ಕೆರೆಗೆ ಕಾರು ಬಿದ್ದು ರೈತ ಸಂಘದ ಜಿಲ್ಲಾಧ್ಯಕ್ಷ ಸಾವು: ತಡೆಗೋಡೆ ಇಲ್ಲದಿರುವುದೇ ಅಪಘಾತಕ್ಕೆ ಕಾರಣವಾಯ್ತಾ?

ಕೋಲಾರ ಜಿಲ್ಲೆಯ ರೈತ ಸಂಘದ ಅಧ್ಯಕ್ಷ ಹಾಗೂ ಸಿಪಿಎಂ ಮುಖಂಡ ಮುದುವಾಡಿ ಕೆರೆಗೆ ಕಾರು ಬಿದ್ದು ದುರಂತ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ರೈತ ಸಂಘದ ರಾಜ್ಯ ಸಮ್ಮೇಳನದ ಸಿದ್ಧತೆ ಮುಗಿಸಿ ವಾಪಸ್ಸಾಗುವಾಗ ಅವಘಡ ಸಂಭವಿದೆ. ಕೆರೆಗೆ ತಡೆಗೋಡೆ ಇಲ್ಲದಿರುವುದು ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ.

ಕೆರೆಗೆ ಕಾರು ಬಿದ್ದು ರೈತ ಸಂಘದ ಜಿಲ್ಲಾಧ್ಯಕ್ಷ ಸಾವು: ತಡೆಗೋಡೆ ಇಲ್ಲದಿರುವುದೇ ಅಪಘಾತಕ್ಕೆ ಕಾರಣವಾಯ್ತಾ?
ಟಿ.ಎಂ.ವೆಂಕಟೇಶ್​
Image Credit source: tv9 kannada
Edited By:

Updated on: Mar 08, 2026 | 3:34 PM

ಕೋಲಾರ, ಮಾರ್ಚ್​ 08: ಅದು ರಾಜ್ಯ ಹೆದ್ದಾರಿ ಜಿಲ್ಲಾ ಕೇಂದ್ರದಿಂದ ಪಕ್ಕದ ಆಂಧ್ರಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ. ಆ ರಸ್ತೆಯಲ್ಲಿ ಬರುವ ಅದೊಂದು ದೊಡ್ಡ ಕೆರೆಯ ಎರಡು ಬದಿಯಲ್ಲಿ ತಡೆಗೋಡೆ ಇಲ್ಲದ ಪರಿಣಾಮ ಭೀಕರ ಅವಘಡವೊಂದು (car accident) ನಡೆದಿದ್ದು, ಕೆರೆಗೆ ಕಾರು ಬಿದ್ದು ರೈತ ಸಂಘದ ಜಿಲ್ಲಾಧ್ಯಕ್ಷ ವೆಂಕಟೇಶ್​ ಸಾವನ್ನಪ್ಪಿದ್ದಾರೆ.

ಕಳೆದ ರಾತ್ರಿ 1.30 ಸುಮಾರಿನಲ್ಲಿ ಕೋಲಾರ ತಾಲ್ಲೂಕಿನ ತೊರಾಂಡಹಳ್ಳಿ ಗ್ರಾಮದ ಕಡೆಗೆ ಹೋಗುತ್ತಿದ್ದ ವೇಳೆ ಕಾರು ಕೆರೆಗೆ ಬಿದ್ದ ಪರಿಣಾಮ ಕಾರ್​ ನಲ್ಲಿದ್ದ ತೊರಾಂಡಹಳ್ಳಿ ಗ್ರಾಮದ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಟಿ.ಎಂ.ವೆಂಕಟೇಶ್​​ ಮೃತಪಟ್ಟಿದ್ದಾರೆ.

ನಡೆದಿದ್ದೇನು?

ಅಷ್ಟಕ್ಕೂ ಆಗಿದ್ದೇನು ಅಂತ ನೋಡುವುದಾದರೆ, ನಾಳೆಯಿಂದ ಕೋಲಾರ ನಗರದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಸಿಪಿಎಂ ಪಕ್ಷ ರಾಜ್ಯ ಸಮಾವೇಶ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಕಳೆದ ರಾತ್ರಿ ಒಂದು ಗಂಟೆವರೆಗೂ ಜಿಲ್ಲಾಧ್ಯಕ್ಷ ಕಾಮ್ರೆಡ್ ವೆಂಕಟೇಶ್ ಹಾಗೂ ಹಲವು ಕಾರ್ಯಕರ್ತರು ನಗರದಲ್ಲಿ ಬ್ಯಾನರ್, ಬಂಟಿಂಗ್ಸ್​​ಗಳನ್ನು ಕಟ್ಟಿ ನಂತರ ವೆಂಕಟೇಶ್,​ ತಮ್ಮ ಇಂಡಿಕಾ ಕಾರಿನಲ್ಲಿ ತಮ್ಮೂರು ತೊರಾಂಡಳ್ಳಿ ಕಡೆಗೆ ಹೊರಟಿದ್ದಾರೆ. ಈ ವೇಳೆ ಮುದುವಾಡಿ ಗ್ರಾಮದ ಬಳಿ ಬರುತ್ತಿರುವಾಗ ತಿರುವಿನಲ್ಲಿ ಕಾರಿಗೆ ಯಾವುದಾದರೂ ವಾಹನ ಡಿಕ್ಕಿ ಹೊಡೆಯಿತೋ ಅಥವಾ ಆಯತಪ್ಪಿತ್ತೋ ಗೊತ್ತಿಲ್ಲ ವೆಂಕಟೇಶ್ ಅವರು ಚಲಾಯಿಸುತ್ತಿದ್ದ ಕಾರು ಕೆರೆಗೆ ಬಿದ್ದಿದೆ.

ಇದನ್ನೂ ಓದಿ: ದ್ವಿಚಕ್ರ ವಾಹನಕ್ಕೆ ಗುದ್ದಿ ಎಳೆದೊಯ್ದ ಕಾರು: ಚಾಲಕ ನಾಪತ್ತೆ; ಮಹಿಳೆ ಸ್ಥಿತಿ ಗಂಭೀರ

ವೆಂಕಟೇಶ್ ಕಾರಿನಿಂದ ಹೊರಬರಲು ಪ್ರಯತ್ನ ಮಾಡಿದ್ದಾರೆ, ಆದರೂ ಪ್ರಯೋಜನವಾಗಿಲ್ಲ. ಹೀಗಾಗಿ ವೆಂಕಟೇಶ್ ಕಾರಿನಲ್ಲೇ ಮೃತಪಟ್ಟಿದ್ದಾರೆ. ಇನ್ನು ಕಾರು ಅಪಘಾತವಾಗಿ ಕೆರೆಗೆ ಬಿದ್ದಿರುವ ವಿಷಯ ಬೆಳಿಗ್ಗೆ 9 ಗಂಟೆಯವರೆಗೂ ಯಾರಿಗೂ ತಿಳಿದಿಲ್ಲ. ಈ ವೇಳೆ ವೆಂಕಟೇಶ್ ರಾತ್ರಿ ಮನೆಗೆ ಬಂದಿಲ್ಲ. ಅವರ ಮೊಬೈಲ್​ ಕೂಡ ಕೆಲಸ ಮಾಡುತ್ತಿವೆಂದು ಹುಡುಕಾಡುವ ವೇಳೆ ವೆಂಕಟೇಶ್ ಅವರ ಕಾರಿನ ಮುಂಭಾಗದ ನಂಬರ್ ಪ್ಲೇಟ್​ ಇದ್ದ ಮಡ್ ಗಾರ್ಡ್ ಕೆರೆಯ ಕಟ್ಟೆ ಮೇಲೆ ಬದಿಯಲ್ಲಿ ಬಿದ್ದಿತ್ತು, ಅದನ್ನ ನೋಡಿದ ಕೆಲವರು ಕೆರೆಯಲ್ಲಿ ನೋಡಲಾಗಿ ಕಾರಿನಿಂದ ಡೀಸೆಲ್​ ಲೀಕ್​ ಆಗುತ್ತಿರುವುದು ಕಂಡುಬಂದಿದೆ. ಈ ವೇಳೆ ಅನುಮಾನಗೊಂಡ ಸ್ಥಳೀಯರು ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಗೆ ವಿಷಯ ತಿಳಿಸಿದ ನಂತರ ಸ್ಥಳಕ್ಕೆ ಬಂದ ಗ್ರಾಮಾಂತರ ಠಾಣಾ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಪರಿಶೀಲನೆ ನಡೆಸಿದಾಗ ಕೆರೆಯಲ್ಲಿ ಕಾರು ಹಾಗೂ ವೆಂಕಟೇಶ್​ ಶವ ಇರುವುದು ತಿಳಿದು ಬಂದಿದೆ.

ಅಧಿಕಾರಿಗಳ ನಿರ್ಲ್ಯಕ್ಷ: ಕೆರೆಗಿಲ್ಲ ತಡೆಗೋಡೆ 

ಇನ್ನು ಕೋಲಾರ ತಾಲ್ಲೂಕಿನ ಮುದುವಾಡಿ ಕೆರೆ ಕೋಲಾರ ಜಿಲ್ಲೆಯಲ್ಲೇ ದೊಡ್ಡ ಕೆರೆ. ಈ ರಸ್ತೆ ಕೋಲಾರ ಮತ್ತು ಶ್ರೀನಿವಾಸಪುರಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ. ಆಂಧ್ರದ ಮದನಪಲ್ಲಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಕೂಡ ಇದಾಗಿದ್ದು, ಇಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ನಿರ್ಲ್ಯಕ್ಷ ಹಾಗೂ ಕೆರೆಯನ್ನು ನಿರ್ವಹಣೆ ಮಾಡುವ ಸಣ್ಣ ನೀರಾವರಿ ಇಲಾಖೆ ನಿರ್ಲ್ಯಕ್ಷದಿಂದ ಮುದುವಾಡಿ ಕರೆಯ ಮೇಲೆ ತಡೆಗೋಡೆ ನಿರ್ಮಾಣ ಮಾಡದೆ ಇರುವುದು ಇಂಥಾದೊಂದು ಅವಘಡಕ್ಕೆ ಕಾರಣ ಎನ್ನಲಾಗುತ್ತಿದೆ.

ನಿತ್ಯ ಸಾವಿರಾರು ವಾಹನಗಳು ಓಡಾಡುವ ರಸ್ತೆ ಇದಾಗಿದ್ದು, ಮುದುವಾಡಿ ಕೆರೆಯ ಕಟ್ಟೆಯ ಮೇಲೆ ತಡೆಗೋಡೆ ನಿರ್ಮಾಣ ಮಾಡುವ ಜೊತೆಗೆ ರಸ್ತೆ ಅಗಲೀಕರಣ ಮಾಡುವ ಕೆಲಸ ಮಾಡಬೇಕಿತ್ತು. ಆದರೆ ಹಲವು ವರ್ಷಗಳಿಂದ ಈ ರಸ್ತೆ ಕಿರಿದಾಗಿದ್ದು, ಕೆರೆಗೆ ತಡೆಗೋಡೆ ಇಲ್ಲದಿರುವುದು ಈ ಅಪಘಾತಕ್ಕೆ ಕಾರಣ. ಒಂದು ವೇಳೆ ತಡೆಗೋಡೆ ಇದ್ದಿದ್ದರೆ ವೆಂಕಟೇಶ್ ಸಾವಾಗುತ್ತಿರಲಿಲ್ಲ ಅನ್ನೋ ಮಾತುಗಳು ಕೇಳಿಬರುತ್ತಿವೆ.

ಕಾರು ಅಪಘಾತದ ಕುರಿತು ಅನುಮಾನ?

ಇನ್ನು ಕಳೆದ ರಾತ್ರಿ ವೆಂಕಟೇಶ್ ಅವರಿದ್ದ ಕಾರು ಅಪಘಾತದ ಕುರಿತು ಕೂಡ ಅನುಮಾನ ವ್ಯಕ್ತವಾಗಿದೆ. ವೆಂಕಟೇಶ್ ಅವರಿದ್ದ ಕಾರು ತಾವಾಗಿ ಆಯತಪ್ಪಿ ಅಪಘಾತಕ್ಕೀಡಾಯಿತಾ ಅಥವಾ ಯಾವುದಾದರೂ ವಾಹನ ಡಿಕ್ಕಿಯಾಗಿ ಅವಘಡ ಸಂಭವಿಸಿದೆಯಾ ಅನ್ನೋದರ ಕುರಿತು ತನಿಖೆ ನಡೆಯಬೇಕಿದೆ. ಜೊತೆಗೆ ಕೂಡಲೇ ಈ ಕೆರೆಗೆ ಕಟ್ಟೆಯ ಮೇಲಿನ ರಸ್ತೆ ಅಗಲೀಕರಣ ಮಾಡಿ ಕೆರೆಯ ಎರಡೂ ಕಡೆ ತಡೆಗೋಡೆ ನಿರ್ಮಾಣ ಮಾಡಬೇಕು ಎನ್ನುವ ಆಗ್ರಹ ಕೇಳಿಬಂದಿದೆ.

ಇದನ್ನೂ ಓದಿ: ಪತ್ನಿ 9 ತಿಂಗಳ ತುಂಬು ಗರ್ಭಿಣಿ: ವಿದ್ಯುತ್​​ ಶಾಕ್​​ ತಗುಲಿ ಪತಿ ಸಾವು; ಅಧಿಕಾರಿಗಳ ನಿರ್ಲಕ್ಷ್ಯ ಆರೋಪ

ಒಟ್ಟಾರೆ ತಮ್ಮ ಜೀವನದುದ್ದಕ್ಕೂ ಹತ್ತಾರು ಹೋರಾಟಗಳನ್ನು ಮಾಡಿ ಹತ್ತಾರು ಸಮಸ್ಯೆಗೆ ಪರಿಹಾರ ಕೊಡಿಸಿದ್ದ ವೆಂಕಟೇಶ್ ಅವರು ಸಾವಿಗೀಡಾಗಿದ್ದಾರೆ. ಅವರ ಸಾವಿನ ಮೂಲಕವಾದರೂ ಮುದುವಾಡಿ ಕೆರೆಗೆ ತಡೆಗೋಡೆ ನಿರ್ಮಾಣ ಮಾಡಿ ಮುಂದೆ ಆಗಬಹುದಾದ ಅಪಘಾತಗಳಿಗೆ ಶಾಶ್ವತ ಪರಿಹಾರ ಸೂಚಿಸುವ ಮೂಲಕ ಹೋರಾಟಗಾರನ ಸಾವಿಗೆ ನ್ಯಾಯ ಒದಗಿಸಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us