
ಮಂಡ್ಯ, ಸೆಪ್ಟೆಂಬರ್ 20: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇನಲ್ಲಿ ವಾಹನ ಸವಾರರ ಬೇಜವಾಬ್ದಾರಿ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಪ್ರಾಣಸಂಕಟ ಎದುರಾಗಿದೆ. ಕೇವಲ ನೂರಾರು ರೂಪಾಯಿ ಟೋಲ್ ಹಣ ಉಳಿಸಲು ಕೆಲ ಚಾಲಕರು ನಿಯಮ ಗಾಳಿಗೆ ತೂರಿ ರಾಂಗ್ ರೂಟ್ನಲ್ಲಿ ಸಂಚರಿಸುತ್ತಿದ್ದಾರೆ. ಈ ಹಿಂದೆ ವೇಗವಾಗಿ ಬಂದ ಕಾರೊಂದು ಫ್ಲೈಓವರ್ ಮೇಲಿಂದ ಕೆಳಕ್ಕೆ ಬಿದ್ದು ಮಹಿಳೆಯೊಬ್ಬರು ದುರಂತ ಅಂತ್ಯ ಕಂಡಿರುವ ಘಟನೆ ಮಂಡ್ಯ ಸಮೀಪ ಸಂಭವಿಸಿತ್ತು.
ಶ್ರೀರಂಗಪಟ್ಟಣ ಟೋಲ್ ಪಾವತಿಯನ್ನು ತಪ್ಪಿಸಲು ದೊಡ್ಡ ದೊಡ್ಡ ಟ್ರಕ್ಗಳು, ಬಸ್ಗಳು ಹಾಗೂ ಕಾರು ಚಾಲಕರು ಅಪಾಯಕಾರಿ ಕಳ್ಳಾಟಕ್ಕೆ ಇಳಿದಿದ್ದಾರೆ. ಸರ್ವೀಸ್ ರಸ್ತೆಯಲ್ಲಿ ಬಂದು ಎಕ್ಸ್ಪ್ರೆಸ್ ವೇ ಎಕ್ಸಿಟ್ ಭಾಗದಲ್ಲೇ ರಿವರ್ಸ್ ಎಂಟ್ರಿ ಪಡೆದುಕೊಳ್ಳುತ್ತಿದ್ದಾರೆ. ಎಂಟ್ರಿಯಲ್ಲಿ ಎಕ್ಸಿಟ್, ಎಕ್ಸಿಟ್ನಲ್ಲಿ ಎಂಟ್ರಿ ಪಡೆಯುತ್ತಿರುವ ಈ ಚಾಲಕರ ಬೇಜವಾಬ್ದಾರಿಯಿಂದ ದಿನಂಪ್ರತಿ ಅಪಘಾತಗಳು ಸಂಭವಿಸುತ್ತಿದ್ದು, ಸ್ಥಳೀಯರು ಹಾಗೂ ಇತರ ಸವಾರರು ಹೈರಾಣಾಗಿದ್ದಾರೆ. ಸರಣಿ ದೂರುಗಳು ಬಂದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಪೊಲೀಸರು ಕಣ್ಮುಚ್ಚಿ ಕುಳಿತಿದ್ದಾರೆ ಎಂಬ ಆಕ್ರೋಶ ವ್ಯಕ್ತವಾಗಿದೆ.
ಮಂಡ್ಯ ಸಮೀಪದ ಉಮ್ಮಡಹಳ್ಳಿ ಗೇಟ್ ಬಳಿ ಕೆಲ ದಿನಗಳ ಹಿಂದೆ ಭೀಕರ ಅಪಘಾತವೊಂದು ಸಂಭವಿಸಿತ್ತು. ಎಕ್ಸ್ಪ್ರೆಸ್ ವೇ ಫ್ಲೈಓವರ್ ಮೇಲೆ ಅತಿ ವೇಗವಾಗಿ ಬಂದಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ಗೆ ಭೀಕರವಾಗಿ ಡಿಕ್ಕಿ ಹೊಡೆದಿತ್ತು. ಡಿಕ್ಕಿಯ ರಭಸಕ್ಕೆ ಕಾರು ಫ್ಲೈಓವರ್ ಮೇಲಿಂದ ನೇರವಾಗಿ ಕೆಳಗೆ ಬಿದ್ದಿತ್ತು.
ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅಂಜನಾ (32) ಎಂಬುವವರ ತಲೆಗೆ ತೀವ್ರ ಪೆಟ್ಟು ಬಿದ್ದಿದ್ದು, ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದರು. ಸ್ಥಳಕ್ಕೆ ಮಂಡ್ಯ ಸೆಂಟ್ರಲ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:48 am, Sun, 20 September 26