
ಬೆಂಗಳೂರು, ಮೇ 18: ಗಲ್ಫ್ ಯುದ್ಧದ ಪರಿಣಾಮ ಇದೀಗ ರಾಜ್ಯದ (Karnataka) ಪೋಷಕರಿಗೂ (Parents) ತಟ್ಟಿದೆ. ಹೇಗೆ ಅಂದರೆ ಈ ವರ್ಷ ಖಾಸಗಿ ಶಾಲೆಗಳು ಈಗಾಗಲೇ ಶೇ.10ರಷ್ಟು ಶಾಲಾ ಶುಲ್ಕವನ್ನು ಹೆಚ್ಚಳ ಮಾಡಿವೆ. ಈ ಮಧ್ಯೆ ಇದೀಗ ಶಾಲಾ ಬಸ್ ಮತ್ತು ವ್ಯಾನ್ ದರ ಏರಿಕೆಗೆ (School van fare) ಮುಂದಾಗಿವೆ. ಹೀಗಾಗಿ ಶಾಲೆಗಳು ಆರಂಭಕ್ಕೂ ಮುನ್ನವೇ ಪೋಷಕರಿಗೆ ಡಬಲ್ ಡಬಲ್ ಶಾಕ್ ಎದುರಾಗಿದೆ.
ಪೆಟ್ರೋಲ್, ಡೀಸೆಲ್, ಸಿಎನ್ಜಿ ದರವೂ ಏರಿಕೆ ಕಂಡಿದೆ. ಇದು ವಾಹನ ಸವಾರರಿಗೆ ಮಾತ್ರವನ್ನ, ಜನ ಸಾಮಾನ್ಯರಿಗೂ ಸಂಕಷ್ಟ ತಂದಿದೆ. ಇಂಧನ ದರವೂ ಏರಿಕೆ ಆಗಿದೆ. ಇದೇ ಕಾರಣ ನೀಡಿ ಖಾಸಗಿ ಶಾಲಾ ವಾಹನ ಮಾಲೀಕರು ಶೇ.10ರಿಂದ 15ರಷ್ಟು ದರ ಏರಿಕೆಗೆ ಮುಂದಾಗಿದ್ದಾರೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ್ಯಂತ ಶಾಲೆಗಳು ಪುನರಾರಂಭಗೊಳ್ಳುತ್ತಿರುವ ಈ ಹಂತದಲ್ಲೇ ದರ ಹೆಚ್ಚಳದ ನಿರ್ಧಾರ ಮಾಡಿದ್ದಾರೆ.
ಇದನ್ನೂ ಓದಿ: ಮೇ 20ರಂದು ಸಾರಿಗೆ ನೌಕರರ ಮುಷ್ಕರ: ಸಿಬ್ಬಂದಿಗೆ ಖಡಕ್ ಎಚ್ಚರಿಕೆ ಕೊಟ್ಟ KSRTC
ಇನ್ನು ಕರ್ನಾಟಕದಲ್ಲಿ ಸುಮಾರು 20 ಸಾವಿರ ಖಾಸಗಿ ಶಾಲಾ ಬಸ್, ವ್ಯಾನ್ಗಳು ಕಾರ್ಯನಿರ್ವಹಿಸುತ್ತಿವೆ. ಗಲ್ಫ್ ಬಿಕ್ಕಟ್ಟಿನಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರ ಏರಿಕೆಯಾಗಿದ್ದು, ಅದರ ನೇರ ಪರಿಣಾಮ ದೇಶೀಯ ಪೆಟ್ರೋಲ್-ಡೀಸೆಲ್ ದರದ ಮೇಲೆ ಬಿದ್ದಿದೆ. ಇದನ್ನೇ ಮುಂದಿಟ್ಟುಕೊಂಡು ವಾಹನ ಮಾಲೀಕರು ದರ ಏರಿಕೆಗೆ ಮುಂದಾಗಿದ್ದಾರೆ. ಇದರಿಂದಾಗಿ ಪೋಷಕರು ಮಾತ್ರ ಕಂಗಾಲಾಗಿದ್ದಾರೆ.
ಈ ಬಗ್ಗೆ ಮಲ್ಲೇಶ್ವರಂ ಶಾಲೆಯ ಮುಖ್ಯ ಶಿಕ್ಷಕ ಚಂದ್ರಮೌಳಿ ಪ್ರತಿಕ್ರಿಯಿಸಿದ್ದು, ಯುದ್ಧದ ಎಫೆಕ್ಟ್ ಪೋಷಕರಿಗೆ ಹೊರೆಯಾಗಿದೆ. ನಾವು ಈ ವರ್ಷ ಹಿಮಾಂಸು ಶಾಲೆಯ ಶುಲ್ಕವನ್ನ 7% ಮಾತ್ರ ಜಾಸಿ ಮಾಡಿದ್ದೇವೆ. ಶಾಲೆಯ ವ್ಯಾನ್, ಆಟೋ, ಮಿನಿ ಟಿಟಿ ಅಸೋಸಿಯೇಷನ್ ಜೊತೆ ಚರ್ಚೆ ಮಾಡಿದ್ದೇವೆ. ಗರಿಷ್ಠ 10% ಕ್ಕಿಂತ ಜಾಸ್ತಿ ವ್ಯಾನ್ ಶುಲ್ಕ ಏರಿಕೆ ಮಾಡಬೇಡಿ. ಪೋಷಕರಿಗೆ ಇದು ತುಂಬಾ ಹೊರೆಯಾಗುತ್ತದೆ. ಶಾಲೆಯ ದಾಖಲಾತಿ ಕಡಿಮೆ ಕೂಡ ಆಗುತ್ತದೆ. ಹೀಗಾಗಿ ಸಮಸ್ಯೆಗಳಿಗೆ ಅನುಗುಣವಾಗಿ 7-10% ಶುಲ್ಕ ಏರಿಕೆಗೆ ಸಲಹೆ ನೀಡಿದ್ದೇವೆ ಎಂದು ತಿಳಿಸಿದರು.
ಇನ್ನು ಈ ಬಗ್ಗೆ ಪೋಷಕರೊಬ್ಬರು ಮಾತನಾಡಿದ್ದು, ಈ ವರ್ಷ ಶಾಲಾ ಶುಲ್ಕದ ಜೊತೆ ಶಾಲಾ ವಾಹನಗಳ ಬೆಲೆ ಏರಿಕೆ ಶಾಕ್ ನೀಡಿದೆ. ಇದು ಪೋಷಕರಿಗೆ ದೊಡ್ಡ ಹೊರೆಯಾಗಿದೆ. ದುಡ್ಡು ಇರುವವರು ಕಟ್ಟುತ್ತಾರೆ. ಮದ್ಯಮ ವರ್ಗದ ಪೋಷಕರಿಗೆ ಇದು ತುಂಬಾ ಹೊರೆ ಆಗಲಿದೆ. ಪ್ರತಿವರ್ಷ ಶುಲ್ಕ ಏರಿಕೆ ತುಂಬಾ ಕಷ್ಟ. ಬಸ್, ಆಟೋ ದರ ಏರಿಕೆಯಾಗುತ್ತಿದೆ. ಆದರೆ ನಮ್ಮ ಸಂಬಳ ಮಾತ್ರ ಅಷ್ಟೇ ಇದೆ. ನಾಳೆ ಯಾವುದು ಏರಿಕೆ ಆಗುತ್ತದೆ ಎಂಬ ಯೋಚನೆಯಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ಪೆಟ್ರೋಲ್-ಡೀಸೆಲ್ ದರ ಹೆಚ್ಚಳ ಬೆನ್ನಲ್ಲೇ ಬೆಂಗಳೂರಿಗರಿಗೆ ಮತ್ತೊಂದು ದರ ಏರಿಕೆ ಬಿಸಿ!
ಯುದ್ಧದಿಂದ ನಮ್ಮ ಕೆಲಸದ ಭದ್ರತೆಯೂ ಇಲ್ಲ. ಹೀಗಾಗಿ ಯಾವ ಶಾಲೆಗೆ ಸೇರಿಸಬೇಕು ಅಂತ ಚಿಂತೆಯಾಗಿದೆ. ಲಕ್ಷ ಸಂಬಳ ಇದ್ದರೂ ಸಾಕಾಗುತ್ತಿಲ್ಲ. ಶಾಲಾ ವಾಹನ ದರ ಏರಿಕೆಯಿಂದ ಏನು ಮಾಡಬೇಕು ಅಂತ ಗೊತ್ತಿಲ್ಲ. ಪೋಷಕರಿಗೆ ತುಂಬಾ ಸಮಸ್ಯೆಯಾಗಿದ್ದು, ಸರ್ಕಾರ ಕೊಂಚ ಇದಕ್ಕೆ ಕಡಿವಾಣ ಹಾಕಬೇಕು ಎಂದು ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.