ಸಚಿವ ಕೃಷ್ಣಭೈರೇಗೌಡರ ಆಪ್ತನಿಂದ ರಾಷ್ಟ್ರಪತಿಗಳ ಹೆಸರಿನಲ್ಲಿರುವ ಜಾಗ ಕಬಳಿಕೆ ಆರೋಪ: ಲೋಕಾಯುಕ್ತಕ್ಕೆ ದೂರು
ಬೆಂಗಳೂರಿನ ಕೊಡಿಗೇಹಳ್ಳಿಯಲ್ಲಿ ರಾಷ್ಟ್ರಪತಿಗಳ ಹೆಸರಿನಲ್ಲಿದ್ದ₹100 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಕೇಂದ್ರ ಇಂಧನ ಸಚಿವಾಲಯದ ಜಾಗವನ್ನು ಸಚಿವ ಕೃಷ್ಣಭೈರೇಗೌಡರ ಆಪ್ತ ಎನ್ನಲಾದ ಕೆ.ಎಂ. ಚೇತನ್ ಕಬಳಿಸಿದ್ದಾರೆ ಎಂದು ಆರೋಪಿಸಿ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. ಬೆಂಗಳೂರು ಉತ್ತರ ತಾಲೂಕಿನ ಯಲಹಂಕ ಹೋಬಳಿಯ ಕೊಡಿಗೇಹಳ್ಳಿ ಗ್ರಾಮದಲ್ಲಿನ ಚೇರ್ಮ್ಯಾನ್ ಕ್ಲಬ್ ಪಕ್ಕದಲ್ಲಿರುವ ಜಾಗವನ್ನು ಕಬಳಿಸಲಾಗಿದೆ ಎಂದು ಬಿಜೆಪಿ ಮುಖಂಡ ಎನ್.ಆರ್. ರಮೇಶ್ ಗಂಭೀರ ಆರೋಪ ಮಾಡಿದ್ದಾರೆ.

ಮುಖ್ಯಾಂಶಗಳು
- ರಾಷ್ಟ್ರಪತಿಗಳ ಹೆಸರಿನಲ್ಲಿರುವ ಜಾಗ ಕಬಳಸಿದ್ರಾ ಸಚಿವರ ಆಪ್ತ?
- ಬಿಜೆಪಿ ಮುಖಂಡ ಎನ್.ಆರ್. ರಮೇಶ್ರಿಂದ ಗಂಭೀರ ಆರೋಪ
- ಕೆ.ಎಂ. ಚೇತನ್ ಎಂಬವರ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಕೆ
ಬೆಂಗಳೂರು, ಜುಲೈ 07: ಸಚಿವ ಕೃಷ್ಣ ಭೈರೇಗೌಡರ ಆಪ್ತ ಎನ್ನಲಾಗಿರುವ ಕೆ.ಎಂ. ಚೇತನ್ ಎಂಬವರ ವಿರುದ್ಧ ಭಾರತದ ರಾಷ್ಟ್ರಪತಿಗಳ ಹೆಸರಿನಲ್ಲಿರುವ ನೂರಾರು ಕೋಟಿ ಮೌಲ್ಯದ ಸರ್ಕಾರಿ ಸ್ವತ್ತು ಕಬಳಿಸಿರುವ ಗಂಭೀರ ಆರೋಪ ಕೇಳಿಬಂದಿದೆ. ನಕಲಿ ದಾಖಲೆಗಳನ್ನು ಸೃಷ್ಟಿಸಿ ಜಾಗ ಕಬಳಿಸಲಾಗಿದೆ ಎಂದು ಆರೋಪಿಸಿ 2015-2020ರ ಅವಧಿಯಲ್ಲಿ ಬ್ಯಾಟರಾಯನಪುರದ ಕೊಡಿಗೇಹಳ್ಳಿ ವಾರ್ಡ್ನ ಪಾಲಿಕೆ ಸದಸ್ಯರಾಗಿದ್ದ ಚೇತನ್ ವಿರುದ್ಧ ಲೋಕಾಯುಕ್ತಕ್ಕೆ ಬಿಜೆಪಿ ಮುಖಂಡ ಎನ್.ಆರ್. ರಮೇಶ್ ದೂರು ಸಲ್ಲಿಸಿದ್ದಾರೆ.
32 ಗುಂಟೆ ಜಾಗಕ್ಕೆ ರಾತ್ರೋರಾತ್ರಿ ಬೇಲಿ
ಬೆಂಗಳೂರು ಉತ್ತರ ತಾಲೂಕಿನ ಯಲಹಂಕ ಹೋಬಳಿಯ ಕೊಡಿಗೇಹಳ್ಳಿ ಗ್ರಾಮದಲ್ಲಿನ ಚೇರ್ಮ್ಯಾನ್ ಕ್ಲಬ್ ಪಕ್ಕದಲ್ಲಿರುವ ಜಾಗವನ್ನು ಕಬಳಿಸಲಾಗಿದೆ. ಕೇಂದ್ರ ಇಂಧನ ಸಚಿವಾಲಯದ 32 ಗುಂಟೆ ವಿಸ್ತೀರ್ಣದ ಸ್ವತ್ತನ್ನೂ ಸೇರಿಸಿಕೊಂಡು ಚೇತನ್ ಕಾಂಪೌಂಡ್ ನಿರ್ಮಿಸಿಕೊಂಡಿದ್ದಾರೆ. ಈ ಜಾಗದ ಮೌಲ್ಯ ಸುಮಾರು 100 ಕೋಟಿ ರೂ.ಗಳಿಗೂ ಹೆಚ್ಚಾಗಿದೆ. ಸರ್ವೆ ನಂಬರ್ 14/1ರ 1 ಎಕರೆ 11 ಗುಂಟೆ ಜಾಗ ಮಾತ್ರ ಕ್ಲಬ್ಗೆ ಸೇರಿದೆ. ಅದಕ್ಕೆ ಹೊಂದಿಕೊಡಂತೆ ಪಶ್ಚಿಮ ಭಾಗದಲ್ಲಿ ರಾಷ್ಟ್ರಪತಿಗಳ ಹೆಸರಲ್ಲಿ ಇಂಧನ ಸಚಿವಾಲಯದ ಜಾಗ ಇದ್ದು, ಅಲ್ಲಿ ಇಂಧನ ಸಚಿವಾಲಯದ ಕ್ವಾಟ್ರಸ್ಗಳನ್ನ ನಿರ್ಮಿಸಲಾಗಿದೆ. ಅದರ ಹೊರತಾಗಿ ಖಾಲಿ ಇದ್ದ 32 ಗುಂಟೆ ಜಾಗಕ್ಕೆ ರಾತ್ರೋರಾತ್ರಿ ಬೇಲಿ ಹಾಕಿದ್ದಾರೆ. ತಪ್ಪು ಮಾಹಿತಿ ನೀಡಿ ಜಿಲ್ಲಾಧಿಕಾರಿಗಳಿಂದ ಭೂ ಪರಿವರ್ತನೆ ಮಾಡಿಕೊಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಪಾಕ್ ಅಧಿಕಾರಿಗಳ ಜೊತೆ ರಾಮ್ ಮಾಧವ್ ಗೌಪ್ಯಸಭೆ ಹೇಳಿಕೆ; ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ಗೆ ಲೀಗಲ್ ನೋಟಿಸ್
ಅಧಿಕಾರಿಗಳಿಗೆ ಬೆದರಿಕೆ ಆರೋಪ
ಈ ಬಗ್ಗೆಇಂಧನ ಸಚಿವಾಲಯ ದೂರು ದಾಖಲಿಸಿದ್ದು, ಉಚ್ಚ ನ್ಯಾಯಲಯದಲ್ಲಿ ವಿಚಾರಣೆ ಕೂಡ ನಡೆದಿದೆ. ಈ ವೇಳೆ ತಪ್ಪನ್ನು ಚೇತನ್ ಒಪ್ಪಿಕೊಂಡಿದ್ದಾರೆ. ಅದಾದ ಬಳಿಕ ಏಪ್ರಿಲ್ನಲ್ಲಿ ಅಂದಿನ ಕಂದಾಯ ಸಚಿವರಾಗಿದ್ದ ಕೃಷ್ಣಭೈರೇಗೌಡರನ್ನ ಇಂಧನ ಸಚಿವಾಲಯದ ಅಧಿಕಾರಿಗಳು ಭೇಟಿ ಮಾಡುತ್ತಾರೆ. ಆದರೆ ಆ ವೇಳೆ ಅವರನ್ನ ದಬ್ಬಾಳಿಕೆ ಮಾಡಿ ಹೊರದಬ್ಬುವ ಕೆಲಸ ನಡೆದಿದೆ. ಜಾಗವನ್ನ ತಮ್ಮ ವಶಕ್ಕೆ ಪಡೆದುಕೊಳ್ಳಲು ಅಧಿಕಾರಿಗಳು ಹೋದಾಗ ಚೇತನ್, ಅವರ ತಂದೆ ಮಂಜುನಾಥ್, ಕೃಷ್ಣ ಭೈರೇಗೌಡರ ಬೆಂಬಲಿಗರು ಅವರನ್ನಯ ಹೆದರಿಸಿದ್ದಾರೆ. ಶಾಲಿನಿ ರಜನೀಶ್ ಅವರಿಗೂ ಕೂಡ ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದ್ದರು. ಆದರೆ ಅವರು ಕೂಡ ಪರೋಕ್ಷವಾಗಿ ಕೃಷ್ಣಭೈರೇಗೌಡರಿಗೆ ಸಹಕಾರ ನೀಡಿದ್ದಾರೆ. ಈ ವಿಚಾರವಾಗಿ ಲೋಕಾಯುಕ್ತಾಗೆ ದೂರು ನೀಡಿದ್ದು, ಮುಖ್ಯಮಂತ್ರಿಗಳಿಗೂ ಇದರ ದಾಖಲೆ ನೀಡಿ ಸಿಬಿಐ ತನಿಖೆ ಆಗ್ರಹಿಸುತ್ತೇನೆ ಎಂದು ಎನ್.ಆರ್. ರಮೇಶ್ ತಿಳಿಸಿದ್ದಾರೆ.
ವರದಿ: ಅರುಣ್ ಕುಮಾರ್, ಟಿವಿ9 ಬೆಂಗಳೂರು
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:47 pm, Tue, 7 July 26




