ತುಂಗಭದ್ರಾ ನೀರಿನ ಮಟ್ಟದಲ್ಲಿ ಗಣನೀಯ ಏರಿಕೆ, ಜಲಾಶಯ ಭರ್ತಿಗೆ ಎಷ್ಟು ನೀರು ಬೇಕು ಗೊತ್ತಾ?

ಮಲೆನಾಡಿನಲ್ಲಿ ಮತ್ತೆ ಮಳೆಯಾಗುತ್ತಿರುವ ಹಿನ್ನೆಲೆ ಜಲಾಶಯಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿದೆ. ತುಂಗಭದ್ರಾ ಜಲಾಶಯದಲ್ಲಿ ನೀರಿನ ಪ್ರಮಾಣದಲ್ಲಿ ಏರಿಕೆಯಾಗಿದ್ದು, ನೀರಿನ ಒಳ ಹರಿವು ಹೆಚ್ಚಾಗಿದೆ. ಕ್ರಸ್ಟ್​​ ಗೇಟ್ ಮುರಿದು ಹೋಗಿ ಅಪಾರ ಪ್ರಮಾಣ ನೀರು ಹೋಗಿದ್ದರೂ ಸಹ ಈಗ ಮತ್ತೆ ತುಂಗಾಭದ್ರಾ ಒಡಲು ತುಂಬುವ ಹಂತಕ್ಕೆ ಬಂದಿರುವುದರಿಂದ ಈ ಭಾಗದ ಜನರಲ್ಲಿ ಸಂತಸ ಇಮ್ಮಡಿಯಾಗಿದೆ.

ತುಂಗಭದ್ರಾ ನೀರಿನ ಮಟ್ಟದಲ್ಲಿ ಗಣನೀಯ ಏರಿಕೆ, ಜಲಾಶಯ ಭರ್ತಿಗೆ ಎಷ್ಟು ನೀರು ಬೇಕು ಗೊತ್ತಾ?
ತುಂಗಭದ್ರಾ
Follow us
| Updated By: ರಮೇಶ್ ಬಿ. ಜವಳಗೇರಾ

Updated on: Sep 01, 2024 | 11:31 AM

ಕೊಪ್ಪಳ/ವಿಜಯನಗರ,(ಸೆಪ್ಟೆಂಬರ್ 01): ಕ್ರಸ್ಟ್​ ಗೇಟ್ ಮುರಿದು ಅಪಾರ ಪ್ರಮಾನ ನೀರು ಪೋಲಾಗಿದ್ದರೂ ಸಹ ಮಳೆಯಿಂದಾಗಿ ತುಂಗಭದ್ರಾ ಜಲಾಶಯ ಭರ್ತಿಯಾಗುವತ್ತಾ ಸಾಗಿದೆ. ಜಲಾಶಯ ಭರ್ತಿಯಾಗಲು ಇನ್ನು ಕೇವಲ 2.17 ಅಡಿ ಮಾತ್ರ ಬಾಕಿ ಇದೆ. ಗರಿಷ್ಠ 105.788 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ‌ ಜಲಾಶಯದಲ್ಲಿ ಸದ್ಯ 96.838 ಟಿಎಂಸಿ ನೀರು ಸಂಗ್ರಹ ವಾಗಿದ್ದು, 2.17 ಅಡಿ ಮಾತ್ರ ನೀರು ಬರಬೇಕಿದೆ. ಸದ್ಯ ಜಲಾಶಯಕ್ಕೆ 40107 ಕ್ಯೂಸೆಕ್ ನೀರಿನ ಒಳ ಹರಿವು ಇದ್ದು, 10067 ಕ್ಯೂಸೆಕ್ ಹೊರಹರಿವು ಇದೆ. ಮಲೆನಾಡು ಭಾಗದಲ್ಲಿ ಮಳೆಯಾಗುತ್ತಿರುವುದರಿಂದ 2.17 ಅಡಿ ನೀರು ಹರಿದು ಬರುವ ಸಾಧ್ಯತೆಗಳಿದ್ದು, ಇನ್ನು ಎರಡ್ಮೂರು ದಿನಗಳಲ್ಲೇ ತುಂಗಾಭದ್ರಾ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗುವುದು ಪಕ್ಕಾ.

ಈ ಬಾರಿಯ ಮುಂಗಾರು ಮಳೆಯ ಅಬ್ಬರದಿಂದಾಗಿ ತುಂಗಾಭದ್ರಾ ಜಲಾಶಯ ತುಂಬಿತ್ತು. ಆದ್ರೆ, ದುರದೃಷ್ಟವಶಾತ್, ಆಗಸ್ಟ್ 10 ರಂದು ಡ್ಯಾಂನ ಕ್ರಸ್ಟಗೇಟ್ ಕೊಚ್ಚಿಕೊಂಡು ಹೋಗಿತ್ತು. ಆ ಸಂದರ್ಭದಲ್ಲಿ ಡ್ಯಾಂ ಕ್ರಸ್ಟಗೇಟ್ ಅಳವಡಿಕೆಗಾಗಿ ಅಪಾರ ಪ್ರಮಾಣದ ನೀರನ್ನು ಹರಿಬಿಡುವ ಅನಿವಾರ್ಯತೆ ಎದುರಾಗಿತ್ತು. ಆ.18 ರಂದು ಜಲಾಶಯಕ್ಕೆ ಸ್ಟಾಪಲಾಗ್ ಗೇಟ್ (Stoplog Gate) ಅಳವಡಿಕೆ ಮಾಡಲಾಗಿತ್ತು. ಗೇಟ್ ಅಳವಡಿಸಿದ ನಂತರ ಮತ್ತೆ ಜಲಾಶಯ ಭರ್ತಿಯಾಗುವ ಹಂತಕ್ಕೆ ಬಂದಿದೆ. ಇದರೊಂದಿಗೆ ರೈತರ ಎರಡು ಬೆಳೆ ಕನಸು ಮತ್ತೆ ಚಿಗುರೊಡೆದಿದೆ.

ಇದನ್ನೂ ಓದಿ: Karnataka Dam Water Level: ಸೆ.01 ರಾಜ್ಯದ 14 ಪ್ರಮುಖ ಜಲಾಶಯಗಳ ನೀರಿನ ಮಟ್ಟ ವಿವರ

ಕ್ರಸ್ಟ್​ ಗೇಟ್​ ಕಿತ್ತುಕೊಂಡು ಹೋಗಿದ್ದರಿಂದ ತುಂಬಿದ್ದ ನೀರನ್ನು ಮುಕ್ಕಾಲು ಭಾಗ ಜಲಾಶಯದಿಂದ ಖಾಲಿ ಮಾಡಬೇಕಿತ್ತು. ಆದ್ರೆ, ತಜ್ಞರ ಶ್ರಮದಿಂದ ಸ್ವಲ್ಪ ಪ್ರಮಾಣದ ನೀರು ಹೊರಗೆ ಕಳುಹಿಸಿ ಗೇಟ್​ ದುರಸ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದರು. ಇದರಿಂದ ಅಪಾರ ಪ್ರಮಾನದ ನೀರು ಸಹ ಜಲಾಶಯದಲ್ಲಿ ಉಳಿದುಕೊಂಡಿತ್ತು.

ಆದರೂ ಸಹ ಮತ್ತೆ ಭರ್ತಿಯಾಗುವುದು ಅನುಮಾನ ಎನ್ನಲಾಗಿತ್ತು. ಇದರಿಂದ ರೈತರು ಆತಂಕಕ್ಕೆ ಒಳಗಾಗಿದ್ದರು. ಇದೀಗ ಮತ್ತೆ ಮಲೆನಾಡು ಭಾಗದಲ್ಲಿ ಮಳೆ ಸುರಿಯುತ್ತಿರುವುದರಿಂದ ಮತ್ತೆ ಜಲಾಶಯ ಭರ್ತಿಯಾಗುವ ಹಂತಕ್ಕೆ ಬಂದು ನಿಂತಿದೆ. ಹೀಗಾಗಿ ಈ ಭಾಗದ ರೈತರು ಬೇಸಿಗೆ ಬೆಳೆಯ ನಿರೀಕ್ಷೆಯಲ್ಲಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ