ಸಚಿವ ರಾಮಲಿಂಗಾರೆಡ್ಡಿ ಸಂಧಾನ ಸಭೆ ಸಕ್ಸಸ್: ಲಾರಿ ಮಾಲೀಕರ ಮುಷ್ಕರ ವಾಪಸ್
ಕರ್ನಾಟಕ ರಾಜ್ಯದ ಲಾರಿ ಮಾಲೀಕರ ಅನಿರ್ದಿಷ್ಟಾವಧಿ ಮುಷ್ಕರವು ಸಾರಿಗೆ ಸಚಿವರೊಂದಿಗಿನ ಯಶಸ್ವಿ ಮಾತುಕತೆಯ ನಂತರ ಅಂತ್ಯಗೊಂಡಿದೆ. ಸರ್ಕಾರವು ಲಾರಿ ಮಾಲೀಕರ ಹಲವು ಬೇಡಿಕೆಗಳನ್ನು ಒಪ್ಪಿಕೊಂಡಿದ್ದು, ಇದರಿಂದ 4500 ಕೋಟಿ ರೂಪಾಯಿಗಳಷ್ಟು ಅಂದಾಜು ನಷ್ಟವನ್ನು ತಪ್ಪಿಸಲಾಗಿದೆ. ಲಾರಿ ಮಾಲೀಕರ ಸಂಘದ ಅಧ್ಯಕ್ಷರು ಮುಷ್ಕರ ಹಿಂಪಡೆದ ಬಗ್ಗೆ ಘೋಷಿಸಿದ್ದಾರೆ. ಸರ್ಕಾರದ ಈ ಕ್ರಮಕ್ಕೆ ಅವರು ಧನ್ಯವಾದಗಳನ್ನೂ ಅರ್ಪಿಸಿದ್ದಾರೆ.

ಬೆಂಗಳೂರು, ಏಪ್ರಿಲ್ 17: ಲಾರಿ ಮಾಲೀಕರ (Lorry Owner) ಸಂಘದೊಂದಿಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ನಡೆಸಿದ ಎರಡನೇ ಸಭೆ ಯಶಸ್ವಿಯಾಗಿದೆ. ಈ ಹಿನ್ನೆಲೆಯಲ್ಲಿ ಅನಿರ್ದಿಷ್ಟಾವಧಿ ಮುಷ್ಕರವನ್ನು (Karnataka Lorry Strike) ವಾಪಸ್ ತೆಗೆದುಕೊಳ್ಳುವುದಾಗಿ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಜಿ.ಆರ್.ಷಣ್ಮುಗಪ್ಪ ಘೋಷಣೆ ಮಾಡಿದ್ದಾರೆ. ಸಭೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಷ್ಕರ ಈ ಸಮಯದಿಂದಲೇ ವಾಪಸ್ ಪಡೆಯುತ್ತೇನೆ. ಸಚಿವರು ಬಹುತೇಕ ಬೇಡಿಕೆ ಈಡೇರಿಸಿದ್ದಾರೆ. ಸಚಿವರಿಗೆ ಧನ್ಯವಾದ ತಿಳಿಸುತ್ತೇನೆ.
ಸರ್ಕಾರ ನಮ್ಮ ಬೇಡಿಕೆ ಈಡೇರಿಸಿದೆ
20 ವರ್ಷಗಳಲ್ಲಿ ಈಡೇರದ ಬೇಡಿಕೆ ಸಚಿವ ರಾಮಲಿಂಗಾ ರೆಡ್ಡಿ ಈಡೇರಿಸಿದ್ದಾರೆ ಎಂದು ಹೇಳಿದರು. ಲಾರಿ ಮುಷ್ಕರದಿಂದ ಆದ ತೊಂದರೆಗೆ ಜನರಲ್ಲಿ ವಿಷಾದ ವ್ಯಕ್ತಪಡಿಸಿದ್ದೇನೆ. ಸರ್ಕಾರಕ್ಕೆ ಧನ್ಯವಾದ ಹೇಳುತ್ತೇನೆ. ಒಂದು ದಿನದ ಲಾರಿ ಮುಷ್ಕರದಿಂದ 4500 ಕೋಟಿ ರುಪಾಯಿ ನಷ್ಟವಾಗಿದೆ. ಅಂದಾಜು ಒಂದು ದಿನಕ್ಕೆ 4500 ಕೋಟಿ ರುಪಾಯಿಯಷ್ಟು ನಷ್ಟ ಉಂಟಾಗಿರಬಹುದು ಎಂದ ರಾಜ್ಯ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಜಿ.ಆರ್. ಷಣ್ಮುಗಪ್ಪ ಹೇಳಿದ್ದಾರೆ.
ದಂಡ ಕಡಿತ ಮಾಡುವ ಬಗ್ಗೆ ಚರ್ಚೆ ಮಾಡ್ತೀನಿ: ರಾಮಲಿಂಗಾ ರೆಡ್ಡಿ
ಲಾರಿ ಮಾಲೀಕರ ಸಂಘದ ಪದಾಧಿಕಾರಿಗಳ ಜೊತೆ ಸಭೆ ಮಾಡಿದ್ದೇನೆ. ಲಾರಿ ಮಾಲೀಕರ ಸಂಘದವರು ಪ್ರಮುಖವಾಗಿ 6 ಬೇಡಿಕೆ ಇಟ್ಟಿದ್ದರು. ಗಡಿ ಭಾಗದಲ್ಲಿ ಟೋಲ್ ತೆಗೆಯಲು ಸಭೆಯಲ್ಲಿ ಮನವಿ ಮಾಡಿದರು. ಈ ಬಗ್ಗೆ ಮೂರು ದಿನಗಳ ಬಳಿಕ ವರದಿ ತರಸಿಕೊಳ್ಳುತ್ತೇನೆ. ನೋ ಎಂಟ್ರಿ ಬೋರ್ಡ್ ಬದಲಾವಣೆ ಕುರಿತು ಚರ್ಚೆ ಮಾಡುತ್ತೇನೆ. ಲಾರಿ ಮಾಲೀಕರಿಗೆ ವಿಧಿಸುವ ದಂಡ ಕಡಿತ ಮಾಡುವ ಬಗ್ಗೆ ಚರ್ಚೆ ಮಾಡುತ್ತೇನೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಇದನ್ನೂ ಓದಿ: ಲಾರಿ ಮುಷ್ಕರ; 2 ಲಕ್ಷ ಲಾರಿ ಸ್ಥಗಿತ, ಲಾರಿ ಸಂಘಟನೆಗಳ ಬೇಡಿಕೆಗಳೇನು?
ಲಾರಿ ಮಾಲೀಕರ ಮುಷ್ಕರ ಏಕೆ?
ಡೀಸೆಲ್ ದರ ಇಳಿಕೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಲಾರಿ ಮಾಲೀಕರು ಸೋಮವಾರ ಮಧ್ಯರಾತ್ರಿಯಿಂದಲೇ ಆರಂಭವಾಗಿರುವ ಲಾರಿ ಮುಷ್ಕರ ಆರಂಭಿಸಿದ್ದರು. ಈ ಸಂಬಂಧ ಲಾರಿ ಮಾಲೀಕರ ಸಂಘದ ಜೊತೆ ಸಚಿವ ರಾಮಲಿಂಗಾ ರೆಡ್ಡಿ ಮಂಗಳವಾರ ಮೊದಲನೇ ಸಭೆ ನಡೆಸಿದ್ದರು. ಆದರೆ, ಈ ಸಭೆ ಕೂಡ ವಿಫಲಾವಾಗಿತ್ತು. ನಂತರ, ಸಚಿವ ರಾಮಲಿಂಗಾ ರೆಡ್ಡಿ ಜೊತೆ ನಡೆದ ಎರಡನೇ ಸಭೆ ಫಲಕೊಟ್ಟಿದೆ.