
ಮಡಿಕೇರಿ, ಏಪ್ರಿಲ್ 03: ಟ್ರೆಕ್ಕಿಂಗ್ಗೆ ತೆರಳಿದ್ದ ಯುವತಿ ನಾಪತ್ತೆಯಾಗಿರುವ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಕಕ್ಕಬ್ಬೆ ಗ್ರಾಮದಲ್ಲಿ ನಡೆದಿದೆ. ಕೇರಳ ಮೂಲದ ಯುವತಿ ಶರಣ್ಯ ಜಿ.ಎಸ್. ನಿನ್ನೆ ನಾಪತ್ತೆಯಾಗಿದ್ದು, ತಡಿಯಂಡಮೋಳ್ ಬೆಟ್ಟಕ್ಕೆ ಚಾರಣಕ್ಕೆ ತೆರಳಿದ್ದಾಗ ಆಕೆ ಮಿಸ್ಸಾಗಿದ್ದಾಳೆ. ಖಾಸಗಿ ಹೋಂಸ್ಟೇಯಲ್ಲಿ ತಂಗಿದ್ದ ಯುವತಿ ನಿನ್ನೆ ಒಬ್ಬಳೇ ಚಾರಣಕ್ಕೆ ತೆರಳಲು ಮುಂದಾಗಿದ್ದಳು. ಆ ಪ್ರದೇಶದಲ್ಲಿ ಕಾಡಾನೆಗಳ ಕಾಟ ಇರುವ ಕಾರಣ ಬೇರೆಯವರ ಜತೆ ಸಿಬ್ಬಂದಿ ಕಳುಹಿಸಿದ್ದರು. ಸಂಜೆಯಾದ್ರೂ ಶರಣ್ಯ ವಾಪಸಾಗದ ಹಿನ್ನೆಲೆ ಶರಣ್ಯಗಾಗಿ ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿ ಶೋಧ ನಡೆಸುತ್ತಿದ್ದಾರೆ.
ನಾಪತ್ತೆಯಾದ ಯುವತಿ ಶರಣ್ಯಾ ಪತ್ತೆಗಾಗಿ ಅರಣ್ಯ ಇಲಾಖೆಯ 50ಕ್ಕೂ ಅಧಿಕ ಸಿಬ್ಬಂದಿ ಶೋಧಕಾರ್ಯ ನಡೆಸುತ್ತಿದ್ದಾರೆ. ಇವರಿಗೆ ಪೊಲೀಸ್ ಸಿಬ್ಬಂದಿಯೂ ಸಾಥ್ ನೀಡಿದ್ದು, ತಡರಾತ್ರಿ 3 ಗಂಟೆಯವರೆಗೆ ಹುಡುಕಾಡಿದರೂ ನಾಪತ್ತೆಯಾದ ಯುವತಿಯ ಸುಳಿವು ಸಿಕ್ಕಿಲ್ಲ. ನಿನ್ನೆ ತಾನು ದಾರಿ ತಪ್ಪಿರುವುದಾಗಿ ತಮ್ಮ ಹೋಂಸ್ಟೇ ಮಾಲೀಕನಿಗೆ ಕರೆ ಮಾಡಿ ಶರಣ್ಯಾ ಹೇಳಿದ್ದಳು. ಅದಾದ ಬಳಿಕ ಶರಣ್ಯ ಮೊಬೈಲ್ ನಾಟ್ ರೀಚೇಬಲ್ ಆಗಿದೆ. ಕೇರಳದಿಂದ ಏಕಾಂಗಿಯಾಗಿ ಪ್ರವಾಸಕ್ಕೆ ಬಂದಿದ್ದ ಯುವತಿ, ಇತರ 9 ಜನರ ಜೊತೆ ಚಾರಣಕ್ಕೆ ತೆರಳಿದ್ದಳು. ಕೊನೆಯಲ್ಲಿನಾಯಿಗಳಜೊತೆ ಆಟವಾಡುತ್ತಾ ಹಿಂದುಳಿದ ಶರಣ್ಯ ಉಳಿದವರ ಸಂಪರ್ಕ ಕಳೆದುಕೊಂಡು ನಾಪತ್ತೆಯಾಗಿದ್ದಾಳೆ ಎನ್ನಲಾಗಿದೆ.
ಇದನ್ನೂ ಓದಿ: ಮುಸ್ಲಿಂ ಯುವಕನ ಮದುವೆ ಸಂಭ್ರಮದ ವೇಳೆ ದೈವಕ್ಕೆ ಅವಮಾನ? ವಿವಾದಕ್ಕೆ ಕಾರಣವಾಯ್ತು ವರನ ವೇಷ
ನಾಪತ್ತೆಯಾದ ಶರಣ್ಯಾ ಸುರಕ್ಷಿತವಾಗಿ ಹಿಂದಿರುಗಲಿ ಎಂದು ಬೆಟ್ಟ ಪ್ರದೇಶದಲ್ಲಿ ವಾಸಿಸುವ ಕುಡಿಯ ಜನಾಂಗ ಮಲೆ ತಮ್ಮಚ್ಚ ದೇವರಿಗೆ ಹರಕೆ ಹೊತ್ತಿದೆ. ಈ ನಡುವೆ ಅರಣ್ಯ ಮತ್ತು ಪೊಲೀಸ್ ಇಲಾಖೆಯ ನಾಲ್ಕು ತಂಡಗಳಿಂದ ಶೋಧ ಮುಂದುವರಿದಿದ್ದು, ತಡಿಯಂಡಮೋಳ್ ಬೆಟ್ಟದಲ್ಲಿ ದಟ್ಟ ಮಳೆಮೋಡ ಕವಿದಿರೋದು ಆತಂಕ ಹೆಚ್ಚಿಸಿದೆ. ಬೆಟ್ಟದಲ್ಲಿ ಶ್ವಾನ ದಳದಿಂದಲೂ ಶೋಧ ಕಾರ್ಯ ನಡೆಸಲಾಗ್ತಿದ್ದು, ನಿನ್ನೆ ಮಧ್ಯಾಹ್ನ 2.30ರ ವೇಳೆಗೆ ಶರಣ್ಯ ನಾಪತ್ತೆಯಾಗಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.