AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಲಾರ: ಅಪ್ರಾಪ್ತ ಬಾಲಕಿ ಕೊಂದು ತಾನು ಆಸ್ಪತ್ರೆಗೆ ದಾಖಲಾಗಿದ್ದ ಯುವಕ ಮತ್ತೊಮ್ಮೆ ಆತ್ಮಹತ್ಯೆಗೆ ಯತ್ನ

ಅಪ್ರಾಪ್ತ ಬಾಲಕಿಯನ್ನು ಕೊಂದು ತಾನು ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆ ಸೇರಿದ್ದ. ಆದರೂ, ತನ್ನ ಸಾವಿಗಾಗಿ ಕೇಳಿಕೊಳ್ಳುತ್ತಿರುವ ಯುವಕ ಇಂದು ಕೂಡ ಆಸ್ಪತ್ರೆಯ ಮೂರನೇ ಮಹಡಿಯಿಂದ ಹಾರಿಬಿದ್ದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆದರೂ ಸಾವು ಮಾತ್ರ ಬರುತ್ತಿಲ್ಲ. ದಯವಿಟ್ಟು ನನ್ನನ್ನು ಸಾಯಲು ಬಿಡಿ ಎಂದು ತಂದೆಯನ್ನು ಕೇಳಿಕೊಳ್ಳುತ್ತಿರುವುದು, ಎಂತಹ ಕಲ್ಲು ಮನಸ್ಸನ್ನಾದರೂ ಕರಗಿಸುವಂತಿದೆ.

ಕೋಲಾರ: ಅಪ್ರಾಪ್ತ ಬಾಲಕಿ ಕೊಂದು ತಾನು ಆಸ್ಪತ್ರೆಗೆ ದಾಖಲಾಗಿದ್ದ ಯುವಕ ಮತ್ತೊಮ್ಮೆ ಆತ್ಮಹತ್ಯೆಗೆ ಯತ್ನ
ಆತ್ಮಹತ್ಯೆಗೆ ಯುವಕ ಯತ್ನ
Follow us
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Updated By: ಕಿರಣ್ ಹನುಮಂತ್​ ಮಾದಾರ್

Updated on: Feb 11, 2024 | 4:00 PM

ಕೋಲಾರ, ಫೆ.11: ಅಪ್ರಾಪ್ತ ಬಾಲಕಿ ಕೊಂದು ತಾನು ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದ ಯುವಕ, ಇಂದು ಮತ್ತೊಮ್ಮೆ ಆಸ್ಪತ್ರೆಯ ಎರಡನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕೋಲಾರ(Kolar)ದ ಆರ್.ಎಲ್. ಜಾಲಪ್ಪ ಆಸ್ಪತ್ರೆಯಲ್ಲಿ ನಡೆದಿದೆ. ನಿತಿನ್ ಆತ್ಮಹತ್ಯೆಗೆ ಯತ್ನಿಸಿದ ಯುವಕ. ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕು ದೊಮ್ಮಲೂರು ಗ್ರಾಮದ ನಿವಾಸಿಯಾದ ನಿತಿನ್, ಮೊನ್ನೆಯಷ್ಟೇ ದಲಿತ ಬಾಲಕಿಯನ್ನ ಹತ್ಯೆ ಮಾಡಿದ್ದ. ಇದಕ್ಕೆ ಕೆಲದಿನಗಳ ಹಿಂದೆ ಆ ಬಾಲಕಿಯಿಂದ ಅವಮಾನವಾಯ್ತು ಎಂದು ಸವರ್ಣಿಯ ಗುಂಪಿಗೆ ಸೇರಿದ ಇತ, ಕೊಲೆ ಮಾಡಿರುವ ಆರೋಪ ಕೇಳಿಬಂದಿತ್ತು. ನಂತರ ಆತ ಕೂಡ ತನ್ನ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದ. ಇದೀಗ ಪುನಃ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಏನಿದು ಘಟನೆ

ಮೃತ ಬಾಲಕಿ 20 ದಿನಗಳ ಹಿಂದೆ ಶಾಲೆಗೆ ಹೋಗುತ್ತಿದ್ದಾಗ ನಿತಿನ್ ಚುಡಾಯಿಸಿದ್ದನು. ಇದನ್ನು ಪ್ರಶ್ನಿಸಿದ್ದಕ್ಕೆ ನಿತಿನ್ ಬಾಲಕಿ ಮೇಲೆ ಹಲ್ಲೆ ನಡೆಸಿದ್ದನು. ಈ ವಿಚಾರವನ್ನು ಬಾಲಕಿ ತನ್ನ ಪೋಷಕರಿಗೆ ತಿಳಿಸಿದ್ದಳು. ಈ ಕುರಿತು ಮಾಲೂರು ಠಾಣಾ ಪೊಲೀಸರಿಗೆ ದೂರು ನೀಡಲು ಹೋಗಿದ್ದರು. ಈ ವೇಳೆ ಎರಡು ಗ್ರಾಮದ ಹಿರಿಯರು ಸೇರಿ ಇಬ್ಬರ ನಡುವೆ ರಾಜಿ ಪಂಚಾಯಿತಿ ನಡೆಸಿ ವಾಪಾಸ್ಸು ಕಳುಹಿಸಿದ್ದರು. ರಾಜಿ ಪಂಚಾಯತಿ ನಡೆದ ಮೂರು ದಿನಗಳ ಬಳಿಕ ಬಾಲಕಿ ನಾಪತ್ತೆಯಾಗಿದ್ದಳು. ನಿನ್ನೆ ಕುರಿಗಾಹಿಗಳು ಕುರಿ ಕಾಯಲು ಹೋಗಿದ್ದಾಗ ಬಾಲಕಿಯ ಶವಕಂಡು ಪೋಷಕರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು, ಬಾಲಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವೈಟ್ ಫಿಲ್ಡ್​ನ ವೈದೇಹಿ ಆಸ್ವತ್ರೆಗೆ ರವಾನಿಸಿದ್ದರು.

ಇದನ್ನೂ ಓದಿ: ಹೊಸಕೋಟೆ: ಕಾಣೆಯಾಗಿದ್ದ ದಲಿತ ಬಾಲಕಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆ; ಆಕೆಯಿಂದ ಅವಮಾನವಾಯ್ತೆಂದು ಕೊಲೆ?

ತಂದೆ ಕೈ ಬಿಡಿಸಿಕೊಂಡು ಮೂರನೇ ಮಹಡಿಯಿಂದ ಹಾರಿದ್ದ ಯುವಕ

ಆಸ್ಪತ್ರೆಗೆ ದಾಖಲಾಗಿದ್ದ ಯುವಕ, ಕುತ್ತಿಗೆಯ ಕುಯ್ದಿಕೊಂಡಿದ್ದ ಕಾರಣ ಸದ್ಯ ಇನ್ನು ಯುವಕನಿಗೆ ಮಾತನಾಡಲು ಆಗುತ್ತಿಲ್ಲ. ಹೀಗಿರುವಾಗಲೇ ಇಂದು ಬೆಳಿಗ್ಗೆ ಆರ್​.ಎಲ್​.ಜಾಲಪ್ಪಾ ಆಸ್ಪತ್ರೆಯಲ್ಲಿ ತನ್ನ ತಂದೆಯೊಂದಿಗೆ ಬೆಳಿಗ್ಗೆ ಆಸ್ಪತ್ರೆಯ ಮೂರನೇ ಮಹಡಿಯ ವಾರ್ಡ್​ ಹೊರಗೆ ವಾಕಿಂಗ್ ಮಾಡಿಸುತ್ತಿರುವ ವೇಳೆ ತಂದೆ ಹಿಡಿದುಕೊಂಡಿದ್ದ ಕೈ ಬಿಡಿಸಿಕೊಂಡು ಏಕಾಏಕಿ ಮೂರನೇ ಮಹಡಿಯಿಂದ ಹಾರಿದ್ದ ಯುವಕ ನಿತಿನ್ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಅದೃಷ್ಟವಶಾತ್​ ಯುವಕನ ಕಾಲು ಹಾಗೂ ಬೆನ್ನಿನ ಮೂಳೆ ಮುರಿದಿದ್ದು ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಸದ್ಯದ ಪರಿಸ್ಥಿತಿಯಲ್ಲಿ ಯುವಕನಿಗೆ ಚಿಕಿತ್ಸೆ ಕೊಡಿಸಲು ಶಕ್ತಿ ಇಲ್ಲದೆ, ತಾನು ಸಾವಿಗಾಗಿ ಪರಿತಪಿಸುತ್ತಿರುವ ಯುವಕ ತನಗೆ ಸಾಯಲು ಬಿಡಿ ಎಂದು ಆಸ್ಪತ್ರೆಯಲ್ಲಿ ತಂದೆಯ ಕೈಹಿಡಿದು ಗೋಗರೆಯುತ್ತಿದ್ದ ಕರುಣಾಜನಕ ದೃಷ್ಯ ನಿಜಕ್ಕೂ ಎಂಥಹವರ ಮನಸ್ಸಲ್ಲೂ ಕಣ್ಣೀರು ತರಿಸುವಂತಿತ್ತು. ತನಗೆ ಶಕ್ತಿ ಇಲ್ಲದಿದ್ದರೂ ಆಸ್ಪತ್ರೆಯವರ ಕಾಡಿ ಬೇಡಿ ಮಗನಿಗೆ ಚಿಕಿತ್ಸೆ ಕೊಡಿಸುವಂತೆ ತಂದೆ ಮಂಜುನಾಥ್ ಬೇಡಿಕೊಳ್ಳುತ್ತಿದ್ದಾರೆ, ಆದರೆ ಮಗನಿಗೆ ಮಾತ್ರ ತಾನು ಬದುಕಲು ಇಷ್ಟವಿಲ್ಲದೆ ಸಾವಿನ ಮನೆ ತುಳಿಯಲು ಪರಿತಪಿಸುತ್ತಿದ್ದಾನೆ. ವೈದ್ಯರು ಕೈಕಾಲು ಕಟ್ಟಿ ಚಿಕಿತ್ಸೆ ಕೊಡುವ ಸ್ಥಿತಿ ಬಂದಿದೆ, ಯಾರ ಮಾತನ್ನು ಕೇಳದೆ ತಾನು ಸಾಯಲು ಬಿಡಿ ಎಂದು ಕೇಳಿಕೊಳ್ಳುತ್ತಿದ್ದಾನೆ.

ಸದ್ಯ ಈನಡುವೆ ಘಟನೆ ನಡೆದಿದ್ದಾದರೂ ಏನು ಎಂದು ಸತ್ಯಾಂಶವನ್ನು ತಿಳಿಸಬೇಕಾದ ನಿತಿನ್​ ಕೂಡಾ ಆಸ್ಪತ್ರೆಯಲ್ಲಿದ್ದು ಮಾತನಾಡುವ ಸ್ಥಿತಿಯಲ್ಲಿಲ್ಲ,ಈ ನಡುವೆ ಇಂದು ಎರಡನೇ ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದು ಸಾವಿನ ಮನೆ ತುಳಿಯಲು ಪರಿತಪಿಸುತ್ತಿದ್ದಾನೆ. ಸದ್ಯ ಘಟನೆ ಸಂಬಂಧ ನಡೆದಿದ್ದದರೂ ಏನು ಅನ್ನೋದನ್ನು ನಿತಿನ್​ ಹೇಳಬೇಕು ಇಲ್ಲಾ ಪೊಲೀಸರ ತನಿಖೆಯಿಂದ ಸತ್ಯಾಸತ್ಯತೆ ಹೊರಬೀಳಬೇಕಿದೆ. ಅಲ್ಲಿಯ ವರೆಗೂ ಸದ್ಯ ಈ ಪ್ರಕರಣ ಕಗ್ಗಂಟಾಗಿರುವುದಂತೂ ಸುಳ್ಳಲ್ಲ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ