Masti Venkatesha Iyengar: ಮಾಸ್ತಿ ವೆಂಕಟೇಶ ಅಯ್ಯಂಗಾರ್ ಕನ್ನಡದ ಆಸ್ತಿಯಾಗಿದ್ದು ಹೇಗೆ ಗೊತ್ತಾ?

| Updated By: preethi shettigar

Updated on: Nov 08, 2021 | 3:40 PM

ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರಿಗೆ ಕನ್ನಡ ಹಾಗೂ ಕನ್ನಡ ಸಾಹಿತ್ಯದ ಮೇಲೆ ಎಲ್ಲಿಲ್ಲದ ಆಸಕ್ತಿ. ತಮ್ಮ ವಿದ್ಯಾಭ್ಯಾಸದ ದಿನಗಳಿಂದಲೂ ಮಾಸ್ತಿಯವರು ಹಲವಾರು ಕೃತಿಗಳನ್ನು ರಚಿಸಿದ್ದರು. ಅದರ ಜೊತೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿ ಐದು ವರ್ಷಗಳ ಕಾಲ ಮಾಸ್ತಿಯವರು ಕನ್ನಡದ ಸೇವೆಯನ್ನು ಮಾಡಿದ್ದು ಸ್ಮರಿಸಬೇಕಾಗುತ್ತದೆ.

Masti Venkatesha Iyengar: ಮಾಸ್ತಿ ವೆಂಕಟೇಶ ಅಯ್ಯಂಗಾರ್ ಕನ್ನಡದ ಆಸ್ತಿಯಾಗಿದ್ದು ಹೇಗೆ ಗೊತ್ತಾ?
ಮಾಸ್ತಿ ಪೆರಿಯಾತ್ ಗೃಂಥಾಲಯ
Follow us on

ಕೋಲಾರ: ಮಾಸ್ತಿ ಎಂದಾಕ್ಷಣ ಕನ್ನಡದ ಆಸ್ತಿ ಎಂಬುವಷ್ಟರ ಮಟ್ಟಿಗೆ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಜನಮಾನಸದಲ್ಲಿದ್ದಾರೆ. ಶ್ರೀನಿವಾಸ ಎಂಬ ಕಾವ್ಯ ನಾಮದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಜೂನ್ 6, 1891 ರಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿಗೆ ಕೂದಲಳತೆ ದೂರದಲ್ಲಿರುವ ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಮಾಸ್ತಿ ಎಂಬ ಗ್ರಾಮದಲ್ಲಿ ಜನಿಸುತ್ತಾರೆ. ಮಾಸ್ತಿ ವೆಂಕಟೇಶ ಅಯ್ಯಂಗಾರ್ (Masti Venkatesha Iyengar) ಅವರ ತಂದೆ ರಾಮಸ್ವಾಮಿ ಅಯ್ಯಂಗಾರ್ ಹಾಗೂ ತಾಯಿ ತಿರುಮಲಮ್ಮ. ಮಾಸ್ತಿ ಗ್ರಾಮದ ‘ಪೆರಿಯಾತ್’ ಅಂದರೆ ದೊಡ್ಡ ಮನೆ ಕುಟುಂಬದಲ್ಲಿ ಮಾಸ್ತಿಯವರ ಜನನವಾಗುತ್ತದೆ.

ಪೆರಿಯಾತ್ ಕುಟುಂಬ ಶ್ರೀಮಂತವಾಗಿದ್ದರು ಬಡತನ ಮಾಸ್ತಿಯವರನ್ನು ಬಿಡಲಿಲ್ಲ!
ಮಾಸ್ತಿಯವರ ಮನೆಯಲ್ಲಿ ಆಡು ಭಾಷೆ ತಮಿಳು, ಪೆರಿಯಾತ್ ಕುಟುಂಬ ಶ್ರೀಮಂತ ಕುಟುಂಬವಾಗಿತ್ತು. ಆದರೆ ಮಾಸ್ತಿಯವರು ಬಾಲ್ಯವಸ್ಥೆಯಲ್ಲಿ ಇದ್ದಾಗ ಬಡತನದ ಮನೆಯಾಗಿ ಮಾರ್ಪಟ್ಟಿತ್ತು. ಮಾಸ್ತಿಯವರು ಮಾಲೂರು ತಾಲೂಕಿನ ಹುಂಗೇನಹಳ್ಳಿ ಗ್ರಾಮದಲ್ಲಿನ ತನ್ನ ಅಜ್ಜ-ಅಜ್ಜಿಯರ ಮನೆಯಲ್ಲಿದ್ದುಕೊಂಡು ಶಿವಾರಪಟ್ಟಣ ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆಯುತ್ತಾರೆ.

ಮಾಸ್ತಿ ವೆಂಕಟೇಶ ಅಯ್ಯಂಗಾರ್ ವಿದ್ಯಾಭ್ಯಾಸ
1902 ರಲ್ಲಿ ಮಾಸ್ತಿಯವರು ಸೋದರಮಾವನ ಮಾರ್ಗದರ್ಶನದಲ್ಲಿ ಮಂಡ್ಯದ ಮಳವಳ್ಳಿಯ ಇಂಗ್ಲಿಷ್ ಶಾಲೆಗೆ ಸೇರುತ್ತಾರೆ. ಮುಂದಿನ ವಿದ್ಯಾಭ್ಯಾಸವನ್ನು ಮೈಸೂರಿನ ವೆಸ್ಲಿಯನ್ ಮಿಷನ್ ಸ್ಕೂಲಿನಲ್ಲಿ ಮುಂದುವರಿಸುತ್ತಾರೆ. ಮುಂದೆ ಮಾಸ್ತಿಯವರು ತಮ್ಮ ಮಾವ ರಂಗಣ್ಣನವರ ಮಾರ್ಗದರ್ಶನದಲ್ಲಿ ಬೆಳೆದರೂ ಕುಟುಂಬದಲ್ಲಿನ ಕೆಲವು ವ್ಯತ್ಯಾಸಗಳಿಂದಾಗಿ ಮಾಸ್ತಿಯವರು ಊಟಕ್ಕಾಗಿ ವಾರಾನ್ನ ವಾರದ ಮನೆಗಳನ್ನು ಗೊತ್ತು ಮಾಡಿಕೊಳ್ಳುವ ಸ್ಥಿತಿ ನಿರ್ಮಾಣವಾಗಿತ್ತು. ವಾರದ ಏಳು ದಿನಗಳಲ್ಲಿ ಏಳು ಮನೆಗಳಲ್ಲಿ ಊಟ ಮಾಡುವುದರ ಮೂಲಕ ಶಿಕ್ಷಣವನ್ನು ಪಡೆದ ಮಾಸ್ತಿ ಅವರು ಮೆಟ್ರಿಕ್ಯುಲೇಷನ್ ಪಾಸ್ ಮಾಡಿ ಮೈಸೂರು ಮಹಾರಾಜ ಕಾಲೇಜಿನಲ್ಲಿ ಶಿಕ್ಷಣವನ್ನು ಪಡೆದು, ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿಎ ಪದವಿಯನ್ನು ಪೂರೈಸಿದರು.

ಸಿವಿಲ್ ಸರ್ವಿಸ್ ಪರೀಕ್ಷೆ ಬರೆದು ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿದ್ದಾರೆ ಮಾಸ್ತಿ!
ಬಿಎ ಪದವಿ ನಂತರ ಮಾಸ್ತಿಯವರು ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಎಂ.ಎ. ಶಿಕ್ಷಣವನ್ನು ಪಡೆದರು ಬೆಂಗಳೂರಿನಲ್ಲಿ ಬಂದು ಸಿವಿಲ್ ಸರ್ವಿಸ್ ಅಧ್ಯಯನ ಮಾಡಿ ಪರೀಕ್ಷೆಯಲ್ಲಿ ಮೊದಲಿಗರಾಗಿ ಪಾಸಾದರು. ಮುಂದೆ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಮೈಸೂರು ಸರ್ಕಾರದ ಅಸಿಸ್ಟೆಂಟ್ ಕಮಿಷನರ್ ಅಧಿಕಾರಿಯಾಗಿ ಸರ್ಕಾರಿ ಸೇವೆಗೆ ತೊಡಗಿಸಿಕೊಳ್ಳುವರು. ನಂತರದ ದಿನಗಳಲ್ಲಿ ಅನೇಕ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ನಂತರ ಅಂತಿಮವಾಗಿ ಡಿಸ್ಟಿಕ್ ಕಲೆಕ್ಟರ್ ಅಂದರೆ ಜಿಲ್ಲಾಧಿಕಾರಿಯಾಗಿ ಸೇವೆಸಲ್ಲಿಸುತ್ತಾರೆ. ಈ ವೇಳೆ ಮಾಸ್ತಿಯವರು 1910 ಜುಲೈ 15 ರಂದು ಪಂಕಜಮ್ಮ ಎಂಬುವರನ್ನು ಮದುವೆ ಮಾಡಿಕೊಂಡು ತಮ್ಮದೇ ಸಂಸಾರ ಸಾಗರಕ್ಕೂ ದುಮುಕುತ್ತಾರೆ. ಮಾಸ್ತಿಯವರಿಗೆ ಆರು ಜನ ಹೆಣ್ಣು ಮಕ್ಕಳಿದ್ದರು.

ಮಾಸ್ತಿ ವೆಂಕಟೇಶ ಅಯ್ಯಂಗಾರ್

ಸರ್ಕಾರಿ ಸೇವೆ ಸಲ್ಲಿಸುತ್ತಲೇ ಸಾಹಿತ್ಯದಲ್ಲಿ ತೊಡಗಿಸಿಕೊಂಡವರು ಮಾಸ್ತಿಯವರು
ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಸರ್ಕಾರಿ ಕೆಲಸದ ಜೊತೆ ಜೊತೆಗೆ ಸಾಹಿತ್ಯದಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದವರು. ಅವರು ತಾವು ಕೆಲಸ ಮಾಡಿದ ಜಿಲ್ಲೆಗಳ ಪ್ರದೇಶಗಳನ್ನಾಧರಿಸಿ ಕೆಲವು ಕೃತಿಗಳನ್ನು ರಚಿಸಿದ್ದಾರೆ. ತಮ್ಮ ಅಧಿಕಾರದ ಅವಧಿಯಲ್ಲಿ ತಮ್ಮ ತವರು ಜಿಲ್ಲೆ ಕೋಲಾರದಲ್ಲೂ ದಿವಾನ್ ವಿಶ್ವೇಶ್ವರಯ್ಯನವರ ಆದೇಶದಂತೆ 9 ತಿಂಗಳ ಕಾಲ ಸೇವೆ ಸಲ್ಲಿಸಿದ್ದಾರೆ. ತುಮಕೂರು ಜಿಲ್ಲಾಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಅವರ ಅಧಿಕಾರ ಅವಧಿಯಲ್ಲಿ ಪ್ರಾಮಾಣಿಕವಾದ ಸೇವೆ ಮಾಡುತ್ತಾ, ಯಾವ ದಾಕ್ಷಿಣ್ಯಕ್ಕೂ ಒಳಗಾಗದೆ ನಿರ್ಭಯವಾಗಿ ಕಾರ್ಯನಿರ್ವಹಿಸಿರುತ್ತಾರೆ. ಇವರ ದಕ್ಷ ಸೇವೆಯನ್ನು ಗಮನಿಸಿ ಮೈಸೂರು ಮಹಾರಾಜರು 1942 ರಲ್ಲಿ ರಾಜಸೇವಾ ಪ್ರಸಕ್ತ ಬಿರುದನ್ನು ನೀಡಿದ್ದರು. ಆನಂತರ ಅನೇಕ ಕಾರಣಗಳಿಂದ ಅಯ್ಯಂಗಾರ್ ಅವರು ಏಪ್ರಿಲ್ 4, 1944 ರಲ್ಲಿ ರಲ್ಲಿ ಸ್ವಯಂನಿವೃತ್ತಿ ಪಡೆದುಕೊಳ್ಳುತ್ತಾರೆ.

ಸಾಹಿತ್ಯ ಕ್ಷೇತ್ರದಲ್ಲಿ ಬೃಹತ್ ಬಂಡಾರ ಮಾಸ್ತಿ ವೆಂಕಟೇಶ ಅಯ್ಯಂಗಾರ್
ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರಿಗೆ ಕನ್ನಡ ಹಾಗೂ ಕನ್ನಡ ಸಾಹಿತ್ಯದ ಮೇಲೆ ಎಲ್ಲಿಲ್ಲದ ಆಸಕ್ತಿ. ತಮ್ಮ ವಿದ್ಯಾಭ್ಯಾಸದ ದಿನಗಳಿಂದಲೂ ಮಾಸ್ತಿಯವರು ಹಲವಾರು ಕೃತಿಗಳನ್ನು ರಚಿಸಿದ್ದರು. ಅದರ ಜೊತೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿ ಐದು ವರ್ಷಗಳ ಕಾಲ ಮಾಸ್ತಿಯವರು ಕನ್ನಡದ ಸೇವೆಯನ್ನು ಮಾಡಿದ್ದು ಸ್ಮರಿಸಬೇಕಾಗುತ್ತದೆ. ತಮ್ಮ ಇಡೀ ಅಧಿಕಾರಿ ಸೇವೆಯ ಜೀವನಾನುಭವದ ಪಯಣದಲ್ಲಿ ಅನೇಕ ಕಥೆಗಳು ಕಾದಂಬರಿಗಳು ಕಾವ್ಯಗಳು ನಾಟಕಗಳನ್ನು ರಚಿಸಿರುತ್ತಾರೆ. ಇವರ ಮೊದಲ ಸಣ್ಣ ಕಥೆ ರಂಗನ ಮದುವೆ 1910 ರಲ್ಲಿ ರಚನೆಯಾಯಿತು. ಅವರ ಕೊನೆಯ ಕೃತಿ ಮಾತುಗಾರ ರಾಮಣ್ಣ 1985 ರಲ್ಲಿ ಪ್ರಕಟವಾಗುತ್ತದೆ. ಮಾಸ್ತಿಯವರ ಲೇಖನಿಯಲ್ಲಿ ಸಣ್ಣಕಥೆ, ಕಾವ್ಯ, ನಾಟಕ, ಕಾದಂಬರಿ, ಜೀವನ ಚರಿತ್ರೆ, ವಿಮರ್ಶೆ, ಅನುವಾದ ಸಾಹಿತ್ಯ, ಸಂಪಾದಕೀಯ ಮುಂತಾದ ವೈವಿಧ್ಯಮಯವಾದ ಸಾಹಿತ್ಯ ಸೃಷ್ಟಿಯಾಯಿತು.

ಸಾಹಿತ್ಯ ದಿಗ್ಗಜರ ಜೊತೆಗೆ ಸಾಹಿತ್ಯಿಕ ಸಂಬಂಧ ಬೆಳೆಸಿಕೊಂಡಿದ್ದವರು ಮಾಸ್ತಿ
ಮಾಸ್ತಿಯವರು ಟಿ.ಪಿ. ಕೈಲಾಸಂ, ಜಿ.ಪಿ.ರಾಜರತ್ನಂ, ದಾ.ರಾ.ಬೇಂದ್ರೆ, ಡಿವಿಜಿ, ಸರ್.ಎಂ.ವಿಶ್ವೇಶ್ವರಯ್ಯ ಇಂತಹ ಮಹಾನ್ ದಿಗ್ಗಜರ ಜೊತೆಗೆ ಸಾಹಿತ್ಯ ಸಂಬಂಧಗಳನ್ನು ಬೆಳೆಸಿಕೊಂಡು ಬೇಂದ್ರೆಯವರ ಜೀವನ ಎಂಬ ಪತ್ರಿಕೆಯ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಾರೆ. ಈ ಮೂಲಕ ಮಾಸ್ತಿಯವರು ತಮ್ಮ ಜೀವಿತಾವಧಿಯಲ್ಲಿ ಸಾಮಾಜಿಕವಾಗಿ ಹಾಗೂ ಸಾಹಿತ್ಯಿಕವಾಗಿ ಅತ್ಯದ್ಭುತ ಮೈಲಿಗಲ್ಲನ್ನು ದಾಖಲಿಸುತ್ತಾರೆ. ಹೀಗೆ ಜೂನ್ 6, 1986 ರಲ್ಲಿ ದೈವಾದೀನರಾಗುತ್ತಾರೆ. ಮಾಸ್ತಿಯವರಿಗೆ ಗೌರವವಾಗಿ ಶ್ರೀನಿವಾಸ ಎಂಬ ಸಂಭಾವನಾ ಗ್ರಂಥವನ್ನು ಅರ್ಪಿಸುತ್ತಾರೆ.

ಮಾಸ್ತಿಯವರಿಗೆ ಸಿಕ್ಕ ಗೌರವ
ಮೈಸೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪುರಸ್ಕಾರ ನೀಡಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಜೊತೆಗೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಲಭಿಸಿದೆ. ಮಾಸ್ತಿಯವರ ಐತಿಹಾಸಿಕ ಕಾದಂಬರಿಯಾದ ಚಿಕ್ಕವೀರ ರಾಜೇಂದ್ರ ಕೃತಿಗೆ ಜ್ಞಾನಪೀಠ ಪುರಸ್ಕಾರ ಲಭಿಸುತ್ತದೆ.

ಮಾಸ್ತಿಯವರ ಪ್ರಮುಖ ಕಥೆ ಹಾಗೂ ಕಾದಂಬರಿಗಳು
ಕಥೆಗಳು: ವೆಂಕಟಶಾಮಿಯ ಪ್ರಣಯ, ರಂಗನ ಮದುವೆ, ಮೊಸರಿನ ಮಂಗಮ್ಮ, ಕಲ್ಮಾಡಿಯ ಕೋಣ.
ಕಿರು ಕಾದಂಬರಿ: ಸುಬ್ಬಣ್ಣ
ಖ್ಯಾತ ನಾಟಕಗಳು: ಯಶೋಧರ, ಕಾಕನಕೋಟೆ, ಹ್ಯಾಮ್ಲೆಟ್(ಅನುವಾದ) ಪುರಂದರದಾಸ.
ಖ್ಯಾತ ಕಾದಂಬರಿ: ಚಿಕ್ಕವೀರರಾಜೇಂದ್ರ

ಅಂತ ಮಹಾನ್ ಸಾಹಿತ್ಯಿಕ ಬಂಡಾರವನ್ನು ಉಳಿಸಿಕೊಳ್ಳಲ್ಲಿಲ್ಲ ನಮ್ಮ ಸರ್ಕಾರಗಳು
ಮಾಸ್ತಿಯವರ ಪೆರಿಯಾತ್ ಮನೆಯನ್ನು ಗ್ರಂಥಾಲಯವನ್ನಾಗಿ ಮಾರ್ಪಡಿಸಲಾಗಿದೆ. ಮಾಸ್ತಿ ಟ್ರಸ್ಟ್ ಮಾಸ್ತಿಯವರ ಸಾಹಿತ್ಯವನ್ನು ನೀಡಲು ನಿರಂತರ ಪ್ರಯತ್ನ ಮಾಡುತ್ತಿದೆ. ಕುವೆಂಪು ಅವರ ಕುಪ್ಪಳ್ಳಿಯಂತೆ ಮಾಸ್ತಿಯವರ ಮನೆಯನ್ನು ಅಧ್ಯಯನ ಕೇಂದ್ರವನ್ನಾಗಿ ಮಾಡಬೇಕು ಎಂದು ಸಾಹಿತ್ಯಾಸಕ್ತರ ಹಾಗೂ ಕನ್ನಡ ಜನತೆಯ ಆಗ್ರಹ. ಆದರೆ ಸರ್ಕಾರ ಇದರ ಕಡೆ ಗಮನ ನೀಡದೆ ಮೌನವಾಗಿರುವುದು ಮಾಸ್ತಿ ಅಭಿಮಾನಿಗಳಿಗೆ ಕನ್ನಡಾಭಿಮಾನಿಗಳಿಗೆ ಬೇಸರದ ಸಂಗತಿ. 2014 ರಲ್ಲಿ ಸಿದ್ಧರಾಮಯ್ಯನವರ ಸರ್ಕಾರದಲ್ಲಿ ಮಾಸ್ತಿಯವರ ಪೆರಿಯಾತ್ ಮನೆಯನ್ನು ಅಧ್ಯಯನ ಕೇಂದ್ರವನ್ನಾಗಿ ಮಾಡಲು ಒಂದು ಕೋಟಿ ರೂಪಾಯಿ ಹಣವನ್ನು ಬಜೆಟ್ನಲ್ಲಿ ಘೋಷಣೆ ಮಾಡಲಾಗಿತ್ತಾದರೂ, ಈವರೆಗೆ ಆ ಕಾರ್ಯ ಕಾರ್ಯರೂಪಕ್ಕೆ ಬಂದಿಲ್ಲ. ಇನ್ನಾದರೂ ಸರ್ಕಾರ ಇತ್ತ ಗಮನ ಹರಿಸಬೇಕು.

ವರದಿ : ರಾಜೇಂದ್ರ ಸಿಂಹ

ಇದನ್ನೂ ಓದಿ:
ಕೋಲಾರ ಪೊಲೀಸರ ಕನ್ನಡಾಭಿಮಾನ: ಕ್ವಾಟ್ರಸ್​ಗಳಲ್ಲಿ ರಾರಾಜಿಸುತ್ತಿದೆ ಕನ್ನಡ ಕವಿಗಳ ರಂಗು

ಸ್ವಾತಿ ನಕ್ಷತ್ರದ ಮಳೆ ನೀರಿಗಿದೆ ಔಷಧೀಯ ಮಹತ್ವ; ಉತ್ತರ ಕನ್ನಡ ಜನರ ಪಾಲಿಗಂತೂ ಇದು ಅಮೃತಕ್ಕೆ ಸಮಾನ !

Published On - 3:34 pm, Mon, 8 November 21