ಪ್ರವಾಸಿಗರ ಎಂಜಾಯ್ಮೆಂಟ್ಗೆ ಜಿಲ್ಲಾಡಳಿತ ಬ್ರೇಕ್; ಕೊಡಗಿನಲ್ಲಿ ಜಲಪಾತಗಳಿಗೆ ಇಳಿದು ಸ್ನಾನಕ್ಕೆ ನಿರ್ಬಂಧ
ಕೊಡಗು ಜಿಲ್ಲೆಗೆ ಟೂರ್ ಹೋಗಿ ಜಲಪಾತಗಳಿಗೆ ಇಳಿದು ಎಂಜಾಯ್ ಮಾಡುವ ಅಂತ ಪ್ಲಾನ್ ಹಾಕಿದ್ರೆ ನಿಮಗೆ ಇದು ಬೇಜಾರಿನ ಸಂಗತಿ. ಯಾಕಂದ್ರೆ ಕೊಡಗಿನಲ್ಲಿ ಜಲಪಾತಗಳಿಗೆ ಇಳಿದು ಸ್ನಾನ ಮಾಡುವುದನ್ನ ನಿಷೇಧಿಸಲಾಗಿದೆ. ಅತ್ತ ಜಿಲ್ಲೆಯಲ್ಲಿ ಮಳೆಯಿಂದ ಅಲ್ಲಲ್ಲಿ ಅವಾಂತರಗಳೂ ಮುಂದುವರಿದಿವೆ.

ಕೊಡಗು, ಜು.04: ಜಿಲ್ಲೆಯಲ್ಲಿ ಮಳೆಗಾಲ ಬಂತೆಂದರೆ ಸಾಕು ಅತ್ಯದ್ಭುತ ಲೋಕವೇ ಸೃಷ್ಟಿಯಾಗುತ್ತದೆ. ಹತ್ತಾರು ಜಲಪಾತಗಳು(Falls) ಮೈದುಂಬಿ ಧುಮ್ಮಿಕ್ಕುತ್ತವೆ. ನದಿ-ತೊರೆಗಳು ತುಂಬಿ ಹರಿಯುತ್ತವೆ. ಇಂತಹ ಆಹ್ಲಾದಕರ ವಾತಾವರಣದಲ್ಲಿ ಜಲಪಾತಗಳಿಗೆ ಇಳಿದು ಮೇಲಿನಿಂದ ಧುಮ್ಮಿಕ್ಕುವ ನೀರಿಗೆ ಮೈಯೊಡ್ಡಿ ಸ್ನಾನ ಮಾಡುವುದು ಅಂದರೆ ಎಲ್ಲರಿಗೂ ಖುಷಿ. ಹಾಗಾಗಿ ಜಿಲ್ಲೆಗೆ ಆಗಮಿಸುವ ಬಹುತೇಕ ಪ್ರವಾಸಿಗರು ಗ್ರಾಮೀಣ ಭಾಗದಲ್ಲಿರುವ ಜಲಪಾತಗಳಿಗೆ ಇಳಿದು ಎಂಜಾಯ್ ಮಾಡುತ್ತಾರೆ. ಆದ್ರೆ, ಇದೀಗ ಕೊಡಗು ಜಿಲ್ಲಾಡಳಿತ ಪ್ರವಾಸಿಗರ ಈ ಎಂಜಾಯ್ಮೆಂಟ್ಗೆ ತಣ್ಣೀರು ಹಾಕಿದೆ.
ಜಿಲ್ಲೆಯ ಯಾವುದೇ ಜಲಪಾತಗಳಿಗೆ ಇಳಿದು ಸ್ನಾನ ಮಾಡುವುದನ್ನ ನಿಷೇಧಿಸಿ ಆದೇಶ ಹೊರಡಿಸಿದೆ. ಜಲಪಾತ ಮಾತ್ರವಲ್ಲ, ನದಿ-ತೊರೆಗಳು, ಝರಿಗಳು, ಸಾರ್ವಜನಿಕ ಕೆರೆಗಳಲ್ಲೂ ಸ್ನಾನ ಮಾಡುವುದನ್ನ ನಿಷೇಧಿಸಿ ಜಿಲ್ಲಾಧಿಕಾರಿ ಡಾ.ವೆಂಕಟ್ ರಾಜಾ ಈ ಆದೇಶ ಹೊರಡಿಸಿದ್ದಾರೆ. ದೇಶದ ವಿವಿಧೆಡೆ ಜಲಪಾತಗಳಲ್ಲಿ ಸ್ನಾನಕ್ಕೆ ಇಳಿದು ಜನರು ಜೀವ ಕಳೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ಆದೇಶ ಮಾಡಲಾಗಿದೆ. ಇತ್ತ ಮಳೆಯಿಂದಾಗಿ ಚೇಲಾವರ ಜಲಪಾತ ಧುಮ್ಮಿಕ್ಕಿ ಹರಿಯುತ್ತಿದ್ದು, ಸುಮಾರು 50 ಅಡಿ ಎತ್ತರದಿಂದ ಹಾಲ್ನೋರೆಯಾಗಿ ಧುಮ್ಮಿಕ್ಕುವ ರಮಣೀಯ ದೃಷ್ಯ ಕಣ್ ತುಂಬಿಸಿಕೊಳ್ಳಲು ಪ್ರವಾಸಿಗರು ಆಗಮಿಸುತ್ತಿದ್ದಾರೆ.

ಇದನ್ನೂ ಓದಿ:ಮಂಗಳೂರು, ಉಡುಪಿ ಜಿಲ್ಲೆಗಳಲ್ಲಿ ಸತತ ಮಳೆ, ಕೆಲ ಪ್ರವಾಸಿ ತಾಣಗಳಿಗೆ ತೆರಳದಂತೆ ಅರಣ್ಯ ಇಲಾಖೆ ನಿರ್ಬಂಧ
ಇತ್ತ ಕೊಡಗು ಜಿಲ್ಲೆಯಲ್ಲಿ ಮಳೆ ಸಂಬಂಧಿತ ಅವಾಂತರಗಳು ಮುಂದುವರಿದಿದೆ. ವಿರಾಜಪೇಟೆ ತಾಲ್ಲೂಕಿನ ಕೆದಮುಳ್ಳೂರು-ತೋರಾ ಗ್ರಾಮದ ನಡುವಿನ ಕಾಂಕ್ರಿಟ್ ರಸ್ತೆ ಜಗ್ಗಿ ಹೋಗಿದೆ. ನಾಲ್ಕು ವರ್ಷಗಳ ಹಿಂದೆ ಈ ರಸ್ತೆ ನಿರ್ಮಾಣವಾಗಿತ್ತು, ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ರಸ್ತೆಯ ಒಂದು ಬದಿಯ ಮಣ್ಣು ಜರಿದಿದೆ. ಈ ಸಂದರ್ಭ ಕಾಂಕ್ರಿಟ್ ರಸ್ತೆ ಕೂಡ ಜಗ್ಗಿದೆ. ಇದರಿಂದ ರಸ್ತೆ ಮಧ್ಯದಲ್ಲಿ ಅಪಾಯಕಾರಿ ಗ್ಯಾಪ್ ಸೃಷ್ಟಿಯಾಗಿದ್ದು, ವಾಹನ ಸವಾರರು ಪರದಾಡುವಂತಗಾಗಿದೆ. ಅಪಾಯ ಸೂಚಿಸಲು ಸ್ಥಳೀಯರೇ ಗುಂಡಿಗಳಿಗೆ ಮರದ ಕೊಂಬೆಗಳನ್ನ ನೆಟ್ಟು ಎಚ್ಚರಿಕೆ ನೀಡಿದ್ದಾರೆ.

ಇನ್ನೊಂದೆಡೆ ಮಡಿಕೇರಿ ನಗರದಲ್ಲಿ ಜಿಲ್ಲಾ ನಿರ್ಮಿತಿ ಕೇಂದ್ರ, ಜಡಿ ಮಳೆಯಲ್ಲೇ ತಡೆಗೋಡೆ ಕಾಮಗಾರಿ ಕೈಗೊಂಡಿದೆ. ಜೆಸಿಬಿಯಿಂದ ಅಪಾರ ಪ್ರಮಾಣದ ಮಣ್ಣು ಕೊರೆದು ತಡೆ ಗೋಡೆ ನಿರ್ಮಿಸುತ್ತಿದ್ದು, ದಾರಿ ಹೋಕರು ಪರದಾಡುವಂತಾಗಿದೆ. ಮಲೆಗಾಲದಲ್ಲಿ ಕಾಮಗಾರಿ ಕೈಗೊಂಡು ಸರ್ಕಾರದ ಬೊಕ್ಕಸಕ್ಕೆ ಅಪಾರ ನಷ್ಟವುಂಟಾಗಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮತ್ತೊಂದೆಡೆ ಮಳಯಿಂದ ಗುಂಡಿ ಬಿದ್ದ ರಸ್ತೆಯನ್ನ ಪೊಲಿಸರೇ ಮುಚ್ಚಿ ಗಮನ ಸೆಳೆದಿದ್ದಾರೆ. ಪೊನ್ನಂಪೇಟೆ ತಾಲ್ಲೂಕಿನ ಗೋಣಿಕೊಪ್ಪಲು ಪಟ್ಟಣದಲ್ಲಿ ಮಳೆಯಿಂದಾಗಿ ಬೃಹತ್ ಹೊಂಡ ಸೃಷ್ಟಿಯಾಗಿತ್ತು. ಇದರಿಂದ ವಾಹನ ಸವಾರರು ಪರದಾಡುವಂತಾಗಿತ್ತು. ಹಾಗಾಗಿ ಗೋಣಿಕೊಪ್ಪಲು ಠಾಣೆ ಪೊಲೀಸರೆ ಕಲ್ಲು ಮಣ್ಣು ಜೆಲ್ಲಿ ತಂದು ರಸ್ತೆ ಗುಂಡಿ ಮುಚ್ಚಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



