ಎಂಟನೇ ದಿನಕ್ಕೆ ಕಾಲಿಟ್ಟ ಸಾರಿಗೆ ನೌಕರರ ಮುಷ್ಕರ; ಇಂದು ಅಂಬೇಡ್ಕರ್​ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬೇಡಿಕೆ ಈಡೇರಿಸಲು ಆಗ್ರಹ

| Updated By: preethi shettigar

Updated on: Apr 14, 2021 | 9:10 AM

ಇಂದು ಅಂಬೇಡ್ಕರ್ ಜಯಂತಿ ಹಿನ್ನೆಲೆ ಅಂಬೇಡ್ಕರ್ ಪ್ರತಿಮೆ, ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಸಾರಿಗೆ ನೌಕರರು ತಮ್ಮ ಬೇಡಿಕೆ ಈಡೇರಿಕೆಗೆ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ.

ಎಂಟನೇ ದಿನಕ್ಕೆ ಕಾಲಿಟ್ಟ ಸಾರಿಗೆ ನೌಕರರ ಮುಷ್ಕರ; ಇಂದು ಅಂಬೇಡ್ಕರ್​ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬೇಡಿಕೆ ಈಡೇರಿಸಲು ಆಗ್ರಹ
ಕೆಎಸ್​ಆರ್​ಟಿಸಿ ಬಸ್​
Follow us on

ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರ ಹಾಗೂ ಸಾರಿಗೆ ಸಿಬ್ಬಂದಿ ನಡುವಿನ ತಿಕ್ಕಾಟದ ಫಲವಾಗಿ ರಾಜ್ಯದಲ್ಲಿ ನಡೆಯುತ್ತಿರುವ ಸಾರಿಗೆ ಸಿಬ್ಬಂದಿ ಮುಷ್ಕರ ಎಂಟನೇ ದಿನಕ್ಕೆ ಕಾಲಿಟ್ಟಿದೆ. ಯುಗಾದಿ ಹಬ್ಬದ ಮರುದಿನವಾದ ಇಂದು ಸಹ ರಾಜ್ಯದ ಬಹುತೇಕ ಕಡೆ ಬಸ್​ ನಿಲ್ದಾಣಗಳು ಖಾಲಿ ಖಾಲಿಯಾಗಿಯೇ ಉಳಿದಿದ್ದು, ಕೆಲವೆಡೆ ಮಾತ್ರ ಬೆರಳೆಣಿಕೆ ಸಂಖ್ಯೆಯಲ್ಲಿ ಬಸ್ ಸಂಚಾರ ಆರಂಭವಾಗಿದೆ. ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿರುವ ಸಾರಿಗೆ ನೌಕರರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ನಿರಂತರವಾಗಿ ಒತ್ತಾಯಿಸುತ್ತಿದ್ದು, ಇಂದು ಅಂಬೇಡ್ಕರ್ ಜಯಂತಿ ಹಿನ್ನೆಲೆ ಅಂಬೇಡ್ಕರ್ ಪ್ರತಿಮೆ, ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಬೇಡಿಕೆ ಈಡೇರಿಕೆಗೆ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ.

ಆರನೇ ವೇತನ ಆಯೋಗದ ಶಿಫಾರಸಿಗೆ ಸಾರಿಗೆ ನೌಕರರು ಎಷ್ಟೇ ಒತ್ತಾಯಿಸಿದರೂ ರಾಜ್ಯ ಸರ್ಕಾರ ಮಾತ್ರ ಯಾವುದೇ ಕಾರಣಕ್ಕೂ ಅದು ಸಾಧ್ಯವಿಲ್ಲವೆಂದು ಹೇಳಿದೆ. ಹೀಗಾಗಿ ಎರಡೂ ಕಡೆಯವರು ಬಿಗಿಪಟ್ಟು ಹಿಡಿದಿರುವುದರಿಂದ ಇಂದು ಸಹ ಬಹುತೇಕ ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗದೇ ಸರ್ಕಾರದ ಧೋರಣೆಯನ್ನು ವಿರೋಧಿಸಲಿದ್ದಾರೆ. ಇನ್ನೊಂದೆಡೆ, ಮುಷ್ಕರ ನಿರತ ನೌಕರರ ಮೇಲೆ ವಜಾ ಅಸ್ತ್ರ ಪ್ರಯೋಗಿಸುತ್ತಿರುವ ಸಾರಿಗೆ ಇಲಾಖೆ ಈಗಾಗಲೇ ಅನೇಕರನ್ನು ಕರ್ತವ್ಯದಿಂದ ವಜಾಗೊಳಿಸಿದೆ. ಸದ್ಯ ಹುಬ್ಬಳ್ಳಿ ಗ್ರಾಮಾಂತರ ಕೆಎಸ್‌ಆರ್‌ಟಿಸಿ ವಿಭಾಗದ 26 ತರಬೇತಿ ನಿರತ ಸಿಬ್ಬಂದಿ ವಜಾಗೊಂಡಿದ್ದು, ಅನಧಿಕೃತ ಗೈರು ಹಾಜರಾದ ಹಿನ್ನೆಲೆ ತರಬೇತಿ ನಿರತ ನೌಕರರನ್ನು ವಜಾ ಮಾಡುತ್ತಿರುವುದಾಗಿ ಹುಬ್ಬಳ್ಳಿ ಗ್ರಾಮಂತಾರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ರಾಮನಗೌಡ್ರ ತಿಳಿಸಿದ್ದಾರೆ.

ಮೈಸೂರಿನಲ್ಲಿ ಶೇಕಡಾ 80ರಷ್ಟು ಬಸ್​ ಸಂಚಾರ
ಮೈಸೂರು: ಎಂಟನೇ ದಿನದ ಮುಷ್ಕರದ ನಡುವೆಯೂ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಶೇಕಡಾ 80ರಷ್ಟು ಬಸ್​ಗಳು ಸಂಚಾರ ಆರಂಭಿಸಿವೆ. ಮೈಸೂರಿನ 370 ಬಸ್‌ಗಳ ಪೈಕಿ 318 ಬಸ್ ಸಂಚಾರ ಆರಂಭಿಸಿದ್ದು, KSRTC ಗ್ರಾಮಾಂತರ ಬಸ್ ಘಟಕದ 54 ಬಸ್​ಗಳೂ ಸಂಚಾರ ಆರಂಭಿಸಿವೆ. ಆದರೆ, ಬಸ್​ ಇದ್ದರೂ ಜನರು ಮಾತ್ರ ನಿಲ್ದಾಣದ ಕಡೆ ಸುಳಿಯುತ್ತಿಲ್ಲ. ಇತ್ತ ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್‌ಗಳ ದರ್ಬಾರ್ ಮುಂದುವರೆದಿದೆ.

ಏರ್​ಪೋರ್ಟ್​ ಕಡೆ ತೆರಳುವವರಿಗೆ ಬಿಎಂಟಿಸಿ ಲಭ್ಯ
ಬೆಂಗಳೂರು:
ಬೆಂಗಳೂರಿನಲ್ಲೂ ಬೆರಳೆಣಿಕೆಯಷ್ಟು ಸಾರಿಗೆ ಸೇವೆ ಆರಂಭಗೊಂಡಿದೆಯಾದರೂ ಖಾಸಗಿ ಬಸ್​ಗಳ ಓಡಾಟ ಮುಂದುವರೆದಿದೆ. ಮೆಜೆಸ್ಟಿಕ್​ನಲ್ಲಿ ಖಾಸಗಿ ಬಸ್​ಗಳು ಸಾಲುಗಟ್ಟಿ ನಿಂತಿವೆಯಾದರೂ ಸಾಲು ಸಾಲು ರಜೆಗಳಿರುವ ಕಾರಣ ಪ್ರಯಾಣಿಕರು ನಿಲ್ದಾಣಗಳತ್ತ ಸುಳಿಯುತ್ತಿಲ್ಲ. ಬಿಎಂಟಿಸಿ ಬಸ್​ ನಿಲ್ದಾಣದಲ್ಲಿ ಸಾರಿಗೆ ಸೇವೆ ತುಸು ಹೆಚ್ಚಾಗಿದ್ದು, ಏರ್​ಪೋರ್ಟ್ ಕಡೆ ತೆರಳುವವರಿಗೆ ಬಿಎಂಟಿಸಿ ಬಸ್ ಸಂಚಾರ ಲಭ್ಯವಿದೆ. ಇದರ ಹೊರತಾಗಿ ಉಳಿದೆಡೆಗೆ ಖಾಸಗಿ ಬಸ್, ಟೆಂಪೋಗಳನ್ನೇ ಅವಲಂಬಿಸಬೇಕಾಗಿದೆ.

ಇದನ್ನೂ ಓದಿ:
ನಾಳೆಯಿಂದ ಎಂದಿನಂತೆ ಬಸ್​ಗಳು ಸಂಚರಿಸಲಿವೆ: ಕೆಎಸ್‌ಆರ್‌ಟಿಸಿ ಮುಖ್ಯ ವ್ಯವಸ್ಥಾಪಕ ಪ್ರಭಾಕರ್‌ ರೆಡ್ಡಿ ವಿಶ್ವಾಸ 

ಸಾರಿಗೆ ಮುಷ್ಕರ; ಬಸ್​ಗಳಿಲ್ಲದೆ ಪರದಾಡುತ್ತಿದ್ದ ತಲ್ಸೇಮಿಯಾ ರೋಗಿಗೆ ನೆರವಾದ ಟಿವಿ9

(KSRTC BMTC Strike continued for 8th day also Today employees will garland Dr BR Ambedkar statue and continue protest)