ಸುಡು ಬಿಸಿಲಿಗೆ ಬೆಂದ ಕರ್ನಾಟಕ: ಬೆಂಗಳೂರಿನಲ್ಲಿ ದಾಖಲೆ ಬರೆದ ತಾಪಮಾನ

ರಾಜ್ಯಾದ್ಯಂತ ಉರಿಯುತ್ತಿರುವ ಬೇಸಿಗೆಯ ಬಿಸಿಲು ಜನಜೀವನವನ್ನು ಕಂಗೆಡಿಸಿದ್ದು, ಹಲವು ಜಿಲ್ಲೆಗಳಲ್ಲಿ ತಾಪಮಾನ ಭಾರೀ ಏರಿಕೆಯಾಗುತ್ತಿದೆ. ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಉಷ್ಣತೆಯ ತೀವ್ರತೆ ಹೆಚ್ಚಾಗಿದೆ. ಇನ್ನು ವಿಶೇಷವಾಗಿ ಕೂಲ್ ಸಿಟಿ ಅಂತಾನೇ ಕರೆಸಿಕೊಳ್ಳುವ ರಾಜಧಾನಿ ಬೆಂಗಳೂರು ಸದ್ಯ ಹಾಟ್ ಸಿಟಿಯಾಗಿ ಬದಲಾಗಿದ್ದು, ಈ ಬಾರಿಯ ಬಿಸಿಲು ಜನರ ನೆತ್ತಿ ಸುಟ್ಟಿದೆ.

ಸುಡು ಬಿಸಿಲಿಗೆ ಬೆಂದ ಕರ್ನಾಟಕ: ಬೆಂಗಳೂರಿನಲ್ಲಿ ದಾಖಲೆ ಬರೆದ ತಾಪಮಾನ
ಪ್ರಾತಿನಿಧಿಕ ಚಿತ್ರ
Edited By:

Updated on: Apr 14, 2026 | 9:37 PM

ಬೆಂಗಳೂರು, (ಏಪ್ರಿಲ್ 14): ಕರ್ನಾಟಕದಲ್ಲಿ (Karnataka) ಈ ಬಾರಿಯ ಬೇಸಿಗೆ ಬಿಸಿಲು ಜನರ ನೆತ್ತಿ ಸುಡುತ್ತಿದೆ. ರಾಜ್ಯದ 5ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ದಾಟಿದೆ. ಕಲಬುರಗಿ ಜಿಲ್ಲೆಯಲ್ಲಿ ಅತ್ಯಧಿಕವಾಗಿ 42 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಇದು ಈ ಬೇಸಿಗೆಯ ಹಂಗಾಮಿನಲ್ಲಿ ಗರಿಷ್ಠವಾಗಿದೆ. ಗದಗ, ರಾಯಚೂರು, ವಿಜಯಪುರ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿಯೂ 40 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚು ತಾಪಮಾನ ದಾಖಲಾಗಿದ್ದು, ಇಲ್ಲಿನ ಜನರನ್ನು ಹೈರಾಣಿಗಿಸಿದೆ. ಇನ್ನು ಈ ಬಾರಿಯ ಬಿಸಿಲು ಸಿಲಿಕಾನ್ ಸಿಟಿ ಬೆಂಗಳೂರು (bengaluru temperature)  ಜನರನ್ನು ಸಹ ಬಿಟ್ಟಿಲ್ಲ. ಹೌದು…ರಾಜಧಾನಿ ಬೆಂಗಳೂರಿನಲ್ಲಿಂದು ಗರಿಷ್ಟ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಕಳೆದ ವರ್ಷದ ಬೇಸಿಗೆ ಬಿಸಿಲ ದಾಖಲೆಯನ್ನು ಮುರಿದಿದೆ.

ಬೆಂಗಳೂರಿನಲ್ಲಿ ದಾಖಲೆ ಬರೆದ ಬಿಸಿಲು

ಏಪ್ರಿಲ್ 13ರಂದು ಬೆಂಗಳೂರು ನಗರದಲ್ಲಿ 35.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಕಳೆದ ವರ್ಷದ ಮಾರ್ಚ್ ತಿಂಗಳ 35.4 ಡಿಗ್ರಿ ದಾಖಲೆಯನ್ನು ಮೀರಿಸಿತ್ತು. ಆದ್ರೆ, ಇಂದು (ಏಪ್ರಿಲ್ 14) ಬೆಂಗಳೂರಿನಲ್ಲಿ 36.8 ಡಿಗ್ರಿ ತಾಪಮಾನ ದಾಖಲಾಗಿದ್ದು, ಇದು ದಾಖಲೆಯಾಗಿದೆ. ಸಾಮಾನ್ಯಕ್ಕಿಂತ 2ರಿಂದ 3 ಡಿಗ್ರಿ ಹೆಚ್ಚು ತಾಪಮಾನ ದಾಖಲಾಗುತ್ತಿರುವುದರಿಂದ ಜನರಿಗೆ ಹೆಚ್ಚು ಬಿಸಿಯ ಅನುಭವವಾಗುತ್ತಿದ್ದು, ರಾತ್ರಿ ಬಿಸಿ ಗಾಳಿಯಿಂದ ಜನ ಕಂಗಾಲಾಗಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ಮಾಲಿನ್ಯದ ಭೀತಿ, ಕರಾವಳಿಯಲ್ಲಿ ಶುದ್ಧ ಗಾಳಿ! ಅಸ್ತಮಾ ರೋಗಿಗಳಿಗೆ ಎಚ್ಚರ

ಬೆಂಗಳೂರು ಜನರ ಆರೋಗ್ಯ ಕೆಡಿಸಿದ ಬಿಸಿಲು

ಈ ವರ್ಷ ರಾಜಧಾನಿಯಲ್ಲಿ ಬಿಸಲು ಎಫೆಕ್ಟ್ ಜನರ ಆರೋಗ್ಯದ ಮೇಲೆ ಬೀಳುತ್ತಿದೆ. ತಾಪಮಾನ ಹೆಚ್ಚಳವಾಗುತ್ತಿರುವವುದರಿಂದ ನಿತ್ರಾಣ, ನಿರ್ಜಲೀಕರಣ , ಚರ್ಮದಲ್ಲಿ ಅಲರ್ಜಿ ಹಾಗೂ ಅಜೀರ್ಣ ಸೇರಿದಂತೆ ಸಾಕಷ್ಟು ಆರೋಗ್ಯ ಸಮಸ್ಯೆಗಳು ಕಂಡುಬರುತ್ತಿವೆ. ಇನ್ನು ಗರ್ಭಿಣಿಯರು ಮಕ್ಕಳು ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಸುವಂತೆ ವೈದ್ಯರು ಮನವಿ ಮಾಡಿದ್ದಾರೆ. ಬಿಸಿಲಿನಲ್ಲಿ ಹೆಚ್ಚಾಗಿ ಓಡಾಟ ಮಾಡದ್ದಂತೆ ಹಾಗೂ ಹೊರಗಡೆ ಆಹಾರ ತಿಂಡಿ ಪದಾರ್ಥ ಸೇವನೆ ಮಾಡದ್ದಂತೆ ಸಲಹೆ ನೀಡಿದ್ದಾರೆ.

ಕಲಬುರಗಿಯಲ್ಲಿ ಏ.17ರವರೆಗೂ ಭಾರಿ ಬಿಸಿ ಗಾಳಿ

ಈಗಾಗಲೇ ಉರಿ ಬಿಸಿಲಿನಿಂದಾಗಿ ತತ್ತರಿಸಿರುವ ಕಲಬುರಗಿ ಜಿಲ್ಲೆಗೆ ಏ.17ರವರೆಗೆ ಭಾರಿ ಬಿಸಿ ಗಾಳಿಯ ಅಲೆಗಳ ಎಲ್ಲೋ ಅಲರ್ಟ್‌ ನೀಡಲಾಗಿದೆ. ಹೀಟ್‌ವೇವ್‌ನಿಂದ ಆರೋಗ್ಯ ತೊಂದರೆ ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಮಧ್ಯಾಹ್ನ 12ರಿಂದ ಸಂಜೆ 5ರವರೆಗೂ ಹೊರಗೆ ಅಡ್ಡಾಡದಂತೆ ಸಾರ್ವಜನಿಕರಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.

ಇನ್ನೂ ಉತ್ತರ ಒಳನಾಡಿನ ಬೀದರ್, ರಾಯಚೂರು, ಗದಗ, ಕೊಪ್ಪಳ, ಬಳ್ಳಾರಿ, ವಿಜಯಪುರ, ಕಲಬುರಗಿ, ಜಿಲ್ಲೆಗಳಲ್ಲಿ 42 ರಿಂದ 44 ಡಿಗ್ರಿಗೆ ಏರಿಕೆಯಾಗುವ ಸಾಧ್ಯತೆ ಇದೆ. ಬೆಳಗಾವಿ, ಧಾರವಾಡ, ಹಾವೇರಿ ಜಿಲ್ಲೆಗಳಲ್ಲೂ 2 ಡಿಗ್ರಿ ಏರಿಕೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ 2 ರಿಂದ 3 ಡಿಗ್ರಿ ಏರಿಕೆಯಾಗುವ ಸಾಧ್ಯತೆ ಇದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Vinay Kashappanavar
Follow Us