ಇನ್ನೂ ಮುಗಿದಿಲ್ಲ ಖಾತೆ ಕ್ಯಾತೆ: ಹೈಕಮಾಂಡ್​ನಿಂದ ಸ್ಪಷ್ಟತೆ ಸಿಗುವ ವರೆಗೆ ಅಧಿಕಾರ ಸ್ವೀಕರಿಸಲ್ಲವೆಂದ ಕೃಷ್ಣಭೈರೇಗೌಡ!

ಸಚಿವ ಕೃಷ್ಣಭೈರೇಗೌಡರು ಬೆಂಗಳೂರು ನಗರಾಭಿವೃದ್ಧಿ ಖಾತೆ ಸ್ವೀಕರಿಸಲು ನಿರಾಕರಿಸಿದ್ದಾರೆ. ಬಿಡಿಎ ಮತ್ತು ಬಿಎಂಆರ್‌ಡಿಎ ಇಲಾಖೆಗಳನ್ನು ತಮ್ಮ ಖಾತೆಗೆ ಸೇರಿಸಬೇಕೆಂದು ಅವರು ಹೈಕಮಾಂಡ್‌ ಜತೆ ಪಟ್ಟು ಹಿಡಿದಿದ್ದಾರೆ. ಈ ಎರಡು ಪ್ರಾಧಿಕಾರಗಳಿಲ್ಲದೆ ಖಾತೆಯು ಪರಿಣಾಮಕಾರಿ ಆಗುವುದಿಲ್ಲ ಎಂಬುದು ಅವರ ವಾದವಾಗಿದೆ. ಹೈಕಮಾಂಡ್‌ನ ಸ್ಪಷ್ಟ ಸಂದೇಶ ಬರುವವರೆಗೂ ಅಧಿಕಾರ ವಹಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ಇನ್ನೂ ಮುಗಿದಿಲ್ಲ ಖಾತೆ ಕ್ಯಾತೆ: ಹೈಕಮಾಂಡ್​ನಿಂದ ಸ್ಪಷ್ಟತೆ ಸಿಗುವ ವರೆಗೆ ಅಧಿಕಾರ ಸ್ವೀಕರಿಸಲ್ಲವೆಂದ ಕೃಷ್ಣಭೈರೇಗೌಡ!
ಬೆಂಗಳೂರು ನಗರಾಭಿವೃದ್ಧಿ ಖಾತೆಯಲ್ಲಿ ಬಿಡಿಎ, ಬಿಎಂಆರ್‌ಡಿಎ ಸೇರಿಸಲು ಕೃಷ್ಣಭೈರೇಗೌಡ ಪಟ್ಟು
Image Credit source: tv9
Edited By:

Updated on: Jun 08, 2026 | 12:06 PM

ಬೆಂಗಳೂರು, ಜೂನ್ 8: ಸಿಎಂ ಡಿಕೆ ಶಿವಕುಮಾರ್ (DK Shivakumar) ನೇತೃತ್ವದ ನೂತನ ಸಚಿವ ಸಂಪುಟ ರಚನೆಯಾಗಿ ಮೂರ್ನಾಲ್ಕು ದಿನಗಳೇ ಕಳೆದರೂ ಖಾತೆ ಹಂಚಿಕೆ ಕುರಿತಂತೆ ಗೊಂದಲಗಳು ಮುಂದುವರಿದಿವೆ. ಬೆಂಗಳೂರು ನಗರಾಭಿವೃದ್ಧಿ ಖಾತೆ ಪಡೆದಿರುವ ಸಚಿವ ಕೃಷ್ಣಭೈರೇಗೌಡರು (Krishna Byre Gowda), ಖಾತೆಯಲ್ಲಿ ಬಿಡಿಎ (ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ) ಮತ್ತು ಬಿಎಂಆರ್‌ಡಿಎ (ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ) ಇಲಾಖೆಗಳನ್ನು ಸೇರಿಸುವಂತೆ ಹೈಕಮಾಂಡ್ ಜತೆ ಪಟ್ಟು ಹಿಡಿದಿದ್ದಾರೆ. ಈ ಬೇಡಿಕೆ ಈಡೇರುವವರೆಗೂ ಖಾತೆಯ ಜವಾಬ್ದಾರಿ ವಹಿಸಿಕೊಳ್ಳುವುದಿಲ್ಲ ಎಂದು ಅವರು ತೀರ್ಮಾನಿಸಿದ್ದಾರೆ.

ಮುಖ್ಯಾಂಶಗಳು

  • ಬೆಂಗಳೂರು ನಗರಾಭಿವೃದ್ಧಿ ಖಾತೆಯಲ್ಲಿ ಬಿಡಿಎ, ಬಿಎಂಆರ್‌ಡಿಎ ಸೇರಿಸಲು ಕೃಷ್ಣಭೈರೇಗೌಡ ಪಟ್ಟು.
  • ಬೇಡಿಕೆ ಈಡೇರುವವರೆಗೂ ಅಧಿಕಾರ ಸ್ವೀಕರಿಸಲ್ಲವೆಂದು ನಿರ್ಧಾರ.
  • ಸುರ್ಜೇವಾಲ ಸಮ್ಮುಖದಲ್ಲೇ ತಾರತಮ್ಯದ ಪ್ರಶ್ನೆ ಎತ್ತಿದ ಸಚಿವ.

ಶನಿವಾರ ಖಾಸಗಿ ಹೋಟೆಲ್‌ನಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಕೃಷ್ಣಭೈರೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ನಗರಾಭಿವೃದ್ಧಿ ಖಾತೆಯು ಬಿಡಿಎ ಮತ್ತು ಬಿಎಂಆರ್‌ಡಿಎ ಇಲ್ಲದೆ ಪರಿಪೂರ್ಣವಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಬೆಂಗಳೂರು ನಗರಾಭಿವೃದ್ಧಿ ಖಾತೆಯು ಪ್ರಮುಖವಾಗಿ ಈ ಎರಡು ಪ್ರಾಧಿಕಾರಗಳಿಂದಲೇ ಪ್ರಬಲವಾಗಿದೆ. ಈ ಎರಡನ್ನೂ ಹೊರತುಪಡಿಸಿದರೆ, ಖಾತೆಯು ಕೇವಲ ಕಾರ್ಪೊರೇಷನ್ ವಿಷಯಗಳಿಗೆ ಸೀಮಿತವಾಗುತ್ತದೆ ಎಂದು ಅವರು ಹೇಳಿದ್ದಾರೆ.

ಸಿದ್ದರಾಮಯ್ಯ ಸಂಪುಟದಲ್ಲಿ ಕಂದಾಯ ಇಲಾಖೆಯನ್ನು ಸಮರ್ಥವಾಗಿ ನಿಭಾಯಿಸಿದ್ದೆ. ಆದರೂ ಈ ರೀತಿಯ ಅಪೂರ್ಣ ಖಾತೆ ನೀಡುವ ಮೂಲಕ ತಾರತಮ್ಯ ಮಾಡುತ್ತಿರುವುದು ಏಕೆ ಎಂದು ಅವರು ಸುರ್ಜೇವಾಲ ಬಳಿ ಪ್ರಶ್ನಿಸಿದ್ದಾರೆ ಎಂಬುದು ತಿಳಿದುಬಂದಿದೆ. ಹಿಂದೆ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದವರಿಗೆ ಬಿಡಿಎ ಮತ್ತು ಬಿಎಂಆರ್‌ಡಿಎ ಎರಡನ್ನೂ ಜವಾಬ್ದಾರಿಯನ್ನಾಗಿ ನೀಡಲಾಗುತ್ತಿತ್ತು. ಈಗ ಈ ಪದ್ಧತಿಯನ್ನು ಏಕೆ ಬದಲಾಯಿಸಲಾಗಿದೆ ಎಂದು ಅವರು ಪ್ರಶ್ನಿಸಿದ್ದಾರೆ. ಅಲ್ಲದೆ, ತನಗೂ ಈ ಎರಡೂ ಪ್ರಾಧಿಕಾರಗಳ ಜವಾಬ್ದಾರಿಯನ್ನು ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಸ್ಪಷ್ಟತೆ ಸಿಗುವ ವರೆಗೂ ಅಧಿಕಾರ ವಹಿಸಲ್ಲ: ಕೃಷ್ಣಭೈರೇಗೌಡ

ಈ ವಿಷಯದ ಬಗ್ಗೆ ಹೈಕಮಾಂಡ್, ವಿಶೇಷವಾಗಿ ಸುರ್ಜೇವಾಲ ಅಥವಾ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಂದ ಸ್ಪಷ್ಟ ಸಂದೇಶ ಬರುವವರೆಗೂ ಖಾತೆಯ ಜವಾಬ್ದಾರಿಯನ್ನು ವಹಿಸಿಕೊಳ್ಳದಿರಲು ಕೃಷ್ಣಭೈರೇಗೌಡ ನಿರ್ಧರಿಸಿದ್ದಾರೆ. ಈ ಹಿಂದೆ ಇದೇ ಬೆಂಗಳೂರು ನಗರಾಭಿವೃದ್ಧಿ ಖಾತೆ ಬೇಕು ಎಂಬುದಾಗಿ ರಾಮಲಿಂಗಾ ರೆಡ್ಡಿ ಸಹ ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ, ಅಸಲಿ ವಿಷಯವೆಂದರೆ ಕೃಷ್ಣಭೈರೇಗೌಡರು ಸಹ ಈ ಖಾತೆಯ ಬಗ್ಗೆ ಪೂರ್ಣ ಪ್ರಮಾಣದ ಸಮಾಧಾನ ಹೊಂದಿಲ್ಲ ಎಂಬುದು ಇದೀಗ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ಜೋರಾಯ್ತು ಸಚಿವ ಸ್ಥಾನಕ್ಕಾಗಿ ಸರ್ಕಸ್: 20 ಸ್ಥಾನಗಳಿಗಾಗಿ 60ಕ್ಕೂ ಹೆಚ್ಚು ಶಾಸಕರಿಂದ ಮಹಾ ಲಾಬಿ

ಹೈಕಮಾಂಡ್ ಈ ಖಾತೆ ಖ್ಯಾತೆಯನ್ನು ಹೇಗೆ ಬಗೆಹರಿಸುತ್ತದೆ ಮತ್ತು ಕೃಷ್ಣಭೈರೇಗೌಡರ ಬೇಡಿಕೆಯನ್ನು ಈಡೇರಿಸುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ. ಸದ್ಯಕ್ಕೆ, ಸಚಿವ ಸಂಪುಟದಲ್ಲಿ ಖಾತೆ ಹಂಚಿಕೆ ವಿವಾದ ತಣ್ಣಗಾಗುವ ಲಕ್ಷಣಗಳು ಕಾಣುತ್ತಿಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Prasanna Gaonkar

ಹುಟ್ಟೂರು ಯಲ್ಲಾಪುರ, ಬೆಳೆದೂರು ದಾಂಡೇಲಿಯ ದಟ್ಟ ಕಾಡುಗಳ ನಡುವೆ. ರವಿ ಬೆಳಗೆರೆ ಎಂಬ ಅಕ್ಷರ ರಾಕ್ಷಸನ ಕಟ್ಟಾಭಿಮಾನದಿಂದ ಹಾಳಾಗಿ, ಸೈನ್ಸ್ ನಲ್ಲಿ ಡಿಗ್ರಿ ಪಡೆದು ಜರ್ನಲಿಸಂಗೆ ಹಿಂಬದಿ ಕಿಟಕಿಯಿಂದ ನುಸುಳಿದ್ದು 2010 ರ ಅಕ್ಟೋಬರ್ ನಲ್ಲಿ. ಉಡುಪಿಯಲ್ಲಿ ಮೊದಲ ಪತ್ರಿಕೋದ್ಯಮ ಕರ್ತವ್ಯ ಪ್ರಾರಂಭಿಸಿದ್ದು 2010 ರಲ್ಲಿಯೇ. ಜನಶ್ರೀ ನ್ಯೂಸ್ ಮೊದಲು ಅನ್ನ ನೀಡಿದ ಸಂಸ್ಥೆ. ಉಡುಪಿ ಜಿಲ್ಲಾ ವರದಿಗಾರನಾಗಿ ಮೂರು ವರ್ಷ ಕೆಲಸ ಮಾಡಿ 2013 ರ ಅಂತ್ಯಕ್ಕೆ ಸಮಯ ನ್ಯೂಸ್ ಮೂಲಕ ಬೆಂಗಳೂರಿಗೆ ಎಂಟ್ರಿ. ಬಿಗ್ ೩, ಬೆಂಗಳೂರ್ ಲೈವ್, ಸಮಯ ಸಕಾಲ ಕಾರ್ಯಕ್ರಮದಲ್ಲಿ ವರದಿಗಾರಿಕೆ ಮಾಡಿದ ಖುಷಿ. 2014 ರ ಡಿಸೆಂಬರ್ ನಿಂದ ಟಿವಿ9 ನಲ್ಲಿ ಕೆಲಸ ಪ್ರಾರಂಭ. ಟಿವಿ9 ನಲ್ಲಿ ಮೊದಲು ಮೆಟ್ರೋ ರಿಪೋರ್ಟಿಂಗ್ ಮೂಲಕ ಬೆಂಗಳೂರು ಸುತ್ತುವ ಅರಿಯುವ ರಾಜಧಾನಿಯ ನಾಡಿಮಿಡಿತ ಹುಡುಕುವ ಅವಕಾಶ. ಮೆಟ್ರೋ ಬ್ಯೂರೋ ದಲ್ಲಿ ಶೈಕ್ಷಣಿಕ ಹಾಗೂ ಬಿಬಿಎಂಪಿ ವರದಿಗಾರಿಕೆ. ಚಪ್ಪಲಿಯಿಂದ ಹಿಡಿದು ಚಾದರ್ ತನಕ ಸ್ಟೋರಿ ಮಾಡಿದ ಅನುಭವ. ಮೆಟ್ರೋ ಟೀಂ ನಿಂದ ರಾಜಕೀಯ ವರದಿಗಾರಿಕೆಗೆ ಶಿಫ್ಟ್ ಆದ ತಕ್ಷಣ- ಮುಂದುವರಿದಿದೆ ನಿರಂತರ ಪಯಣ. ಕಥೆ, ಕಾದಂಬರಿ, ಕವನ, ಸಿನಿಮಾ, ಸುತ್ತಾಟ, ಆಗಾಗ ಕಿತ್ತಾಟ, ಸ್ನೇಹಿತರೊಂದಿಗೆ ಒಡನಾಟ ಇವೆಲ್ಲ ಮಾಮೂಲಿ ದಿನಚರಿ. ಇವತ್ತಿಗೂ ಬರವಣಿಗೆಯೊಂದೇ ಖುಷಿ ಕೊಡುವ ಖರ್ಜೂರ. ಸ್ಟಾಕ್ ಮಾರ್ಕೆಟ್ ನಲ್ಲಿ 2019 ರಿಂದ ಆ್ಯಕ್ಟಿವ್.

Read More
Follow Us