ಕೋಲಾರ: ಹೋಟೆಲ್​, ಬೇಕರಿಗಳಲ್ಲಿ ಅಕ್ರಮವಾಗಿ ಬಳಕೆ ಮಾಡುತ್ತಿದ್ದ 21 ಗೃಹಬಳಕೆ ಸಿಲಿಂಡರ್​ ವಶಕ್ಕೆ

ಸದ್ಯ ರಾಜ್ಯದಲ್ಲಿ ಎಲ್ಲೆಡೆ ಗ್ಯಾಸ್​ ಸಿಲಿಂಡರ್​​ ಕೊರತೆ ಉಂಟಾಗಿದೆ. ಈ ಮಧ್ಯೆ ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿ ಹೋಟೆಲ್ ಹಾಗೂ ಬೇಕರಿಗಳಲ್ಲಿ ವಾಣಿಜ್ಯ ಸಿಲಿಂಡರ್ ಬದಲು ಅಕ್ರಮವಾಗಿ ಗೃಹಬಳಕೆ ಸಿಲಿಂಡರ್‌ಗಳನ್ನು ಬಳಸುತ್ತಿರುವುದು ಪತ್ತೆ ಆಗಿದೆ. ಸದ್ಯ 21 ಗೃಹಬಳಕೆ ಸಿಲಿಂಡರ್​​ಗಳನ್ನು​ ವಶಕ್ಕೆ ಪಡೆಯಲಾಗಿದೆ.

ಕೋಲಾರ: ಹೋಟೆಲ್​, ಬೇಕರಿಗಳಲ್ಲಿ ಅಕ್ರಮವಾಗಿ ಬಳಕೆ ಮಾಡುತ್ತಿದ್ದ 21 ಗೃಹಬಳಕೆ ಸಿಲಿಂಡರ್​ ವಶಕ್ಕೆ
ಗೃಹಬಳಕೆ ಸಿಲಿಂಡರ್​ ವಶಕ್ಕೆ
Image Credit source: tv9 kannada
Edited By:

Updated on: Mar 15, 2026 | 4:31 PM

ಕೋಲಾರ, ಮಾರ್ಚ್​​ 15: ಗ್ಯಾಸ್​ ಸಿಲಿಂಡರ್​ (LPG Cylinder) ಹೊಡೆತಕ್ಕೆ ಕೇವಲ ಉದ್ಯಮಗಳು ಮಾತ್ರವಲ್ಲ, ಜನಸಾಮಾನ್ಯರು ಕೂಡ ತತ್ತರಿಸಿ ಹೋಗಿದ್ದಾರೆ. ಖಾಲಿ ಗ್ಯಾಸ್​​ ಹಿಡಿದು ಜನರು ಏಜೆನ್ಸಿಗಳ ಮುಂದೆ ಜಮಾಯಿಸುತ್ತಿದ್ದಾರೆ. ಕಾಳಸಂತೆಯಲ್ಲಿ ಸಿಲಿಂಡರ್​ಗಳನ್ನು ಪೂರೈಸಲಾಗುತ್ತಿದೆ ಎಂಬ ದೂರುಗಳು ಕೇಳಿಬಂದಿದೆ. ಈ ಮಧ್ಯೆ ನಗದರಲ್ಲಿ ಹೋಟೆಲ್​, ಬೇಕರಿಗಳಲ್ಲಿ ಅಕ್ರಮವಾಗಿ ಬಳಕೆ ಮಾಡುತ್ತಿದ್ದ 21 ಗೃಹಬಳಕೆ ಸಿಲಿಂಡರ್​ಗಳನ್ನು ತಹಶೀಲ್ದಾರ್ ವಶಕ್ಕೆ ಪಡೆದಿದ್ದಾರೆ.

ತಹಶೀಲ್ದಾರ್ ಸುಜಾತಾ ನೇತೃತ್ವದಲ್ಲಿ ಕಾರ್ಯಾಚರಣೆ

ಕೋಲಾರ ಜಿಲ್ಲೆಯ ಬಂಗಾರಪೇಟೆ ತಹಶೀಲ್ದಾರ್ ಸುಜಾತಾ ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಲಾಗಿದೆ. 2 ಬೇಕರಿ ಮತ್ತು 5ಕ್ಕೂ ಹೆಚ್ಚು ಹೋಟೆಲ್​ಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ಮಾಡಲಾಗಿದ್ದು, ಈ ವೇಳೆ ಮಾಲೀಕರು ವಾಣಿಜ್ಯ ಸಿಲಿಂಡರ್ ಬದಲು ಗೃಹಬಳಕೆ ಸಿಲಿಂಡರ್ ಬಳಸುತ್ತಿರುವುದು ಪತ್ತೆ ಆಗಿದೆ.

ಇದನ್ನೂ ಓದಿ: ಕರ್ನಾಟಕದಾದ್ಯಂತ ಸಿಲಿಂಡರ್ ಕೊರತೆ: ಕಾಳಸಂತೆಯಲ್ಲಿ ಗ್ಯಾಸ್ ದಂಧೆ, 1 ಸಿಲಿಂಡರ್ ದರ 7 ಸಾವಿರ ರೂ!

ಸದ್ಯ 21 ಸಿಲಿಂಡರ್​ಗಳನ್ನು ವಶಕ್ಕೆ ಪಡೆದ ತಹಶೀಲ್ದಾರ್ ಸುಜಾತಾ ಎಚ್ಚರಿಕೆ ಕೂಡ ನೀಡಿದ್ದಾರೆ. ಇನ್ನು ದಾಳಿ ವೇಳೆ ಕೆಲವು ಹೋಟೆಲ್​ಗಳಲ್ಲಿ ಸ್ವಚ್ಛತೆ ಇಲ್ಲದಿರುವುದು ಕೂಡ ಪತ್ತೆ ಆಗಿದೆ. ಹೀಗಾಗಿ ಸುರಭಿ ಹೋಟೆಲ್‌ನಲ್ಲಿ ಅಧಿಕಾರಿಗಳು ನೀರಿನ ಸ್ಯಾಂಪಲ್ ಸಂಗ್ರಹಿಸಿದ್ದಾರೆ.

ಹೋಟೆಲ್​ಗಳು ಬಂದ್​: ಆಲೂಗಡ್ಡೆ ಸೇಲ್​ ಆಗದೇ ರೈತ ಕಂಗಾಲು

ಜಿಲ್ಲೆಯಲ್ಲಿ ರೈತರಿಗೆ ಯುದ್ಧ ಬಿಸಿ ಮುಟ್ಟಿಸಿದೆ. ಸಿಲಿಂಡರ್​ ಅಭಾವದಿಂದ ಹೋಟೆಲ್​ಗಳು ಬಂದ್ ಆಗಿರೋದ್ರಿಂದ, ತರಕಾರಿಗಳನ್ನ ತೆಗೆದುಕೊಳ್ಳೋರೇ ಇಲ್ಲ. 1,200 ರಿಂದ 1,300 ರೂ. ಇದ್ದ ಮೂಟೆ ಆಲೂಗಡ್ಡೆ, 500 ರಿಂದ 600 ರೂಪಾಯಿಗೆ ಕುಸಿತ ಆಗಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ.

ಕೆಲಸ ಕಳೆದುಕೊಂಡ ಇಂದಿರಾ ಕ್ಯಾಂಟಿನ್​​ ಮಹಿಳೆಯರು

ವಾಣಿಜ್ಯ ಸಿಲಿಂಡರ್​ ಹೊಡೆತಕ್ಕೆ ಕೇವಲ ಉದ್ಯಮಗಳು ಮಾತ್ರವಲ್ಲ. ಜನಸಾಮಾನ್ಯರು ಕೂಡ ತತ್ತರಿಸಿ ಹೋಗಿದ್ದಾರೆ. ಕಲಬುರಗಿಯಲ್ಲಿ ಇಂದಿರಾ ಕ್ಯಾಂಟೀನ್​​ನಲ್ಲಿ​ ಕೆಲಸ ಮಾಡುತ್ತಿದ್ದ 10 ಮಹಿಳೆಯರನ್ನ ಕೆಲಸಕ್ಕೆ ಬರಬೇಡಿ ಅಂತ ಗುತ್ತಿಗೆದಾರರು ಹೇಳಿದ್ದಾರೆ.

ಇದನ್ನೂ ಓದಿ: ಮೈಸೂರು ಚಾಮುಂಡೇಶ್ವರಿ ದೇವಿ ಲಡ್ಡು ಪ್ರಸಾದಕ್ಕೂ ಗ್ಯಾಸ್ ಕೊರತೆ ಬಿಸಿ: ಲಡ್ಡು ತಯಾರಿಸಲು ನಿರ್ಮಾಣವಾಗ್ತಿದೆ ವಿಶೇಷ ಸೌದೆ ಒಲೆ!

ಇನ್ನು ದಾವಣಗೆರೆಯಲ್ಲಿ ಆಟೋ ಎಲ್​ಪಿಜಿ ಗ್ಯಾಸ್​ ದರ ಏರಿಕೆ ಆಗಿದೆ. ಪ್ರತಿ ಲೀಟರ್​​ಗೆ 23 ರೂ. ಹೆಚ್ಚಳ ಮಾಡಿದ್ದು, 52 ರೂ. ಇದ್ದ ಲೀಟರ್​ ಎಲ್​​ಪಿಜಿ, 75 ರೂಪಾಯಿ ಆಗಿದೆ. ಎಲ್​​ಪಿಜಿ ಹೆಚ್ಚಳ ಮಾಡಿದೆಎ ಪ್ರಯಾಣಿಕರು ಹೆಚ್ಚುವರಿ ಹಣ ಕೊಡ್ತಾರಾ ಅಂತ ಚಾಲಕರು ಕಿಡಿಕಾರುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ

18 ವರ್ಷಗಳ ಹಿಂದೆ ಉತ್ತಮ ಸಮಾಜಕ್ಕಾಗಿ ಟಿವಿ9 ಚಾನೆಲ್​​ ಆರಂಭವಾದಾಗಿನಿಂದ ನನ್ನ ಮಾಧ್ಯಮ ಕಾಯಕವೂ ಆರಂಭ ಪಡೆಯಿತು. ಸ್ನಾತಕೋತ್ತರ ಪದವಿ ಮುಗಿಸಿದ್ದ ನಾನು ಚಿನ್ನದ ನಾಡು, ಕೃಷಿಕರ ಬೀಡು ಕೋಲಾರ ಜಿಲ್ಲೆಯ ಹಿರಿಯ ಪ್ರತಿನಿಧಿಯಾಗಿ ಕೆಲಸ ಮಾಡುತ್ತಾ ಬಂದಿದ್ದೇನೆ. ಟಿವಿ9 ಸಂಸ್ಥೆಯ ಆಶೋತ್ತರಗಳಿಗೆ ತಕ್ಕಂತೆ ಕೋಲಾರ ಜನತೆಯ ಪರವಾಗಿ ಧ್ವನಿ ಎತ್ತುವ ಕೆಲಸ ಮಾಡಿದ್ದೇನೆ. ನನ್ನದು ಸಾಮಾಜಿಕ ಕಳಕಳಿ ಇರುವ ಟಿವಿ9 ಸಂಸ್ಥೆಯಲ್ಲಿ ಕೆಲಸ ಅನ್ನೋದಕ್ಕಿಂತ ಉತ್ತಮ ಸಮಾಜಕ್ಕಾಗಿ ನನ್ನ ಸೇವೆ ಅನ್ನುವ ಭಾವನೆಯಲ್ಲಿ ಕೆಲಸ ಮಾಡಿಕೊಂಡು ಬಂದಿದ್ದೇನೆ.

Read More
Follow Us