AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದ 9 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಿಗಿಲ್ಲ ಕಾಯಂ ನಿರ್ದೇಶಕರು: ವೈದ್ಯಕೀಯ ಸೇವೆಗಳಿಗೆ ತೊಡಕು

ರಾಜ್ಯದ 11 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ಪೈಕಿ 9ರಲ್ಲಿ ಕಾಯಂ ನಿರ್ದೇಶಕರು ಇಲ್ಲದಿರುವ ಬಗ್ಗೆ ವರದಿಯಾಗಿದ್ದು, ಇದರಿಂದ ಆಸ್ಪತ್ರೆಗಳ ಕಾರ್ಯಾಚಣೆಗೆ ತೊಡಕು ಉಂಟಾಗುತ್ತಿದೆ. ಮಹತ್ವದ ನಿರ್ಧಾರ, ಬಜೆಟ್ ಹಂಚಿಕೆ ನಿರ್ಧಾರಗಳು ವಿಳಂಬವಾಗುತ್ತಿವೆ. ಅಂತಿಮವಾಗಿ ಇದು ರೋಗಿಗಳ ಮೇಲೆ ಪರಿಣಾಮ ಬೀರುವುದಂತೂ ನಿಜ. ಕಾಯಂ ನಿರ್ದೇಶಕರ ನೇಮಕಾತಿ ವಿಳಂಬಕ್ಕೆ ಕಾರಣಗಳೇನು? ಯಾವೆಲ್ಲ ಆಸ್ಪತ್ರೆಗಳಿಗೆ ಕಾಯಂ ನಿರ್ದೇಶಕರಿಲ್ಲ ಎಂಬ ಮಾಹಿತಿ ಇಲ್ಲಿದೆ.

ಕರ್ನಾಟಕದ 9 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಿಗಿಲ್ಲ ಕಾಯಂ ನಿರ್ದೇಶಕರು: ವೈದ್ಯಕೀಯ ಸೇವೆಗಳಿಗೆ ತೊಡಕು
ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆImage Credit source: dimhans.karnataka.gov.in
Ganapathi Sharma
|

Updated on: May 29, 2024 | 8:00 AM

Share

ಬೆಂಗಳೂರು, ಮೇ 29: ಕರ್ನಾಟಕದಲ್ಲಿರುವ 11 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ (Super-Speciality Hospitals) ಪೈಕಿ 9ರಲ್ಲಿ ಕಾಯಂ ನಿರ್ದೇಶಕರೇ ಇಲ್ಲ. ಇದರಿಂದಾಗಿ ಈ ಆಸ್ಪತ್ರೆಗಳು ನಾಯಕತ್ವದ ನಿರ್ವಾತ ಎದುರಿಸುತ್ತಿದ್ದು, ಕಾರ್ಯಾಚರಣೆಗಳಿಗೆ ತೊಂದರೆಯಾಗಿದೆ ಎಂದು ವರದಿಯಾಗಿದೆ. ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುವುದು ಮತ್ತು ಬಜೆಟ್ ಹಂಚಿಕೆಯಂತಹ ಮುಖ್ಯ ನಿರ್ಧಾರ ಕೈಗೊಳ್ಳುವಲ್ಲಿನ ವಿಳಂಬಕ್ಕೆ ಇದು ಕಾರಣವಾಗುತ್ತಿದೆ. ಬೆಂಗಳೂರು ಮೂಲದ ಕಿದ್ವಾಯಿ ಮೆಮೋರಿಯಲ್ ಇನ್‌ಸ್ಟಿಟ್ಯೂಟ್ ಆಫ್ ಆಂಕೊಲಾಜಿ (KMIO) ಮತ್ತು ಇನ್‌ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೋಎಂಟರಾಲಜಿ ಸೈನ್ಸಸ್ ಮತ್ತು ಆರ್ಗನ್ ಟ್ರಾನ್ಸ್‌ಪ್ಲಾಂಟ್ (IGOT) ಹೊರತುಪಡಿಸಿ, ಇತರ ಯಾವುದೇ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಿಗೆ ಕಾಯಂ ನಿರ್ದೇಶಕರಿಲ್ಲ. ಇವುಗಳಲ್ಲಿ ಜಯದೇವ ಆಸ್ಪತ್ರೆ (SJIC), ಇನ್‌ಸ್ಟಿಟ್ಯೂಟ್ ಆಫ್ ನೆಫ್ರೋ ಯುರಾಲಜಿ (INU) ಮತ್ತು ಇಂದಿರಾ ಗಾಂಧಿ ಇನ್ಸ್​ಟಿಟ್ಯೂಟ್ ಆಫ್ ಚೈಲ್ಡ್ ಹೆಲ್ತ್ (IGICH) ಕೂಡ ಸೇರಿವೆ.

ರಾಜ್ಯ ವೈದ್ಯಕೀಯ ಶಿಕ್ಷಣ ಇಲಾಖೆ ಅಧೀನದಲ್ಲಿರುವ 22 ವೈದ್ಯಕೀಯ ಕಾಲೇಜುಗಳಲ್ಲಿ ಇದೇ ಸ್ಥಿತಿ ಇದ್ದು, 10 ಕಾಲೇಜುಗಳಿಗೆ ಕಾಯಂ ನಿರ್ದೇಶಕರಿಲ್ಲ.

ಕಾಯಂ ನಿರ್ದೇಶಕರ ನೇಮಕಾತಿಯಲ್ಲಿನ ವಿಳಂಬವು ಆಸ್ಪತ್ರೆಯ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿದೆ. ಇದು ಬಹುಶಃ ವಾರ್ಷಿಕ ಬಜೆಟ್ ಹಂಚಿಕೆಗಳು ಮತ್ತು ಬಾಕಿ ಉಳಿದಿರುವ ಕೆಲಸಗಳ ಯೋಜನೆಗಳ ಮೇಲೆ ಪರಿಣಾಮ ಬೀರಬಹುದು ಎಂದು ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆ ವರದಿ ಮಾಡಿದೆ.

ತಾತ್ಕಾಲಿಕ ಮುಖ್ಯಸ್ಥರು ಅಥವಾ ಪ್ರಭಾರ ನಿರ್ದೇಶಕರು ಆಡಳಿತವನ್ನು ನಿರ್ವಹಿಸಬಹುದಷ್ಟೇ ವಿನಃ ನಿರ್ದೇಶನಗಳನ್ನು ನೀಡಲು ಸಾಧ್ಯವಿಲ್ಲ ಎಂದು ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಹ್ಸಿನ್ ಹೇಳಿರುವುದನ್ನೂ ವರದಿ ಉಲ್ಲೇಖಿಸಿದೆ.

ಕಾಯಂ ನಿರ್ದೇಶಕರನ್ನು ನೇಮಿಸುವುದು ರಾಜಕೀಯ ನಿರ್ಧಾರವಾಗಿರಬಹುದು. ಆದರೆ ಕೆಲವು ಸಂಸ್ಥೆಗಳಲ್ಲಿ ನೇಮಕಾತಿ ವಿಳಂಬಕ್ಕೆ ಕಳೆದ ವರ್ಷ ಹೊರಡಿಸಿದ ಹೊಸ ಬೈಲಾಗಳನ್ನು ಅಳವಡಿಸಿಕೊಳ್ಳುವಲ್ಲಿನ ಎಡವಟ್ಟು ಕಾರಣವಾಗಿದೆ. ಹೊಸ ಬೈಲಾಗಳು ನಿವೃತ್ತಿ ವಯಸ್ಸನ್ನು ಎಲ್ಲರಿಗೂ 60 ಕ್ಕೆ ತಿದ್ದುಪಡಿ ಮಾಡಿವೆ. ಆದರೆ ಮೊದಲು ಇದು ಸಂಸ್ಥೆಗಳ ನಡುವೆ ಭಿನ್ನವಾಗಿತ್ತು ಎಂದೂ ವರದಿ ಉಲ್ಲೇಖಿಸಿದೆ.

ಕೆಲವು ಸಂಸ್ಥೆಗಳಲ್ಲಿ ನಿವೃತ್ತಿ ವಯಸ್ಸಿಗೆ ಸಂಬಂಧಿಸಿದ ಬೈಲಾ ಅಳವಡಿಸಿಕೊಳ್ಳಲಾಗಿಲ್ಲ. ಅಂಥದ್ದರಲ್ಲಿ ಮೂರು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷರಾಗಿದ್ದಾರೆ. ನಿವೃತ್ತಿ ವಯಸ್ಸನ್ನು ಔಪಚಾರಿಕಗೊಳಿಸುವ ಬೈಲಾಗಳನ್ನು ಅಳವಡಿಸಿಕೊಳ್ಳಲು ಮುಖ್ಯಮಂತ್ರಿಗೆ ಸಭೆ ಕರೆಯಲು ಸಾಧ್ಯವಾಗುತ್ತಿಲ್ಲ. ಚುನಾವಣಾ ಫಲಿತಾಂಶಗಳು ಹೊರಬೀಳುವವರೆಗೂ ಈ ಸಂಸ್ಥೆಗಳಲ್ಲಿ ಯಥಾಸ್ಥಿತಿ ಮುಂದುವರಿಯುವ ಸಾಧ್ಯತೆಯಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಮತ್ತೊಂದೆಡೆ, ಕಿದ್ವಾಯಿಯ ನಿರ್ದೇಶಕ ಡಾ. ವಿ ಲೋಕೇಶ್ ಅವರನ್ನು ಈ ವರ್ಷದ ಫೆಬ್ರವರಿಯಲ್ಲಿ ರಾಜ್ಯ ಸರ್ಕಾರವು ಅವರ ಸ್ಥಾನದಿಂದ ಅಮಾನತುಗೊಳಿಸಿದ್ದರೆ, ಕರ್ನಾಟಕ ಹೈಕೋರ್ಟ್ ಅವರನ್ನು ಮರುನೇಮಕಗೊಳಿಸಿದೆ ಎಂದು ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಹ್ಸಿನ್ ತಿಳಿಸಿದ್ದಾರೆ. ಇಲಾಖೆ ಈ ತೀರ್ಪಿಗೆ ಮೇಲ್ಮನವಿ ಸಲ್ಲಿಸಿದ್ದು, ಶೀಘ್ರದಲ್ಲೇ ಪ್ರಕರಣದ ವಿಚಾರಣೆ ನಡೆಯುವ ಸಾಧ್ಯತೆ ಇದೆ.

ಇದನ್ನೂ ಓದಿ: ವಿಶ್ವದಲ್ಲೇ ಮೊದಲ ಬಾರಿಗೆ 3 ವಿಭಿನ್ನ ಕಾಯಿಲೆಗೆ ಓರ್ವ ವ್ಯಕ್ತಿಗೆ ಏಕಕಾಲದಲ್ಲೇ ಯಶಸ್ವಿ ಶಸ್ತ್ರಚಿಕಿತ್ಸೆ

ಇನ್‌ಸ್ಟಿಟ್ಯೂಟ್ ಆಫ್ ನೆಫ್ರೋ ಯುರಾಲಜಿಯಲ್ಲಿಯೂ ಲೋಕಾಯುಕ್ತರು ಹಲವು ದೂರುಗಳ ವಿಚಾರಣೆ ನಡೆಸಿದ್ದು, ಅಂತಿಮ ವರದಿಯನ್ನು ಇಲಾಖೆಗೆ ಸಲ್ಲಿಸಿಲ್ಲ.

ಯಾವೆಲ್ಲ ಆಸ್ಪತ್ರೆಗಳಿಗಿಲ್ಲ ಕಾಯಂ ನಿರ್ದೇಶಕರು?

ಶ್ರೀ ಜಯದೇವ ಹೃದಯ ರಕ್ತನಾಳದ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ (SJIC), ನೆಫ್ರೋ ಯುರೋಲಜಿ ಸಂಸ್ಥೆ (INU), ಎಸ್​ಡಿಎಸ್ ಕ್ಷಯರೋಗ ಸಂಶೋಧನಾ ಕೇಂದ್ರ ಮತ್ತು ರಾಜೀವ್ ಗಾಂಧಿ ಎದೆ ರೋಗಗಳ ಸಂಸ್ಥೆ (SDS RGICD), ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ (IGICH), ಸಂಜಯ್ ಗಾಂಧಿ ಇನ್ಸ್​​ಟಿಟ್ಯೂಟ್ ಆಫ್ ಟ್ರಾಮಾ ಅಂಡ್ ಆರ್ಥೋಪೆಡಿಕ್ಸ್ (SGITO), ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (DIMHANS), ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ (OPEC) ರಾಯಚೂರು, ಬಿಎಂಸಿಆರ್​ಐ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ (PMSSY), ಕರ್ನಾಟಕ ಇನ್​ಸ್ಟಿಟ್ಯೂಟ್ ಆಫ್ ಎಂಡೊಕ್ರಿನಾಲಜಿ ಆ್ಯಂಡ್ ರಿಸರ್ಚ್ (KIER) ಈ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಸದ್ಯ ಕಾಯಂ ನಿರ್ದೇಶಕರಿಲ್ಲ ಎಂದು ವರದಿ ತಿಳಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ