Kodagu News: ಅಧಿಕಾರದಲ್ಲಿದ್ದಾಗ 6ರ ಬದಲು 66 ಮರ ಕಡಿಯಲು ಅಕ್ರಮವಾಗಿ ಅನುಮತಿ ನೀಡಿದ್ದ ಐಎಫ್​ಎಸ್​ ಅಧಿಕಾರಿ ಸಸ್ಪೆಂಡ್

| Updated By: ಸಾಧು ಶ್ರೀನಾಥ್​

Updated on: Jun 22, 2023 | 6:34 AM

ಒಂದಲ್ಲಾ ಎರಡಲ್ಲ ಕೋಟಿ ರೂಪಾಯಿ ಬೆಲೆ ಬಾಳುವ ಭರ್ತಿ 66 ತೇಗದ ಮರಗಳನ್ನ ಕಡಿದುರುಳಿಸಲು ಅಕ್ರಮವಾಗಿ ಅನುಮತಿ ನೀಡಿದ ಕಾರಣಕ್ಕಾಗಿ ಐಎಫ್​ ಎಸ್​ ಅಧಿಕಾರಿ ಚಕ್ರಪಾಣಿ ಸಸ್ಪೆಂಡ್ ಆಗಿದ್ದಾರೆ.

Kodagu News: ಅಧಿಕಾರದಲ್ಲಿದ್ದಾಗ 6ರ ಬದಲು 66 ಮರ ಕಡಿಯಲು ಅಕ್ರಮವಾಗಿ ಅನುಮತಿ ನೀಡಿದ್ದ ಐಎಫ್​ಎಸ್​ ಅಧಿಕಾರಿ ಸಸ್ಪೆಂಡ್
ಐಎಫ್​ ಎಸ್​ ಅಧಿಕಾರಿ ಚಕ್ರಪಾಣಿ ಸಸ್ಪೆಂಡ್
Follow us on

ಅಧಿಕಾರದಲ್ಲಿದ್ದಾಗ ಐಎಫ್​ಎಸ್​ ಅಧಿಕಾರಿಯೊಬ್ಬರು ಒಂದಲ್ಲಾ ಎರಡಲ್ಲ ಕೋಟಿ ಬೆಲೆ ಬಾಳುವ ಭರ್ತಿ 66 ತೇಗದ ಮರಗಳನ್ನ ಕಡಿದುರುಳಿಸಲು ಅಕ್ರಮವಾಗಿ ಅನುಮತಿ ನೀಡಿದ ಕಾರಣಕ್ಕಾಗಿ ಸಸ್ಪೆಂಡ್ (Suspend) ಆಗಿದ್ದಾರೆ. ಚಕ್ರಪಾಣಿ… ಕೊಡಗು ಜಿಲ್ಲೆ ವಿರಾಜಪೇಟೆ ವಿಭಾಗದ ಡಿಸಿಎಫ್ (Virajpet DCF) ಆಗಿದ್ದಾಗ ಇದೇ ಜನವರಿಯಲ್ಲಿ ಪೊನ್ನಂಪೇಟೆ ತಾಲ್ಲೂಕಿನ ಕುಟ್ಟ ಗ್ರಾಮದ ಎಂಎನ್ ರಮೇಶ್​ ಎಂಬುವವರು ತಮ್ಮ ಕಾಫಿ ತೋಟದಲ್ಲಿದ್ದ (Coffee Estate) ಆರು ತೇಗದ ಮರಗಳನ್ನು (Teak Trees) ಕಡಿಯಲು ಅನುಮತಿ ನೀಡುವಂತೆ ಅರ್ಜಿ ಹಾಕ್ತಾರೆ. ಈ ಅರ್ಜಿಯನ್ನು ಗಮನಿಸಿದ ಡಿಸಿಎಫ್ ಚಕ್ರಪಾಣಿ ರಮೇಶ್ ಅವರ ಸಹಿಯನ್ನ ನಕಲು ಮಾಡಿ ಆರು ಮರಗಳ ಬದಲು ಸಂಪೂರ್ಣ ಬೆಳದು ನಿಂತಿರುವ ಭರ್ತಿ 66 ತೇಗದ ಮರಗಳನ್ನ ಕಡಿದುರುಳಿಸಲು ಅನುಮತಿ ನೀಡ್ತಾರೆ. ಈ ಒಂದೊಂದು ಮರವೂ ಎರಡು ಮೀಟರ್​ಗಿಂತಲೂ ದಪ್ಪವಿದ್ದು. 60 ವರ್ಷಕ್ಕೂ ಅಧಿಕ ಹಳೆಯದ್ದಾಗಿದ್ದವು. ಹಾಗಾಗಿ ಈ 66 ಮರಗಳು ಎಷ್ಟೋ ಕೋಟಿ ರೂಪಾಯಿಗೆ ಬೆಲೆ ಬಾಳುತ್ತಿದ್ದವು. ಇಂತಹ ಮರಗಳನ್ನು ಕಡಿದುರುಳಿಸಲು ಈ ಅಧಿಕಾರಿ ಅನುಮತಿ ನೀಡ್ತಾರೆ.

ಆದರೆ ಇದು ಹೇಗೋ ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದು ತನಿಖೆಗೆ ಒಳಪಡುತ್ತದೆ. ಕೊಡಗು ಜಿಲ್ಲೆಯ ಸಿಸಿಎಫ್​ ಮೂರ್ತಿ ಅವರೇ ತನಿಖೆ ನಡೆಸಿ ರಾಜ್ಯ ಸರ್ಕಾರಕ್ಕೆ ವರದಿ ನೀಡ್ತಾರೆ. ಅದರ ಪ್ರಕಾರ ಚಕ್ರಪಾಣಿ ಅವರು ಉದ್ದೇಶಪೂರ್ವಕವಾಗಿಯೇ 66 ಮರಗಳನ್ನ ಕಡಿಯಲು ಅನಮತಿ ನೀಡಿರುವುದು ಬೆಳಕಿಗೆ ಬರುತ್ತದೆ. ಮಾತ್ರವಲ್ಲ. ಇಷ್ಟೊಂದು ಅಗಾಧ ಮರಗಳನ್ನ ಕಡಿಯಲು ಅನುಮತಿ ನೀಡುವಾಗಿ ಕಂದಾಯ ಇಲಾಖೆಯಿಂದಾಗಲಿ ಇತರ ಇಲಾಖೆಯಿಂದಾಗಲಿ ಸರ್ವೆ ಅಥವಾ ಇತರ ಯಾವುದೇ ನೀತಿ ನಿಯಮಗಳನ್ನು ಕೂಡ ಪಾಲಿಸಿರುವುದಿಲ್ಲ. ಅದೂ ಅಲ್ಲದೆ ತನಿಖೆಯ ಸಂದರ್ಭ ದಾಖಲಾತಿಗಳನ್ನ ಮನಸೋ ಇಚ್ಛೆ ತಿದ್ದಿ ಸಾಕ್ಷ್ಯ ನಾಶ ಮಾಡಲು ಪ್ರಯತ್ನಿಸಿದ ಆರೋಪ ಇವರ ಮೇಲೆ ಬರುತ್ತದೆ.

ಹೌದು ಅರಣ್ಯ ಇಲಾಖೆಯ ಉನ್ನತ ತನಿಖೆಯ ವೇಳೆ ಐಎಫ್ ಅಧಿಕಾರಿ ಚಕ್ರಪಾಣಿ ಅಕ್ರಮ ಎಸಗಿರುವುದು, ಸಾಕ್ಷ್ಯಾಧಾರ ನಾಶಪಡಿಸಿರುವುದು, ನೀತಿ ನಿಯಮಗಳನ್ನ ಗಾಳಿಗೆ ತೂರಿರುವುದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಇದೀಗ ಅವರನ್ನ ಸೇವೆಯಿಂದ ಅಮಾನತು ಪಡಿಸಿ ಆದೇಶ ಹೊರಡಿಸಲಾಗಿದೆ. ಸರ್ಕಾರದ ಅಧೀನ ಕಾರ್ಯದರ್ಶಿ ಹೆಚ್​ ಆರ್ ಅನುರಾಧ ಅವರು ಈ ಆದೇಶ ಹೊರಡಿಸಿದ್ದಾರೆ. ಅರಣ್ಯ ಸಚಿವ ಈಶ್ವರ್ ಖಂಡ್ರೆ ಸೂಚನೆ ಮೇರೆಗೆ ಈ ಆದೇಶ ಹೊರಡಿಸಲಾಗಿದೆ ಎನ್ನಲಾಗುತ್ತದೆ.

Also read: Monsoon: ಕೊಡಗಿನಲ್ಲಿ ಮುಂಗಾರು ರೈತರಿಗೆ ಕೈಕೊಟ್ಟಿದೆ, ಆದರೆ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ!

ಹಾಗೆ ನೋಡಿದ್ರೆ ಡಿಸಿಎಫ್ ಚಕ್ರಪಾಣಿ ಕೊಡಗಿನಲ್ಲಿ ಅಧಿಕಾರದ್ದಲ್ಲಿದ್ದಾಗ ಜನಪರವಾಗಿರಲಿಲ್ಲ, ಆನೆ ಮಾನವ ಸಂಘರ್ಷದಿಂದ ತೀವ್ರ ಸಂಕಷ್ಟದಲ್ಲಿದ್ದಾಗ ಈ ಅಧಿಕಾರಿ ಯಾವುದೇ ರೀತಿಯ ಸ್ಪಂದನೆ ಮಾಡುತ್ತಿರಲಿಲ್ಲ ಎಂಬ ಆರೋಪವಿದೆ. ಏನೇ ಸಮಸ್ಯೆ ಹೇಳಿಕೊಂಡು ಹೋದರೆ ಈ ಅಧಿಕಾರಿ ದರ್ಪದ ಮಾತನಾಡುತ್ತಿದ್ದರು ಎನ್ನಲಾಗಿದೆ. ಹಾಗಾಗಿ ಬಹಳಷ್ಟು ಬಾರಿ ಇಲ್ಲಿನ ಸ್ಥಳೀಯರು ಈ ಅಧಿಕಾರಿಯ ವಿರುದ್ಧ ಪ್ರತಿಭಟನೆಗಳನ್ನ ಕೂಡ ನಡೆಸಿದ್ದರು. ಅಧಿಕಾರಿಯ ಅಮಾನತ್ತಿಗೆ ಆಗ್ರಹಿಸಿದ್ದರು. ಇದೀಗ ಈ ಅಧಿಕಾರಿ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ವರ್ಗಾವಣೆಯಾಗಿ ಹೋಗಿದ್ದಾರೆ. ಆದ್ರೆ ಆರು ತಿಂಗಳ ಹಿಂದೆ ಮಾಡಿದ ಪಾಪದ ಕರ್ಮ ಇದೀಗ ಅವರಿಗೇ ಉರುಳಾಗಿದೆ. ಅರಣ್ಯ ರಕ್ಷಣೆ ಮಾಡುವವರೆ ಹೀಗಾದ್ರೆ ಇನ್ನು ನಮ್ಮ ಜನಸಾಮಾನ್ಯರ ಪಾಡೇನು ಅಂತ ಎಲ್ಲರೂ ಪ್ರಶ್ನಿಸುವಂತಾಗಿದೆ.

ಕೊಡಗು ಕುರಿತಾದ ಜಿಲ್ಲಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:32 am, Thu, 22 June 23