ರಾಷ್ಟ್ರೀಯ ಲೋಕ ಅದಾಲತ್ ಯಶೋಗಾಥೆ: ಒಂದೇ ದಿನ 35.84 ಲಕ್ಷ ಕೇಸ್ ಇತ್ಯರ್ಥ!
ಸೆಪ್ಟೆಂಬರ್ 14ರಂದು ರಾಜ್ಯಾದ್ಯಂತ ನಡೆದ ರಾಷ್ಟ್ರೀಯ ಮೆಗಾ ಲೋಕ ಅದಾಲತ್ ಒಂದೇ ದಿನದಲ್ಲಿ ಸೌಹಾರ್ದಯುತವಾಗಿ ಬರೋಬ್ಬರಿ 35.84 ಲಕ್ಷ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಈ ಬಗ್ಗೆ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಮಾಹಿತಿ ನೀಡಿದೆ. ಹಾಗಾದ್ರೆ, ಯಾವೆಲ್ಲಾ ಎಷ್ಟೆಷ್ಟು ಕೇಸ್ ಇತ್ಯರ್ಥಗೊಂಡಿವೆ ಎನ್ನುವ ವಿವರ ಇಲ್ಲಿದೆ.
ಬೆಂಗಳೂರು, (ಸೆಪ್ಟೆಂಬರ್ 20): ಇದೇ ಸೆಪ್ಟೆಂಬರ್ 14 ರಂದು ಕರ್ನಾಟಕದಾದ್ಯಂತ ನಡೆದ ರಾಷ್ಟ್ರೀಯ ಮೆಗಾ ಲೋಕ ಅದಾಲತ್ ಒಂದೇ ದಿನದಲ್ಲಿ ಬರೋಬ್ಬರಿ 35.84 ಲಕ್ಷ ಪ್ರಕರಣಗಳನ್ನು ಇತ್ಯರ್ಥಪಡಿಸಿದೆ. ಇದರಲ್ಲಿ ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇದ್ದ 2 ಲಕ್ಷ ಪ್ರಕರಣಗಳು ಮತ್ತು 33.84 ಲಕ್ಷ ವ್ಯಾಜ್ಯ ಪೂರ್ವ ಪ್ರಕರಣಗಳು ಸೇರಿವೆ. ಈ ಬಗ್ಗೆ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಮಾಹಿತಿ ನೀಡಿದೆ.
ನ್ಯಾಯಮೂರ್ತಿಗಳಾದ ವಿ.ಕಾಮೇಶ್ವರ ರಾವ್ ಮತ್ತು ಶ್ರೀನಿವಾಸ್ ಹರೀಶ್ ಕುಮಾರ್ ಸುದ್ದಿಗೋಷ್ಠಿ ನಡೆಸಿ, ಸೆಪ್ಟೆಂಬರ್ 14ರಂದು ನಡೆದಿದ್ದ ರಾಷ್ಟ್ರೀಯ ಲೋಕ್ ಅದಾಲತ್ನಲ್ಲಿ 35.84 ಲಕ್ಷ ಕೇಸ್ ಇತ್ಯರ್ಥಪಡಿಸಲಾಗಿದೆ. ನ್ಯಾಯಾಲಯಗಳಲ್ಲಿ ಬಾಕಿ ಇದ್ದ 2 ಲಕ್ಷ ಕೇಸ್ ಹಾಗೂ 33.84 ಲಕ್ಷ ವ್ಯಾಜ್ಯ ಪೂರ್ವ ಪ್ರಕರಣಗಳು ಇತ್ಯರ್ಥಗೊಳಿಸಲಾಗಿದೆ ಎಂದು ತಿಳಿಸಿದರು.
2,402 ಕೋಟಿ ಪರಿಹಾರ ಮೊತ್ತದೊಂದಿಗೆ ಕೇಸ್ ಇತ್ಯರ್ಥಗೊಳಿಸಲಾಗಿದೆ. ಅದಾಲತ್ನಲ್ಲಿ 1,669 ವೈವಾಹಿಕ ಪ್ರಕರಣಗಳು ಇತ್ಯರ್ಥಪಡಿಸಲಾಗಿದೆ. ಇನ್ನು ಸಂಧಾನದ ಮೂಲಕ 248 ದಂಪತಿ ಒಟ್ಟುಗೂಡಿಸಲಾಗಿದೆ. 2,696 ವಿಭಾಗ ದಾವೆ ರಾಜಿಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ. 3,621 ಅಪಘಾತ ಕೇಸ್ಗಳಲ್ಲಿ 191 ಕೋಟಿ ಪರಿಹಾರ ನೀಡಲಾಗಿದೆ. 8,517 ಚೆಕ್ ಬೌನ್ಸ್ ಕೇಸ್ಗಳನ್ನ ಮುಕ್ತಾಯಗೊಳಿಸಲಾಗಿದೆ. 2,598 ಅಮಲ್ದಾರಿ ಕೇಸ್, 73 ಗ್ರಾಹಕರ ವ್ಯಾಜ್ಯಗಳು ಇತ್ಯರ್ಥಗೊಳಿಸಲಾಗಿದ್ದು, 5 ವರ್ಷಕ್ಕೂ ಹಳೆಯ 1,443 ಕೇಸ್ ಇತ್ಯರ್ಥಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.