ಬೆಳ್ಳಂಬೆಳಗ್ಗೆ ಲೋಕಾ ಶಾಕ್: ಕರ್ನಾಟಕದಾದ್ಯಂತ 7 ಅಧಿಕಾರಿಗಳ ಮನೆಗಳ ಮೇಲೆ ದಾಳಿ
ಕರ್ನಾಟಕದಾದ್ಯಂತ ಲೋಕಾಯುಕ್ತ ಅಧಿಕಾರಿಗಳು ಏಳು ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ಮಾಡಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ. ತುಮಕೂರು, ಮಂಗಳೂರು, ವಿಜಯಪುರ, ಬೆಂಗಳೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ದಾಳಿ ನಡೆದಿದೆ. ದಾಖಲೆಗಳನ್ನು ಪರಿಶೀಲನೆ ಮಾಡಿದ್ದಾರೆ.

ಬೆಂಗಳೂರು, ಮೇ 15: ಕರ್ನಾಟಕದಾದ್ಯಂತ (Karnataka) ಬೆಳ್ಳಂಬೆಳಗ್ಗೆ ಏಳು ಅಧಿಕಾರಿಗಳ ಮನೆಗಳು ಮತ್ತು ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ (Lokayukta Raids) ಮಾಡಿದೆ. ಆ ಮೂಲಕ ಭಷ್ಟ್ರ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ದಾಳಿ ಮುಂದುವರೆದಿದೆ. ಅಕ್ರಮ ಆಸ್ತಿ ಗಳಿಕೆ ದೂರುಗಳು ಬಂದ ಹಿನ್ನೆಲೆ ದಾಳಿ ಮಾಡಿರುವ ಲೋಕಾ, ಅಧಿಕಾರಿಗಳ ಮನೆ ಮತ್ತು ಕಚೇರಿಗಳಲ್ಲಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಬೆಂಗಳೂರಿನ 12 ಕಡೆ ಸೇರಿ ರಾಜ್ಯದ ಹಲವೆಡೆ ಏಕಕಾಲಕ್ಕೆ ದಾಳಿ ಮಾಡುವ ಮೂಲಕ ಶಾಕ್ ನೀಡಲಾಗಿದೆ.
ಎಲ್ಲೆಲ್ಲಿ ದಾಳಿ?
ಬೆಂಗಳೂರಿನ 12, ತುಕೂರಿನ 7, ಬೆಂಗಳೂರು ಗ್ರಾಮಾಂತರದ 8, ಯಾದಗಿರಿ 5, ಮಂಗಳೂರಿನ 4, ಮತ್ತು ವಿಜಯಪುರದ 4 ಕಡೆ ಲೋಕಾಯುಕ್ತ ದಾಳಿ ಮಾಡಿದೆ.
ಯಾರ ಮೇಲೆ ದಾಳಿ?
- ರಾಜಶೇಖರ್: ಯೋಜನಾ ನಿರ್ದೇಶಕರು ನಿರ್ಮಿತಿ ಕೇಂದ್ರ ತುಮಕೂರು.
- ಮಂಜುನಾಥ್: ಸರ್ವೆ ಸೂಪರ್ವೈಸರ್, ಮಂಗಳೂರು.
- ಶ್ರೀಮತಿ ರೇಣುಕಾ: ಡಾ.ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ಅಧಿಕಾರಿ ವಿಜಯಪುರ.
- ಮುರಳಿ ಟಿವಿ: ಹೆಚ್ಚುವರಿ ನಿರ್ದೇಶಕರು, ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶನಾಲಯ, ಬೆಂಗಳೂರು.
- ಹೆಚ್ಆರ್ ನಟರಾಜ್: ಇನ್ಸ್ಪೆಕ್ಟರ್, ಕಾನೂನು ಮಾಪನಶಾಸ್ತ್ರ ಬೆಂಗಳೂರು.
- ಅನಂತ್ ಕುಮಾರ್: SDA, ಹೊಸಕೋಟೆ ತಾಲೂಕು ಕಛೇರಿ ಬೆಂಗಳೂರು ಗ್ರಾಮಾಂತರ.
- ಉಮಾಕಾಂತ್: ಶಹಾಪುರ ತಾಲೂಕು ಕಚೇರಿ ಯಾದಗಿರಿ.
ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪ: ತಹಶೀಲ್ದಾರ್ ಮನೆ ಮೇಲೆ ದಾಳಿ
ಕಲಬುರಗಿಯ ಅಕ್ಕಮಹಾದೇವಿ ಬಡಾವಣೆಯಲ್ಲಿರುವ ಯಾದಗಿರಿ ಜಿಲ್ಲೆಯ ಶಹಾಪುರ ತಹಶೀಲ್ದಾರ್ ಉಮಾಕಾಂತ ಹಳ್ಳೆ ಮನೆಗಳ ಮೇಲೆ ಲೋಕಾಯುಕ್ತ ದಾಳಿ ಮಾಡಿದೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪ ಹಿನ್ನೆಲೆ ದಾಳಿ ಮಾಡಿ ಪರಿಶೀಲನೆ ಮಾಡಲಾಗಿದೆ. ಇತ್ತ ಯಾದಗಿರಿ ಜಿಲ್ಲೆಯ ಶಹಾಪುರ ತಹಶೀಲ್ದಾರ್ ಕಚೇರಿ ಮೇಲೂ ದಾಳಿ ಮಾಡಲಾಗಿದೆ.
ತುಮಕೂರಿನ ಒಟ್ಟು ಏಳು ಕಡೆ ದಾಳಿ
ತುಮಕೂರಿನಲ್ಲಿ ಒಟ್ಟು ಏಳು ಕಡೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದು, ನಿರ್ಮಿತಿ ಕೇಂದ್ರದ ಎಂಡಿ ರಾಜಶೇಖರ ಮತ್ತು ಅವರ ಸಹೋದರನ ಮನೆ ಮೇಲೆ ದಾಳಿ ಮಾಡಿ ದಾಖಲೆ ಪರಿಶೀಲಿಸಿದ್ದಾರೆ.
ಅಕ್ರಮ ಆಸ್ತಿ ಸಂಪಾದನೆ ಆರೋಪ
ಇನ್ನು ವಿಜಯಪುರ ನಗರದ ಸೆಂಟ್ ಜೋಸೆಫ್ ಶಾಲೆಯ ಹಿಂಭಾಗದಲ್ಲಿರುವ ಡಾ. ಬಿಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕಿ ರೇಣುಕಾ ಸಾತಾರ್ಲೆ ನಿವಾಸದ ಮೇಲೆ ದಾಳಿ ಮಾಡಲಾಗಿದೆ. ಅಕ್ರಮ ಆಸ್ತಿ ಸಂಪಾದನೆ ಆರೋಪದ ಮೇಲೆ ಎಸ್ಪಿ ಟಿ. ಮಲ್ಲೇಶ್ ಹಾಗೂ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ.
ಇದನ್ನೂ ಓದಿ: ಇ-ಕಾಮರ್ಸ್ ತಾಣಗಳಲ್ಲಿ ಪಾಕ್ ಸರಕು ಮಾರಿದರೆ ಹುಷಾರ್: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಎಚ್ಚರಿಕೆ
ಅತ್ತ ಸೊಲ್ಲಾಪುರ ನಗರದ ಕೆಹೆಚ್ಬಿ ಪ್ರದೇಶದಲ್ಲಿರುವ ನಿವಾಸದ ಮೇಲೂ ಡಿವೈಎಸ್ಪಿ ಸುರೇಶ ರೆಡ್ಡಿ ನೇತೃತ್ವದಲ್ಲಿ ದಾಳಿ ಮಾಡಲಾಗಿದ್ದು, ಮನೆಯಲ್ಲಿರುವ ದಾಖಲೆಗಳನ್ನು ಪರಿಶೀಲನೆ ಮಾಡಲಾಗಿದೆ.
ಎಸ್ಡಿಎ ಅನಂತ್ ಮನೆ ಮೇಲೆ ಲೋಕಾಯುಕ್ತ ದಾಳಿ
ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಬೋದನಹೊಸಹಳ್ಳಿಯಲ್ಲಿರುವ ಎಸ್ಡಿಎ ಅನಂತ್ ಮನೆ ಮೇಲೆ ಲೋಕಾಯುಕ್ತ ದಾಳಿ ಮಾಡಿದೆ. ದೇವನಹಳ್ಳಿ ಹಾಗೂ ಹೊಸಕೋಟೆಯಲ್ಲಿ ಭೂ ಮಂಜೂರಾತಿ ವಿಭಾಗದಲ್ಲಿ ಕೆಲಸ ಮಾಡಿದ್ದ ಅನಂತ್, ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪ ಹಿನ್ನೆಲೆ ಲೋಕಾ ದಾಳಿ ಮಾಡಿದೆ.
ಇದನ್ನೂ ಓದಿ: ಹಿಮಾಲಯ ಪರ್ವತ ಹತ್ತಿದ ಮೈಸೂರಿನ ಪೌರ ಕಾರ್ಮಿಕರ ಮಕ್ಕಳು, ಮಾವುತರು: 24 ಜನರ ತಂಡದಿಂದ ಸಾಧನೆ
ದ.ಕನ್ನಡ ಲೋಕಾಯುಕ್ತ ಎಸ್ಪಿ ಕುಮಾರಚಂದ್ರ ನೇತೃತ್ವದಲ್ಲಿ ಮಂಗಳೂರಿನ ಬಿ.ಜೈ.ನಲ್ಲಿರುವ ಸರ್ವೆ ಮೇಲ್ವಿಚಾರಕ ಮಂಜುನಾಥ್ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ದಾಳಿ ಮಾಡಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:39 am, Thu, 15 May 25



