Sign In

By signing in or creating an account, you agree with Associated Broadcasting Company's Terms & Conditions and Privacy Policy.

ತುಂಗಭದ್ರಾ ಜಲಾಶಯ ಅಚ್ಚುಕಟ್ಟು ಪ್ರದೇಶದ ಜನರಿಗೆ ಗುಡ್​ನ್ಯೂಸ್: ನೀರಾವರಿ ಸಮಿತಿ ಮಹತ್ವದ ತೀರ್ಮಾನ

ಜನವರಿ 1 ರಿಂದ ಮಾರ್ಚ 31 ರವರಗೆ ಎರಡನೇ ಬೆಳೆಗೆ ನೀರು ಹಂಚಿಕೆ ಮಾಡಲಾಗುವುದು ಎಂದು ಕಳೆದ ತುಂಗಾಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನವಾಗಿತ್ತು. ಆದರೂ ರೈತರು ಬೇಸಿಗೆ ಬೆಳೆ ಬೆಳೆದಿದ್ದರು. ಬಳಿಕ ಮಾರ್ಚ್ 31ರ ನಂತರ ನಮ್ಮ ಗತಿ ಏನು ಎಂದು ತಲೆ ಮೇಲೆ ಕೈಹೊತ್ತುಕೊಂಡು ಚಿಂತೆಗೀಡಾಗಿದ್ದರು. ಮತ್ತೊಂದೆಡೆ ಈ ಬಾರಿ ಬೇಸಿಗೆಗೆ ಕುಡಿಯಲು ಗ್ರಾಮಗಳ ಕರೆ ತುಂಬಿಸುವುದು ಒಂದು ಚಾಲೆಂಜ್. ಹೀಗಾಗಿ ಎಲ್ಲರೂ ನೀರಿನ ಬಗ್ಗೆ ಚಿಂತಿಸುತ್ತಿದ್ದವರಿಗೆ ಇದೀಗ ಗುಡ್​ನ್ಯೂಸ್​ ಸಿಕ್ಕಿದೆ.

ತುಂಗಭದ್ರಾ ಜಲಾಶಯ ಅಚ್ಚುಕಟ್ಟು ಪ್ರದೇಶದ ಜನರಿಗೆ ಗುಡ್​ನ್ಯೂಸ್: ನೀರಾವರಿ ಸಮಿತಿ ಮಹತ್ವದ ತೀರ್ಮಾನ
Tungabhadra Reservoir
Follow us
ಸಂಜಯ್ಯಾ ಚಿಕ್ಕಮಠ, ಕೊಪ್ಪಳ
| Updated By: ರಮೇಶ್ ಬಿ. ಜವಳಗೇರಾ

Updated on:Mar 21, 2025 | 9:53 PM

ಕೊಪ್ಪಳ/ಬೆಂಗಳೂರು, (ಮಾರ್ಚ್​ 21): ಬೇಸಿಗೆಯಲ್ಲಿ ಕುಡಿಯುವ ನೀರು ಹಾಗೂ ಬೆಳೆದ ಬೆಳೆಗಳಿಗೆ ಯಾವುದೇ ಸಮಸ್ಯೆಯಾಗದಂತೆ ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಿಗೆ ತುಂಗಭದ್ರಾ ನೀರು ಹರಿಸಲು ತೀರ್ಮಾನಿಸಲಾಗಿದೆ. ಇಂದು (ಮಾರ್ಚ್ 21) ಬೆಂಗಳೂರಿನ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆ ಈ ತೀರ್ಮಾನ ಕೈಗೊಳ್ಳಲಾಗಿದೆ. ಇನ್ನು ಸಭೆ ಬಳಿಕ ಮಾತನಾಡಿದ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ, ಸಚಿವ ಶಿವರಾಜ್ ತಂಗಡಗಿ, ತುಂಗಭದ್ರಾ ಎಡದಂಡೆ ಮುಖ್ಯಕಾಲುವೆ ಮೂಲಕ ಏಪ್ರಿಲ್ 1ರಿಂದ ಏ.10ರವರೆಗೆ ಕುಡಿಯುವ ನೀರು ಒಳಗೊಂಡಂತೆ ಹಾಗೂ ಈಗಾಲೇ ರೈತರು ಬೆಳೆದ ಬೆಳೆಗಳ ಸಂರಕ್ಷಣೆಗಾಗಿ 3000 ಕ್ಯೂಸೆಕ್ಸ್ ನಂತೆ ನೀರು ಹರಿಸಲಾಗುವುದು ಎಂದು ತಿಳಿಸಿದರು.

ಪ್ರಸ್ತುತ ಜಲಾಶಯದಲ್ಲಿ ನೀರಿನ ಸಾಮರ್ಥ್ಯ 18 ಟಿಎಂಸಿ ಇದ್ದು, ಇದರಲ್ಲಿ ಡೆಡ್ ಸ್ಟೋರೆಜ್ 2 ಟಿಎಂಸಿ, ಅವಿಯಾಗುವಿಕೆ 1.2 ಟಿಎಂಸಿ. ಈ ಪೈಕಿ ರಾಜ್ಯದ ಪಾಲು 11 ಟಿಎಂಸಿ, ಆಂಧ್ರಪ್ರದೇಶದ ಪಾಲು 4 ಟಿಎಂಸಿ ಇದೆ. ಈ ಹಿನ್ನೆಲೆಯಲ್ಲಿ ಜಲಾಶಯದಲ್ಲಿನ ನೀರಿನ ಲಭ್ಯತೆ ಆಧಾರಿಸಿ ನಾಲ್ಕು ಜಿಲ್ಲೆಗಳಿಗೆ ಕುಡಿಯುವ ನೀರು ಒಳಗೊಂಡಂತೆ ಈಗಾಗಲೇ ರೈತರು ಬೆಳೆದ ಬೆಳೆಗೂ ನೀರು ಒದಗಿಸಲಾಗುವುದು ಎಂದು ಹೇಳಿದರು.

ತುಂಗಭದ್ರಾ ಎಡದಂಡೆ ಮುಖ್ಯಕಾಲುವೆ ಮೂಲಕ ಏಪ್ರಿಲ್ 1ರಿಂದ ಏ.10ರವರೆಗೆ ಕುಡಿಯುವ ನೀರು ಒಳಗೊಂಡಂತೆ ಹಾಗೂ ಈಗಾಲೇ ರೈತರು ಬೆಳೆದ ಬೆಳೆಗಳ ಸಂರಕ್ಷಣೆಗಾಗಿ 3000 ಕ್ಯೂಸೆಕ್ಸ್ ನಂತೆ ನೀರು ಹರಿಸಲಾಗುವುದು. ಎಡದಂಡೆ ವಿಜಯನಗರ ಕಾಲುವೆಗೆ ಏ.11ರಿಂದ ಮೇ 10ರವರೆಗೆ 150 ಕ್ಯೂಸೆಕ್ಸ್ ನಂತೆ ವಿತರಣಾ‌ ಕಾಲುವೆ 1 ರಿಂದ 11ಎ ವರೆಗೆ ಅಥವಾ ಈ ಕಾಲುವೆಯಡಿ ನೀರಿನ ಲಭ್ಯತೆಯು ಇರುವವರೆಗೆ ಮಾತ್ರ ಇದ್ದಲ್ಲಿ ಯಾವುದೇ ಮೊದಲು ಅದು ಅನ್ವಯಿಸುತ್ತದೆ ಎಂದರು.

ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆಗೆ ಲಭ್ಯ ವಾಗುವ ನೀರಿನಲ್ಲಿ ಏ.1ರಿಂದ ಏ.10ರವರೆಗೆ ಕುಡಿಯುವ ನೀರು ಒಳಗೊಂಡಂತೆ ಹಾಗೂ ನಿಂತ ಬೆಳೆಗಳ ಸಂರಕ್ಷಣೆಗಾಗಿ 450 ಕ್ಯೂಸೆಕ್ಸ್ ನಂತೆ ನೀರು ಹರಿಸಲಾಗುವುದು. ಇನ್ನು ರಾಯ ಬಸವಣ್ಣ ಕಾಲುವೆಗೆ ಏ.1ರಿಂದ ಮೇ 31ರವರೆಗೆ ಲಭ್ಯವಾಗುವ ನೀರಿನಲ್ಲಿ 200 ಕ್ಯೂಸೆಕ್ಸ್ ನಂತೆ ನೀರು ಹರಿಸಲಾಗುವುದು ಎಂದು ಸಚಿವ ಶಿವರಾಜ್ ಎಸ್.ತಂಗಡಗಿ ಅವರು ವಿವರಿಸಿದರು.

ಕುಡಿಯುವ ನೀರು ಮತ್ತು ನಿಂತ ಬೆಳೆಗಳಿಗೆ ಆದ್ಯತೆ ಕೊಟ್ಟು ನೀರು ಒದಗಿಸಲು ತೀರ್ಮಾನ ಮಾಡಲಾಗಿದೆ. ಈ ಸಂದರ್ಭದಲ್ಲಿ ಯಾವುದೇ ತೊಂದರೆಯಾಗದ ರೀತಿಯಲ್ಲಿ ನಿಷೇಧಾಜ್ಞೆ ಮೂಲಕ ನೀರು ಹರಿಸಲಾಗುವುದು ಎಂದು ತಿಳಿಸಿದರು.

ಈ ಸಮಯದಲ್ಲಿ ಜಿಲ್ಲಾಧಿಕಾರಿಗಳು ಕಲಂ 144ನ್ನು ಅಳವಡಿಸಿ ಸೂಕ್ತ ಪೊಲೀಸ್ ಬಂದೋಬಸ್ತನ್ನು ಪಡೆದು ಕುಡಿಯುವ ನೀರಿನ ಕೆರೆ ಕಟ್ಟೆಗಳನ್ನು ತುಂಬಿಸಿಕೊಳ್ಳಲು ಸಚಿವರು ಸೂಚನೆ ನೀಡಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:47 pm, Fri, 21 March 25