ಕೊಪ್ಪಳದಲ್ಲಿ ಭೀಕರ ಅಪಘಾತ: ಮೂವರು ಯುವಕರು ದುರ್ಮರಣ
ಕೊಪ್ಪಳ ತಾಲೂಕಿನ ಇಂದರಗಿ ಗ್ರಾಮದ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಹದಿಹರೆಯದ ಮೂವರು ಯುವಕರು ದುರ್ಮರಣ ಹೊಂದಿರುವಂತಹ ಘಟನೆ ನಡೆದಿದೆ. ಸದ್ಯ ಘಟನೆ ಬಳಿಕ ಚಾಲಕ ಬೊಲೆರೊ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಮುನಿರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಕೊಪ್ಪಳ, ಡಿಸೆಂಬರ್ 17: ಬೈಕ್ಗೆ ಬೊಲೆರೊ ವಾಹನ ಡಿಕ್ಕಿ (accident) ಹೊಡೆದ ರಭಸಕ್ಕೆ ಮೂವರು ಯುವಕರು ದುರ್ಮರಣ (death) ಹೊಂದಿರುವಂತಹ ಘಟನೆ ಕೊಪ್ಪಳ ತಾಲೂಕಿನ ಇಂದರಗಿ ಗ್ರಾಮದ ಬಳಿ ನಡೆದಿದೆ. ವಾಜಿದ್(17), ರಾಜಾಹುಸೇನ್(17) ಮತ್ತು ಆಸೀಫ್(18) ಮೃತರು. ಬೊಲೆರೊ ವಾಹನ ಚಾಲಕ ಪರಾರಿಯಾಗಿದ್ದು, ಮುನಿರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ವಾಜಿದ್ ಮತ್ತು ಹುಸೇನ್ ಕೊಪ್ಪಳ ತಾಲೂಕಿನ ಹೊಸಹಳ್ಳಿ ನಿವಾಸಿಗಳು. ಮೃತ ಆಸೀಫ್ ಗಂಗಾವತಿ ತಾಲೂಕಿನ ಶ್ರೀರಾಮನಗರ ನಿವಾಸಿ. ಶ್ರೀರಾಮನಗರದಿಂದ ಹೊಸಹಳ್ಳಿಗೆ ಬೈಕ್ನಲ್ಲಿ ತೆರಳುವಾಗ ಭೀಕರ ರಸ್ತೆ ಅಪಘಾತ ಸಂಭವಿಸಿದೆ.
ಕಾರು ಡಿಕ್ಕಿಯಿಂದ ಪಾದಚಾರಿ ವೃದ್ಧ ಸ್ಥಳದಲ್ಲೇ ದುರ್ಮರಣ
ಕಾರು ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ವೃದ್ಧ ಸ್ಥಳದಲ್ಲೇ ದುರ್ಮರಣ ಹೊಂದಿರುವಂತಹ ಘಟನೆ ಬೆಂಗಳೂರಿನ ಆರ್ಎಂವಿ ಎಕ್ಸ್ಟೆನ್ಷನ್ ಬಳಿ ನಡೆದಿದೆ. ಕಾರು ಡಿಕ್ಕಿ ರಭಸಕ್ಕೆ ಹಾರಿಬಿದ್ದು ರಾಮಚಂದ್ರಾರೆಡ್ಡಿ(64) ಎಂಬುವವರು ಮೃತಪಟ್ಟಿದ್ದಾರೆ. ಸಂಜಯನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಕಳ್ಳರ ಕರಾಮತ್ತಿಗೆ ಸ್ವಂತ ಸೂರಿನ ಕನಸು ಕಂಡಿದ್ದ ಕುಟುಂಬ ಕಂಗಾಲು: ಮನೆ ಬಾಗಿಲು ಮುರಿದು ಚಿನ್ನ, ಹಣ ದರೋಡೆ
ಮೊದಲಿಗೆ ಪಾದಚಾರಿ ವೃದ್ಧನಿಗೆ ಡಿಕ್ಕಿ ಹೊಡೆದಿದ್ದ ಸಿಯಾಜ್ ಕಾರು, ಬಳಿಕ ಆರ್ಎಂವಿ ಕ್ಲಬ್ ಪಾರ್ಕಿಂಗ್ನಲ್ಲಿ ಎರ್ಟಿಗಾ ಕಾರಿಗೆ, ನಂತರ ಐದಾರು ಬೈಕ್ಗಳಿಗೆ ಡಿಕ್ಕಿ ಹೊಡೆದು ನಿಂತಿದೆ. ಇನ್ನು ಡಿಕ್ಕಿ ರಭಸಕ್ಕೆ ಕಾರಿನಲ್ಲಿದ್ದ ಯುವಕ ಮತ್ತು ಯುವತಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯರು ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕೆರೆಗೆ ಆಟೋ ಉರುಳಿ ಬಿದ್ದು ಚಾಲಕ ಸಾವು
ಕೆರೆಗೆ ಆಟೋ ಉರುಳಿ ಬಿದ್ದು ಚಾಲಕ ಸಾವನ್ನಪ್ಪಿರುವಂತಹ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಮೂಕನಹಳ್ಳಿ ಬಳಿ ಘಟನೆ ನಡೆದಿದೆ. ಉದ್ದೂರು ಗ್ರಾಮದ ರಾಜು ಮೃತ ಚಾಲಕ.
ಇದನ್ನೂ ಓದಿ: ಬಾಗಲಕೋಟೆ ವಿಜಯಪುರ ಹೆದ್ದಾರಿಯಲ್ಲಿ ಭೀಕರ ಅಪಘಾತ: ನಾಲ್ವರು ಸಾವು
ಅಗ್ನಿ ಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆಟೋ ಸಹಿತ ಚಾಲಕ ರಾಜು ಶವವನ್ನು ಮೇಲಕ್ಕೆ ಎತ್ತಲಾಗಿದೆ. ಹುಣಸೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:20 pm, Wed, 17 December 25



