ಕೋಲಾರ: ಬಿಸಿಲಿನ ತಾಪಕ್ಕೆ ಮರದಲ್ಲೇ ಒಣಗುತ್ತಿರುವ ಮಾವು; ರೈತರಲ್ಲಿ ಮೂಡಿತು ಆತಂಕ

| Updated By: ಕಿರಣ್ ಹನುಮಂತ್​ ಮಾದಾರ್

Updated on: Mar 02, 2024 | 7:55 PM

ಬರಗಾಲಕ್ಕೆ ತುತ್ತಾಗಿದ್ದ ಕೋಲಾರ ಜಿಲ್ಲೆಯ ರೈತರಿಗೆ ಬೇಸಿಗೆ ಆರಂಭವಾಗಿ ತಾಪಮಾನ ಹೆಚ್ಚಾಗುತ್ತಿದ್ದಂತೆ ಮತ್ತೊಂದು ಸಂಕಷ್ಟ ಎದುರಾಗಿದೆ. ಮಾವು ಬೆಳೆದ ರೈತರಿಗೆ ತಾಪಮಾನವೇ ಮುಳ್ಳಾಗುತ್ತಿದ್ದು, ಮಿತಿಮೀರಿದ ತಾಪಮಾನ ಹಾಗೂ ವಾತಾವರಣದ ಏರುಪೇರಿನಿಂದಾಗಿ ಮಾವಿನ ಮರದಲ್ಲಿದ್ದ ಹೂವುಗಳು ಉದುರಲಾರಂಭಿಸಿದ್ದು, ಇದರಿಂದ ರೈತರ ನಿರೀಕ್ಷೆಗಳು ಕದಡುತ್ತಿವೆ.

ಕೋಲಾರ: ಬಿಸಿಲಿನ ತಾಪಕ್ಕೆ ಮರದಲ್ಲೇ ಒಣಗುತ್ತಿರುವ ಮಾವು; ರೈತರಲ್ಲಿ ಮೂಡಿತು ಆತಂಕ
ಬಿಸಿಲಿಗೆ ಬಾಡಿದ ಮಾವು. ತೋಟಗಾರಿಕೆ ಇಲಾಖೆ ಉಪನಿರ್ದೇಶಕ
Follow us on

ಕೋಲಾರ, ಮಾ.02: ಕೋಲಾರ(Kolar) ಜಿಲ್ಲೆಯ ಮಾವು ಬೆಳೆಗಾರರಿಗೆ(Mango Farmers) ಇದೀಗ ಆತಂಕ ಶುರುವಾಗಿದೆ. ಜಿಲ್ಲೆಯಲ್ಲಿ ಮಾತ್ರವೇ ಸುಮಾರು 52 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತದೆ. ಆದ್ರೆ, ಮಾವು ಬೆಳೆಗಾರರಿಗೆ ಈ ಬಾರಿ ಕಣ್ಣಲ್ಲಿ ನೀರು ತರಿಸುವಂತ್ತಾಗಿದೆ. ಇಷ್ಟೋತ್ತಿಗಾಗಲೇ ಹೂ ಬಿಟ್ಟು, ಪೀಚು ಕಟ್ಟಬೇಕಿದ್ದ ಮಾವು, ಫೆಬ್ರವರಿ ಕಳೆದರೂ ಕೂಡ ಸರಿಯಾಗಿ ಹೂ ಬಿಟ್ಟಿಲ್ಲ. ಎಂದಿನಂತೆ ಜನವರಿಯಲ್ಲಿ ಶೇ.70 ರಷ್ಟು ಹೂ, ಚಿಗುರು ಕಾಣಿಸಿಕೊಳ್ಳಬೇಕಾಗಿತ್ತು. ಆದ್ರೆ, ಬಿಸಿಲಿನ ತಾಪಮಾನ, ವಾತಾವರಣದಲ್ಲಿ ಏರುಪೇರಾದ ಹಿನ್ನೆಲೆ ಬಿಸಿಲಿನ ಕಣ್ಣಾಮುಚ್ಚಾಲೆಯಾಟಕ್ಕೆ ಮರಗಳು ಚಿಗುರದೆ, ಸರಿಯಾಗಿ ಹೂ ಬಂದಿಲ್ಲ. ಇದರೊಂದಿಗೆ ಈಗಾಗಲೇ ಬಂದಿರುವ ಹೂವು ಕೂಡಾ ಒಣಗಿ ಉದುರಲಾರಂಭಿಸಿದೆ. ಸದ್ಯ ಇದೆಲ್ಲದಕ್ಕೂ ಕಾರಣ ಮಾವಿಗೆ ಬಂದಿರುವ ರೋಗಗಳೇ ಎಂದು ಮಾವು ಬೆಳೆಗಾರರು ಹೇಳುತ್ತಿದ್ದಾರೆ.

ಸದ್ಯ ಮಾವಿನ ತೋಟಗಳಲ್ಲಿ ದಿಕ್ಕೆ ತೋಚದಂತಾಗಿರುವ ಮಾವು ಬೆಳೆಗಾರರು, ಹೀಗೆ ಮುಂದುವರೆದಿದ್ದೆ ಆದಲ್ಲಿ ಮಾವಿನ ಫಸಲು ಸಿಗುವುದು ಅನುಮಾನವಾಗಿದೆ. ಹಾಗಾಗಿ ತೋಟಗಾರಿಕಾ ಇಲಾಖೆ, ರೈತರಿಗೆ ಸರಿಯಾದ ಮಾರ್ಗದರ್ಶನ ಮಾಡಬೇಕು ಎನ್ನುವುದು ರೈತರ ಹಾಗೂ ಮಾವು ಬೆಳೆಗಾರರ ಮಾತಾಗಿದೆ. ಇನ್ನು ಸಾವಿರಾರು ಎಕರೆಯಲ್ಲಿ ಮಾವು ಬೆಳೆಯುವ ಜಿಲ್ಲೆಯ ರೈತರು, ದೇಶದ ನಾನಾ ರಾಜ್ಯಗಳು ಸೇರಿದಂತೆ ವಿದೇಶಗಳಿಗೆ ಮಾವನ್ನ ಕಳುಹಿಸಿ ಕೊಡುತ್ತಾರೆ. ಆದ್ರೆ, ಮಾವು ಆರಂಭದಲ್ಲೆ ಕೈಕೊಡುವ ಸೂಚನೆ ನೀಡಿದ್ದು, ಇಲಾಖೆ ಕೂಡ ಈಗಾಗಲೇ ಅರಿವು ಮೂಡಿಸುವ ಕಾರ್ಯ ಮಾಡುತ್ತಿದೆ.

ಇದನ್ನೂ ಓದಿ:ಬರಗಾಲದ ಮಧ್ಯೆ ರೈತರ ಕೈ ಹಿಡಿದ ಮಾವು ಬೆಳೆ; ಮುಂದಿನ ವರ್ಷದ ಮಾರ್ಚ್‌ನಲ್ಲಿಯೇ ಮಾರುಕಟ್ಟೆಗೆ ಮಾವು ಪ್ರವೇಶ

ಮಾವು ಹೂ, ಚಿಗುರು ಬರದೆ ಇರುವುದರಿಂದ ಎಚ್ಚೆತ್ತುಕೊಂಡಿರುವ ತೋಟಗಾರಿಕೆ ಇಲಾಖೆ, ರೈತರಿಗೆ ಅರಿವು ಮೂಡಿಸಲು ಮುಂದಾಗಿದೆ. ಈಗಾಗಲೇ ತೋಟಗಾರಿಕೆ ವಿಜ್ಞಾನಿಗಳನ್ನ ಕರೆಸಿ ಮಾವು ತಡವಾಗಲು ಹಾಗೂ ಬಿಟ್ಟಿರುವ ಹೂವು ಉದುರಲು ಕಾರಣಗಳ ಹುಡುಕಾಟದಲ್ಲಿದೆ. ಇನ್ನುಊ ವಿಶೇಷತೆ ಅಂದರೆ, ಈ ಬಾರಿ ಉತ್ತಮ ಮಾವು ಫಸಲಿನ ನಿರೀಕ್ಷೆ ಇದ್ದು, ಫಸಲು ಹೆಚ್ಚಾಗಿ ಬರಬೇಕಾಗಿತ್ತು. ಆದ್ರೆ, ಕೀಟ ಬಾಧೆ, ಮರಕ್ಕೆ ರೋಗ-ರುಜಿನಗಳು, ವಾತಾವರಣದಲ್ಲಿನ ಏರುಪೇರಿಂದ ಮಾವಿನ ಹೂವು ಒಣಗಿ ಉದುರಲಾರಂಭಿಸಿದೆ. ಇದರಿಂದ ಮಾವು ಬೆಳೆಗಾರರು ಕಂಗಾಲಾಗಿರುವುದನ್ನ ಮನಗಂಡ ಇಲಾಖೆ, ಔಷಧಿಗಳನ್ನ ಸಿಂಪಡಿಸಿ ಮರಗಳ ಕಾಳಜಿ ವಹಿಸುವಂತೆ ಸೂಚಿಸಿದೆ.

ಕೆಲವು ಔಷಧಗಳನ್ನ ಹಾಗೂ ರೈತರು ಪಾಲಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳನ್ನ ಕೈಗೊಳ್ಳುವಂತೆ ಇಲಾಖೆ ರೈತರಿಗೆ ಅರಿವು ಮೂಡಿಸುತ್ತಿದೆ. ಒಟ್ಟಾರೆ ಮಾವುಗಳ ರಾಜ ಆರಂಭದಲ್ಲೇ ಮಾವು ಬೆಳೆಗಾರರಿಗೆ ಆತಂಕ ಮೂಡಿಸುತ್ತಿದ್ದು, ಈಗಾಗಲೇ ಒಂದು ಸುತ್ತು ಬರಕ್ಕೆ ತುತ್ತಾಗಿರುವ ಜಿಲ್ಲೆಯ ರೈತರಿಗೆ ಈ ಬಾರಿ ಮಾವು ಬೆಳೆಯೂ ಕೈ ಕೊಡುವ ಸಾಧ್ಯತೆ ಹೆಚ್ಚಾಗಿದೆ. ವರ್ಷಕ್ಕೊಂದು ಬೆಳೆಯ ನಿರೀಕ್ಷೆಯಲ್ಲಿದ್ದ ರೈತರಿಗೆ ಸದ್ಯ ಮಾವು ಬೆಳೆಯೂ ಕೂಡ ರೈತರ ಕೈಹಿಡಿಯುವ ಸಾಧ್ಯತೆ ಕಡಿಮೆಯಾಗಿದ್ದು, ಸರ್ಕಾರ ಈಗಲೇ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:52 pm, Sat, 2 March 24