- Kannada News Karnataka Kudroli Gudu Dipa competition adds cheer to the festival of lights; here are the photos
ಬೆಳಕಿನ ಹಬ್ಬಕ್ಕೆ ಮೆರಗು ನೀಡಿದ ಕುದ್ರೋಳಿ ಗೂಡು ದೀಪ ಸ್ಪರ್ಧೆ; ಫೋಟೊಗಳು ಇಲ್ಲಿವೆ
ದೀಪಾವಳಿ ಹಬ್ಬ ಬಂದರೆ ಸಾಕು, ಮನೆ ಮನೆಗಳಲ್ಲಿ ಆಕಾಶ ಬುಟ್ಟಿಗಳೇ ರಾರಾಜಿಸುತ್ತವೆ. ಆದರೆ ಈ ಹಬ್ಬವನ್ನ ಕೇವಲ ಮನೆಗಳಿಗಷ್ಟೇ ಸೀಮಿತವಾಗಿಸಿದೆ ಇಡೀ ಊರಿಗೆ ಹಬ್ಬವಾಗಿಸುವ ಕೆಲಸ ಮಂಗಳೂರಿನಲ್ಲಿ ಕಳೆದ ಕೆಲ ವರ್ಷಗಳಿಂದ ನಡೆದಿದೆ. ಮಂಗಳೂರಿನ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ಆಕಾಶ ಬುಟ್ಟಿಗಳ ಸ್ಪರ್ಧೆ ಏರ್ಪಡಿಸಲಾಗಿತ್ತು. ಆಕಾಶ ಬುಟ್ಟಿಗಳು ಅಂದ್ರೆ ಗೂಡುದೀಪಗಳನ್ನ ಹೇಗೆ ಮಾಡಬಹುದು ಮತ್ತು ಅದರ ವೈವಿದ್ಯತೆ ಹೇಗಿರುತ್ತೆ ಎನ್ನುವುದನ್ನು ಇಲ್ಲಿ ತೋರಿಸಿಕೊಡಲಾಯಿತು.
Updated on: Oct 20, 2025 | 8:38 AM

ಎತ್ತ ನೋಡಿರತ್ತ ಕಣ್ಮನ ಸೆಳೆಯುತ್ತಿರುವ ಬಣ್ಣ ಬಣ್ಣದ ಗೂಡು ದೀಪಗಳು. ಬೆಳಕಿನ ಚಿತ್ತಾರದಲ್ಲಿ ತನ್ನ ಸೆಳೆಯುತ್ತಿರುವ ಆಕಾಶಬುಟ್ಟಿಗಳ ಸಾಲು. ಸಾಂಪ್ರದಾಯಿಕ, ಆಧುನಿಕ ಶೈಲಿಯ ಗೂಡು ದೀಪಗಳನ್ನು ಕಣ್ತುಂಬಿಕೊಳ್ಳುತ್ತಿರುವ ಜನರು, ಇದೆಲ್ಲಾ ಕಂಡುಬಂದಿದ್ದು ಮಂಗಳೂರಿನ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ.

ಸಾಂಪ್ರದಾಯಿಕತೆ, ಸಂಸ್ಕೃತಿ ಮರೆಯಾಗುತ್ತಿರುವ ಕಾಲದಲ್ಲೆ ಜನರಲ್ಲಿ ಗೂಡು ದೀಪಗಳ ಬಗ್ಗೆ ಆಸಕ್ತಿ ಮೂಡಿಸುವ ಸಲುವಾಗಿಯೇ ದೀಪದ ಸ್ಪರ್ಧೆಯನ್ನ ಏರ್ಪಡಿಸಿಕೊಂಡು ಬರಲಾಗಿದೆ. ಸಾಂಪ್ರದಾಯಿಕ, ಆಧುನಿಕ ಹಾಗೂ ಪ್ರತಿಕೃತಿ ಗೂಡುದೀಪಗಳ ವಿಭಾಗದಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಒಂದಕ್ಕಿಂತ ಒಂದು ದೀಪ ನೋಡುಗರ ಗಮನ ಸೆಳೆಯುತ್ತಿದೆ.

ಕಳೆದ ಇಪ್ಪತ್ತೈದು ವರ್ಷಗಳ ಹಿಂದೆ ಕೇವಲ ಹತ್ತಿಪ್ಪತ್ತು ಗೂಡುದೀಪಗಳಿಂದ ಆರಂಭಗೊಂಡ ಈ ಸ್ಪರ್ಧೆ ಇಂದು 450 ರ ಗಡಿದಾಟಿದೆ. ಒಂದೆಡೆ ಸಾಂಪ್ರದಾಯಿಕ ಗೂಡು ದೀಪಗಳು ಕಾಣಸಿಕ್ಕರೆ, ಇನ್ನೊಂದೆಡೆ ಆಧುನಿಕ ಗೂಡು ದೀಪಗಳು ನೋಡುಗರ ಗಮನ ಸೆಳೆಯುತ್ತಿದೆ.

ದೀಪಾವಳಿ ಹಬ್ಬವನ್ನು ಕೇವಲ ಮನೆಗಳಿಗಷ್ಟೇ ಸೀಮಿತವಾಗಿಸಿದೆ ಇಡೀ ಊರಿಗೆ ಹಬ್ಬವಾಗಿಸುವ ಕೆಲಸ ಮಂಗಳೂರಿನಲ್ಲಿ ಕಳೆದ ಕೆಲ ವರ್ಷಗಳಿಂದ ನಡೆದಿದೆ.ಇಲ್ಲಿ ಮಾಡೆಲ್ಗಳ ರೂಪದ ಗೂಡುದೀಪಗಳು ಕೂಡ ಪ್ರದರ್ಶನಕ್ಕೆ ಇಡಲಾಗುತ್ತದೆ. ಚಿಪ್ಪು, ದವಸದಾನ್ಯ, ಬೆಂಕಿಕಡ್ಡಿ, ಬಿದಿರು ಮುಂತಾದವುಗಳಲ್ಲಿ ತಯಾರಿಸಿರುವ ಗೂಡು ದೀಪಗಳಂತೂ ನೋಡುಗರನ್ನ ಸೆಳೆಯುತ್ತಿದೆ.

ಇನ್ನು ಈ ಗೂಡುದೀಪ ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಬಹುಮಾನ ನೀಡಿ ಪ್ರೋತ್ಸಾಹಿಸಿಲಾಗುತ್ತದೆ. ಗೆದ್ದವರಿಗೆ ಚಿನ್ನದ ನಾಣ್ಯ, ಬೆಳ್ಳಿಯ ನಾಣ್ಯ ನೀಡಿ ಗೌರವಿಸಲಾಗುತ್ತದೆ. ವರ್ಷದಲ್ಲೊಮ್ಮೆ ನಡೆಯೋ ಗೂಡುದೀಪಗಳ ಸ್ಪರ್ಧೆಯನ್ನ ನೋಡೋದಕ್ಕೆ ಅಂತಾನೇ ಸಾವಿರಾರು ಮಂದಿ ಕುದ್ರೋಳಿಗೆ ಆಗಮಿಸುತ್ತಾರೆ.

ಆಧುನಿಕತೆಗೆ ಒಗ್ಗಿಕೊಳ್ಳುತ್ತಿರುವ ಜನರಿಗೆ ಹಿಂದೆ ಮನೆಯಲ್ಲೇ ತಯಾರು ಮಾಡುತ್ತಿದ್ದ ಗೂಡುದೀಪಗಳ ತಯಾರಿ ಹೇಗೆ ಎನ್ನುವುದೇ ಮರೆತು ಹೋಗಿದೆ. ಹೀಗಾಗಿ ಜನರಲ್ಲಿ ಗೂಡು ದೀಪಗಳ ತಯಾರಿ ಬಗ್ಗೆ ಆಸಕ್ತಿ ಮೂಡಲಿ ಅಂತ ಈ ಸ್ಪರ್ಧೆಯನ್ನ ಏರ್ಪಡಿಸಲು ಆರಂಭಿಸಿದ್ದರು. ಒಟ್ಟಿನಲ್ಲಿ ಸಂಪ್ರದಾಯವನ್ನ ಉಳಿಸುವ ನಿಟ್ಟಿನಲ್ಲಿ ಹಮ್ಮಿಕೊಂಡ ಈ ಗೂಡು ದೀಪ ಸ್ಪರ್ಧೆ ಜನರಲ್ಲಿ ಗೂಡು ದೀಪವನ್ನ ನಾವೇ ತಯಾರು ಮಾಡಬೇಕು ಎನ್ನುವ ಮನೋಭಾವವನ್ನು ಮೂಡಿಸಿದರೆ ಅದಷ್ಟೇ ಸಾಕು ಅನ್ನೋದು ಸಂಘಟಕರ ಆಶಯ.




