ಬಸ್ನಲ್ಲಿ ಎಸಿ ವ್ಯವಸ್ಥೆ ವೈಫಲ್ಯ: ಪ್ರಯಾಣಿಕನಿಗೆ 13 ಸಾವಿರ ಪರಿಹಾರ ನೀಡಲು ಕೆಎಸ್ಆರ್ಟಿಸಿಗೆ ಗ್ರಾಹಕ ನ್ಯಾಯಾಲಯ ಆದೇಶ
ಮಡಿಕೇರಿಯಿಂದ ಬೆಂಗಳೂರಿಗೆ ಇವಿ ಪವರ್ ಪ್ಲಸ್ ಎಸಿ ಬಸ್ನಲ್ಲಿ ಪ್ರಯಾಣಿಸುವಾಗ ಎಸಿ ವೈಫಲ್ಯದಿಂದ ಉಂಟಾದ ಅಸೌಕರ್ಯದ ಹಿನ್ನೆಲೆಯಲ್ಲಿ, ಪ್ರಯಾಣಿಕನಿಗೆ 13,000 ರೂ. ಪರಿಹಾರ ನೀಡುವಂತೆ ಕೆಎಸ್ಆರ್ಟಿಸಿಗೆ ಕೊಡಗು ಗ್ರಾಹಕ ನ್ಯಾಯಾಲಯ ಆದೇಶಿಸಿದೆ. ಎಸಿ ಬಸ್ ಸೇವೆಗಾಗಿ ಪ್ರಯಾಣಿಕರು ಹೆಚ್ಚುವರಿ ದರ ಹಾಗೂ ತೆರಿಗೆ ಪಾವತಿಸುತ್ತಾರೆ. ಹೀಗಾಗಿ ಎಸಿ ವ್ಯವಸ್ಥೆ ವಿಫಲವಾದರೆ, ಮೈಸೂರು ಬಸ್ ನಿಲ್ದಾಣದಲ್ಲಿ ಪರ್ಯಾಯ ಬಸ್ ವ್ಯವಸ್ಥೆ ಕಲ್ಪಿಸುವುದು ಅಥವಾ ಸೂಕ್ತ ಪರಿಹಾರ ಒದಗಿಸುವುದು ನಿಗಮದ ಜವಾಬ್ದಾರಿಯಾಗಿದೆ ಎಂದು ಆಯೋಗ ಅಭಿಪ್ರಾಯಪಟ್ಟಿದೆ.

ಮಡಿಕೇರಿ, ಜೂನ್ 19: ಹಣಕೊಟ್ಟು ಟಿಕೆಟ್ ಖರೀದಿಸಿ ಪ್ರಯಾಣಿಸುವ ವೇಳೆ ಬಸ್ಗಳ ದುಃಸ್ತಿತಿಯ ಕಾರಣ ಪ್ರಯಾಣಿಕರು ಅನಾನುಕೂಲ ಎದುರಿಸುವ ಪ್ರಕರಣಗಳು ಮೇಲಿಂದ ಮೇಲೆ ಮಡೆಯುತ್ತಲೇ ಇರುತ್ತವೆ. ಆದರೆ ಈ ಬಗ್ಗೆ ಯಾರೂ ಅಷ್ಟೊಂದು ತಲೆ ಕೆಡಸಿಕೊಳ್ಳಲು ಹೋಗುವುದಿಲ್ಲ. ಒಮ್ಮೆ ಆಕ್ರೋಶಗೊಂಡು ಸುಮ್ಮನಾಗುವವರ ಸಂಖ್ಯೆಯೇ ಹೆಚ್ಚು. ಹೀಗಿರುವಾಗ ತನಗಾದ ಅಸೌಕರ್ಯವನ್ನು ಪ್ರಶ್ನಿಸಿದ ಪ್ರಯಾಣಿಕರೋರ್ವರ ಪರ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗ ಆದೇಶ ನೀಡಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ.
ಭರವಸೆ ನೀಡಿದ್ದ ಸೇವೆಯನ್ನು ಇವಿ ಪವರ್ ಪ್ಲಸ್ (EV Power Plus) ಬಸ್ನಲ್ಲಿ ಒದಗಿಸಲು ವಿಫಲವಾದ ಹಿನ್ನೆಲೆಯಲ್ಲಿ, ಪ್ರಯಾಣಿಕನಿಗೆ 13,000 ಪರಿಹಾರ ಹಾಗೂ ಬಡ್ಡಿ ಪಾವತಿಸುವಂತೆ ಕೊಡಗು ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗ ಕೆಎಸ್ಆರ್ಟಿಸಿಗೆ ಆದೇಶಿಸಿದೆ. ಮಡಿಕೇರಿ ತಾಲೂಕಿನ ಬಿಳಿಗೇರಿ ನಿವಾಸಿ ಸಚಿತ್ ಕೆ.ಎಚ್. ಅವರು 2025ರ ನವೆಂಬರ್ 6ರಂದು ಮಡಿಕೇರಿಯಿಂದ ಬೆಂಗಳೂರಿಗೆ ಕೆಎಸ್ಆರ್ಟಿಸಿ ಇವಿ ಪವರ್ ಪ್ಲಸ್ ಬಸ್ನಲ್ಲಿ ಪ್ರಯಾಣಿಸಿದ್ದರು. ಪ್ರಯಾಣದ ವೇಳೆ ಬಸ್ನ ಹವಾನಿಯಂತ್ರಣ (ಎಸಿ) ವ್ಯವಸ್ಥೆ ಸಮರ್ಪಕವಾಗಿ ಕಾರ್ಯನಿರ್ವಹಿಸದೆ ಪ್ರಯಾಣಿಕರಿಗೆ ತೀವ್ರ ಅಸೌಕರ್ಯ ಉಂಟಾಗಿತ್ತು. ಈ ಕುರಿತು ಅವರು ಬಸ್ ನಿರ್ವಾಹಕರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಎಸಿ ಬಸ್ ಆಗಿದ್ದ ಕಾರಣ ಕಿಟಕಿಗಳೂ ತೆರೆಯಲು ಬಾರದ ಕಾರಣ ಭಾರಿ ಸಮಸ್ಯೆಯಾಗಿತ್ತು.
ಇದನ್ನೂ ಓದಿ: ವಿದೇಶಿ ಮಹಿಳೆ ಮೇಲೆ ಅತ್ಯಾಚಾರವಾಗಿದ್ದರೆ ಅದು ಬಹಳ ಗಂಭೀರ ವಿಷಯ; ಕರ್ನಾಟಕ ಹೈಕೋರ್ಟ್
‘ಸೂಕ್ತ ಪರಿಹಾರ ಒದಗಿಸುವುದು ನಿಗಮದ ಜವಾಬ್ದಾರಿ’
ಈ ಸಂಬಂಧ ಪರಿಹಾರ ಕೋರಿ ಸಚಿತ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೊಡಗು ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗ, ಎಸಿ ಬಸ್ ಸೇವೆಗಾಗಿ ಪ್ರಯಾಣಿಕರು ಹೆಚ್ಚುವರಿ ದರ ಹಾಗೂ ತೆರಿಗೆ ಪಾವತಿಸುತ್ತಾರೆ. ಹೀಗಾಗಿ ಎಸಿ ವ್ಯವಸ್ಥೆ ವಿಫಲವಾದರೆ, ಮೈಸೂರು ಬಸ್ ನಿಲ್ದಾಣದಲ್ಲಿ ಪರ್ಯಾಯ ಬಸ್ ವ್ಯವಸ್ಥೆ ಕಲ್ಪಿಸುವುದು ಅಥವಾ ಸೂಕ್ತ ಪರಿಹಾರ ಒದಗಿಸುವುದು ನಿಗಮದ ಜವಾಬ್ದಾರಿಯಾಗಿದೆ ಎಂದು ಆಯೋಗ ಅಭಿಪ್ರಾಯಪಟ್ಟಿದೆ. ಜೊತೆಗೆ ಪ್ರಯಾಣಿಕನಿಗೆ 13 ಸಾವಿರ ರೂಪಾಯಿ ಪರಿಹಾರ ಮೊತ್ತವನ್ನು ವಾರ್ಷಿಕ 9 ಶೇಕಡಾ ಬಡ್ಡಿಯೊಂದಿಗೆ ಪಾವತಿಸುವಂತೆ ಆದೇಶಿಸಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:48 pm, Fri, 19 June 26




