವರೆಗೆ ಸುಮಾರು 19 ಸಾವಿರ ಕೋಟಿ ರೂ. ವೆಚ್ಚದಲ್ಲಿ ಸುರಂಗ ಮಾರ್ಗ ಯೋಜನೆಯನ್ನು ಪ್ರಸ್ತಾಪಿಸಲಾಗಿದೆ. ಬೆಂಗಳೂರು ಜೋಡಿ ಸುರಂಗ ರಸ್ತೆ ಯೋಜನೆಗೆ 2025ರ ಜು.14ರಂದು ಕರೆದಿರುವ ಟೆಂಡರ್ ಅಧಿಸೂಚನೆಯನ್ನು ರದ್ದುಗೊಳಿಸುವಂತೆ ಅರ್ಜಿಯಲ್ಲಿ ಕೋರಲಾಗಿದೆ.
ಜತೆಗೆ ಆರ್ಎಫ್ಪಿ ಪ್ರಕಟಣೆ, ಪೂರ್ವ-ಬಿಡ್ ಪ್ರಕ್ರಿಯೆಗಳು, ಬಿಡ್ ಸಲ್ಲಿಕೆ, ಬಿಡ್ ಮೌಲ್ಯಮಾಪನ ಮತ್ತು ಉದ್ದೇಶಿತ ಟೆಂಡರ್ ಪ್ರಸ್ತಾವ ಅಂತಿಮಗೊಳಿಸುವ ಪತ್ರ ಸೇರಿದಂತೆ ಎಲ್ಲಾ ಹಂತಗಳನ್ನೂ ರದ್ದುಗೊಳಿಸಲು ಕೋರಲಾಗಿದೆ. ಸುರಂಗ ಮಾರ್ಗ ಯೋಜನೆಗೆ ಪೂರ್ವ ಪರಿಸರ ಅನುಮತಿ ಅಗತ್ಯವಿಲ್ಲ ಎಂದು ಕರ್ನಾಟಕ ರಾಜ್ಯ ಪರಿಸರ ಪರಿಣಾಮ ಮೌಲ್ಯಮಾಪನ ಪ್ರಾಧಿಕಾರ 2024ರ ನ.26ರಂದು ನೀಡಿರುವ ಪತ್ರವನ್ನು ರದ್ದುಗೊಳಿಸಲು ಸಹ ಕೋರಲಾಗಿದೆ.