KAS ಗ್ರೂಪ್ ಎ,ಬಿ ಪರೀಕ್ಷೆ ರಿಸಲ್ಟ್ ವಿರುದ್ಧ ವಿದ್ಯಾರ್ಥಿಗಳ ಅಪಸ್ವರ: ಸಿಬಿಐ ತನಿಖೆಗೆ ಒತ್ತಾಯ

ನಿನ್ನೆ ಪ್ರಕಟವಾದ ಕೆಪಿಎಸ್​ಸಿಯ ಕೆಎಎಸ್​ ಗ್ರೂಪ್ ಎ/ಬಿ ಫಲಿತಾಂಶಗಳ ವಿರುದ್ಧ ವಿದ್ಯಾರ್ಥಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಂದೇ ಪರೀಕ್ಷಾ ಕೇಂದ್ರದ ಹಲವು ಅಭ್ಯರ್ಥಿಗಳು ಆಯ್ಕೆ ಆಗಿರುವ ಆರೋಪ ಕೇಳಿಬಂದಿದೆ. ಹೀಗಾಗಿ KPSC ವಿರುದ್ಧ CBI ತನಿಖೆಗೆ ಒತ್ತಾಯಿಸಲಾಗಿದ್ದು, ಅನ್ಯಾಯವಾಗಿದೆ ಎಂದು ವಿದ್ಯಾರ್ಥಿಗಳು ಆಕ್ರೋಶಗೊಂಡಿದ್ದಾರೆ.

KAS ಗ್ರೂಪ್ ಎ,ಬಿ ಪರೀಕ್ಷೆ ರಿಸಲ್ಟ್ ವಿರುದ್ಧ ವಿದ್ಯಾರ್ಥಿಗಳ ಅಪಸ್ವರ: ಸಿಬಿಐ ತನಿಖೆಗೆ ಒತ್ತಾಯ
Kpsc Exam
Image Credit source: tv9 kannada
Edited By:

Updated on: Mar 04, 2026 | 12:58 PM

ಬೆಂಗಳೂರು, ಮಾರ್ಚ್​​ 04: ಗೆಜೆಟೆಡ್​​ ಪ್ರೊಬೇಷನರಿ ಗ್ರೂಪ್ ಎ ಮತ್ತು ಬಿ ವೃಂದದ 384 ಹುದ್ದೆಗಳಿಗೆ ನಡೆದ ಪರೀಕ್ಷೆಯಲ್ಲಿ 1:3 ಅನುಪಾತದಲ್ಲಿ ವ್ಯಕ್ತಿತ್ವ ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ಕೆಪಿಎಸ್​ಸಿ (KPSC) ಸೋಮವಾರ ಪ್ರಕಟಿಸಿದೆ. ಸದ್ಯ ಈ ಫಲಿತಾಂಶದ ವಿರುದ್ಧ ವಿದ್ಯಾರ್ಥಿಗಳು ಅಪಸ್ವರ ಎತ್ತಿದ್ದಾರೆ. ಒಂದೇ ಪರೀಕ್ಷಾ ಕೇಂದ್ರದ ಹಲವು ಅಭ್ಯರ್ಥಿಗಳು, ಒಂದೇ ಕುಟುಂಬದ ಕೆಲವರು ಆಯ್ಕೆ ಆಗಿರುವ ಬಗ್ಗೆ ಗಂಭೀರ ಆರೋಪ ಮಾಡಲಾಗಿದ್ದು, CBI ತನಿಖೆಗೆ ಒತ್ತಾಯಿಸಿದ್ದಾರೆ.

2023-24ನೇ ಸಾಲಿನಲ್ಲಿ 384 ಗ್ರೂಪ್​ ಎ ಮತ್ತು ಬಿ ಹುದ್ದೆಗಳ ನೇಮಕಕ್ಕೆ ಕೆಪಿಎಸ್‌ಸಿ ಫೆ.26ರಂದು ಅಧಿಸೂಚನೆ ಹೊರಡಿಸಿತ್ತು. ಮೊದಲಿಗೆ ಆಗಸ್ಟ್‌ 2024ರಲ್ಲಿ ನಡೆದ ಪ್ರಾಥಮಿಕ ಪರೀಕ್ಷೆಯ ಪ್ರಶ್ನೆಪತ್ರಿಕೆಯ ಅನುವಾದದಲ್ಲಿ ಪ್ರಮಾದ ಉಂಟಾಗಿ ಸರ್ಕಾರ ಪೂರ್ವಭಾವಿ ಪರೀಕ್ಷೆ ರದ್ದುಗೊಳಿಸಿ 2024ರ ಡಿ.29ಕ್ಕೆ ಮರು ಪರೀಕ್ಷೆ ನಡೆಸಿತ್ತು. ಆ ಪರೀಕ್ಷೆಯಲ್ಲೂ ಅನುವಾದದಲ್ಲಿ ಎಡವಟ್ಟುಗಳಾಗಿದ್ದವು.

ಇದನ್ನೂ ಓದಿ: ಸರ್ಕಾರವನ್ನ ಬಡಿದೆಬ್ಬಿಸಿದ ಉದ್ಯೋಗಾಕಾಂಕ್ಷಿಗಳು: 56 ಸಾವಿರ ಹುದ್ದೆ ನೇಮಕಕ್ಕೆ ಸಂಪುಟ ಒಪ್ಪಿಗೆ

ಬಳಿಕ 2025ರ ಮೇ 3, 5, 7 ಮತ್ತು 9ರಂದು ಮುಖ್ಯ ಪರೀಕ್ಷೆಗಳು ನಡೆದಿದ್ದವು. ಈಗ ಆಯೋಗ ಮುಖ್ಯ ಪರೀಕ್ಷಾ ಫಲಿತಾಂಶ ಪ್ರಕಟಿಸಿ 1:3 ಅನುಪಾತದಲ್ಲಿ ಅಭ್ಯರ್ಥಿಗಳನ್ನು ವ್ಯಕ್ತಿತ್ವ ಪರೀಕ್ಷೆಗೆ ಆಯ್ಕೆ ಮಾಡಿದೆ. ಸದ್ಯ ಈ ಆಯ್ಕೆ ಪಟ್ಟಿ ಸಾಕಷ್ಟು ಗೊಂದಲ ಉಂಟುಮಾಡಿದೆ. ಕರ್ನಾಟಕ ಲೋಕ ಸೇವಾ ಆಯೋಗದ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಭಾವಿಗಳ ಮಕ್ಕಳಿಗೆ ಸೀಟ್ ಕೊಡಿಸಲು ಕುತಂತ್ರ

ಈ ಬಗ್ಗೆ ಅಖಿಲ ಭಾರತ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕಾಂತಕುಮಾರ ಅವರು ಮಾತನಾಡಿದ್ದು, ಒಂದೇ ಕೊಠಡಿಯಲ್ಲಿ ಪರೀಕ್ಷೆ ಬರೆದ 15 ಮಂದಿ ಆಯ್ಕೆ ಆಗಿದ್ದಾರೆ. ಸೀರಿಯಲ್ ನಂಬರ್ ಸಾಲಾಗಿ ಆಯ್ಕೆ ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ.

ಇನ್ನು ಒಂದೇ ಕುಟುಂಬದ ಇಬ್ಬರು-ಮೂವರು ಆಯ್ಕೆ ಆಗಿದ್ದಾರೆ. ಪ್ರಾಮಾಣಿಕವಾಗಿ ಓದಿದವರಿಗೆ ಕೆಲಸ ಸಿಗಬೇಕು. ಹೀಗಾಗಿ ಕಮಿಟಿ ರಚನೆ ಮಾಡಿ ತನಿಖೆ. ಸರ್ಕಾರದ ಕೈಲಿ ಆಗಲಿಲ್ಲ ಅಂದರೆ ಸಿಬಿಐಗೆ ವಹಿಸಿ. ಯಾವುದೇ ಕಾರಣಕ್ಕೂ ಕೆಪಿಎಸ್​​ಸಿಗೆ ನೋಟಿಫಿಕೇಶನ್ ಕೊಡಬಾರದು. ಪ್ರಭಾವಿಗಳ ಮಕ್ಕಳಿಗೆ ಸೀಟ್ ಕೊಡಿಸಲು ಕುತಂತ್ರ ನಡೆದಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.

ಪ್ರಧಾನಿ ಮೋದಿಗೆ ದೂರು ನೋಡಿದ ಅಭ್ಯರ್ಥಿಗಳು 

ಇನ್ನು ಕರ್ನಾಟಕ ಲೋಕಸೇವಾ ಆಯೋಗದಿಂದ ಅಕ್ರಮ ಆರೋಪ ಹಿನ್ನೆಲೆ ಕೆಪಿಎಸ್​ಸಿ ನೇಮಕಾತಿಯಲ್ಲಿ ಮಧ್ಯಪ್ರವೇಶಿಸಲು ಪ್ರಧಾನಿ ನರೇಂದ್ರ ಮೋದಿಗೆ ಅಭ್ಯರ್ಥಿಗಳು ಮನವಿ ಮಾಡಿದ್ದಾರೆ. ಈ ಬಗ್ಗೆ ಎಕ್ಸ್ ಖಾತೆ ಮೂಲಕ ಫಲಿತಾಂಶದಲ್ಲಿ ಅಕ್ರಮ ನಡೆದಿದೆ ಎಂದು ಪ್ರಧಾನಿ ಮೋದಿಗೆ ದೂರು ನೀಡಿದ್ದಾರೆ. ಒಂದೇ ಕೊಠಡಿಯಲ್ಲಿ ಕುಳಿತು ಪರೀಕ್ಷೆ ಬರೆದಿದ್ದ 15 ಜನರ ಆಯ್ಕೆ ಮಾಡಲಾಗಿದೆ. ನಾವು ಉತ್ತಮವಾಗಿ ಪರೀಕ್ಷೆ ಬರೆದಿದರೂ ಆಯ್ಕೆಯಾಗಿಲ್ಲವೆಂದು ದೂರು ನೀಡಿದ್ದು, KAS ಫಲಿತಾಂಶದ ಪ್ರತಿ ಟ್ಯಾಗ್ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 11:47 am, Wed, 4 March 26

Follow Us