ನಿಮ್ಮ ಆಡಳಿತ ಸುವರ್ಣಾಕ್ಷರಗಳಲ್ಲಿ ಉಳಿಯಲಿದೆ: ಸಿದ್ದರಾಮಯ್ಯ ಗುಣಗಾನ ಮಾಡಿದ ವೇಣುಗೋಪಾಲ್​​

ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿದ ಬೆನ್ನಲ್ಲೇ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಎಕ್ಸ್​​ ಪೋಸ್ಟ್ ಮಾಡುವ ಮೂಲಕ ಸಿದ್ದರಾಮಯ್ಯನವರನ್ನು ಕೊಂಡಾಡಿದ್ದಾರೆ. ಸಿದ್ದರಾಮಯ್ಯ ಅವರ ನಿಸ್ವಾರ್ಥ ನಡೆ ಹಾಗೂ ಸುವರ್ಣಾಕ್ಷರಗಳಲ್ಲಿ ಉಳಿಯುವ ಆಡಳಿತವನ್ನು ಗುಣಗಾನ ಮಾಡಿದ ಅವರು, ಸ್ವಾರ್ಥಕ್ಕಿಂತ ಪಕ್ಷ, ಅಧಿಕಾರಕ್ಕಿಂತ ಜನ, ಕಾಂಗ್ರೆಸ್‌ಗೆ ಪಕ್ಷವೇ ಕುಟುಂಬ, ಜನರೇ ಧ್ಯೇಯ ಎಂದು ಬರೆದುಕೊಂಡಿದ್ದಾರೆ.

ನಿಮ್ಮ ಆಡಳಿತ ಸುವರ್ಣಾಕ್ಷರಗಳಲ್ಲಿ ಉಳಿಯಲಿದೆ: ಸಿದ್ದರಾಮಯ್ಯ ಗುಣಗಾನ ಮಾಡಿದ ವೇಣುಗೋಪಾಲ್​​
ಸಿದ್ದರಾಮಯ್ಯ ಗುಣಗಾನ ಮಾಡಿದ ವೇಣುಗೋಪಾಲ್​​
Image Credit source: Tv9 Kannada

Updated on: May 28, 2026 | 8:15 PM

ಬೆಂಗಳೂರು, ಮೇ 28: ಕರ್ನಾಟಕ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ (Siddaramaiah) ರಾಜೀನಾಮೆ ನೀಡಿದ್ದು, ಆ ಬೆನ್ನಲ್ಲೇ ಹೈಕಮಾಂಡ್​​ ಭೇಟಿಗಾಗಿ ದೆಹಲಿಗೆ ತೆರಳಿದ್ದಾರೆ. ವಿಶೇಷ ಅಂದ್ರೆ ನಾಯಕತ್ವ ಬದಲಾವಣೆ ಸಂದರ್ಭದಲ್ಲಿಯೂ ರಾಜ್ಯ ನಾಯಕರು ಒಗ್ಗಟ್ಟಿನ ಸಂದೇಶ ಸಾರಿರೋದು ವಿಪಕ್ಷಗಳ ಹುಬ್ಬೇರಿಸಿದೆ. ಉಪಹಾರ ಕೂಟದಿಂದ ಹಿಡಿದು ರಾಜಭವನದಲ್ಲಿ ಸಿದ್ದರಾಮಯ್ಯ ರಾಜೀನಾಮೆ ಪತ್ರ ನೀಡುವವರೆಗೂ ಡಿಸಿಎಂ ಡಿಕೆಶಿ ಮತ್ತು ಸಿಎಂ ಸಿದ್ದರಾಮಯ್ಯ ಒಟ್ಟಾಗಿಯೇ ಕಾಣಿಸಿಕೊಂಡಿದ್ದಾರೆ. ಈ ಕುರಿತು ಎಕ್ಸ್​​ ಪೋಸ್ಟ್​​ ಮಾಡಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್​​ ಸ್ವಾರ್ಥಕ್ಕಿಂತ ಪಕ್ಷ, ಅಧಿಕಾರಕ್ಕಿಂತ ಜನ, ಕಾಂಗ್ರೆಸ್‌ಗೆ ಪಕ್ಷವೇ ಕುಟುಂಬ, ಜನರೇ ಧ್ಯೇಯ ಎಂದು ಬರೆದುಕೊಂಡಿದ್ದಾರೆ.

ವೇಣುಗೋಪಾಲ್​​ ಪೋಸ್ಟ್​​ನಲ್ಲಿ ಏನಿದೆ?

ಕರ್ನಾಟಕದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ನೀಡಿದ ಅದ್ಭುತ ಆಡಳಿತ ಅವಧಿಯ ಬಗ್ಗೆ ನಾವು ಎಲ್ಲರೂ ಅಪಾರ ಹೆಮ್ಮೆ ಹೊಂದಿದ್ದೇವೆ. ಅವರ ನಾಯಕತ್ವದಲ್ಲಿ ಕರ್ನಾಟಕವು ಕಾಗದದ ಮಟ್ಟದಲ್ಲೇ ಉಳಿಯದ ಪರಿವರ್ತನಾ ಅಭಿವೃದ್ಧಿಯನ್ನು ಕಂಡಿದ್ದು, ಸಮಾಜದ ಅಂಚಿನಲ್ಲಿರುವ ಪ್ರತಿಯೊಬ್ಬ ಕನ್ನಡಿಗನ ಬದುಕಿಗೂ ಸ್ಪರ್ಶಿಸಿದೆ. ಸರಳ ಕೃಷಿಕ ಕುಟುಂಬದ ಹಿನ್ನೆಲೆಯಿಂದ ಹೊರಹೊಮ್ಮಿ, ತಮ್ಮ ತತ್ವನಿಷ್ಠೆ, ಜನಪರ ಬದ್ಧತೆ ಮತ್ತು ಆಡಳಿತ ಜಾಣ್ಮೆಯ ಬಲದಿಂದ ರಾಜ್ಯದ ಅತ್ಯುನ್ನತ ಹುದ್ದೆ ತಲುಪಿದ ನಾಯಕ ಸಿದ್ದರಾಮಯ್ಯ. ಬಡವರು, ಹಿಂದುಳಿದವರು ಹಾಗೂ ಸಮಾಜದ ಅಂಚಿನ ವರ್ಗಗಳ ಸಬಲೀಕರಣಕ್ಕಾಗಿ ಮಾಡಿದ ಕಾರ್ಯಗಳಿಂದ ಅವರ ಆಡಳಿತ ಇತಿಹಾಸದಲ್ಲಿ ಚಿನ್ನದ ಅಕ್ಷರಗಳಲ್ಲಿ ಉಳಿಯಲಿದೆ.

ಇದನ್ನೂ ಓದಿ: ಪ್ರಮಾಣವಚಕ್ಕೆ ಸಿದ್ಧತೆ; ಜ್ಯೋತಿಷಿ ಬಳಿ ಮುಹೂರ್ತ ಕೇಳಿದ ಡಿಕೆ ಶಿವಕುಮಾರ್

ಇಂದು ಪಕ್ಷದ ಹಿತದೃಷ್ಟಿಯಿಂದ ಅವರು ತೆಗೆದುಕೊಂಡ ನಿಸ್ವಾರ್ಥ ನಿರ್ಧಾರವನ್ನು ಕಾಂಗ್ರೆಸ್ ಅತ್ಯಂತ ಗೌರವದಿಂದ ಸ್ವಾಗತಿಸುತ್ತದೆ. ಅವರು ತೋರಿದ ಗೌರವಯುತ ಹಾಗೂ ಪ್ರೌಢ ನಡೆ, ಸಾರ್ವಜನಿಕ ಜೀವನದಲ್ಲಿರುವ ನಾಯಕರು ಹೇಗೆ ವರ್ತಿಸಬೇಕು ಎಂಬುದಕ್ಕೆ ಮಾದರಿಯಾಗಿದೆ. ಅವರ ಮುಂದಿನ ರಾಜಕೀಯ ಹಾಗೂ ಸಾರ್ವಜನಿಕ ಜೀವನಕ್ಕೆ ನಮ್ಮ ಹಾರೈಕೆಗಳು. ಕಾಂಗ್ರೆಸ್ ಪಕ್ಷದ ಅಮೂಲ್ಯ ನಾಯಕರಾಗಿ, ಅವರ ಜ್ಞಾನ ಮತ್ತು ಅನುಭವ ನಮ್ಮ ರಾಜಕೀಯ ಪಯಣದಲ್ಲಿ ಸದಾ ಅಪ್ರತಿಮವಾಗಿಯೇ ಉಳಿಯಲಿದೆ ಎಂದು ವೇಣುಗೋಪಾಲ್​ ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Prasanna Hegde

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
Follow Us