4 ದಿನ ಕಾಡಿನಲ್ಲಿದ್ದ ಯುವತಿ ಮೇಲೆ ಈಗ ನಕ್ಸಲ್ ಶಂಕೆ! ಈ ಬಗ್ಗೆ ಶರಣ್ಯ ಹೇಳಿದ್ದೇನು?

ಕೊಡಗಿನ ತಡಿಯಂಡಮೋಳ್ ಅರಣ್ಯದಲ್ಲಿ ನಾಲ್ಕು ದಿನ ದಾರಿ ತಪ್ಪಿ, ನೀರು ಕುಡಿದು ಬದುಕಿದ ಶರಣ್ಯರ ಕಥೆ ಈಗ ವಿವಾದಕ್ಕೆ ತಿರುಗಿದೆ. ಪಬ್ಲಿಸಿಟಿಗಾಗಿ ಈ ಘಟನೆ ಸೃಷ್ಟಿಸಲಾಗಿದೆ ಎಂಬ ಆರೋಪಗಳಿಗೆ, ಶರಣ್ಯ 'ಜೀವ ಉಳಿಸಿಕೊಳ್ಳಲು ಹೋರಾಡಿದೆ, ನಾಟಕವಾಡಿದ್ದಲ್ಲ' ಎಂದು ಉತ್ತರಿಸಿದ್ದಾರೆ. ಈ ಘಟನೆ ಪವಾಡವೋ ಅಥವಾ ಆರೋಪಗಳೇ ಸತ್ಯವೋ ಎಂಬುದು ಚರ್ಚೆಗೆ ಗ್ರಾಸವಾಗಿದೆ, ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

4 ದಿನ ಕಾಡಿನಲ್ಲಿದ್ದ ಯುವತಿ ಮೇಲೆ ಈಗ ನಕ್ಸಲ್ ಶಂಕೆ! ಈ ಬಗ್ಗೆ ಶರಣ್ಯ ಹೇಳಿದ್ದೇನು?
ಕೊಡಗು ಶರಣ್ಯ ವಿವಾದ
Edited By:

Updated on: Apr 09, 2026 | 10:35 AM

ಬೆಂಗಳೂರು, ಏ.9: ಕೊಡಗಿನ ತಡಿಯಂಡಮೋಳ್ ಬೆಟ್ಟದಲ್ಲಿ ಟ್ರೆಕ್ಕಿಂಗ್‌ಗೆ ತೆರಳಿ ದಾರಿ ತಪ್ಪಿದ್ದ ಕೇರಳದ ಶರಣ್ಯ ಎಂಬ ಯುವತಿ, ನಾಲ್ಕು ದಿನಗಳ ಕಾಲ ದಟ್ಟ ಕಾಡಿನಲ್ಲಿ ಕಳೆದ ನಂತರ ಸುರಕ್ಷಿತವಾಗಿ ಹೊರಬಂದಿದ್ದಾರೆ. ಆದರೆ, ಈ ಘಟನೆ ಈಗ ವಿವಾದಕ್ಕೆ ಈಡಾಗಿದೆ. ಆಕೆ ಪಬ್ಲಿಸಿಟಿಗಾಗಿ ಹೀಗೆ ಮಾಡಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ಇದಕ್ಕೆ ಪ್ರತಿಕ್ರಿಯಿಸಿರುವ ಶರಣ್ಯ, “ನಾನು ಪ್ರಾಣ ಉಳಿಸಿಕೊಳ್ಳಲು ಝರಿಗಳ ನೀರು ಕುಡಿದು ಬದುಕಿದೆನೇ ಹೊರತು, ಯಾವುದೇ ನಾಟಕ ಮಾಡಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ. ದಟ್ಟ ಕಾಡು ಮತ್ತು ಬೆಟ್ಟಗುಡ್ಡಗಳ ಮಧ್ಯೆ ಭರ್ತಿ ನಾಲ್ಕು ದಿನಗಳ ಕಾಲ ಕಳೆದ ಅವರು, ನಂತರ ಸುರಕ್ಷಿತವಾಗಿ ಹೊರಬಂದಿದ್ದರು. ಆರಂಭದಲ್ಲಿ ಇದು ಒಂದು ಪವಾಡ ಎಂದು ಎಲ್ಲರೂ ಹೇಳಿದರು.

ಇದೀಗ ಟಿವಿ9 ಜೊತೆಗಿನ ಸಂದರ್ಶನದಲ್ಲಿ ಶರಣ್ಯ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಕಾಡಿನಲ್ಲಿ ಹರಿಯುವ ಝರಿಗಳ ನೀರನ್ನು ಕುಡಿದು ಜೀವ ಉಳಿಸಿಕೊಂಡಿದ್ದಾಗಿ ಅವರು ಹೇಳಿದ್ದಾರೆ. ಹಸಿವಿಗಿಂತ ಜೀವ ಉಳಿಸಿಕೊಂಡು ಹೊರಬರಬೇಕೆಂಬ ಹಠ ದೊಡ್ಡದಾಗಿತ್ತು, ಹಾಗಾಗಿ ಆಹಾರದ ನೆನಪು ಬರಲಿಲ್ಲ ಎಂಬುದು ಅವರ ವಾದ. ಜೀವ ಪಣಕ್ಕಿಟ್ಟು ನಾನು ಯಾವುದೇ ನಾಟಕ ಮಾಡಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಯುವತಿ ಸುರಕ್ಷಿತವಾಗಿ ಬಂದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಸಂಶಯಗಳು ವ್ಯಕ್ತವಾಗಿವೆ. ದಟ್ಟ ಕಾಡಿನಲ್ಲಿ ನಾಲ್ಕು ದಿನ ಆಹಾರವಿಲ್ಲದೆ ಒಬ್ಬ ಯುವತಿ ಬದುಕುಳಿಯಲು ಸಾಧ್ಯವೇ? ಇದು ಪಬ್ಲಿಸಿಟಿ ಗಿಮಿಕ್ ಇರಬಹುದು ಎಂಬುದು ಒಂದು ಗುಂಪಿನ ವಾದ. ಆಕೆಗೆ ನಕ್ಸಲೈಟ್ ಸಂಪರ್ಕವಿರಬಹುದೇ ಎಂಬ ಗಂಭೀರ ಅಪವಾದಗಳು ಕೇಳಿಬರುತ್ತಿವೆ. ಆಕೆಯನ್ನು ಹುಡುಕಲು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿದೆ, ಈ ನಷ್ಟಕ್ಕೆ ಹೊಣೆ ಯಾರು ಎಂಬ ಪ್ರಶ್ನೆ ಎದ್ದಿದೆ.

ಇದನ್ನೂ ಓದಿ: ಬೆಂಗಳೂರು NIA ವಿಶೇಷ ನ್ಯಾಯಾಲಯದಿಂದ ಮಹತ್ವದ ತೀರ್ಪು: ಮಾನವ ಕಳ್ಳಸಾಗಣೆ ಜಾಲದ ನಾಲ್ವರಿಗೆ ಜೈಲು ಶಿಕ್ಷೆ!

ಈ ಪ್ರಕರಣ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಕೊಡಗಿನ ನಾಪೋಕ್ಲು ಬಿಜೆಪಿ ಘಟಕ ಮತ್ತು ಕೆಲವು ಯೂಟ್ಯೂಬರ್‌ಗಳು ಯುವತಿಯ ವಿರುದ್ಧ ದೂರು ನೀಡಿದ್ದಾರೆ. ಸುಳ್ಳು ಆರೋಪ ಮಾಡುತ್ತಿರುವವರ ವಿರುದ್ಧ ದೂರು ನೀಡಲು ಶರಣ್ಯ ಅವರ ಮಾವ ಹರಿದಾಸ್ ಮತ್ತು ಕುಟುಂಬಸ್ಥರು ನಿರ್ಧರಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ  ಕ್ಲಿಕ್ ಮಾಡಿ

 

Follow Us