ಬಿಜೆಪಿ ಮುಖಂಡ ವೆಂಕಟೇಶ್ ಕೊಲೆ ಕೇಸ್​​ಗೆ ಬಿಗ್ ಟ್ವಿಸ್ಟ್: ಜೊತೆಗಿದ್ದಕೊಂಡೇ ಮುಹೂರ್ತ ಇಟ್ಟವರ ಬಂಧನ

ಕೊಪ್ಪಳದ ಗಂಗಾವತಿಯಲ್ಲಿ ನಡೆದ ಬಿಜೆಪಿ ಮುಖಂಡ ವೆಂಕಟೇಶ ಕುರುಬರ್ ಕೊಲೆ ಪ್ರಕರಣಕ್ಕೆ ದೊಡ್ಡ ತಿರುವು ಸಿಕ್ಕಿದೆ. ಕೊಲೆಗೆ ಸಹಕರಿಸಿದ ಆಪ್ತ ಸ್ನೇಹಿತರನ್ನು ಸದ್ಯ ಪೊಲೀಸರು ಬಂಧಿಸಿದ್ದಾರೆ. ವೆಂಕಟೇಶ್ ಹತ್ಯೆ ವಿಚಾರ ಆಪ್ತ ಸ್ನೇಹಿತರಿಗೆ ಮೊದಲೇ ತಿಳಿದಿತ್ತು. ಸದ್ಯ ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಬಿಜೆಪಿ ಮುಖಂಡ ವೆಂಕಟೇಶ್ ಕೊಲೆ ಕೇಸ್​​ಗೆ ಬಿಗ್ ಟ್ವಿಸ್ಟ್: ಜೊತೆಗಿದ್ದಕೊಂಡೇ ಮುಹೂರ್ತ ಇಟ್ಟವರ ಬಂಧನ
ವೆಂಕಟೇಶ್​ ಕುರುಬರ ಕೊಲೆ ಕೇಸ್
Edited By:

Updated on: Nov 03, 2025 | 4:34 PM

ಕೊಪ್ಪಳ್ಳ, ನವೆಂಬರ್​ 03: ಇಡೀ ಜಿಲ್ಲೆಯನ್ನು ಬೆಚ್ಚಿಬೀಳಿಸಿದ್ದ ಬಿಜೆಪಿ (BJP) ಯುವ ಮೋರ್ಚಾ ಅಧ್ಯಕ್ಷ ವೆಂಕಟೇಶ್ ಕುರುಬರ (BJP leader venkatesh) ಹತ್ಯೆ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್​​ ಸಿಕ್ಕಿದೆ. ಕೊಲೆಗೆ ಸಾಥ್ ನೀಡಿದ್ದ ವೆಂಕಟೇಶ್​​ನ ಇಬ್ಬರು ಸ್ನೇಹಿತರಾದ ಶರಣಬಸವ ಹಾಗೂ ಮಲ್ಲಿಕಾರ್ಜುನ ನನ್ನು ಪೊಲೀಸರು ಬಂಧಿಸಿದ್ದಾರೆ. ವೆಂಕಟೇಶ್​​ನ ಜೊತೆಗೆ ಇದ್ದುಕೊಂಡು ಹತ್ಯೆ ಮಾಸ್ಟರ್ ಮೈಂಡ್ ರವಿಗೆ ಆರೋಪಿಗಳು ಮಾಹಿತಿ ನೀಡಿದ್ದು ಬಯಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪ್ರಮುಖ ಆರೋಪಿ ರವಿ ಸೇರಿದಂತೆ 10 ಆರೋಪಿಗಳನ್ನು ಬಂಧಿಸಲಾಗಿದೆ. ಕೊಲೆಯಾಗಿರುವ ವೆಂಕಟೇಶ್​ ಹಾಗೂ ರವಿ ನಡುವೆ ನಡೆದ ಸಂಭಾಷಣೆಯಲ್ಲಿ ನೀನು ಸಾಕಿದ ನಾಯಿಗಳ ಬಗ್ಗೆ ಎಚ್ಚರವಾಗಿರು ಎಂದು ರವಿ ಹೇಳಿದ್ದ.

ಇದನ್ನೂ ಓದಿ: ಗಂಗಾವತಿ: ಗಂಗಾವತಿ ಬಿಜೆಪಿ ಯುವ ಮುಖಂಡ ವೆಂಕಟೇಶ್ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: 10 ಆರೋಪಿಗಳ ಬಂಧನದ ಬೆನ್ನಲ್ಲೇ ಹೊರಬಂತು ಸತ್ಯ!

ವೆಂಕಟೇಶ್ ಕೊಲೆಯಾಗುವ ಮುನ್ನ ಮಾಸ್ಟರ್ ಮೈಂಡ್ ರವಿ ಜೊತೆ ಆರೋಪಿಗಳು ಸಂಪರ್ಕದಲ್ಲಿದ್ದರು.  ರವಿ ಜೊತೆ 40 ನಿಮಿಷಕ್ಕೂ ಹೆಚ್ಚು ಕಾಲ ಮೂರು ದಿನ ಮೊದಲೇ ಮಲ್ಲಿಕಾರ್ಜುನ ಮಾತಾಡಿದ್ದ. ವೆಂಕಟೇಶ್ ಹತ್ಯೆ ವಿಚಾರ ಆಪ್ತ ಸ್ನೇಹಿತರಿಗೆ ಮೊದಲೇ ತಿಳಿದಿತ್ತು.

ಗಂಗಾವತಿಗೆ ಬಂದಿದ್ದ ಹಂತಕರಿಗೆ ವೆಂಕಟೇಶ್ ಇರುವ ಜಾಗ ಸೇರಿದಂತೆ ಎಲ್ಲಾ ಮಾಹಿತಿಯನ್ನು ಈ ಆಪ್ತ ಸ್ನೇಹಿತರು ನೀಡಿದ್ದರು. ವೆಂಕಟೇಶ್​ ಜೊತೆಯಲ್ಲೇ ಇದ್ದು ಆತನ ಚಲನವಲನದ ಮಾಹಿತಿ ನೀಡಿದ್ದರು. ನಿತ್ಯ ಜೊತೆಗೆ ಇರುತ್ತಿದ್ದು, ಕೊಲೆಯಾಗುವ ದಿನ ಮಾತ್ರ ಕಾರಣ ಹೇಳಿ ವೆಂಕಟೇಶ್ ನನ್ನ ಬಿಟ್ಟು ಬಂದಿದ್ದರು. ಸದ್ಯ ಇಬ್ಬರು ಆರೋಪಿಗಳನ್ನ ಬಂಧಿಸಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಘಟನೆ ಹಿನ್ನೆಲೆ 

ಅಕ್ಟೋಬರ್​​ 8ರಂದು ಗಂಗಾವತಿ ನಗರ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ವೆಂಕಟೇಶ್ ಕುರುಬರ ಕೊಲೆ ನಡೆದಿತ್ತು. ಮಚ್ಚಿನಿಂದ ಕೊಚ್ಚಿ ಹಂತಕರು ಭೀಕರವಾಗಿ ಕೊಲೆ ಮಾಡಿದ್ದರು. ವೆಂಕಟೇಶ್ ಹತ್ಯೆಗೆ ಇಡೀ ಗಂಗಾವತಿ ನಗರ ಬೆಚ್ಚಿ ಬಿದ್ದಿತ್ತು. ಕೊಲೆ ನಡೆದ ದಿನವೇ ಗಂಗಾವತಿ ನಗರ ಪೊಲೀಸರು ನಾಲ್ವರನ್ನ ಅರೆಸ್ಟ್ ಮಾಡಿದ್ದರು.

ಇದನ್ನೂ ಓದಿ: ಗಂಗಾವತಿ: ಬಿಜೆಪಿ ಯುವ ಮುಖಂಡ ವೆಂಕಟೇಶ್ ಬರ್ಬರ ಹತ್ಯೆ

ವಿಜಯ್, ಧನರಾಜ್, ಭರತ್ ಹಾಗೂ ಸಲೀಂ ಬಂಧಿತರು. ಬಳಿಕ ಅಕ್ಟೋಬರ್ 14 ರಂದು ಕಾರ್ತಿಕನನ್ನ ಅರೆಸ್ಟ್ ಮಾಡಿದ್ದರು. ಆದರೆ ಕೊಲೆಯ ಮಾಸ್ಟರ್ ಮೈಂಡ್ ಮಾತ್ರ ಸಿಕ್ಕಿರಲಿಲ್ಲ. ಈ ಹತ್ಯೆ ಹಿಂದೆ ಹಳೆ ವೈಷಮ್ಯ ಹಾಗೂ ಅಂದರ್ ಬಾಹರ್ ಆಟವೂ ತಳಕು ಹಾಕಿಕೊಂಡಿದೆ. ಅಂದರ್ ಬಾಹರ್ ಆಟದ ವೈಷಮ್ಯ, ನಾಯಕತ್ವದ ಜಿದ್ದು ಎಲ್ಲವೂ ಕೊಲೆಗೆ ಕಾರಣ ಎನ್ನಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Loading...
Unable to load recommendations.
Follow Us