ಹಣ ನೀಡಿ ಮತ ಹಾಕೋರು, ಹಾಕಿಸಿಕೊಳ್ಳುವವರು ಇರುವವರೆಗೂ ಪ್ರಜಾಪ್ರಭುತ್ವ ಸರಿಯಾಗದು; ಬಸವರಾಜ ಹೊರಟ್ಟಿ

ಈಗ ವಿಧಾನ ಪರಿಷತ್ ಅಂದ್ರೆ ಮುನಿಸಿಪಾಲಿಟಿ ಆಗಿದೆ. ನನಗೆ ಇದರ ಬಗ್ಗೆ ಸಾಕಷ್ಟು ನೋವು ಆಗಿದೆ ಎಂದು ವಿಧಾನಸೌಧದಲ್ಲಿ ನಡೆದ ನಿವೃತ್ತ ವಿಧಾನ ಪರಿಷತ್ ಶಾಸಕರ ಬೀಳ್ಕೊಡುಗೆ ಸಮಾರಂಭದಲ್ಲಿ ಬಸವರಾಜ ಹೊರಟ್ಟಿ ಬೇಸರ ಹೊರಹಾಕಿದ್ದಾರೆ.

ಹಣ ನೀಡಿ ಮತ ಹಾಕೋರು, ಹಾಕಿಸಿಕೊಳ್ಳುವವರು ಇರುವವರೆಗೂ ಪ್ರಜಾಪ್ರಭುತ್ವ ಸರಿಯಾಗದು; ಬಸವರಾಜ ಹೊರಟ್ಟಿ
ಬಸವರಾಜ ಹೊರಟ್ಟಿ
Edited By:

Updated on: Nov 27, 2024 | 6:23 PM

ಬೆಂಗಳೂರು: ನಾನು ಪರಿಷತ್ ಗೆ ಬಂದಾಗ 9.30ಕ್ಕೆ ಕಲಾಪ ಶುರುವಾಗುತ್ತಿತ್ತು, ರಾತ್ರಿ 8ಕ್ಕೆ ಮುಗಿಯುತ್ತಿತ್ತು. ಈಗ ವಿಧಾನ ಪರಿಷತ್ ಗೌರವ ಕಡಿಮೆ ಆಗುತ್ತಿದೆ. ಕಲಾಪಗಳು ಸರಿಯಾಗಿ ನಡೆಯುತ್ತಿಲ್ಲ. ನಮ್ಮ ದೇಶದಲ್ಲಿ ಎಲ್ಲಿಯವರೆಗೆ ದುಡ್ಡು ಕೊಟ್ಟು ವೋಟ್ ಹಾಕಿಸಿಕೊಳ್ಳೋರು, ವೋಟ್ ಹಾಕೋರು ಇರುತ್ತಾರೋ ಅಲ್ಲಿಯವರೆಗೂ ಪ್ರಜಾಪ್ರಭುತ್ವ ಸರಿ ಆಗಲ್ಲ. ಇದೆಲ್ಲವನ್ನೂ ಕಾಲವೇ ಸುಧಾರಣೆ ಮಾಡಬೇಕು ಎಂದು ವಿಧಾನ ಪರಿಷತ್​ ಸದಸ್ಯರ ಆಯ್ಕೆ ವ್ಯವಸ್ಥೆ ಬಗ್ಗೆ ಬಸವರಾಜ ಹೊರಟ್ಟಿ ಬೇಸರ ಹೊರಹಾಕಿದ್ದಾರೆ.

ಕಲಾಪದಲ್ಲಿ ಭಾಗಿಯಾದ ಎಲ್ಲಾ ಶಾಸಕರ ಬಗ್ಗೆ ನನಗೆ ಮಾಹಿತಿ ಗೊತ್ತಿದೆ. ಅವರು ಏನು ಚರ್ಚೆ ಮಾಡಿದ್ದಾರೆ ಎಂಬುದು ನನಗೆ ಗೊತ್ತಿದೆ. ಎಲ್ಲರಿಗೂ ಗಾಢ್​​ಫಾದರ್ ಇದ್ದಾರೆ. ಆದರೆ, ನನಗೆ ಯಾರೂ ಇಲ್ಲ. ರಾಜಕೀಯಕ್ಕೆ ನನ್ನನ್ನು ಯಾರೂ ಕರೆತಂದಿಲ್ಲ. ನಾನೇ ನನ್ನ ಸ್ವಂತ ಶಕ್ತಿಯಿಂದ ರಾಜಕೀಯಕ್ಕೆ ಬಂದಿದ್ದೇನೆ ಎಂದು ಬೆಂಗಳೂರಿನಲ್ಲಿ ವಿಧಾನ ಪರಿಷತ್​ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ. ರಾಜಕೀಯಕ್ಕೆ ಬಂದಮೇಲೆ ಗಾಡ್ ಫಾದರ್ ಶುರುವಾದರು. ಈಗೀಗ ವಿಧಾನಪರಿಷತ್ ಗೌರವ ಕಡಿಮೆ ಆಗುತ್ತಿದೆ. ಕಲಾಪಗಳು ಸರಿಯಾಗಿ ನಡೆಯುತ್ತಿಲ್ಲ. ಎಲ್ಲದ್ದಕ್ಕೂ ಬಾವಿಗೆ ಬಂದು ಇಳಿದು ಧಿಕ್ಕಾರ ಕೂಗುವ ಅಭ್ಯಾಸ ಶುರುವಾಗಿದೆ. ನಾವೆಲ್ಲ ಅಜೆಂಡಾ ಇಟ್ಟುಕೊಂಡು ಓದಿಕೊಂಡು ಬರುತ್ತಿದ್ದೆವು. ಈಗ ಪ್ರಶ್ನೆ ಕೇಳಿ ಎರಡು ನಿಮಿಷಕ್ಕೆ ಹೊರಗೆ ಹೋಗುತ್ತಾರೆ ಎಂದು ಹೊರಟ್ಟಿ ಹೇಳಿದ್ದಾರೆ.

ಇದನ್ನೂ ಓದಿ: ಅಧಿಕಾರದ ಲಾಲಸೆ ಇದ್ದಿದ್ದರೆ ನಾನು ರಾಜ್ಯದ ಉಪ ಮುಖ್ಯಮಂತ್ರಿಯಾಗಿರುತ್ತಿದ್ದೆ: ಹೆಚ್ ಡಿ ರೇವಣ್ಣ, ಶಾಸಕ

ಬೆಂಗಳೂರಿನಲ್ಲಿ ವಿಧಾನಸೌಧದಲ್ಲಿ ನಡೆದ ನಿವೃತ್ತ ವಿಧಾನ ಪರಿಷತ್ತು ಶಾಸಕರ ಬೀಳ್ಕೊಡುಗೆ ಸಮಾರಂಭದಲ್ಲಿ ಬಸವರಾಜ ಹೊರಟ್ಟಿ ಬೇಸರ ಹೊರಹಾಕಿದ್ದಾರೆ. ಏ. 2023ರಿಂದ ಅ. 2024ರ ಅವಧಿಯಲ್ಲಿ ನಿವೃತ್ತರಾಗಿರುವ ವಿಧಾನ ಪರಿಷತ್ತಿನ ಶಾಸಕರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು. ಈಗ ವಿಧಾನ ಪರಿಷತ್ ಅಂದ್ರೆ ಮುನಿಸಿಪಾಲಿಟಿ ಆಗಿದೆ. ನನಗೆ ಇದರ ಬಗ್ಗೆ ಸಾಕಷ್ಟು ನೋವು ಆಗಿದೆ. ರಾಜಕೀಯ ಪುಡಾರಿಗಳು ಯಾರು ಇರ್ತಾರೋ ಅವರನ್ನು ತಂದು ತಂದು ವಿಧಾನ ಪರಿಷತ್​ಗೆ ಹಾಕ್ತಾರೆ. ಪರಿಷತ್ ನಿರಾಶ್ರಿತರ ಕೇಂದ್ರದ ರೀತಿ ಆಗಿದೆ. ಕಲಾಪಗಳು ಕಾಲಕ್ಕೆ ಸರಿಯಾಗಿ ನಡೆಯಲ್ಲ. ಶಿಕ್ಷಕರ ಮತದಾರ ಕ್ಷೇತ್ರದಿಂದಲೂ ದುಡ್ಡು ತಿಂದು ವೋಟ್ ಹಾಕಿಕೊಂಡು ಬಂದಿದ್ದಾರೆ. ಶಿಕ್ಷಕರು ಸಹ ದುಡ್ಡು ತೆಗೆದುಕೊಂಡು ಮತ ಹಾಕ್ತಾ ಇದ್ದಾರೆ. ಹಾಗಾದರೆ, ರಾಜಕೀಯ ಎಲ್ಲಿಗೆ ಬರುತ್ತಿದೆ? ಎಂದು ಹೊರಟ್ಟಿ ಆಕ್ರೋಶ ಹೊರಹಾಕಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ