2.5 ಕೋಟಿ ರೂ. ಮೌಲ್ಯದ ಆಭರಣದಲ್ಲಿ ಇರೋದು ಬರೀ 28 ಗ್ರಾಂ ಬಂಗಾರ! ಅಂಜನಾದ್ರಿ ದೇಣಿಗೆಯಲ್ಲಿ ಮಹಾ ಗೋಲ್‌ಮಾಲ್?

ಕೊಪ್ಪಳದ ಅಂಜನಾದ್ರಿ ಬೆಟ್ಟದ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಉದ್ಯಮಿ ಮಹೇಶ ರೆಡ್ಡಿ ನೀಡಿದ್ದ 2.50 ಕೋಟಿ ಮೌಲ್ಯದ ಆಭರಣಗಳು ವಿವಾದಕ್ಕೀಡಾಗಿವೆ. ತಪಾಸಣೆ ವೇಳೆ ಇವು ತಾಮ್ರದ ಮೇಲೆ ಚಿನ್ನದ ಲೇಪನ ಮಾಡಿರುವುದು ಪತ್ತೆಯಾಗಿದ್ದು, ಕೇವಲ 28 ಗ್ರಾಂ ಬಂಗಾರ ಇರುವುದು ದೃಢಪಟ್ಟಿದೆ. ಈ ಸಂಬಂಧ ಜಿಲ್ಲಾಧಿಕಾರಿಗಳು ಉದ್ಯಮಿಗೆ ಅಧಿಕೃತ ಬಿಲ್ ಸಲ್ಲಿಸುವಂತೆ ನೋಟಿಸ್ ಜಾರಿ ಮಾಡಿದೆ.

2.5 ಕೋಟಿ ರೂ. ಮೌಲ್ಯದ ಆಭರಣದಲ್ಲಿ ಇರೋದು ಬರೀ 28 ಗ್ರಾಂ ಬಂಗಾರ! ಅಂಜನಾದ್ರಿ ದೇಣಿಗೆಯಲ್ಲಿ ಮಹಾ ಗೋಲ್‌ಮಾಲ್?
2.50 ಕೋಟಿ ಆಭರಣದಲ್ಲಿ ಇರೋದು ಬರೀ 28 ಗ್ರಾಂ ಬಂಗಾರ!
Edited By:

Updated on: May 11, 2026 | 12:42 PM

ಕೊಪ್ಪಳ, ಮೇ 11: ಹನುಮ ಜನ್ಮಸ್ಥಳ ಅಂಜನಾದ್ರಿ ಬೆಟ್ಟದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಅದ್ದೂರಿಯಾಗಿ ದೇಣಿಗೆ ನೀಡಿದ್ದ ಹೈದರಾಬಾದ್ ಮೂಲದ ಉದ್ಯಮಿ ಮಹೇಶ ರೆಡ್ಡಿ ಅವರಿಗೆ ಈಗ ಜಿಲ್ಲಾಡಳಿತ ಶಾಕ್ ನೀಡಿದೆ. ಅವರು ನೀಡಿದ್ದ ಆಭರಣಗಳ ಖಚಿತತೆ ಮತ್ತು ಮೌಲ್ಯದ ಬಗ್ಗೆ ಬಿಲ್ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ.

ಮುಖ್ಯಾಂಶಗಳು

  • ಅಂಜನಾದ್ರಿ ಹನುಮನಿಗೆ ನೀಡಿದ 2.50 ಕೋಟಿ ಆಭರಣ ಬರೀ ತಾಮ್ರದ ಲೇಪನ.
  • ಕೇವಲ 28 ಗ್ರಾಂ ಬಂಗಾರ ಪತ್ತೆ; ಉದ್ಯಮಿ ಮಹೇಶ ರೆಡ್ಡಿಗೆ ನೋಟಿಸ್.
  • ಅಧಿಕೃತ ಬಿಲ್ ಇಲ್ಲದೆ ಆಭರಣಗಳನ್ನು ಖಜಾನೆಗೆ ಜಮೆ ಮಾಡದ ಜಿಲ್ಲಾಡಳಿತ.

ಏನಾಗಿತ್ತು?

ಕಳೆದ ಮೇ 8ರಂದು ಎಎಂಆರ್ (AMR) ಗ್ರೂಪ್ ಅಧ್ಯಕ್ಷ ಎ. ಮಹೇಶ್ ರೆಡ್ಡಿ ಅವರು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ದಂಪತಿಗಳ ಸಮ್ಮುಖದಲ್ಲಿ ದೇವಸ್ಥಾನಕ್ಕೆ ಬಂಗಾರದ ಪ್ರಭಾವಳಿ, ಕಿರೀಟ ಹಾಗೂ ಗದೆಯನ್ನು ಅರ್ಪಿಸಿದ್ದರು. ಈ ಆಭರಣಗಳ ಮೌಲ್ಯ ಸುಮಾರು 2.50 ಕೋಟಿ ರೂಪಾಯಿ ಎಂದು ಹೇಳಲಾಗಿತ್ತು. ತಿರುಪತಿ ಮಾದರಿಯಲ್ಲಿ ಅಂಜನಾದ್ರಿಯನ್ನು ಅಭಿವೃದ್ಧಿಪಡಿಸುವ ಆಶಯದೊಂದಿಗೆ ಈ ಬೃಹತ್ ದೇಣಿಗೆ ನೀಡಲಾಗಿದೆ ಎಂದು ಅಂದು ಸಂಭ್ರಮಿಸಲಾಗಿತ್ತು.

ತಪಾಸಣೆ ವೇಳೆ ಬಯಲಾದ ಸತ್ಯ

ಉದ್ಯಮಿ ಮಹೇಶ ರೆಡ್ಡಿ ಅವರ ಮನವಿಯ ಮೇರೆಗೆ ಎರಡು ದಿನಗಳ ಕಾಲ ಈ ಆಭರಣಗಳನ್ನು ಆಂಜನೇಯನ ಅಲಂಕಾರಕ್ಕೆ ಬಳಸಲಾಗಿತ್ತು. ಆದರೆ, ಇವುಗಳನ್ನು ಅಧಿಕೃತವಾಗಿ ದೇವಸ್ಥಾನದ ಖಜಾನೆಗೆ ಜಮೆ ಮಾಡಿಕೊಳ್ಳುವ ಮೊದಲು ಜಿಲ್ಲಾಡಳಿತವು ಪರಿಶೀಲನೆ ನಡೆಸಿದಾಗ ಅಚ್ಚರಿಯ ವಿಷಯವೊಂದು ಬೆಳಕಿಗೆ ಬಂದಿದೆ.

2.50 ಕೋಟಿ ಮೌಲ್ಯದ ಚಿನ್ನ ಎಂದು ಹೇಳಲಾದ ಆಭರಣಗಳಲ್ಲಿ ಕೇವಲ 28 ಗ್ರಾಂ ಬಂಗಾರ ಮಾತ್ರ ಪತ್ತೆಯಾಗಿದೆ. ಇವು ಸಂಪೂರ್ಣ ಬಂಗಾರದ ಆಭರಣಗಳಲ್ಲ, ಬದಲಿಗೆ ತಾಮ್ರದ ಮೇಲೆ ಬಂಗಾರದ ಲೇಪನ (Gold Plated) ಮಾಡಲಾದ ಆಭರಣಗಳು ಎಂಬುದು ತಪಾಸಣೆಯಲ್ಲಿ ದೃಢಪಟ್ಟಿದೆ.

ಇದನ್ನೂ ಓದಿ ಅಂಜನಾದ್ರಿ ಹನುಮನಿಗೆ 2.5 ಕೋಟಿ ರೂ. ಮೌಲ್ಯದ ಚಿನ್ನದ ಕಿರೀಟ!

ದಾಖಲೆ ಸಲ್ಲಿಸಲು ನೋಟಿಸ್

ಅಧಿಕೃತ ಬಿಲ್ ಅಥವಾ ದಾಖಲೆಗಳಿಲ್ಲದೆ ಇವುಗಳನ್ನು ಸರ್ಕಾರಿ ಖಜಾನೆಗೆ ಸೇರಿಸಿಕೊಳ್ಳಲು ಜಿಲ್ಲಾಡಳಿತ ನಿರಾಕರಿಸಿದೆ. ದಾನ ನೀಡಿರುವ ಆಭರಣಗಳ ನಿಖರ ಮೌಲ್ಯ ಮತ್ತು ಚಿನ್ನದ ಪ್ರಮಾಣವನ್ನು ದೃಢೀಕರಿಸುವ ಅಧಿಕೃತ ಬಿಲ್ ನೀಡುವಂತೆ ಮಹೇಶ ರೆಡ್ಡಿ ಅವರಿಗೆ ಸೂಚಿಸಲಾಗಿದೆ. ಇದುವರೆಗೆ ಉದ್ಯಮಿಯಿಂದ ಯಾವುದೇ ಅಧಿಕೃತ ದಾಖಲೆಗಳು ಲಭ್ಯವಾಗಿಲ್ಲದ ಕಾರಣ ಜಿಲ್ಲಾಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ. ಈ ಹಿಂದೆ ಶಿರಡಿ ಸಾಯಿ ಬಾಬಾ ದೇವಸ್ಥಾನಕ್ಕೂ ಅಪಾರ ಪ್ರಮಾಣದ ಚಿನ್ನ ದೇಣಿಗೆ ನೀಡಿದ್ದ ಮಹೇಶ ರೆಡ್ಡಿ ಅವರು, ಅಂಜನಾದ್ರಿಯಲ್ಲಿ ಇಂತಹ ವಿವಾದಕ್ಕೆ ಸಿಲುಕಿರುವುದು ಈಗ ಭಕ್ತರಲ್ಲಿ ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us