ಕೊಡಗು-ದಕ್ಷಿಣ ಕನ್ನಡ ಗಡಿಯಲ್ಲಿ ನಕ್ಸಲ್​ ಸದ್ದು; ಅಂಗಡಿಯಿಂದ ದಿನಸಿ ಖರೀದಿಸಿ ತೆರಳಿದ ಬಂದೂಕು ದಾರಿಗಳ ತಂಡ

ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಂತೆಯೇ ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಗಡಿಯಲ್ಲಿ ನಕ್ಸಲೀಯರು ಕಾಣಿಸಿಕೊಂಡು ಆತಂಕ ಹುಟ್ಟಿಸಿದ್ದಾರೆ. ಅದರಲ್ಲೂ ಮೋಸ್ಟ್ ವಾಂಟೆಡ್ ವಿಕ್ರಂ ಗೌಡ ಆಂಡ್ ಟೀಂಮ್ ಇಲ್ಲಿಗೆ ಬಂದು ದಿನಸಿ ಖರೀದಿಸಿ ತೆರಳಿದೆ ಎಂಬ ಮಾಹಿತಿ ಪೊಲೀಸ್ ಇಲಾಖೆಗೆ ಲಭ್ಯವಾಗಿದೆ. ಇದು ಎರಡೂ ಜಿಲ್ಲೆಯ ಗಡಿ ವಾಸಿಗಳನ್ನ ಆತಂಕಕ್ಕೆ ತಳ್ಳಿದೆ.

ಕೊಡಗು-ದಕ್ಷಿಣ ಕನ್ನಡ ಗಡಿಯಲ್ಲಿ ನಕ್ಸಲ್​ ಸದ್ದು; ಅಂಗಡಿಯಿಂದ ದಿನಸಿ ಖರೀದಿಸಿ ತೆರಳಿದ ಬಂದೂಕು ದಾರಿಗಳ ತಂಡ
ನಕ್ಸಲೀಯರಿಗಾಗಿ ಶೋಧಕಾರ್ಯ ಆರಂಭ
Edited By: ಕಿರಣ್ ಹನುಮಂತ್​ ಮಾದಾರ್

Updated on: Mar 19, 2024 | 3:48 PM

ಕೊಡಗು, ಮಾ.19: ದಕ್ಷಿಣ ಕನ್ನಡ ಗಡಿ ಮತ್ತು ಮಡಿಕೇರಿ ತಾಲ್ಲೂಕಿನ ಕಡಮಕಲ್ಲು, ಕೂಜಿಮಲೆ ಅರಣ್ಯ ವ್ಯಾಪ್ತಿಯ ಕಲ್ಮಕಾಡು ಗ್ರಾಮದಲ್ಲಿ ಎರಡು ದಿನಗಳ ಹಿಂದೆ ನಾಲ್ವರು ಬಂದೂಕುದಾರಿಗಳು(Naxal) ಆಗಮಿಸಿದ್ದರು. ಗ್ರಾಮದ ಅಂಗಡಿಯೊಂದಕ್ಕೆ ಆಗಮಿಸಿದ ಅವರು, 25 ಕೆಜಿ ಅಕ್ಕಿ ಸೇರಿ ಸುಮಾರು 3,500 ರೂಪಾಯಿಯ ದಿನಸಿ ಪದಾರ್ಥವನ್ನ ಖರೀದಿಸಿ ಅಲ್ಲಿಂದ ತೆರಳಿದ್ದಾರೆ. ತಂಡದಲ್ಲಿ ಇಬ್ಬರು ಪುರುಷರು ಹಾಗೂ ಇಬ್ಬರು ಮಹಿಳೆಯರಿದ್ದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಅಂಗಡಿಗೆ ಆಗಮಿಸಿದ್ದ ಸಂದರ್ಭ, ತಾವು ಮಾವೋವಾದಿಗಳೆಂದು ಪರಿಚಯ ಮಾಡಿಕೊಂಡಿದ್ದಾರೆ.

ಇನ್ನು ಅವರು ಅಚ್ಚಗನ್ನಡದಲ್ಲೇ ಮಾತನಾಡಿ ತಮ್ಮ ಹೋರಾಟಕ್ಕೆ ಬೆಂಬಲ ನೀಡುವಂತೆ ಸ್ಥಳೀಯರನ್ನ ಕೇಳಿಕೊಂಡಿದ್ದಾರೆ.ಈ ಸುದ್ದಿ ತಿಳಿಯುತ್ತಲೇ ಕೊಡಗು ಜಿಲ್ಲಾ ಪೊಲಿಸರು ಸ್ಥಳಕ್ಕೆ ದೌಡಾಯಿಸಿ, ಪ್ರಾಥಮಿಕ ತನಿಖೆಯಲ್ಲಿಯೇ ಇಬ್ಬರು ಪುರುಷರು ಮತ್ತು ಇಬ್ಬರು ಮಹಿಳೆಯರು ಬಂದಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಅದರಲ್ಲೂ ಇವರಲ್ಲಿ ಓರ್ವ ಮೋಸ್ಟ್​ ವಾಂಟೆಡ್ ನಕ್ಸಲೀಯ ವಿಕ್ರಂಗೌಡನನ್ನೇ ಹೋಲುವಂತಿತ್ತು ಎಂಬುದು ಖಚಿತವಾಗಿದೆ. ಈ ಕುರಿತು ಮಾಧ್ಯಮಗೋಷ್ಟಿಯಲ್ಲಿ ಮಾಹಿತಿ ನೀಡಿದ ಕೊಡಗು ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಕೆ ರಾಮರಾಜನ್, ಸ್ಥಳೀಯರು ನೀಡಿದ ಮಾಹಿತಿ ಪ್ರಕಾರ ನಕ್ಸಲೀಯರು ಬಂದಿರುವುದು ಬಹುತೇಕ ಖಚಿತ ಎಂದಿದ್ದಾರೆ. ಜೊತೆಗೆ ಇವರ ಪತ್ತೆಗೆ ಈಗಾಗಲೇ ಎಎನ್​ಎಫ್ ಪಡೆ ಕಾರ್ಯಚರಣೆ ಆರಂಭಿಸಿದೆ ಎಂದರು.

ಇದನ್ನೂ ಓದಿ:ಮತ್ತೆ ನಕ್ಸಲರ ಅಟ್ಟಹಾಸ, ಗುಂಡಿನ ಚಕಮಕಿಯಲ್ಲಿ ಮೂವರು CRPF ಯೋಧರು ಹುತಾತ್ಮ

ಹಿಂದಿನ ಚುನಾವಣೆ ಘೋಷಣೆಯಾಗುತ್ತಲೇ ಎಂಟ್ರಿಕೊಟ್ಟಿದ್ದ ನಕ್ಸಲೀಯರು

2018ರಲ್ಲೂ ಲೋಕಸಭಾ ಚುನಾವಣೆ ಘೋಷಣೆಯಾಗುತ್ತಲೇ ಕೊಡಗು-ದಕ್ಷಿಣ ಕನ್ನಡ ಗಡಿ ಗ್ರಾಮ ಸಂಪಾಜೆಯ ದಟ್ಟಾರಣ್ಯದಿಂದ ಬಂದಿದ್ದ ನಕ್ಸಲೀಯರು, ಮನೆಗಳಿಂದ ದವಸ, ಧಾನ್ಯವನ್ನ ಸಂಗ್ರಹಿಸಿ ತೆರಳಿದ್ದರು. ಇದೀಗ ಈ ಬಾರಿಯೂ ಮತ್ತೆ ನಕ್ಸಲೀಯರು ಕಾಣಿಸಿಕೊಂಡಿರುವುದು ಜಿಲ್ಲೆಯ ಜನರಲ್ಲಿ ಆತಂಕ ತಂದಿದೆ. ತಂಡದಲ್ಲಿ ಇಬ್ಬರು ಮಹಿಳೆಯರೂ ಇದ್ದರು ಎಂದು ಹೇಳಲಾಗಿದೆ. ಅಂಗಡಿ ಬಳಿ ಬಂದವರು ನಾಲ್ವರು ಮಾತ್ರ, ಇನ್ನೂ ನಾಲ್ವರು ಅಕ್ಕ-ಪಕ್ಕದಲ್ಲಿ ಇದ್ದರೆಂದು ಹೇಳಲಾಗುತ್ತಿದೆ. ಈ ಹಿನ್ನಲೆ ನಕ್ಸಲ್​ ವಿರೋಧಿ ಪಡೆ, ಕೊಡಗು ಜಿಲ್ಲಾ ಪೊಲೀಸ್ ಶ್ವಾನದಳ ಹಾಗೂ ಡ್ರೋನ್ ಬಳಸಿ ದಟ್ಟಾರಣ್ಯದ ಮಧ್ಯೆ ಶೋಧ ಕಾರ್ಯ ನಡೆಸಲಾಗುತ್ತಿದೆ.

ಸ್ಥಳೀಯ ದಕ್ಷಿಣ ಕನ್ನಡ ಹಾಗೂ ಕೇರಳ ಪೊಲೀಸರ ಜೊತೆ ಗುಪ್ತಚರ ಮಾಹಿತಿಗಳನ್ನ ಹಂಚಿಕೊಳ್ಳಲಾಗುತ್ತಿದ್ದು, ನಕ್ಸಲೀಯರು ಯಾವ ಕಡೆಗೆ ತೆರಳಿರಬಹುದು ಎಂಬುದನ್ನ ಪತ್ತೆಹಚ್ಚಲಾಗುತ್ತಿದೆ. ಸಧ್ಯ ಜಿಲ್ಲೆಯಲ್ಲಿ ಆತಂಕ ತಂದಿರುವ ಈ ನಕ್ಸಲೀಯರನ್ನ ಬಂಧಿಸುವಂತೆ ಸ್ಥಳೀಯರೆ ಆಗ್ರಹಿಸಿದ್ದಾರೆ. ಕೊಡಗು, ದಕ್ಷಿಣ ಕನ್ನಡ ಹಾಗೂ ಕೇರಳ ಗಡಿಯಲ್ಲಿ ಹಂಚಿಹೋಗಿರುವ ಸಾವಿರಾರು ಎಕರೆ ದಡ್ಟಾರಣ್ಯದಲ್ಲಿ ಸಧ್ಯ ಕೂಂಬಿಂಗ್ ಮುಂದುವರಿದಿದೆ. ಆದಷ್ಟು ಶೀಘ್ರವೇ ಇವರನ್ನು ಬಂಧಿಸುವ ವಿಶ್ವಾಸವನ್ನ
ಕೊಡಗು ಪೊಲಿಸರು ವ್ಯಕ್ತಪಡಿಸಿದ್ದಾರೆ. ಪ್ರತಿ ವರ್ಷ ಚುನಾವಣೆ ಹೊಸ್ತಿಲಲ್ಲೇ ನಕ್ಸಲೀಯರು ಪ್ರತ್ಯಕ್ಷವಾಗುತ್ತಿರುವುದು ಕುತೂಹಲ ಮೂಡಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us