ಸ್ಟೀಲ್ ಪ್ಯಾಕ್ಟರಿಯಲ್ಲಿ ಕಾರ್ಬನ್ ಮೋನಾಕ್ಸೈಡ್ ಲೀಕ್: ಓರ್ವ ಕಾರ್ಮಿಕ ಸಾವು, 9 ಜನ ಅಸ್ವಸ್ಥ

ಹೊಟ್ಟೆ ತುಂಬಿಸಿಕೊಳ್ಳಲು ಕಾರ್ಮಿಕರು ಸ್ಟೀಲ್ ಪ್ಯಾಕ್ಟರಿಯಲ್ಲಿ ಕೆಲಸಕ್ಕೆ ಹೋಗ್ತಿದ್ದರು. ಆದ್ರೆ ಪ್ಯಾಕ್ಟರಿಯಲ್ಲಿ ಅಪಾಯಕಾರಿ ಕಾರ್ಬನ್ ಮೋನಾಕ್ಸೈಡ್ ಲೀಕ್ ಆಗಿದ್ದರಿಂದ ಓರ್ವ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟಿದ್ದರೆ, ಒಂಬತ್ತು ಕಾರ್ಮಿಕರು ಅಸ್ವಸ್ಥರಾಗಿದ್ದಾರೆ. ಪ್ಯಾಕ್ಟರಿ ಮೇಲಾಧಿಕಾರಿಗಳ ನಿರ್ಲಕ್ಷ್ಯದಿಂದಲೇ ಈ ಘಟನೆ ನಡೆದಿದೆ ಅಂತ ಕುಟುಂಬದವರು ಆರೋಪಿಸುತ್ತಿದ್ದಾರೆ.

ಸ್ಟೀಲ್ ಪ್ಯಾಕ್ಟರಿಯಲ್ಲಿ ಕಾರ್ಬನ್ ಮೋನಾಕ್ಸೈಡ್ ಲೀಕ್: ಓರ್ವ ಕಾರ್ಮಿಕ ಸಾವು, 9 ಜನ ಅಸ್ವಸ್ಥ
Koppal Factry
Edited By:

Updated on: Jan 28, 2025 | 9:42 PM

ಕೊಪ್ಪಳ, (ಜನವರಿ 28):  ಸ್ಟೀಲ್ ಪ್ಯಾಕ್ಟರಿಯಲ್ಲಿ ಕಾರ್ಬನ್ ಮೋನಾಕ್ಸೈಡ್ ಸೋರಿಕೆಯಾಗಿ ಓರ್ವ ಕಾರ್ಮಿಕ ಸಾವನ್ನಪ್ಪಿದ್ದು, 9 ಜನರು ಅಸ್ವಸ್ಥಗೊಂಡಿದ್ದಾರೆ. ಕೊಪ್ಪಳ ತಾಲೂಕಿನ ಅಲ್ಲಾನಗರ ಗ್ರಾಮದ ಬಳಿಯಿರೋ ಹೊಸಪೇಟ್ ಇಸ್ಫಾಥ್ ಸ್ಟೀಲ್ ಕಂಪನಿಯಲ್ಲಿ ಇಂದು ಮಧ್ಯಾಹ್ನ ಮೂರು ಗಂಟೆ ಸಮಯದಲ್ಲಿ ದುರ್ಘಟನೆಯೊಂದು ನಡೆದಿದೆ.  ಕಾಮಿನಿ ಸ್ಟೀಲ್ ಇಸ್ಪಾಥ್ ಅನ್ನೋ ಕಂಪನಿಯವರು ಸದ್ಯ ಲೀಸ್ ಮೇಲೆ ಪ್ಯಾಕ್ಟರಿಯನ್ನು ನಡೆಸುತ್ತಿದ್ದು, ಪ್ಯಾಕ್ಟರಿಯ ವಾರ್ಷಿಕ್ ಮೆಂಟನೆನ್ಸ್ ನಡೆದಿದೆಯಂತೆ. ಹೀಗಾಗಿ ಸ್ಟೀಲ್ ಉತ್ಫಾದನೆ ಬಂದ್ ಆಗಿದ್ದರೂ ಸಹ ಮಷಿನ್ ರಿಪೇರಿ, ಸರ್ವಿಸ್ ಸೇರಿದಂತೆ ಅನೇಕ ಕೆಲಸಗಳು ನಡೆದಿವೆ. ಈ ವೇಳೆ ಈ ದುರ್ಘಟನೆ ಸಂಭವಿಸಿದೆ.

ಸರ್ವಿಸ್​ ಸೇರಿದಂತೆ ಹಲವು ಕೆಲಸ ನಿಮಿತ್ತ ನೂರಾ ಐವತ್ತಕ್ಕೂ ಹೆಚ್ಚು ಕಾರ್ಮಿಕರು ಪ್ಯಾಕ್ಟರಿಗೆ ಬರುತ್ತಿದ್ದರು. ಆದ್ರೆ ಇಂದು ಮಧ್ನಾಹ್ನ ಮೂರು ಗಂಟೆ ಸಮಯದಲ್ಲಿ ಪ್ಯಾಕ್ಟರಿಯಲ್ಲಿ ಕಾರ್ಬನ್ ಮೋನಾಕ್ಸೈಡ್ ಟ್ಯಾಂಕ್ ಲೀಕ್ ಆಗಿದೆ. ಈ ಸಮಯದಲ್ಲಿ ಸ್ಥಳದಲ್ಲಿದ್ದ ಅಲ್ಲಾನಗರ ನಿವಾಸಿ ಮಾರುತಿ ಅನ್ನೋ ಇಪ್ಪತ್ನಾಲ್ಕು ವರ್ಷದ ಕಾರ್ಮಿಕ ಅಪಾಯಕಾರಿಯಾಗಿರೋ ಕಾರ್ಬನ್ ಮೋನಾಕ್ಸೈಡ್ ಸೇವಿಸಿ ಮೃತಪಟ್ಟಿದ್ದಾನೆ.

ಇದನ್ನೂ ಓದಿ: ತುಮಕೂರಿನಲ್ಲಿ ಆಯಿಲ್ ಟ್ಯಾಂಕ್ ದುರಂತ: ಇಬ್ಬರು ಕಾರ್ಮಿಕರು ಸಾವು

ಮಾರುತಿ ಉಸಿರಾಟ ಸಮಸ್ಯೆಯಿಂದ ಬಳಲುತ್ತಿರುವದನ್ನು ಗಮನಿಸಿದ ಕೆಲ ಕಾರ್ಮಿಕರು ಆತನ ರಕ್ಷಣೆಗೆ ಹೋಗಿದ್ದಾರೆ. ಆದ್ರೆ ಉಸಿರಾಟದ ಮೂಲಕ ಕಾರ್ಬನ್ ಮೋನಾಕ್ಸೈಡ್ ದೇಹದೊಳಗೆ ಹೋಗಿದ್ದರಿಂದ ಅವರು ಕೂಡಾ ಅಸ್ವಸ್ಥರಾಗಿದ್ದಾರೆ. ಕೂಡಲೇ ಅಸ್ವಸ್ಥರನ್ನು ಕೊಪ್ಪಳ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಒಂಬತ್ತು ಜನ ಅಸ್ವಸ್ಥರ ಪೈಕಿ ಓರ್ವನ ಸ್ಥಿತಿ ಚಿಂತಾಜನಕವಿದ್ದು, ಉಳಿದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇನ್ನು ಪ್ಯಾಕ್ಟರಿಯ ಹೊರಗಡೆಯೇ ಇದ್ದ ಮೃತ ಮಾರುತಿ ತಂದೆ ಬಸವರಾಜ್, ಟೀ ನೀಡಲು ಪ್ಯಾಕ್ಟರಿಯೊಳಗೆ ಹೋಗುತ್ತಿದ್ದನಂತೆ. ಆದ್ರೆ ಅಷ್ಟರಲ್ಲಿಯೇ ಮಗನ ಸಾವಿನ ಸುದ್ದಿ ತಿಳಿದು ಶಾಕ್ ಆಗಿದ್ದಾನೆ. ಇನ್ನು ಬಿಕಾಂ ಓದಿದ್ದ ಮಾರುತಿ, ಪ್ಯಾಕ್ಟರಿಯಲ್ಲಿ ಕಳೆದ ಒಂದು ವರ್ಷದಿಂದ ಕೆಲಸ ಮಾಡುತ್ತಿದ್ದನಂತೆ. ಕಂಪ್ಯೂಟರ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಮಾರುತಿಯನ್ನು ಕಾರ್ಬನ್ ಮೋನಾಕ್ಸೈಡ್ ಇರೋ ಟ್ಯಾಂಕ್ ಬಳಿ ಯಾಕೆ ಕಳುಹಿಸಿದ್ರು ಅಂತ ಕುಟುಂಬದವರು ಆರೋಪಿಸುತ್ತಿದ್ದಾರೆ.

ಪ್ಯಾಕ್ಟರಿಯಲ್ಲಿ ಯಾವುದೇ ಮುಂಜಾಗ್ರತಾ ಕ್ರಮಗಳಿಲ್ಲ

ಇನ್ನು ಪ್ಯಾಕ್ಟರಿಯಲ್ಲಿ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೂಡಾ ಕೈಗೊಂಡಿಲ್ಲವಂತೆ. ಅಪಾಯಕಾರಿ ಗ್ಯಾಸ್ ಇರೋ ಕಡೆ ಮಾಸ್ಕ್ ಸೇರಿದಂತೆ ಆಕ್ಸಿಜನ್ ವ್ಯವಸ್ಥೆಯನ್ನು ಸರಿಯಾಗಿ ಮಾಡದೇ ಕಾರ್ಮಿಕರನ್ನು ನಿಯೋಜನೆ ಮಾಡ್ತಿದ್ದರು. ಮೇಲಾಧಿಕಾರಿಗಳು, ಕಂಪನಿ ಮಾಲೀಕರಿಗೆ ಇದೆಲ್ಲಾ ಗೊತ್ತಿದ್ದರು ಕೂಡಾ ಯಾರು ಕೂಡಾ ಸರಿಯಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೇ ಇರೋದರಿಂದ ಇಂತಹದೊಂದು ದುರ್ಘಟನೆಯಾಗಿದೆ ಅಂತ ಕುಟುಂಬದವರು ಆರೋಪಿಸುತ್ತಿದ್ದಾರೆ. ಮೃತ ಕಾರ್ಮಿಕನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಅಂತ ಆಗ್ರಹಿಸಿದ್ದಾರೆ.

ಕಾರ್ಮಿಕರ ಕುಟುಂಬಕ್ಕೆ ಸೂಕ್ತ ಪರಿಹಾರಕ್ಕೆ ಆಗ್ರಹ

ಸದ್ಯ ಸ್ಟೀಲ್ ಪ್ಯಾಕ್ಟರಿಯಲ್ಲಿ ನಡೆದಿರೋ ಘಟನೆಗೆ ಸಂಬಂಧಿಸಿದಂತೆ ಮುನಿರಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಸ್ಪತ್ರೆಗೆ, ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತನಿಖೆ ನಂತರವೇ, ಇಂತಹದೊಂದು ಘಟನೆ, ನಿರ್ಲಕ್ಷ್ಯದಿಂದ ನಡೆಯಿತಾ, ಅಥವಾ ಆಕಸ್ಮಿಕವಾಗಿ ನಡೆಯಿತಾ ಅನ್ನೋದು ಗೊತ್ತಾಗಲಿದೆ. ಇನ್ನೊಂದಡೆ ಮೃತ ಕಾರ್ಮಿಕ ಮತ್ತು ಅಸ್ವಸ್ಥ ಕಾರ್ಮಿಕರ ಕುಟುಂಬಕ್ಕೆ ಪ್ಯಾಕ್ಟರಿಯವರು ಸೂಕ್ತ ಪರಿಹಾರ ನೀಡೋ ಕೆಲಸ ಮಾಡಬೇಕಿದೆ.

Published On - 9:40 pm, Tue, 28 January 25

Follow Us