11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ: ಆಗಿದ್ದೇನು?
ವಿಮೆ ಹಣಕ್ಕಾಗಿ ತನ್ನದೇ ಕೊಲೆ ನಾಟಕವಾಡಿದ್ದ ಕೋಲಾರದ ಅರುಣ್ ಕುಮಾರ್ ಅನ್ನು 11 ವರ್ಷಗಳ ಬಳಿಕ ಚೆನ್ನೈನಲ್ಲಿ ಬಂಧಿಸಲಾಗಿದೆ. 2015ರಲ್ಲಿ ಈ ವಂಚಕ ಸತ್ತವರ ದೇಹ ಬಳಸಿಕೊಂಡು ತನ್ನ ಹತ್ಯೆಯಾಗಿದೆ ಎಂದು ನಂಬಿಸಿದ್ದ. ಪೊಲೀಸರ ತನಿಖೆಯಿಂದ ಸತ್ಯ ಬಯಲಾಗಿ, ಕೊಲೆ ಪ್ರಕರಣವು ವಂಚನೆಯಾಗಿ ಬದಲಾಗಿತ್ತು. ಕೋರ್ಟ್ಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕ್ಯಾಸಂಬಳ್ಳಿ ಪೊಲೀಸರು ಸೆರೆ ಹಿಡಿದಿದ್ದಾರೆ.
ಕೋಲಾರ, ಆಗಸ್ಟ್ 23: ಕೋಲಾರ ಜಿಲ್ಲೆ ಕೆಜಿಎಫ್ ತಾಲೂಕಿನ ಕ್ಯಾಸಂಬಳ್ಳಿ ಪೊಲೀಸರು, ವಿಮೆ ಹಣಕ್ಕಾಗಿ ತನ್ನದೇ ಕೊಲೆಯ ನಾಟಕವಾಡಿದ್ದ ವಂಚಕ ಅರುಣ್ ಕುಮಾರ್ನನ್ನು 11 ವರ್ಷಗಳ ಬಳಿಕ ಚೆನ್ನೈನಲ್ಲಿ ಬಂಧಿಸಿದ್ದಾರೆ. ತಾನು ಮಾಡಿದ್ದ ಸಾಲ ತೀರಿಸಲು ಮತ್ತು ಇನ್ಶೂರೆನ್ಸ್ ಹಣ ಪಡೆಯಲು ಬೇರೊಂದು ಶವವನ್ನು ತಂದು, ತನ್ನ ಬಟ್ಟೆ-ಚಪ್ಪಲಿ ಹಾಕಿ, ಮುಖ ಸುಟ್ಟು ‘ತಾನೇ ಕೊಲೆಯಾಗಿದ್ದೇನೆ’ ಎಂದು ಸಿನಿಮೀಯ ಮಾದರಿಯಲ್ಲಿ ಜೀವಂತ ಸಮಾಧಿಯ ಡ್ರಾಮಾ ಸೃಷ್ಟಿಸಿದ್ದ ಆರೋಪಿ. ಆರಂಭದಲ್ಲಿ ಅರುಣ್ ಕುಮಾರ್ ಕೊಲೆ ಆಗಿದ್ದಾನೆ ಎಂದು ನಂಬಲಾಗಿತ್ತು. ಆದರೆ, ಮರಣೋತ್ತರ ಪರೀಕ್ಷೆ ವರದಿಯಲ್ಲಿ ಅನುಮಾನಗಳು ವ್ಯಕ್ತವಾಗಿದ್ದವು. ಪೊಲೀಸರು ಅರುಣ್ ಕುಮಾರ್ನ ಆಪ್ತ ಸ್ನೇಹಿತ ನಾಗರಾಜ್ನನ್ನು ವಿಚಾರಿಸಿದಾಗ, ಇದು ಅರುಣ್ ಕುಮಾರ್ ಮಾಡಿದ ನಕಲಿ ಕೊಲೆಯ ನಾಟಕ ಎಂಬುವುದು ಬಯಲಾಗಿತ್ತು. ಬಳಿಕ ಪೊಲೀಸರು ಆತನನ್ನು ಬಂಧಿಸಿದ್ದರು. ಜಾಮೀನಿನ ಮೇಲೆ ಹೊರಬಂದ ಅರುಣ್ ಕುಮಾರ್ 11 ವರ್ಷಗಳಿಂದ ಕೋರ್ಟ್ಗೆ ಹಾಜರಾಗದೆ ಚೆನ್ನೈನಲ್ಲಿ ತಲೆಮರೆಸಿಕೊಂಡಿದ್ದ. ಇದೀಗ ಕ್ಯಾಸಂಬಳ್ಳಿ ಪೊಲೀಸರು ಅವನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

