
ಕೋಲಾರ, (ಜುಲೈ 07): ಚಿನ್ನದ ನಾಡು ಕೆಜಿಎಫ್ ನಲ್ಲಿ ಬರೋಬ್ಬರಿ 60 ಎಕರೆ ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ. ಹೌದು.. ಕೆಜಿಎಫ್ ನಲ್ಲಿ ಕೈಗಾರಿಕೆಗಳ ಅಭಿವೃದ್ದಿ, ಹೆದ್ದಾರಿ ಅಭಿವೃದ್ದಿಯಾಗುತ್ತಿದ್ದಂತೆ ಭೂಮಿಗೆ ಚಿನ್ನದ ಬೆಲೆ ಬಂದಿದೆ, ಪರಿಣಾಮ ಸರ್ಕಾರಿ ಜಮೀನುಗಳ ಮೇಲೆ ಭೂಗಳ್ಳರ ಕಣ್ಣು ಬಿದ್ದಿದೆ. ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಸರ್ಕಾರಿ ಜಮೀನು ರಕ್ಷಣೆ ಮಾಡಬೇಕಾದವರೆ ಭೂಮಿ ಕಬಳಿಕೆಗೆ ಪರೋಕ್ಷ ಬೆಂಬಲ ನೀಡುತ್ತಿರುವ ಅನುಮಾನ ಇದೀಗ ಮೂಡಿದೆ. ಕೆಜಿಎಫ್ ಶಾಸಕಿ ಹಾಗೂ ಅವರ ಬೆಂಬಲಿಗರು ಸರ್ಕಾರಿ ಜಮೀನನ್ನ ಕಬಳಿಕೆ ಮಾಡಿರುವ ಆರೋಪವನ್ನ ಮಾಜಿ ಶಾಸಕ ವೈ.ಸಂಪಂಗಿ ಮಾಡಿದ್ದಾರೆ.
ಕೆಜಿಎಫ್ ತಾಲ್ಲೂಕಿನ ಬೇತಮಂಗಲ ಹೋಬಳಿಯ ಕದಿರೇಗೌಡನಕೊಟೆ ಸರ್ವೆ ನಂ.121 ರಲ್ಲಿ 1989 ರಲ್ಲಿ ಜಮೀನು ಪಡೆದಿರುವ ರೀತಿಯಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ 14 ರೈತರ ಹೆಸರಿನಲ್ಲಿ ಅಂದಾಜು 4 ಎಕರೆ ಭೂ ಮಂಜೂರಾತಿಗೆ ಸಂಬಂಧಿಸಿದಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಾರೆ ಎನ್ನಲಾಗಿದೆ. ಗ್ರಾಮದ ಸರ್ವೆ ನಂ.121ರಲ್ಲಿ 150 ಕೋಟಿ ಬೆಲೆ ಬಾಳುವ 60 ಎಕರೆ ಸರಕಾರಿ ಜಮೀನನ್ನು ಶಾಸಕರ ಆಪ್ತರು ನುಂಗಲು ಮುಂದಾಗಿದ್ದು,ಕೆಜಿಎಫ್ ತಾಲೂಕಿನಲ್ಲೂ ಸರ್ಕಾರಿ ಜಮೀನುಗಳಿಗೆ ರಕ್ಷಣೆ ಇಲ್ಲದಂತಾಗಿದೆ ಎಂಬುದು ಮಾಜಿ ಶಾಸಕ ವೈ.ಸಂಪಂಗಿ ಗಂಭೀರ ಆರೋಪವಾಗಿದೆ.
ಕೆಜಿಎಫ್ ನಲ್ಲಿ ಸರಕಾರಿ ಜಮೀನು ಕಬಳಿಕೆಯ ಜಾಲವೊಂದು ಸಿದ್ದವಾಗಿದ್ದು, 60 ಎಕರೆಗೆ ನಕಲಿ ದಾಖಲೆಗಳು ಸೃಷ್ಟಿಸಿದ್ದಾರೆ. ಶ್ರೀನಿವಾಸಪುರ ತಾಲೂಕಿನ ಸುಗಟೂರು ಹೋಬಳಿಯ ಕಿತ್ತಂಡೂರು ಮೂಲದವರಿಗೆ ಜಮೀನು ಮಂಜೂರು ಆಗಿರುವಂತೆ ಸಾಗುವಳಿ ಚೀಟಿ ನೀಡಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಇನ್ನೂ ನೂರಾರು ಕೋಟಿ ಜಮೀನು ಕಬಳಿಕೆಗೆ ಶಾಸಕರ ಬೆಂಬಲಿಗರು ಮುಂದಾಗಿದ್ದು, ಸರಕಾರಿ ಭೂಮಿಯನ್ನು ರಕ್ಷಿಸುವಂತೆ ಒತ್ತಾಯಿಸಿದ್ದಾರೆ.
ಇನ್ನೂ ಅಂದಾಜು 150 ಕೋಟಿ ರೂ. ಬೆಲೆ ಬಾಳುವ ಸರಕಾರಿ ಜಮೀನು ಮಂಜೂರಾತಿಗೆ ಸಂಬಂಧಿಸಿದಂತೆ ಕೆಜಿಎಫ್ ಈ ಹಿಂದಿನ ತಹಸೀಲ್ದಾರ್ ಭರತ್ ಅವರ ಮೇಲೆ ಶಾಸಕರ ಆಪ್ತರು ಒತ್ತಡ ಹಾಕುತ್ತಿದ್ದರು ಎನ್ನಲಾಗಿದೆ. ತಾವು ಸೂಚಿಸಿದ ಕತಡಗಳಿಗೆ ಸಹಿ ಹಾಕದಿದ್ದರೆ ವರ್ಗಾವಣೆ ಮಾಡಿಸುತ್ತೇವೆಂದು ಬೆದರಿಕೆ ಹಾಕುತ್ತಿದ್ದಾರೆಂಬ ಆರೋಪಗಳು ಬಂದಿವೆ. ಅದರಂತೆ ಮೂರು ದಿನಗಳ ಹಿಂದೆ ವರ್ಗಾವಣೆಯಾಗಿರುವ ತಹಶೀಲ್ದಾರ್ ಭರತ್ ಇದಕ್ಕೆ ಪುಷ್ಠಿ ನೀಡುವಂತಿದೆ. ಜೊತೆಗೆ 1989ರಲ್ಲಿ ಬಂಗಾರಪೇಟೆ ತಹಶೀಲ್ದಾರ್ ಕಚೇರಿಯಲ್ಲಿ ತರೀನಾ ಎಂಬುವರು ಯಾರು ಇಲ್ಲ ತರೀನಾ ಎಂದು ಸಹಿ ಮಾಡಿದ್ದಾರೆ. ಅಂತಹವರು ಕಾರ್ಯ ನಿರ್ವಹಿಸಿರುವ ಕುರಿತು ದಾಖಲೆಗಳೇ ಇಲ್ಲ. ಈ ಹಿಂದೆ ರೂಪಕಲಾ ಶಶಿಧರ್ ಶಾಸಕರಾದ ಬಳಿಕ 524 ಎಕರೆ ಸರಕಾರಿ ಜಮೀನಿಗೆ ಕಾನೂನು ಬಾಹಿರವಾಗಿ ಸಾಗುವಳಿ ಚೀಟಿ ಮಂಜೂರು ಮಾಡಿರುವ ಆರೋಪಗಳು ಕೇಳಿ ಬಂದಿವೆ.
ಕಾನೂನು ಬಾಹಿರವಾಗಿ ಸರಕಾರಿ ಜಮೀನು ಕಬಳಿಕೆ ಮಾಡುವ ಪ್ರಯತ್ನ ನಡೆಯುತ್ತಿದ್ದರೂ ಶಾಸಕರು ತಮಗೂ ತಾಲೂಕಿಗೆ ಸಂಬಂಧವಿಲ್ಲ ಎನ್ನುವಂತಿದ್ದಾರೆ.ಕೋಲಾರ ತಾಲ್ಲೂಕಿನ ರೈತ 60-70 ಕಿ.ಮೀ ದೂರ ಬಂದು ಕೃಷಿ ಮಾಡಲು ಸಾಧ್ಯವೇ ಕೆಜಿಎಫ್ ನಲ್ಲಿಯೇ ನೂರಾರು ಜಮೀನು ರಹಿತರಿದ್ದರೂ ಶಾಸಕರು ಬಡವರಿಗೆ ಜಮೀನು ನೀಡುವ ಪ್ರಯತ್ನ ಮಾಡದೆ, ಬಲಾಢ್ಯರು ಹಾಗೂ ಆತ್ಮೀಯರಿಗೆ ಜಮೀನು ಮಾಡಿಕೊಡಲು ಮುಂದಾಗಿದ್ದಾರೆಯೇ ಎಂಬ ಸಂಶಯ ಮೂಡುತ್ತಿದೆ. ಇನ್ನೂ ಇಷ್ಟೆಲ್ಲಾ ವಿಚಾರಗಳು ದೂರಿನ ರೂಪದಲ್ಲಿ ತಮ್ಮ ಗಮನಕ್ಕೆ ಬಂದಿದೆ. ಆದಷ್ಟು ಬೇಗ ಅಲ್ಲಿ ಏನಾಗಿದೆ ಎಂಬುದನ್ನ ಪರಿಶೀಲನೆ ಮಾಡುತ್ತೇನೆ ಎನ್ನುವುದು ಹೊಸ ತಹಶೀಲ್ದಾರ್ ಗಾಯತ್ರಿ ಅವರ ಮಾತು.