ಕೆಎಸ್​ಆರ್​ಟಿಸಿ, ಬಿಎಂಟಿಸಿ ಮುಷ್ಕರಕ್ಕೆ ಸಿದ್ಧತೆ: ಬೇಡಿಕೆ ಈಡೇರಿಗೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದ ನೌಕರರು

38 ತಿಂಗಳ ಅರಿಯರ್ಸ್ ನೀಡಿಲ್ಲ, ಈ ವರ್ಷ ಜನವರಿಯಲ್ಲೇ ವೇತನ ಹೆಚ್ಚಳ ಮಾಡಬೇಕಿತ್ತು, ನವೆಂಬರ್ ಆದರೂ ಈ ಬಗ್ಗೆ ಸರ್ಕಾರ ಮಾತನಾಡುತ್ತಿಲ್ಲ. ಈಗಾಗಲೇ ನೌಕರರು ಮುಷ್ಕರಕ್ಕೆ ಸಿದ್ಧರಾಗ್ತಿದ್ದಾರೆ. ನಾವು ದಿನಾಂಕ ಘೋಷಣೆ ಮಾಡಬೇಕು ಅಷ್ಟೇ, ಎನ್ನುವ ಮೂಲಕ ಸಾರಿಗೆ ನೌಕರರು ಮುಷ್ಕರಕ್ಕೆ ಸಿದ್ಧರಾಗುತ್ತಿರುವ ಬಗ್ಗೆ ಜಂಟಿ ಕ್ರಿಯಾ ಸಮಿತಿ ಮತ್ತೊಮ್ಮೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

ಕೆಎಸ್​ಆರ್​ಟಿಸಿ, ಬಿಎಂಟಿಸಿ ಮುಷ್ಕರಕ್ಕೆ ಸಿದ್ಧತೆ: ಬೇಡಿಕೆ ಈಡೇರಿಗೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದ ನೌಕರರು
ಸಾಂದರ್ಭಿಕ ಚಿತ್ರ
Edited By:

Updated on: Nov 23, 2024 | 7:05 AM

ಬೆಂಗಳೂರು, ನವೆಂಬರ್ 23: ಕರ್ನಾಟಕ ಸರ್ಕಾರ ಕೆಎಸ್​ಆರ್​ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮಗಳ ನೌಕರರಿಗೆ 38 ತಿಂಗಳ ಅರಿಯರ್ಸ್ ಬಾಕಿ ಹಣ ಬಿಡುಗಡೆ ಮಾಡಿಲ್ಲ. 2024 ಜನವರಿಯಿಂದ ನೌಕರರಿಗೆ ಸಂಬಳ ಹೆಚ್ಚಳ ಮಾಡಬೇಕಿತ್ತು, ಆದರೆ ನವೆಂಬರ್ ತಿಂಗಳು ಬಂದರೂ ಇನ್ನೂ ಈ ಬಗ್ಗೆ ‌ಸರ್ಕಾರ ತೀರ್ಮಾನ ಕೈಗೊಂಡಿಲ್ಲ. ನಿವೃತ್ತಿ ಹೊಂದಿದ ನೌಕರರಿಗೆ ಗ್ರಾಚ್ಯುಟಿ ಹಣ ಬಿಡುಗಡೆ ಮಾಡಿಲ್ಲ. ಅರಿಯರ್ಸ್ ಹಣವೇ ಒಟ್ಟು 1750 ಕೋಟಿ ರುಪಾಯಿ ನೀಡಬೇಕಿದೆ. ಗ್ರಾಚ್ಯುಟಿ ಹಣ ಸುಮಾರು 399.29 ಕೋಟಿ ರುಪಾಯಿ ನೀಡಬೇಕಿದೆ. ಈ ಹಿನ್ನೆಲೆಯಲ್ಲಿ ಸಾರಿಗೆ ನೌಕರರು ಮತ್ತೊಮ್ಮೆ ಸಾರಿಗೆ ಮುಷ್ಕರಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಬೇಡಿಕೆಗಳ ಈಡೇರಿಕೆಗೆ ಸರ್ಕಾರಕ್ಕೆ ಒತ್ತಡ ಹಾಕುವ ಸಂಬಂದ ಶುಕ್ರವಾರ ಆರು ಸಾರಿಗೆ ನೌಕರರ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯು ಗಾಂಧಿನಗರದ ಸಿಐಟಿಯು ಮುಖ್ಯ ಕಚೇರಿಯಲ್ಲಿ ಸಭೆ ನಡೆಸಿತು. ಈ ವೇಳೆ ಮಾತನಾಡಿದ ಸಾರಿಗೆ ಮುಖಂಡ ಅನಂತ್ ಸುಬ್ಬರಾವ್, ಮುಖ್ಯಮಂತ್ರಿಯಲ್ಲಿ ಕೇಳಿ ಕೊಳ್ಳುವುದಿಷ್ಟೆ; ಈ ಹಿಂದೆ ನೀವು ಸಿಎಂ ಆಗಿದ್ದಾಗ, ನಾವು ಮೂರು ದಿನ ಮುಷ್ಕರ ಮಾಡಿದ್ದೆವು. ನಂತರ ಮೂರನೇ ದಿನ ನಮ್ಮ ಬೇಡಿಕೆ ಈಡೇರಿಸಲು ಮುಂದಾಗಿದ್ದಿರಿ. ಈ ಬಾರಿ ಆ ಪರಿಸ್ಥಿತಿ ತರಬೇಡಿ. ಈಗಾಗಲೇ ಸಾರಿಗೆ ನೌಕರರು ಮುಷ್ಕರ ಮಾಡುವ ಮನಸ್ಥಿತಿಯಲ್ಲಿದ್ದಾರೆ ಎಂದರು.

ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಸಾರಿಗೆ ನೌಕರರು

ಕಾನೂನನ್ನು ಕೈಗೆ ತೆಗೆದುಕೊಳ್ಳಬೇಡಿ ಎಂದು ನಾವು ನೌಕರರಿಗೆ ಹೇಳಿದ್ದೇವೆ. ನಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ನಮ್ಮ ಮುಷ್ಕರ ವಾಪಸ್ಸು ಪಡೆಯಲ್ಲ. ಇದು ಬಹಳ ಸ್ಪಷ್ಟ, ನೌಕರರು ಮುಷ್ಕರಕ್ಕೆ ಸಿದ್ಧರಾಗಿದ್ದಾರೆ. ನಾವು ಈಗ ಮುಷ್ಕರದ ದಿನಾಂಕ ಘೋಷಣೆ ಮಾಡುವುದಷ್ಟೇ ಬಾಕಿ. ಇಲ್ಲಿಯವರೆಗೆ ನಮಗೆ ಸರ್ಕಾರದಿಂದ ಯಾವುದೇ ಉತ್ತರ ಬಂದಿಲ್ಲ. ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ದರಾಗಿದ್ದಾರೆ. ನಾವು ದಿನಾಂಕ ಘೋಷಣೆ ಮಾಡುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ತಾಳ್ಮೆ ಪರೀಕ್ಷಿಸಬೇಡಿ: ಸಾರಿಗೆ ಮುಖಂಡ ಹೆಚ್ಎಸ್ ಮಂಜುನಾಥ್

ಆರು ಸಾರಿಗೆ ನೌಕರರ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಸಭೆ

ಸಭೆಯಲ್ಲಿ ಭಾಗಿಯಾಗಿದ್ದ ಆರು ಸಂಘಟನೆಗಳ ಅಧ್ಯಕ್ಷರು ಕೂಡ ಮುಷ್ಕರಕ್ಕೆ ಸದ್ಯದಲ್ಲೇ ಕರೆ ನೀಡುತ್ತೇವೆ ಎಂಬ ಎಚ್ಚರಿಕೆಯನ್ನು ಸರ್ಕಾರಕ್ಕೆ ನೀಡಿದ್ದಾರೆ. ಈ ವೇಳೆ ಮಾತನಾಡಿದ ಸಾರಿಗೆ ಮುಖಂಡ ಹೆಚ್.ಎಸ್. ಮಂಜುನಾಥ್, 1-1-24 ರಿಂದ ವೇತನ ಪರಿಷ್ಕರಣೆ ಆಗಬೇಕು. ಜನವರಿಯಲ್ಲಿ ನಮ್ಮ ಬೇಡಿಕೆಗಳನ್ನು ನೀಡಿದ್ದೇವೆ. ಹತ್ತಾರು ಪತ್ರಗಳನ್ನು ಬರೆದಿದ್ದೇವೆ. 38 ತಿಂಗಳ ಅರಿಯರ್ಸ್ ನೀಡಬೇಕು ಎಂದು ಹೇಳಿದ್ದೇವೆ. ಕಳೆದ ತಿಂಗಳ ಮೀಟಿಂಗ್ ನಲ್ಲೂ ನಮ್ಮ ಬೇಡಿಕೆಗಳನ್ನು ಈಡೇರಿಸಲು ಹೇಳಿದ್ದೇವೆ. ಇನ್ನೂ ಸಾರಿಗೆ‌ ನೌಕರರು ತಾಳ್ಮೆಯಿಂದ ಕಾಯುವ ಪರಿಸ್ಥಿತಿಯಲ್ಲಿಲ್ಲ. ಖಂಡಿತವಾಗಿ ನಾವು ರಾಜ್ಯದ 1.15 ಲಕ್ಷ ಸಾವಿರ ನೌಕರರು ಅನಿವಾರ್ಯವಾಗಿ ನೂರಕ್ಕೆ ನೂರರಷ್ಟು ಮುಷ್ಕರಕ್ಕೆ ಹೋಗುತ್ತೇವೆ. ಇದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.

ಇದನ್ನೂ ಓದಿ: ಬೆಂಗಳೂರಿಗರು ಗೋವಾಗೆ ಟ್ರಿಪ್ ಹೋಗಲು ಹಿಂದೇಟು ಹಾಕುತ್ತಿರುವುದು ಏಕೆ? ಇದೇ ನೋಡಿ ಕಾರಣ

ಒಟ್ಟಿನಲ್ಲಿ ರಾಜ್ಯ ಸರ್ಕಾರ ಸಾರಿಗೆ ನೌಕರರಿಗೆ ನೀಡಬೇಕಿರುವ 38 ತಿಂಗಳ ಅರಿಯರ್ಸ್, ನಿವೃತ್ತಿಯಾದ ನೌಕರರಿಗೆ ಗ್ರಾಚ್ಯುಟಿ ಹಣ ನೀಡುತ್ತಿಲ್ಲ ಎಂದು ಸಾರಿಗೆ ನೌಕರರು ಕೆಎಸ್ಆರ್​ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮದ ಬಸ್​​ಗಳ ಕಾರ್ಯಾಚರಣೆ ನಿಲ್ಲಿಸಿ ಮುಷ್ಕರ ಮಾಡುತ್ತೇವೆ ಎಂಬ ಎಚ್ಚರಿಕೆ ನೀಡಿದ್ದಾರೆ. ಸದ್ಯದಲ್ಲೇ ದಿನಾಂಕವನ್ನೂ ಘೋಷಣೆ ಮಾಡುತ್ತೇವೆ ಎಂಬ ಎಚ್ಚರಿಕೆ ನೀಡಿದೆ. ಆದರೆ ರಾಜ್ಯ ಸರ್ಕಾರ ಈ ಬಗ್ಗೆ ಯಾವ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Kiran Surya

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More
Follow Us